Saturday, 26th October 2024

ರವಿ ಪೂಜಾರಿ ವಿಚಾರಣೆಗೆ ಬ್ರೇಕ್

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:

ಕರೋನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಭೂಗತ ಪಾತಕಿ ತನಿಖೆಗೆ ಕೊಂಚ ಬ್ರೇಕ್​ ಬಿದ್ದಿದೆ.

ರವಿ ಪೂಜಾರಿಯನ್ನು ಭದ್ರತೆಯಿಂದ ಮಡಿವಾಳದ ಎಫ್​ಎಸ್ಎಲ್ ಕಚೇರಿಯಲ್ಲಿಟ್ಟು ಸಿಸಿಬಿ ಡಿಸಿಪಿ ಕುಲ್​​ದೀಪ್ ಜೈನ್ ಹಾಗೂ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ಆದರೆ ಗುಂಪಲ್ಲಿ ಯಾರು ಸೇರದಿರುವ ಹಿನ್ನೆಲೆ ಹಾಗೂ ರವಿ ಪೂಜಾರಿ ಆರೋಗ್ಯದ ದೃಷ್ಟಿಯಿಂದ ತನಿಖೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.
ರವಿ ಪೂಜಾರಿ ನೋಡಿಕೊಳ್ಳಲು

ರವಿ ಪೂಜಾರಿ ಆರೋಗ್ಯದಲ್ಲಿ ಸಮಸ್ಯೆಯಿದ್ದು, ಅಜಾಗೃತೆಯಿಂದ ಆತನನ್ನು ನೋಡಿಕೊಂಡರೆ ಸೋಂಕು ತಗಲುವ ಲಕ್ಷಣಗಳು ಹೆಚ್ಚಿದೆ. ಈತನಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಭದ್ರತೆಯಿಂದ ನೋಡಿಕೊಳ್ಳಬೇಕಿದೆ. ಹೀಗಾಗಿ ಸಿಸಿಬಿ ಸಿಬ್ಬಂದಿ ಮೂರು ಶಿಫ್ಟ್​ನಲ್ಲಿ ನಿಗಾ ವಹಿಸಿದ್ದರು.

ಎ ಶಿಫ್ಟ್ : ಬೆಳಗ್ಗೆ 6 ರಿಂದ ಮಧ್ಯರಾತ್ರಿ ಮ. 2 ಗಂಟೆವರೆಗೆ 30 ಜನ ಸಿಬ್ಬಂದಿ ಬಿ ಶಿಫ್ಟ್​ : ಮ. 2 ರಿಂದ ರಾತ್ರಿ 8 ಗಂಟೆವರೆಗೆ 30 ಜನ ಸಿಬ್ಬಂದಿ ಸಿ ಶಿಫ್ಟ್ : ರಾತ್ರಿ 8 ರಿಂದ ಬೆಳಗ್ಗೆ 6 ಗಂಟೆವರೆಗೆ ಒಟ್ಟು 90 ಜನ ಸಿಬ್ಬಂದಿ ಆತನ ಭದ್ರತೆಯನ್ನ ನೋಡಿಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಸದ್ಯ ಕರೋನಾ ಮಹಾಮಾರಿ ಇರುವ ಕಾರಣ ಗುಂಪು ಸೇರಿ ಏನಾದರು ರೋಗ ಲಕ್ಷಣಗಳು ಕಂಡು ಬಂದರೆ ಮತ್ತೆ ತನಿಖೆಗೆ ಸಮಸ್ಯೆಯಾಗಬಹುದೆಂದು ಈ ರೋಗ ಕಡಿಮೆಯಾಗುವವರೆಗೂ ರವಿ ಪೂಜಾರಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ಕರೋನಾ ಭೀತು ಕಡಿಮೆಯಾಗುತ್ತಿದ್ದಂತೆ ಮತ್ತೆ ತನಿಖೆ ಆರಂಭಿಸಲು ಸಿಸಿಬಿ ನಿರ್ಧರಿಸಿದೆ. ಸದ್ಯ ರವಿ ಪೂಜಾರಿ ವಿರುದ್ಧ 90ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿ 39 ಪ್ರಕರಣ, ಮಂಗಳೂರು 36, ಉಡುಪಿ 11ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

2007 ಫೆಬ್ರವರಿ 15ರಲ್ಲಿ ಶಬ್ನಮ್ ಬಿಲ್ಡರ್ಸ್ ಮಾಲೀಕರಾದ ಶೈಲಜಾ ಹಾಗೂ ರವಿ ಎಂಬುವರ ಹತ್ಯೆ ಪ್ರಕರಣ 2009ರಲ್ಲಿ ಇಂದಿರಾನಗರದ ಖಾಸಗಿ ವಾಹಿನಿ ಮೇಲೆ ದಾಳಿ 2005 ರಲ್ಲಿ ಆರ್. ಟಿ. ನಗರದ ಉದ್ಯಮಿ ಸುಬ್ಬರಾಜು ಕೊಲೆ ಪ್ರಕರಣ 2013ರಲ್ಲಿ ಬಾಲಿವುಡ್ ಸಿನಿಮಾ ನಟರಾದ ಶಾರುಕ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಡಿಕೆಶಿ ಕುಟುಂಬಸ್ಥರಿಗೆ ಬೆದರಿಕೆ ಸೇರಿದಂತೆ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿತ್ತು. ಕರೋನಾ ಕಡಿಮೆಯಾದ ಬಳಿಕ ರವಿ ಪೂಜಾರಿಯನ್ನು ಮತ್ತೆ ಸಿಸಿಬಿ ತಂಡ ವಶಕ್ಕೆ ಪಡೆಯಲಿದೆ.

ಆಹಾರ ಮತ್ತು ಮದ್ಯದ ಸಮಸ್ಯೆ:

ರವಿ ಪೂಜಾರಿಯನ್ನು ಸದ್ಯದ ಮಟ್ಟಿಗೆ ನೋಡಿಕೊಳ್ಳುವುದು ಕಷ್ಟವಾಗಿದೆಯಂತೆ. ಆತ ಆಫ್ರಿಕಾದ ಸೆನೆಗಲ್​ನಲ್ಲಿದ್ದಾಗ ದಿನದ ಮೂರು ಹೊತ್ತು ಎಣ್ಣೆಯೊಂದಿಗೆ ಮಾಂಸದೂಟ ಸೇವಿಸುತ್ತಿದ್ದ. ಆತನ ಆರೋಗ್ಯ ದೃಷ್ಟಿಯಿಂದ ಬೆಡ್, ನಾನ್​ವೆಜ್, ಮೀನು ಊಟ ಆಗಾಗ ಮದ್ಯ ಕೊಡಲಾಗುತ್ತಿತ್ತು. ಸದ್ಯ ಕರೋನಾದಿಂದ ಇದೆಲ್ಲಕ್ಕೂ ಬ್ರೇಕ್ ಹಾಕಲಾಗಿತ್ತು. ಸದ್ಯ ಈತನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.