Monday, 16th September 2024

8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್

ಅಬುದಾಬಿ: ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಸನ್ ರೈಸರ್ಸ್ ತಂಡ ನೀಡಿದ 135 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕ ಶಿಖರ್ ಧವನ್ (42 ರನ್) ಮತ್ತು ಶ್ರೇಯಸ್ ಅಯ್ಯರ್ (ಅಜೇಯ 47) ಬ್ಯಾಟಿಂಗ್ ನೆರವಿಂದಾಗಿ 17.5 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 139 ರನ್ ಗಳಿಸಿ ಪಂದ್ಯ ಗೆದ್ದಿತು.

ಪೃಥ್ವಿ ಶಾ 11 ರನ್ ಗಳಿಸಿ ಖಲೀಲ್ ಅಹ್ಮದ್ ಗೆ ವಿಕೆಟ್ ಒಪ್ಪಿಸಿದರೆ, ನಾಯಕ ಶಿಖರ್ ಧವನ್ 42 ರನ್ ಗಳಿಸಿ ರಶೀದ್ ಖಾನ್ ಗೆ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಅಯ್ಯರ್ (ಅಜೇಯ 47) ಮತ್ತು ರಿಷಬ್ ಪಂತ್ (ಅಜೇಯ 35 ರನ್) ಉತ್ತಮ ಪ್ರದರ್ಶನ ನೀಡಿ ಪಂದ್ಯ ಗೆಲ್ಲುವಂತೆ ಮಾಡಿದರು.

ಎರಡನೇ ವಿಕೆಟ್‌ಗೆ ಶಿಖರ್ ಮತ್ತು ಶ್ರೇಯಸ್ ಅಯ್ಯರ್ 52 ರನ್‌ಗಳ ಜೊತೆಯಾಟವಾಡಿದರು. ಶಿಖರ್ ಔಟಾದ ನಂತರ ಶ್ರೇಯಸ್ ಮತ್ತು ರಿಷಭ್‌ 67 ರನ್‌ಗಳ ಜೊತೆಯಾಟದ ಮೂಲಕ ಎದುರಾಳಿ ತಂಡದ ಬೌಲರ್‌ಗಳನ್ನು ಕಂಗೆಡಿಸಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸನ್‌ರೈಸರ್ಸ್‌ ಪರ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಲು ಯಾರಿಗೂ ಸಾಧ್ಯವಾಗಲಿಲ್ಲ. ವೇಗದ ಬೌಲರ್‌ಗಳಾದ ಕಗಿಸೊ ರಬಾಡ (37ಕ್ಕೆ3) ದಾಳಿಯ ಮುಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಬಳಗ ಬಸವಳಿಯಿತು. ಹೀಗಾಗಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 134 ರನ್‌ಗಳ ಸಾಧಾರಣ ಮೊತ್ತ ಗಳಿಸಲಷ್ಟೇ ಆ ತಂಡಕ್ಕೆ ಸಾಧ್ಯವಾಯಿತು.

ಕಗಿಸೊ ರಬಾಡ ಅವರೊಂದಿಗೆ ಎನ್ರಿಚ್ ನಾರ್ಕಿಯಾ (12ಕ್ಕೆ2) ಮತ್ತು ಸ್ಪಿನ್ನರ್ ಅಕ್ಷರ್ ಪಟೇಲ್ (21ಕ್ಕೆ2) ಕೂಡ ಉತ್ತಮ ಬೌಲಿಂಗ್ ಮೂಲಕ ಸನ್‌ರೈಸರ್ಸ್‌ಗೆ ಪೆಟ್ಟುಕೊಟ್ಟರು.

ನಟರಾಜನ್‌ಗೆ ಕೋವಿಡ್: ಐಸೊಲೇಷನ್‌ನಲ್ಲಿ ಆರು ಆಟಗಾರರು
ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಧ್ಯಮವೇಗಿ ಟಿ. ನಟರಾಜನ್ ಅವರಿಗೆ ಕೋವಿಡ್ ಇರುವುದು ಬುಧವಾರ ಖಚಿತವಾಗಿದೆ.

ಪಂದ್ಯವನ್ನು ಮುಂದೂಡುವ ಅಥವಾ ರದ್ದು ಮಾಡುವ ಕುರಿತ ಸಂದೇಶಗಳು ಹರಿದಾಡಿದವು. ಇದರಿಂದಾಗಿ ತಂಡದ ಆಟಗಾರರನ್ನು ಆರ್‌ಟಿ-ಪಿಸಿಆರ್ ಟೆಸ್ಟ್‌ಗೆ ಒಳಪಡಿಸಲಾಯಿತು. ವರದಿ ನೆಗೆಟಿವ್ ಬಂದ ಕಾರಣ ಪಂದ್ಯ ನಡೆಸುವುದು ಖಚಿತವಾಯಿತು. ನಟರಾಜನ್ ಮತ್ತು ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಆಲ್‌ರೌಂಡರ್ ವಿಜಯಶಂಕರ್ ಅವರನ್ನು ಪ್ರತ್ಯೇಕವಾಸಕ್ಕೆ ಕಳಿಸಲಾಗಿದೆ. ಅವರಲ್ಲದೇ ಇನ್ನೂ ಆರು ಆಟಗಾರರನ್ನು ಪ್ರತ್ಯೇಕವಾಸಕ್ಕೆ ಕಳಿಸಲಾಗಿದೆ ಎಂದು ತಂಡದ ಮೂಲಗಳು ತಿಳಿಸಿವೆ. ’11 ದಿನಗಳ ಹಿಂದೆ ನಟರಾಜನ್ ಇಲ್ಲಿಗೆ ಬಂದಿದ್ದಾರೆ. ಅವರಲ್ಲಿ ಲಕ್ಷಣರಹಿತ ಸೋಂಕು ಪತ್ತೆಯಾಗಿದೆ’ ಎಂದು ತಂಡದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *