Wednesday, 25th September 2024

Liver Damage: ಈ ಗಿಡಮೂಲಿಕೆಗಳು ನಿಮ್ಮ ಲಿವರ್‌ ಡ್ಯಾಮೇಜ್‌ ಮಾಡುತ್ತವೆಯಂತೆ ಹುಷಾರು!

Liver Damage

ಗಿಡಮೂಲಿಕೆಗಳು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಹೆಚ್ಚಿನ ಜನರು ಕೆಲವು ಆರೋಗ್ಯ ಸಮಸ್ಯೆಗಳಿಗೆ ಗಿಡಮೂಲಿಕೆಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದರೆ ಗಿಡಮೂಲಿಕೆಗಳು ಆರೋಗ್ಯಕರವಾಗಿದ್ದರೂ, ಕೆಲವೊಂದು ಗಿಡಮೂಲಿಕೆಗಳ ಅತಿಯಾದ ಸೇವನೆಯು ಲಿವರ್‌ನ (Liver Damage) ಕಾರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಗಳನ್ನು ಸೇವಿಸಿದವರಲ್ಲಿ ಲಿವರ್ ಹಾನಿಗೊಳಗಾಗಿರುವುದು ಕಂಡುಬಂದಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಹಾಗಾದ್ರೆ ಆ ಗಿಡಮೂಲಿಕೆಗಳು ಯಾವುದೆಂಬುದನ್ನು ತಿಳಿಯೋಣ.

Liver Damage

ಅರಿಶಿನ ಅಥವಾ ಕರ್ಕ್ಯುಮಿನ್
ಅರಿಶಿನವು ಒಂದು ಜನಪ್ರಿಯ ಗಿಡಮೂಲಿಕೆಯಾಗಿದೆ. ಇದನ್ನು ಅಡುಗೆಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಇದರಲ್ಲಿ ಕರ್ಕ್ಯುಮಿನ್ ಎಂಬ ಅಂಶ ಸಮೃದ್ಧವಾಗಿದೆ. ಇದರ ಪ್ರಯೋಜನಕಾರಿ ಅಂಶದಿಂದಾಗಿ, ಈ ಗಿಡಮೂಲಿಕೆಯನ್ನು ಹೃದಯದ ಆರೋಗ್ಯ ಮತ್ತು ದೇಹದಲ್ಲಿ ಆ್ಯಂಟಿ ಆಕ್ಸಿಡೆಂಟ್ ಚಟುವಟಿಕೆಗಳನ್ನು ಸುಧಾರಿಸಲು ಮತ್ತು ಉರಿಯೂತವನ್ನು ನಿಯಂತ್ರಿಸಲು ಮನೆಮದ್ದುಗಳಲ್ಲಿ ಬಳಸಲಾಗುತ್ತದೆ. ಆದಾಗ್ಯೂ, ಅರಿಶಿನವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಲಿವರ್‌ಗೆ ಹಾನಿಯಾಗಬಹುದು ಮತ್ತು ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆಯನ್ನು ಹೆಚ್ಚಿಸಬಹುದು.

Liver Damage

ಗ್ರೀನ್ ಟೀ
ತೂಕ ಹೆಚ್ಚಳ ಸಮಸ್ಯೆ ಇರುವವರು ಹೆಚ್ಚಾಗಿ ಗ್ರೀನ್ ಟೀಯನ್ನು ಸೇವಿಸುತ್ತಾರೆ. ಇದು ಹೃದ್ರೋಗ ಮತ್ತು ಮಧುಮೇಹದ ವಿರುದ್ಧ ರಕ್ಷಣೆ ಸೇರಿದಂತೆ ಇತರ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ.ಆದರೆ ಗ್ರೀನ್ ಟೀ ಪಾಲಿಫಿನಾಲ್‌ಗಳನ್ನು ಹೊಂದಿರುತ್ತದೆ. ಆದ್ದರಿಂದ, ಪ್ರತಿದಿನ 2-3 ಕಪ್ ಗಿಂತ ಹೆಚ್ಚು ಗ್ರೀನ್ ಟೀ ಕುಡಿದರೆ ಲಿವರ್‌ಗೆ ಹಾನಿಯಾಗಬಹುದು.

ಕಪ್ಪು ಕೋಹೋಶ್
ಕಪ್ಪು ಕೋಹೋಶ್ ಸಸ್ಯವು ಸ್ತ್ರೀಯರ ಸಂತಾನೋತ್ಪತ್ತಿ ಸಮಸ್ಯೆಗಳನ್ನು ಸುಧಾರಿಸುತ್ತದೆ. ಇದು ಅಂಡಾಶಯವನ್ನು ಉತ್ತೇಜಿಸಿ, ಅಂಡೋತ್ಪತ್ತಿಗೆ ಉತ್ತೇಜನ ನೀಡುತ್ತದೆ. ಇದನ್ನು ಅನಾದಿ ಕಾಲದಿಂದಲೂ ಜ್ವರ, ಕೆಮ್ಮು, ನ್ಯುಮೋನಿಯಾ, ನಿಧಾನಗತಿಯ ಹೆರಿಗೆ ಮತ್ತು ಮುಟ್ಟಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ. ಈಗ, ಪ್ರಪಂಚದಾದ್ಯಂತ ಯೋನಿ ಶುಷ್ಕತೆ, ಹೃದಯ ಬಡಿತ, ಟಿನ್ನಿಟಸ್, ತಲೆತಿರುಗುವಿಕೆ, ನಿದ್ರೆಯ ತೊಂದರೆಗಳು, ಆತಂಕ ಮತ್ತು ಕಿರಿಕಿರಿ ಸೇರಿದಂತೆ ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸಲು ಇದನ್ನು ಟಾನಿಕ್ ಆಗಿ ಬಳಸಲಾಗುತ್ತದೆ. ಆದಾಗ್ಯೂ, ಇದರ ಅತಿಯಾದ ಬಳಕೆಯು ಕಾಮಾಲೆ, ಹೆಪಟೈಟಿಸ್, ನಂತಹ ಲಿವರ್‌ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು.

ಕೆಂಪು ಯೀಸ್ಟ್ ಅಕ್ಕಿ
ಕೆಂಪು ಯೀಸ್ಟ್ ಅಕ್ಕಿಯು ಮೊನಾಕೊಲಿನ್ ಕೆ ಅನ್ನು ಹೊಂದಿರುತ್ತದೆ. ಇದು ಲಿವರ್‌ನ ಹಾನಿಗೆ ಕಾರಣವಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

Liver Damage

ಅಶ್ವಗಂಧ
ವಿಥಾನಿಯಾ ಸೋಮ್ನಿಫೆರಾ ಬೇರಿನ ಸಾರದಿಂದ ಪಡೆದ ಅಶ್ವಗಂಧವು ಆಗ್ನೇಯ ಏಷ್ಯಾದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇದು ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ, ಉರಿಯೂತದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಒತ್ತಡ, ಆಯಾಸ, ನೋವು, ಚರ್ಮದ ಕಾಯಿಲೆಗಳು, ಮಧುಮೇಹ, ಸಂಧಿವಾತ ಮತ್ತು ಮೂರ್ಛೆರೋಗಕ್ಕೆ ಚಿಕಿತ್ಸೆ ನೀಡುತ್ತದೆ. ಆದರೆ ಸಾಮಾನ್ಯವಾಗಿ ಇದನ್ನು ಚಹಾ ಅಥವಾ ಕಷಾಯವಾಗಿ ಸೇವಿಸಲಾಗುತ್ತದೆ, ಇದು ಜೀವಕೋಶಗಳಲ್ಲಿ ಜಿಎಸ್ಎಚ್ ಮಟ್ಟವನ್ನು ಕಡಿಮೆ ಮಾಡಲು ಪ್ರಚೋದಿಸುತ್ತದೆ, ಇದರಿಂದ ಲಿವರ್‌ಗೆ ಹಾನಿಯನ್ನು ಉಂಟುಮಾಡುತ್ತದೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ವಿರೋಧಿಸಿದಕ್ಕೆ 6 ವರ್ಷದ ಬಾಲೆಯ ಜೀವ ತೆಗೆದ ಪ್ರಿನ್ಸಿಪಾಲ್!

ಹಾಗಾಗಿ ಯಾವುದೇ ಗಿಡಮೂಲಿಕೆಗಳು ಆರೋಗ್ಯಕ್ಕೆ ಉತ್ತಮ ಎಂದ ಮಾತ್ರಕ್ಕೆ ಅವುಗಳನ್ನು ಅತಿಯಾಗಿ ಬಳಸಲು ಹೋಗಬೇಡಿ. ಯಾಕೆಂದರೆ ಅಮೃತವೂ ವಿಷ ಎಂಬಂತೆ ಈ ಗಿಡಮೂಲಿಕೆಗಳಿಂದ ನೀವು ಅನಾರೋಗ್ಯಕ್ಕೂ ಒಳಗಾಗಬಹುದು. ಹಾಗಾಗಿ ಎಚ್ಚರಿಕೆಯಿಂದ ಬಳಸಿರಿ. ವೈದ್ಯರ, ಆರೋಗ್ಯ ಪರಿಣತರ ಸಲಹೆ ಪಡೆಯಿರಿ.