Saturday, 26th October 2024

ಬೀದಿಗೆ ಬಂದವರಿಗೆ ಪೊಲೀಸರಿಂದ ಮಂಗಳಾರತಿ

ವಿಶ್ವವಾಣಿ ಸುದ್ದಿಮನೆ

ವಿಜಯಪುರ:

ಕರೋನಾ ವೈರಸ್ ಭೀತಿಯ ಹಿನ್ನಲೆಯಲ್ಲಿ ಭಾರತ ಕಳೆದ ಮಾ.೨೪ ರಿಂದ ಲಾಕ್ ಡೌನ್ ಆಗಿದೆ. ಆದರೂ ಇದನ್ನು ಇದನ್ನು ಉಲ್ಲಂಘಿಸಿ ನಡೆದವರಿಗೆ ನಗರ ಸರ್ಕಲ್ ಪೊಲೀಸರು ವಿಶಿಷ್ಟ ರೀತಿಯ ಶಿಕ್ಷೆ ನೀಡಲು ಮುಂದಾಗಿದ್ದಾರೆ.

ಇಲ್ಲಿನ ಗಾಂಧಿ ವೃತ್ತದಲ್ಲಿ ಸೋಮವಾರದಂದು ಹಲವು ಜನರು ಅನಾವಶ್ಯಕವಾಗಿ ಬೈಕ್ ಮೇಲೆ ಸಂಚರಿಸುತ್ತಿರುವರನ್ನು ತಡೆದ ಗಾಂಧಿಚೌಕ್ ಪೊಲೀಸರು ಹಣೆಗೆ ವಿಭೂತಿ ಹಚ್ಚಿ, ಊದಿನ ಕಡ್ಡಿ ಬೆಳಗಿ ಮಂಗಳಾರತಿ ಮಾಡಿದ ನೋಟ ಕಂಡು ಬಂದಿತು.

ಗಾಂಧಿಚೌಕ ಪೊಲೀಸ್ ಠಾಣಾ ಸಿಪಿಐ ರವೀಂದ್ರ ನಾಯ್ಕೊಡಿ ಹಾಗೂ ಸಂಚಾರಿ ಪೊಲೀಸ್ ಠಾಣೆಯ ಪಿ.ಎಸ್.ಐ ಆರೀಫ್ ಮುಶಾಫುರೆ ನೇತೃತ್ವದಲ್ಲಿ ಲಾಕ್ ಡೌನ್ ಉಲ್ಲಂಘಿಸಿದವರಿಗೆ ಮಂಗಳಾರತಿ ಮಾಡಿ ಮತ್ತೊಮ್ಮೆ ಬೈಕ್ ಸವಾರರಿಗೆ ಲಾಕ್ ಡೌನ್ ಉಲ್ಲಂಘಿಸದಂತೆ ಪೊಲೀಸರು ಎಚ್ಚರಿಕೆ ನೀಡಿದರು.

ನಗರದ ಪೊಲೀಸರ ಈ ವಿನೂತನ ಪ್ರಯೋಗಕ್ಕೆ ಸಾರ್ವಜನಿಕರು ಮೆಚ್ಷುಗೆ ವ್ಯಕ್ತಪಡಿಸಿದ್ದಾರೆ.

——