Thursday, 19th September 2024

Viral Video: ಹಾಡಹಗಲೇ ಬಾಲಕಿಯನ್ನು ರಸ್ತೆಯ ಮೇಲೆ ಎಳೆದೊಯ್ದ ದರೋಡೆಕೋರರು; ಪಂಜಾಬ್ ಪೊಲೀಸರು ಮಾಡಿದ್ದೇನು?

Viral Video

ಪಂಬಾಜ್: ಹಾಡಹಗಲಿನಲ್ಲೇ ದರೋಡೆಕೋರರ ಗುಂಪು ಬೈಕ್‍ನಲ್ಲಿ ಬಂದು ವಿದ್ಯಾರ್ಥಿನಿಯೊಬ್ಬಳಿಂದ ಮೊಬೈಲ್ ಪೋನ್ ಅನ್ನು ಕಿತ್ತುಕೊಳ್ಳಲು ಹೋಗಿ ಆಕೆಯನ್ನು ರಸ್ತೆಯ ಉದ್ದಕ್ಕೂ ಎಳೆದುಕೊಂಡು ಹೋದ ಘಟನೆ ಬೆಳಕಿಗೆ ಬಂದಿದೆ. ಆದರೆ ಈ ದರೋಡೆಕೋರರನ್ನು ಪಂಬಾಜ್ ಪೊಲೀಸರು ತಕ್ಷಣ ಅರೆಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಆರೋಪಿಗಳನ್ನು ಸಕತ್ ರಿಪೇರಿ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ವಿದ್ಯಾರ್ಥಿನಿ ರಸ್ತೆಯಲ್ಲಿ ಕೈಯಲ್ಲಿ ಮೊಬೈಲ್ ಹಿಡಿದು ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ಮೂವರು ದರೋಡೆಕೋರರು ವಿದ್ಯಾರ್ಥಿನಿಯ ಕೈಯಿಂದ ಮೊಬೈಲ್ ಫೋನ್ ಕಸಿದುಕೊಂಡು ಆಕೆಯನ್ನು ರಸ್ತೆಯಲ್ಲಿ ಎಳೆದೊಯ್ದಿದ್ದಾರೆ. ಈ ಮೂವರು ದರೋಡೆಕೋರರನ್ನು ಪೊಲೀಸರು ತಕ್ಷಣವೇ ಬಂಧಿಸಿದ್ದಾರೆ. ಈ ಘಟನೆ ಅಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪ್ರಕರಣದಲ್ಲಿ ಜಲಂಧರ್ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡಿದ್ದು, ಆರೋಪಿ ದರೋಡೆಕೋರರನ್ನು ಬಂಧಿಸಿ ಜನರ ಮೆಚ್ಚುಗೆ ಪಡೆದಿದ್ದಾರೆ.

ದರೋಡೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ ನಂತರ ಜಲಂಧರ್ ಪೊಲೀಸರು ಮೂವರು ಆರೋಪಿಗಳಾದ ಪವನ್‍ಪ್ರೀತ್, ಗಗನ್‍ದೀಪ್ ಮತ್ತು ಲವ್‍ಪ್ರೀತ್ ಅವರನ್ನು ಬಂಧಿಸಿದ್ದಾರೆ. ಈ ದರೋಡೆಯ ಬಗೆಗಿನ ಆಶ್ಚರ್ಯಕರ ಸಂಗತಿಯೆಂದರೆ, ಎಲ್ಲಾ ಮೂವರು ದರೋಡೆಕೋರರು ತಮ್ಮ ಕಾಲುಗಳಿಗೆ ಪ್ಲಾಸ್ಟರ್ ಕಾಸ್ಟ್‌ಗಳನ್ನು ಧರಿಸಿದ್ದರಿಂದ ಕುಂಟುತ್ತಾ ಇದ್ದರು. ಇದು ವಿಡಿಯೊದಲ್ಲಿ ಕಾಣಿಸಿದೆ.
ದರೋಡೆಕೋರರು ವಿದ್ಯಾರ್ಥಿನಿಯ ಬಳಿಗೆ ಬಂದು ಆಕೆಯ ‘ಮೊಬೈಲ್ ಫೋನ್’ ಕಸಿದುಕೊಳ್ಳಲು ಪ್ರಯತ್ನಿಸಿದಾಗ ವಿದ್ಯಾರ್ಥಿನಿ ವಿರೋಧಿಸಿದ್ದಾಳೆ. ಆಗ ಅವರು ಅವಳನ್ನು ಕ್ರೂರವಾದ ರೀತಿಯಲ್ಲಿ ರಸ್ತೆಯುದ್ದಕ್ಕೂ ಎಳೆದುಕೊಂಡು ಹೋಗಿದ್ದಾರೆ. ಇದು ಅವಳಲ್ಲಿ ಭಯವನ್ನು ಉಂಟುಮಾಡಿದೆ. ಮತ್ತು ಈ ಕೃತ್ಯದಿಂದ ಜಲಂಧರ್‌ನಲ್ಲಿ ಬಾಲಕಿಯರು ಮತ್ತು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ:ಓವರ್‌ಟೇಕ್‌ ಮಾಡಲು ಹೋಗಿ ಕಾರಿಗೆ ಡಿಕ್ಕಿ ಹೊಡೆದ ಸ್ಕೂಟರ್‌ ಸವಾರ; ಬದುಕುಳಿದದ್ದೇ ಪವಾಡ!

ಪೊಲೀಸರ ಪ್ರಕಾರ, ಎಲ್ಲಾ ಮೂವರು ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದರು. ಇತರ ಅಪರಾಧ ಚಟುವಟಿಕೆಗಳಲ್ಲಿ ಅವರು ಪಾಲ್ಗೊಂಡಿರುವ ಬಗ್ಗೆ ಹೆಚ್ಚಿನ ವಿವರಗಳನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆಯನ್ನು ಶುರುಮಾಡಲಾಗಿದೆ. ಇಂತಹ ಘೋರ ಕೃತ್ಯಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಭಾವಿಸುವ ಜನರಿಗೆ ಈ ಘಟನೆಗಳು ಉದಾಹರಣೆಯಾಗಬೇಕು ಎಂದು ಪೊಲೀಸರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಮತ್ತು ಸಾರ್ವಜನಿಕರು ಜಾಗರೂಕರಾಗಿರಬೇಕು ಮತ್ತು ಯಾವುದೇ ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡರೆ ತಕ್ಷಣ ವರದಿ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.