Monday, 16th September 2024

ಸಿದ್ದಾರ್ಥ್ ಅಜೇಯ 46 : ನಾಲ್ಕನೇ ಪಂದ್ಯ ಗೆದ್ದ ಕರ್ನಾಟಕ

Vijay Hazare Trophy
ತಿರುವನಂತಪುರಂ: ವಿಜಯ್ ಹಜಾರೆ ಟೂರ್ನಿಯಲ್ಲಿನ ನಾಲ್ಕನೇ ಪಂದ್ಯದಲ್ಲೂ ಕರ್ನಾಟಕ ಜಯ ಸಾಧಿಸಿದೆ.
ತಿರುವನಂತಪುರದ ಗ್ರೀನ್ ಫೀಲ್ಡ್ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ ಬರೋಡಾ ವಿರುದ್ದದ ಪಂದ್ಯದಲ್ಲಿ ಕರ್ನಾಟಕ ತಂಡವು 6 ವಿಕೆಟ್​ಗಳ ಜಯ ಸಾಧಿಸಿತು.

ಟಾಸ್ ಗೆದ್ದ ಕರ್ನಾಟಕ ನಾಯಕ ಮನೀಷ್ ಪಾಂಡೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಉತ್ತಮ ದಾಳಿ ಸಂಘ ಟಿಸಿದ ಕರ್ನಾಟಕ ತಂಡವು ಆರಂಭದಲ್ಲೇ ಬರೋಡಾ ರನ್​ ಗತಿಯನ್ನು ನಿಯಂತ್ರಿಸಿದರು. ಕೆಸಿ ಕಾರ್ಯಪ್ಪ 10 ಓವರ್​ನಲ್ಲಿ ಕೇವಲ 28 ರನ್​ ನೀಡಿ 3 ವಿಕೆಟ್ ಪಡೆದರೆ, ವಿ. ವೈಶಾಖ್ 3 ವಿಕೆಟ್ ಕಬಳಿಸಿ ಮಿಂಚಿದರು. ಹಾಗೆಯೇ ಪ್ರವೀಣ್ ದುಬೆ 2 ವಿಕೆಟ್ ಪಡೆದು ಗಮನ ಸೆಳೆದರು.

ಅದರಂತೆ 48.3 ಓವರ್​ನಲ್ಲಿ ಬರೋಡಾ ತಂಡವು ಕೇವಲ 176 ರನ್​ಗಳಿಗೆ ಸರ್ವಪತನ ಕಂಡಿತು. ಕರ್ನಾಟಕ ಪರ ಕೆಸಿ ಕಾರ್ಯಪ್ಪ 10 ಓವರ್​ನಲ್ಲಿ ಕೇವಲ 28 ರನ್​ ನೀಡಿ 3 ವಿಕೆಟ್ ಪಡೆದರೆ, ವಿ. ವೈಶಾಖ್ 3 ವಿಕೆಟ್ ಕಬಳಿಸಿ ಮಿಂಚಿದರು. ಪ್ರವೀಣ್ ದುಬೆ 2 ವಿಕೆಟ್ ಪಡೆದು ಗಮನ ಸೆಳೆದರು.

ಸಾಧಾರಣ ಸವಾಲು ಬೆನ್ನತ್ತಿದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ರೋಹನ್ ಕದಮ್ ಕೇವಲ 14 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ರವಿಕುಮಾರ್ ಸಮರ್ಥ್ 35 ರನ್ ಬಾರಿಸಿದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು.

ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಕೃಷ್ಣಮೂರ್ತಿ ಸಿದ್ಧಾರ್ಥ್ ತಂಡಕ್ಕೆ ಆಸರೆಯಾದರು. ಶ್ರೀನಿವಾಸ್ ಶರತ್ ಜೊತೆಗೂಡಿ ತಂಡವನ್ನು ಆಘಾತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.

ತಂಡದ ಮೊತ್ತ 4 ವಿಕೆಟ್ ನಷ್ಟಕ್ಕೆ 150 ರನ್​ ಆಗಿದ್ದ ವೇಳೆ ಮಳೆಯಿಂದಾಗಿ ಅಡಚಣೆಯುಂಟಾಯಿತು. ಮಳೆ ನಿಲ್ಲದ ಕಾರಣ ಅಂತಿಮವಾಗಿ ವಿಜೆಡಿ ನಿಯಮದ ಪ್ರಕಾರ ಕರ್ನಾಟಕ ತಂಡವು 6 ವಿಕೆಟ್​ಗಳ ಜಯ ಸಾಧಿ ಸಿತು. ಕರ್ನಾಟಕ ಪರ ಸಿದ್ದಾರ್ಥ್ ಅಜೇಯ 46 ರನ್​ಗಳಿಸಿದರೆ, ಶರತ್ 21 ರನ್​ಗಳಿಸಿ ಅಜೇಯರಾಗಿ ಉಳಿದರು.

ಏನಿದು ವಿಜೆಡಿ ನಿಯಮ?: ಡೆಕ್​ವರ್ಥ್ ಲೂಯಿಸ್ ನಿಯಮದಂತೆ ಕ್ರಿಕೆಟ್​ನಲ್ಲಿ ವಿ. ಜಯದೇವನ್ (ವಿಜೆಡಿ) ಸೂತ್ರಗಳನ್ನು ಬಳಸಲಾಗುತ್ತದೆ. ವಿಜೆಡಿ ನಿಯಮವು ಫಲಿತಾಂಶ ನಿರ್ಧಾರದಲ್ಲಿ ಉತ್ತಮ ವಿಧಾನವಾಗಿದ್ದು, ಏಕದಿನ ಹಾಗೂ ಟಿ20 ಕ್ರಿಕೆಟ್​ ಪಂದ್ಯಗಳಿಗೆ ಅಡಚಣೆಯಾದರೆ ಫಲಿತಾಂಶಗಳ ನಿರ್ಧಾರಗಳಲ್ಲಿ ವಿಜೆಡಿ ನಿಯಮವನ್ನು ಹೆಚ್ಚಾಗಿ ಬಳಸಲಾಗುತ್ತಿದೆ.