Friday, 20th September 2024

ಪ್ರಥಮ ದರ್ಜೆ ಕ್ರಿಕೆಟ್‌’ನಿಂದ ಅಭಿಮನ್ಯು ಮಿಥುನ್ ನಿವೃತ್ತಿ

ಬೆಂಗಳೂರು: ಪ್ರಥಮ ದರ್ಜೆ ಕ್ರಿಕೆಟ್‌ಗೆ ಕರ್ನಾಟಕ ತಂಡದ ವೇಗದ ಬೌಲರ್ ಅಭಿಮನ್ಯು ಮಿಥುನ್ ನಿವೃತ್ತಿ ಘೋಷಿಸಿದ್ದಾರೆ.

2013-14, 2014-15ನೇ ಸಾಲಿನ ದೇಶೀಯ ಕ್ರಿಕೆಟ್‌ನಲ್ಲಿ ಡಬಲ್ ಹ್ಯಾಟ್ರಿಕ್ ಪ್ರಶಸ್ತಿ (ರಣಜಿ, ಇರಾನಿ, ವಿಜಯ ಹಜಾರೆ) ವಿಜೇತ ಕರ್ನಾಟಕ ತಂಡದ ಸದಸ್ಯ ರಾಗಿದ್ದ ಮಿಥುನ್, ರಾಷ್ಟ್ರೀಯ ತಂಡವನ್ನೂ ಪ್ರತಿನಿಧಿಸಿದ್ದರು. ‘ಪೀಣ್ಯ ಎಕ್ಸ್‌ಪ್ರೆಸ್’ ಎನಿಸಿಕೊಂಡಿದ್ದ 31 ವರ್ಷದ ಮಿಥುನ್ ಗುರುವಾರ ನಿವೃತ್ತಿ ಘೋಷಿಸಿದ್ದಾರೆ.

ಕಳೆದ 12 ವರ್ಷಗಳಿಂದ ರಾಜ್ಯ ತಂಡದ ವೇಗದ ಬೌಲಿಂಗ್ ವಿಭಾಗವನ್ನು ನಿಭಾಯಿಸಿದ್ದ ಮಿಥುನ್, ಐಪಿಎಲ್ ಹಾಗೂ ಕೆಪಿಎಲ್‌ನಲ್ಲೂ ಆಡಿದ್ದರು. ಮಾಜಿ ವೇಗಿ ವಿನಯ್ ಕುಮಾರ್ ಸಾರಥ್ಯದ ರಾಜ್ಯ ತಂಡದಲ್ಲಿ ಎಸ್.ಅರವಿಂದ್ ಅವರೊಂದಿಗೆ ಹಲವು ವರ್ಷಗಳ ಕಾಲ ವೇಗದ ಬೌಲಿಂಗ್ ವಿಭಾಗದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

103 ಪ್ರಥಮ ದರ್ಜೆ ಪಂದ್ಯಗಳಿಂದ 338 ವಿಕೆಟ್, 96 ಲಿಸ್ಟ್ ಎ ಪಂದ್ಯಗಳಿಂದ 136 ಹಾಗೂ 74 ಟಿ20 ಪಂದ್ಯಗಳಿಂದ 69 ವಿಕೆಟ್ ಕಬಳಿಸಿದ್ದರು. ಐಪಿಎಲ್‌ನಲ್ಲಿ ಆರ್‌ಸಿಬಿ, ಮುಂಬೈ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳನ್ನು ಪ್ರತಿನಿಧಿಸಿದ್ದರು.