Monday, 28th October 2024

ರಾಜ್ಯದಲ್ಲಿ 93 ಜನರಲ್ಲಿ ಸೋಂಕು

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಭಾನುವಾರ ಸಂಜೆ 5 ಗಂಟೆಯಿಂದ ಸೋಮವಾರ ಸಂಜೆ 5 ಗಂಟೆಯ ಅವಧಿಯೊಳಗೆ ರಾಜ್ಯದಲ್ಲಿ ಒಟ್ಟು 93 ಜನರಲ್ಲಿ ಕರೋನಾ ಸೋಂಕು ಇರುವುದು ದೃಢಪಟ್ಟಿದ್ದು, 2,182ಕ್ಕೆ ಒಟ್ಟು ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
ಉಡುಪಿಯಲ್ಲಿ 32 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಯಾದಗಿರಿಯಲ್ಲಿ 15 ಹಾಗೂ ಕಲಬುರಗಿಯಲ್ಲಿ 14 ಜನರಲ್ಲಿ ಸೋಂಕು ದೃಢವಾಗಿದೆ. ಇನ್ನು ರಾಮನಗರದಲ್ಲಿ 2 ವರ್ಷದ ಗಂಡುಮಗುವಿಗೆ ಸೋಂಕು ತಗುಲಿದ್ದು ದೃಢವಾಗಿದೆ. ಅಲ್ಲದೇ ಬೆಂಗಳೂರು ಗ್ರಾಮಾಂತರದಲ್ಲಿ 55 ವರ್ಷದ ಮಹಿಳೆ ಹಾಗೂ ದಕ್ಷಿಣ ಕನ್ನಡದಲ್ಲಿ 43 ವರ್ಷದ ಪುರುಷರೊಬ್ಬರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.
ಇದನ್ನೂ ಸೇರಿ ರಾಜ್ಯದಲ್ಲಿ ಸೋಂಕಿನಿಂದಾಗಿ 44 ಜನರು ಸಾವನ್ನಪ್ಪಿದ್ದರೆ, ಆತ್ಮಹತ್ಯೆ ಮಾಡಿಕೊಂಡು ಇಬ್ಬರು ಸೋಂಕಿತರು ನಿಧನವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಟ್ಟು 46 ಸೋಂಕಿತರು ಸಾವನ್ನಪ್ಪಿದಂತಾಗಿದೆ.
ದಕ್ಷಿಣ ಕನ್ನಡದಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾಗೆ 44 ಮಂದಿ ಬಲಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ವೇಣೂರಿನ 40 ವರ್ಷದ ವ್ಯಕ್ತಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿ ವೇಣೂರಿನಲ್ಲಿ ಸಿಮೆಂಟ್ ಅಂಗಡಿಯ ಗೂಡ್ಸ್ ರಿಕ್ಷಾ ಚಾಲಕನಾಗಿದ್ದರು. ಹೃದಯ ಸಂಬಂಧಿ ಕಾಯಿಲೆಗಾಗಿ ಚಿಕಿತ್ಸೆಗೆಂದು ವ್ಯಕ್ತಿ ಭಾನುವಾರ ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಬಂದಿದ್ದರು. ಆದರೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತಪಟ್ಟ ಬಳಿಕ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಈ ವೇಳೆ ಕೊರೊನಾ ಪಾಸಿಟಿವ್ ಬಂದಿದೆ.
ಮೃತ ವ್ಯಕ್ತಿ ಇಡೀ ವೇಣೂರಿನ ತುಂಬೆಲ್ಲಾ ಓಡಾಡಿದ್ದರು. ಹೀಗಾಗಿ ನೂರಾರು ಮಂದಿಯ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ. ಮೇ 20ರಂದು ಮುಂಬೈನಿಂದ ಆಗಮಿಸಿದ್ದ 58 ವರ್ಷದ ವ್ಯಕ್ತಿಯನ್ನು ಮೂಡಬಿದ್ರೆಯ ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಕೊರೊನಾ ಭಯ ಮತ್ತು ಭವಿಷ್ಯದ ಚಿಂತೆಯಿಂದಾಗಿ ವ್ಯಕ್ತಿ ಕ್ವಾರಂಟೈನ್ ಕೇಂದ್ರದಲ್ಲಿ ಗುರುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ದೇಶದಿಂದ ಒನ್ ಇಂಡಿಯಾ ವಿಮಾನದ ಮೂಲಕ ಬೆಂಗಳೂರಿಗೆ ಬಂದು ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿಗೆ ಇಂದು ಕೊರೊನಾ ಸೋಂಕು ಪತ್ತೆಯಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದ 40 ವರ್ಷದ ವ್ಯಕ್ತಿ ಮೇ 20ರಂದು ಮಸ್ಕತ್‍ನಿಂದ ವಾಪಸ್ ಬಂದಿದ್ದರು. ಈ ವೇಳೆ ಬೆಂಗಳೂರಿನಲ್ಲೇ ಕ್ವಾರಂಟೈನ್ ಮಾಡಲಾಗಿತ್ತು. ನಂತರ ಗಂಟಲು ದ್ರವ ಮಾದರಿ ಪರಿಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ಪತ್ತೆಯಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 86ಕ್ಕೆ ಏರಿಕೆಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಈವರೆಗೂ 21 ಮಂದಿ ಗುಣಮುಖರಾಗಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಕೊರೊನಾ ಪತ್ತೆಯಾಗಿದೆ. ಚಾಲಕ ತುಮಕೂರು ತಾಲೂಕು ಮಾವಿನಕುಂಟೆ ಗ್ರಾಮದ ನಿವಾಸಿಯಾಗಿದ್ದು, ಮಾಗಡಿ ಡಿಪೋದಲ್ಲಿ ಕೆಲಸ ನಿರ್ವಹಿಸುತಿದ್ದರು. ಇದರಿಂದಾಗಿ ಮಾವಿನಕುಂಟೆ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ. ಜೊತೆಗೆ ಅವರ ಕುಟುಂಬದ 6 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
 ಒಂದೇ ದಿನ 51 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇದೂ ಸೇರಿ ರಾಜ್ಯದಲ್ಲಿ ಒಟ್ಟು 705 ಜನರು ಸೋಂಕು ಮುತ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸದ್ಯ 1431 ಆ್ಯಕ್ಟಿವ್​ ಕೇಸ್​ಗಳು ಇವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಹೆಚ್ಚು ಕರೋನಾ ದಾಖಲಾದ ಜಿಲ್ಲೆಗಳು
 ಬೆಂಗಳೂರು 274
 ಮಂಡ್ಯದಲ್ಲಿ 254
 ಕಲಬುರಗಿ 157
ಬೆಳಗಾವಿ 128
ಚಿಕ್ಕಬಳ್ಳಾಪುರ 126
ಯಾದಗಿರಿ 126
ದಾವಣೆಗೆರೆ 125
ಉಡುಪಿ 108