Saturday, 26th October 2024

ಕರೊನ ಪರಿಹಾರ ನಿಧಿಗೆ ಒಂದು ಲಕ್ಷ ದೇಣಿಗೆ

ಬೆಂಗಳೂರು :

ಕೆಪಿಸಿಸಿ ಆರಂಭಿಸಿರುವ ಕರೊನ ಪರಿಹಾರ ನಿಧಿಗೆ ವೈಯಕ್ತಿಕವಾಗಿ ತಲಾ ಕನಿಷ್ಟ ಒಂದು ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡುವಂತೆ ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರಿಗೆ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಕೊರೊನ ವೈರಸ್ ರಾಜ್ಯದ ಜನತೆಯನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಇದರಿಂದಾಗಿ ದುಡಿಯುವ ವರ್ಗಕ್ಕೆ ಉದ್ಯೋಗಗಳಿಲ್ಲದೆ ಆಹಾರ, ನೀರು, ಔಷಧಿಗಳಿಗೆ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಮೊದಲೇ ಪ್ರವಾಹದಿಂದ ನಲುಗಿದ್ದ ನಾಡಿನ ರೈತ, ಕೂಲಿ ಕಾರ್ಮಿಕರನ್ನೂ ಸಹ ಈ ವೈರಸ್ ಕಂಗೆಡುವಂತೆ ಮಾಡಿದೆ. ಈ ಸಂದರ್ಭದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳೆರಡೂ ಸನ್ನಿವೇಶವನ್ನು ಸಮರ್ಪಕವಾಗಿ ನಿಭಾಯಿಸಬೇಕಾಗಿತ್ತು. ಆದರೆ ಎರಡೂ ಸರ್ಕಾರಗಳಿಂದ ಪರಿಹಾರ ಕಾರ್ಯ ಸೂಕ್ತವಾಗಿ ನಡೆಯುತ್ತಿಲ್ಲ.

ಈ ಸಂದರ್ಭದಲ್ಲಿ ನಾವೆಲ್ಲರೂ ಜನ ಕಂಗೆಡದಂತೆ ಅವರ ಜೊತೆ ನಿಂತು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿದೆ. ಆದ್ದರಿಂದ ನಮ್ಮ ಪಕ್ಷದ ಶಾಸಕರು, ಸಂಸದರು ವೈಯಕ್ತಕವಾಗಿ ತಲಾ ಕನಿಷ್ಟ ಒಂದು ಲಕ್ಷ ರೂ. ಗಳ ದೇಣಿಗೆ ನೀಡಬೇಕೆಂದು ಕೋರುತ್ತೇನೆ ಹಾಗೂ ತಮ್ಮ ತಮ್ಮ ಕ್ಷೇತ್ರಗಳಲ್ಲಿದ್ದುಕೊಂಡು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದು ಶಾಸಕರಿಗೆ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.