Friday, 20th September 2024

ದ್ರಾವಿಡ್, ಲಕ್ಷ್ಮಣ ಅವರ ವಿರುದ್ಧ ಬೌಲಿಂಗ್ ಮಾಡಲು ಸಾಧ್ಯವಾಗುತ್ತದೆ ಎಂದು ಭಾವಿಸಿರಲಿಲ್ಲ: ಉಮೇಶ್

ದೆಹಲಿ,
ಸ್ಟಾರ್ ಆಟಗಾರ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ ಅವರ ವಿರುದ್ಧ ಬೌಲಿಂಗ್ ಮಾಡುತ್ತೇನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಟೀಮ್ ಇಂಡಿಯಾದ ವೇಗದ ಬೌಲರ್ ಉಮೇಶ್ ಯಾದವ್ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಕೆಲವೇ ದಿನಗಳ ಮೊದಲು ಭಾರತೀಯ ತಂಡದ ವೇಗಿ ಉಮೇಶ್ ಯಾದವ್ ಅವರು ದುಲೀಪ್ ಟ್ರೋಫಿಯಲ್ಲಿ ಆಡಿದ್ದನ್ನು ನೆನಪಿಸಿಕೊಂಡಿದ್ದಾರೆ.

ಭಾರತ ತಂಡಕ್ಕೆ ಪಾದಾರ್ಪಣೆ ಮಾಡುವ ಮೊದಲು ದುಲೀಪ್ ಟ್ರೋಫಿಯಲ್ಲಿ ದಕ್ಷಿಣ ವಲಯದ ಪರ ಆಡುತ್ತಿರುವಾಗ ಉಮೇಶ್ ದ್ರಾವಿಡ್ ಮತ್ತು ಲಕ್ಷ್ಮಣ್ ವಿರುದ್ಧ ಬೌಲ್ ಮಾಡಿದರು ಮತ್ತು ಈ ಪಂದ್ಯದಲ್ಲಿ ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳು ಸೇರಿದಂತೆ ಒಟ್ಟು ಐದು ವಿಕೆಟ್‌ಗಳನ್ನು ಪಡೆದರು. ಈ ಪಂದ್ಯವು ಅವರ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿತು.

“ನಾನು ದುಲೀಪ್ ಟ್ರೋಫಿ ಪಂದ್ಯವನ್ನು ಆಡಲು ಹೋದಾಗ, ನಮ್ಮ ಪಂದ್ಯವು ದ್ರಾವಿಡ್ ಮತ್ತು ಲಕ್ಷ್ಮಣರಂತಹ ದಿಗ್ಗಜ ಬ್ಯಾಟ್ಸ್‌ಮನ್‌ಗಳ ಹೊಂದಿದ ತಂಡದೊಂದಿಗೆ ಇದೆ ಎಂದು ತಿಳಿಯಿತು. ಮತ್ತೆ ನನಗೆ ಗಾಬರಿಯಾಯಿತು” ಎಂದು ಉಮೇಶ್ ಹೇಳಿದ್ದಾರೆ.

“ನಾನು ತುಂಬಾ ಒತ್ತಡದಲ್ಲಿ ಚೆನ್ನಾಗಿ ಬೌಲಿಂಗ್ ಮಾಡಬಹುದೆಂದು ನಾನು ಎಂದಿಗೂ ಯೋಚಿಸಲಿಲ್ಲ. ದಕ್ಷಿಣ ವಲಯಕ್ಕಾಗಿ ಆಡುವಾಗ ನಾನು ದ್ರಾವಿಡ್ ಮತ್ತು ಲಕ್ಷ್ಮಣ್ ಅವರ ವಿಕೆಟ್ ಸೇರಿದಂತೆ ಒಟ್ಟು ಐದು ವಿಕೆಟ್ ಪಡೆದಿದ್ದೇನೆ. ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ” ಎಂದಿದ್ದಾರೆ.

“ಎಲ್ಲರ ಜೀವನದಲ್ಲೂ ಏರಿಳಿತಗಳು ಸಾಮಾನ್ಯ. ಅವುಗಳನ್ನು ಮೆಟ್ಟಿನಿಲ್ಲುವುದನ್ನು ಮೂಗೂಡಿಸಿಕೊಳ್ಳಬೇಕಿದೆ. ಆತ್ಮವಿಶ್ವಾಸ ಮತ್ತು ನಿಮ್ಮ ಬಗ್ಗೆ ನಂಬಿಕೆ ಇದ್ದರೆ ನೀವು ಯಶಸ್ಸನ್ನು ಸಾಧಿಸುವಿರಿ” ಎಂದು ಉಮೇಶ್ ಹೇಳಿದ್ದಾರೆ.