Friday, 20th September 2024

ಗಂಭೀರ್‌ ನಾಯಕತ್ವದಲ್ಲಿ ಕೆಕೆಆರ್‌ ಯಶಸ್ಸು: ಯೂಸುಫ್‌ ಪಠಾಣ್

ದೆಹಲಿ:
ಐಪಿಎಲ್‌ ಟೂರ್ನಿಯ ಅತ್ಯಂತ ಬಲಿಷ್ಠ ತಂಡಗಳಲ್ಲಿ ನಟ ಶಾರುಖ್‌ ಖಾನ್‌ ಸಹ ಮಾಲೀಕತ್ವದ ಕೋಲ್ಕೊತಾ ನೈಟ್‌ ರೈಡರ್ಸ್ (ಕೆಕೆಆರ್)‌ ಕೂಡ ಒಂದು.
ಅಂದಹಾಗೆ ಕೆಕೆಆರ್‌ ತಂಡ ಐಪಿಎಲ್‌ನ ಮೊದಲ ಮೂರು ಆವೃತ್ತಿಗಳಲ್ಲಿ ಹೇಳಿಕೊಳ್ಳುವ ಪ್ರದರ್ಶನವನ್ನೇನೂ ನೀಡಿರಲಿಲ್ಲ. ಆದರೆ, ತಂಡದ ಮ್ಯಾನೇಜ್ಮೆಂಟ್ 2011ರ ಆಟಗಾರರ ಹರಾಜಿನಲ್ಲಿ ದಿಲ್ಲಿಯ ಎಡಗೈ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.
ಅಂದಿನಿಂದ ನೈಟ್‌ ರೈಡರ್ಸ್‌ ಫೀನಿಕ್ಸ್‌ ಪಕ್ಷಿಯಂತೆ ಐಪಿಎಲ್‌ನಲ್ಲಿ ಪುಟಿದೆದ್ದಿತ್ತು. ತಂಡವನ್ನು ಅದ್ಭುತ ರೀತಿಯಲ್ಲಿ ಮುನ್ನಡೆಸಿದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್ ಗಂಭೀರ್‌, 2012 ಮತ್ತು 2014ರ ಆವೃತ್ತಿಯಲ್ಲಿ ಕೆಕೆಆರ್‌ ಮುಡಿಗೆ ಐಪಿಎಲ್‌ ಕಿರೀಟಗಳನ್ನು ತೊಡಿಸಿದ್ದರು.
ಆರಂಭದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದ ಯೂಸುಫ್‌ ಪಠಾಣ್‌, ಬಳಿಕ ಕೆಕೆಆರ್‌ ಪರ ಹಲವು ವರ್ಷಗಳ ಕಾಲ ಆಡಿದ್ದಲ್ಲದೆ ತಂಡ ಎರಡು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ಕೆಕೆಆರ್‌ ತಂಡದಲ್ಲಿ ತಾವು ಕಳೆದ ದಿನಗಳನ್ನು ಮಾಜಿ ಆಟಗಾರ ಮೊಹಮ್ಮದ್ ಕೈಫ್ ಜತೆಗಿನ ಲೈವ್ ಕಾರ್ಯಕ್ರಮದಲ್ಲಿ ಸ್ಮರಿಸಿರುವ ಯೂಸುಫ್, ಆಟಗಾರರನ್ನು ಪ್ರೋತ್ಸಾಹಿಸಿ ಬೆಳೆಸಿದ ಕ್ಯಾಪ್ಟನ್‌ ಗಂಭೀರ್‌ ಅವರನ್ನು ಗುಣಗಾನ ಮಾಡಿದ್ದಾರೆ.

“ಕೆಕೆಆರ್‌ ತಂಡದ ಪರ ನಾನು 7 ವರ್ಷಗಳ ಕಾಲ ಆಡಿದ್ದೇನೆ. ಗಂಭೀರ್‌ ಅದ್ಭುತ ನಾಯಕ. ಅವರ ಯೋಜನೆಗಳು ಶ್ರೇಷ್ಠ ವಾಗಿರುತ್ತಿತ್ತು. ಅಷ್ಟೇ ಅಲ್ಲದೆ ಆಟಗಾರರನ್ನು ಪ್ರೋತ್ಸಾಹಿಸಿ ಬೆಂಬಲಿಸುವ ಗುಣ ಅವರಲ್ಲಿತ್ತು. ಆಟಗಾರರು, ಟೀಮ್‌ ಮ್ಯಾನೇಜ್ಮೆಂಟ್, ಸಹಾಯ ಸಿಬ್ಬಂದಿ ಎಲ್ಲರ ಜೊತೆಗೂ ಮಾತನಾಡಿ ಆಟದ ಕುರಿತಾದ ಜ್ಞಾನ ಹಂಚಿಕೊಳ್ಳುತ್ತಿದ್ದರು. ಆನ್‌ಫೀಲ್ಡ್‌ನಲ್ಲೂ ಯೋಜನೆಗಳಿಗೆ ತಕ್ಕಂತೆ ಯಶಸ್ಸು ದಕ್ಕಿಸಿಕೊಳ್ಳಲು ಸಂಪೂರ್ಣ ಪ್ರಯತ್ನ ಮಾಡುತ್ತಿದ್ದರು,” ಎಂದು ಹೇಳಿದ್ದಾರೆ.