Friday, 27th September 2024

IND vs BAN 2nd Test: ಕುಸಿಯುವ ಭೀತಿಯಲ್ಲಿ ಕಾನ್ಪುರ ಸ್ಟೇಡಿಯಂ; 50 ಮಂದಿ ಕುಳಿತರೂ ಅಪಾಯ!

ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವಣ 2ನೇ ಟೆಸ್ಟ್(IND vs BAN 2nd Test) ಪಂದ್ಯದ ಆತಿಥ್ಯ ವಹಿಸಿರುವ ಕಾನ್ಪುರದ ಕ್ರೀನ್‌ ಪಾರ್ಕ್‌ ಕ್ರಿಕೆಟ್‌ ಸ್ಟೇಡಿಯಂನ(Green Park Stadium) ಪ್ರೇಕ್ಷಕರ ಸ್ಟ್ಯಾಂಡ್‌ಗಳು ಅಸುರಕ್ಷಿತವಾಗಿದೆ ಎಂದು ಸ್ವತಃ ಉತ್ತರ ಪ್ರದೇಶ ಕ್ರಿಕೆಟ್ ಮಂಡಳಿ ಅಧಿಕಾರಿಗಳೆ ಆತಂಕ ವ್ಯಕ್ತಪಡಿಸಿದ್ದಾರೆ. ಕನಿಷ್ಠ 50 ಮಂದಿ ಪ್ರೇಕ್ಷಕ ಭಾರವನ್ನು ತಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿದೆ ಎಂದು ಸ್ಥಳೀಯ ಎಂಜಿನಿಯರ್ ಒಬ್ಬರು ಮಾಹಿತಿ ನೀಡಿದ್ದಾರೆ. ಜತೆಗೆ ತುರ್ತಾಗಿ ದುರಸ್ತಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.

2021ರ ನಂತರ ಇದೇ ಮೊದಲ ಬಾರಿಗೆ ಕಾನ್ಪುರದ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ. ಮೈದಾನದ ರಿಪೇರಿ ಕೆಲಸಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲ್ಕನಿಯ ಎಲ್ಲಾ ಟಿಕೆಟ್ ಗಳನ್ನು ಮಾರಾಟ ಮಾಡದೇ ಇರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಬಾಲ್ಕನಿಯಲ್ಲಿ 4,800 ಆಸನದ ಪೂರ್ಣ ಸಾಮರ್ಥ್ಯ ಹೊಂದಿದ್ದು, 1,700 ಟಿಕೆಟ್ ಮಾತ್ರ ಮಾರಾಟ ಮಾಡಲಾಗಿದೆ. ಆಟಗಾರರು ಸಿಕ್ಸರ್‌, ಬೌಂಡರಿ ಅಥವಾ ಶತಕ ಬಾರಿಸಿದಾಗ ಅಭಿಮಾನಿಗಳು ಕುಣಿದು ಕುಪ್ಪಳಿಸಿದರೂ ಛಾವಣಿ ಕುಸಿಯಬಹುದು ಎಂದು ಅಧಿಕಾರಿಗಳು ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ. ಅವಗಢ ಸಂಭವಿಸುವ ಮುನ್ನವೇ ಇಲ್ಲಿನ ಕ್ರಿಕೆಟ್‌ ಮಂಡಳಿ ಸೂಕ್ತ ಕ್ರಮ ಕೈಗೊಂಡರೆ ಉತ್ತಮ. ಪಂದ್ಯಕ್ಕೆ ಹೆಚ್ಚಿನ ಪ್ರೇಕ್ಷಕರನ್ನು ಅನುಮ ಮಾಡದೇ ಇದ್ದರೆ ಸಂಬಾವ್ಯ ಅಪಾಯವೊಂದನ್ನು ತಡೆಯಬಹುದು.

ಇದನ್ನೂ ಓದಿ IND vs BAN: ಕಾನ್ಪುರ ಟೆಸ್ಟ್‌ ಭವಿಷ್ಯ ಮಳೆಯ ಕೈಯಲ್ಲಿ

ಸ್ಪಿನ್‌ ಟ್ರ್ಯಾಕ್

ಕಾನ್ಪುರ ಸ್ಪಿನ್‌ ಟ್ರ್ಯಾಕ್‌ ಆದ ಕಾರಣದಿಂದ ಉಭಯ ತಂಡಗಳು ಕೂಡ ಸ್ಪಿನ್‌ಗೆ ಹೆಚ್ಚಿನ ಪ್ರಧಾನ್ಯತೆ ನೀಡುವ ಸಾಧ್ಯತೆ ಅಧಿಕ. ಬುಧವಾರ ಭಾರತೀಯ ಬ್ಯಾಟರ್‌ಗಳಾದ ವಿರಾಟ್‌ ಕೊಹ್ಲಿ, ನಾಯಕ ರೋಹಿತ್‌, ಪಂತ್‌, ಗಿಲ್‌ ಸೇರಿ ಎಲ್ಲ ಆಟಗಾರರು ಸ್ಪಿನ್‌ ಬೌಲಿಂಗ್‌ಗೆ ಹೆಚ್ಚಿನ ಅಭ್ಯಾಸ ನಡೆಸಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ. ಭಾರತ ಈ ಪಂದ್ಯದಲ್ಲಿ ತ್ರಿವಳಿ ಸ್ಪಿನ್‌ ದಾಳಿಗೆ ಇಳಿಸಲಿದೆ ಎಂಬ ಸೂಚನೆಯೂ ಈಗಾಗಲೇ ಲಭಿಸಿದೆ. ಅನುಭವಿಗಳಾದ ಆರ್‌.ಅಶ್ವಿನ್‌ ಮತ್ತು ರವೀಂದ್ರ ಜಡೇಜಾ ಜತೆ ಕುಲ್‌ದೀಪ್‌ ಅಥವಾ ಅಕ್ಷರ್‌ ಪಟೇಲ್‌ ಕಾಣಿಸಬಹುದು. ವೇಗಿ ಸಿರಾಜ್‌ ಈ ಪಂದ್ಯದಿಂದ ಹೊರಗುಳಿಬಹುದು.‌

ಬಿಗಿ ಭದ್ರತೆ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯ. ಭಾರತದಲ್ಲಿಯೂ ಕೆಲ ಸಂಘಟನೆಗಳು ಬಾಂಗ್ಲಾ ವಿರುದ್ಧ ಕ್ರಿಕೆಟ್‌ ಸರಣಿ ಆಡಬಾರದೆಂದು ವಿರೋಧ ವ್ಯಕ್ತಪಡಿಸಿತ್ತು. ಕಾನ್ಪುರದಲ್ಲೂ ಪ್ರತಿಭಟನೆ ನಡೆದಿದೆ. ಈಗಾಗಲೇ 20 ಮಂದಿ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಪಂದ್ಯದ ವೇಲೆ ಅಹಿತರಕ ಘಟನೆ ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದು ಪಂದ್ಯಕ್ಕೆ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿದೆ.