Monday, 16th September 2024

ಚುಟುಕು ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಗೆಲುವಿನ ಶುಭಾರಂಭ

ಅಹಮದಾಬಾದ್: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟ್ವೆಂಟಿ-20 ಅಂತರ ರಾಷ್ಟ್ರೀಯ ಪಂದ್ಯದಲ್ಲಿ ಭಾರತ ವಿರುದ್ಧ ಪ್ರವಾಸಿ ಇಂಗ್ಲೆಂಡ್ ತಂಡವು ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಮಹತ್ವದ ಮುನ್ನಡೆ ದಾಖಲಿಸಿದೆ ಹಾಗೂ ಟ್ವೆಂಟಿ-20 ವಿಶ್ವಕಪ್ ಗುರಿಯಾಗಿಸಿಕೊಂಡು ಭರ್ಜರಿ ಪೂರ್ವ ತಯಾರಿ ನಡೆಸಿದೆ. ಭಾರತ ಒಡ್ಡಿದ 125 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 15.3 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ ವಿಜಯ ದಾಖಲಿಸಿತು.

ಓಪನರ್‌ಗಳಾದ ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ಮೊದಲ ವಿಕೆಟ್‌ಗೆ 7 ಓವರ್‌ಗಳಲ್ಲೇ 72 ರನ್‌ಗಳ ಜೊತೆಯಾಟ ನೀಡಿ ತಂಡದ ಗೆಲುವನ್ನು ಖಚಿತಪಡಿಸಿದರು. ಜೇಸನ್ ರಾಯ್ ಕೇವಲ ಒಂದು ರನ್ ಅಂತರದಿಂದ ಅರ್ಧಶತಕದಿಂದ ವಂಚಿತ ರಾದರು. 32 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರು. ಬಟ್ಲರ್ 28 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು.

ಡೇವಿಡ್ ಮಲಾನ್ (24*) ಹಾಗೂ ಜಾನಿ ಬೆಸ್ಟೊ (26*) ಗೆಲುವಿನ ಔಪಚಾರಿಕತೆ ಪೂರ್ಣಗೊಳಿಸಿದರು. ಭಾರತದ ಪರ ಎಲ್ಲ ಬೌಲರ್‌ಗಳು ದುಬಾರಿಯೆನಿಸಿದರು.

ಈ ಮೊದಲು ಶ್ರೇಯಸ್ ಅಯ್ಯರ್ ಅರ್ಧಶತಕದ (67) ಹೊರತಾಗಿಯೂ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 124 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ಭಾರತದ ಆರಂಭ ಉತ್ತಮವಾಗಿರಲಿಲ್ಲ. ತಂಡವು 20 ರನ್ ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಜೋಫ್ರಾ ಆರ್ಚರ್ ದಾಳಿಯಲ್ಲಿ (1) ಕೆಎಲ್ ರಾಹುಲ್ ಕ್ಲೀನ್ ಬೌಲ್ಡ್ ಆದರು. ನಾಯಕ ವಿರಾಟ್ ಕೊಹ್ಲಿ (0) ಖಾತೆ ತೆರೆಯಲಿಲ್ಲ. ಶಿಖರ್ ಧವನ್ 12 ಎಸೆತಗಳಲ್ಲಿ ಬರಿ 4 ರನ್ ಗಳಿಸಿ ನಿರಾಸೆ ಮೂಡಿಸಿದರು. ರಿಷಭ್ ಪಂತ್ (21) ಟೆಸ್ಟ್ ಸರಣಿಯಲ್ಲಿನ ಉತ್ತಮ ಫಾರ್ಮ್ ಮುಂದುವರಿಸುವ ಪ್ರಯತ್ನ ಮಾಡಿದರು. ಆದರೆ ಸ್ಟೋಕ್ಸ್ ಬಲೆಗೆ ಬೀಳುವುದರೊಂದಿಗೆ 10 ಓವರ್‌ಗಳಲ್ಲಿ 48 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಶ್ರೇಯಸ್ ಅಯ್ಯರ್ ಹಾಗೂ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಿದರು. ಸಮಯೋಚಿತ ಇನ್ನಿಂಗ್ಸ್ ಕಟ್ಟಿದ ಅಯ್ಯರ್ ಭಾರತವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು.

ಶ್ರೇಯಸ್ ಹಾಗೂ ಪಾಂಡ್ಯ ಐದನೇ ವಿಕೆಟ್‌ಗೆ 54 ರನ್‌ಗಳ ಮಹತ್ವದ ಜೊತೆಯಾಟ ನೀಡಿದರು. ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಅಯ್ಯರ್ ಅರ್ಧಶತಕ ಸಾಧನೆ ಮಾಡಿದರು. ರನ್ ಏರಿಸುವ ಭರದಲ್ಲಿ ಹಾರ್ದಿಕ್ ಪಾಂಡ್ಯ (19) ವಿಕೆಟ್ ಒಪ್ಪಿಸಿದರು. ಶಾರ್ದೂಲ್ ಠಾಕೂರ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. 48 ಎಸೆತಗಳನ್ನು ಎದುರಿಸಿದ ಅಯ್ಯರ್ ಎಂಟು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 67 ರನ್ ಗಳಿಸಿದರು.

Leave a Reply

Your email address will not be published. Required fields are marked *