Saturday, 27th July 2024

ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ: ಪಂತ್‌, ಶಾರ್ದೂಲ್‌, ಕೋಚ್ ಆಮ್ರೆಗೆ ದಂಡ

ಮುಂಬೈ: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಮೀರಿದ ಕಾರಣಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್, ಆಟಗಾರ ಶಾರ್ದೂಲ್ ಠಾಕೂರ್ ಮತ್ತು ಸಹಾಯಕ ಸಿಬ್ಬಂದಿ ಪ್ರವೀಣ್ ಆಮ್ರೆಗೆ ದಂಡ ವಿಧಿಸಲಾಗಿದೆ.

ಕೊನೆಯ ಓವರ್ ವೇಳೆ ಅಂಪೈರ್ ನೋ ಬಾಲ್ ನೀಡಿಲ್ಲ ಎಂದು ಡೆಲ್ಲಿ ಕ್ಯಾಪಿ ಟಲ್ಸ್ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಕ್ರೀಸ್ ನಲ್ಲಿದ್ದ ಆಟಗಾರರಿಗೆ ಪಂದ್ಯ ಬಿಟ್ಟು ಬರುವಂತೆ ಪಂತ್ ಸೂಚಿಸಿದ್ದರು.

ನಾಯಕ ರಿಷಭ್ ಪಂತ್ ಮತ್ತು ಪ್ರವೀಣ್ ಆಮ್ರೆಗೆ ಪಂದ್ಯದ ಸಂಭಾವನೆಯ ಶೇ.100 ಮತ್ತು ಶಾರ್ದೂಲ್ ಠಾಕೂರ್ ಗೆ ಪಂದ್ಯದ ಸಂಭಾವನೆಯ ಶೇ.50ರಷ್ಟು ದಂಡ ಹಾಗೂ ಪ್ರವೀಣ್ ಆಮ್ರೆಗೆ ಒಂದು ಪಂದ್ಯದ ನಿಷೇಧ ಹೇರಲಾಗಿದೆ.

ಆಗಿದ್ದೇನು?: ಪಂದ್ಯದ ಕೊನೆಯ ಓವರ್ ನಲ್ಲಿ ಡೆಲ್ಲಿ ಆಟಗಾರ ರೋಮನ್ ಪೊವೆಲ್ ಆಡುತ್ತಿದ್ದರು. ಕೊನೆಯ ಓವರ್ ನಲ್ಲಿ ಡೆಲ್ಲಿಗೆ 36 ರನ್ ಅಗತ್ಯವಿತ್ತು. ಪೊವಲ್ ಮೊದಲ ಮೂರು ಎಸೆತವನ್ನು ಸಿಕ್ಸರ್ ಗೆ ಅಟ್ಟಿದರು. ಒಬೆಡ್ ಮೆಕಾಯ್ ಎಸೆದ ನಾಲ್ಕನೇ ಎಸೆತ ಫುಲ್ ಟಾಸ್ ಆಗಿತ್ತು. ಆದರೆ ಚೆಂಡು ಸೊಂಟಕ್ಕಿಂತ ಮೇಲಕ್ಕೆತ್ತು, ಹೀಗಾಗಿ ನೋ ಬಾಲ್ ನೀಡಬೇಕು ಎಂದು ಡೆಲ್ಲಿ ಆಟಗಾರರು ಕೇಳಿದರು. ಆದರೆ ಅಂಪೈರ್ ನೀಡಲಿಲ್ಲ. ಇದರಿಂದ ಸಿಟ್ಟಾದ ಡೆಲ್ಲಿ ನಾಯಕ ರಿಷಭ್ ಪಂತ್ ಆಟಗಾರರಿಗೆ ಆಡುವುದು ಬೇಡ, ಹಿಂದಕ್ಕೆ ಬನ್ನಿ ಎಂದು ಕರೆದರು.

error: Content is protected !!