Friday, 19th April 2024

ರೈತರ ಬೆಳೆಗಳನ್ನು ಖರೀದಿಸಿ ರೈತರಿಗೆ ಹಂಚಿ: ಡಿಕೆಶಿ ಮನವಿ

ಬೆಂಗಳೂರು:

ರೈತರು ತಮ್ಮ ಹೊಲಗಳಲ್ಲಿ ಬೆಳೆದಿರುವ ಸೊಪ್ಪು, ಹಣ್ಣು, ತರಕಾರಿಗಳನ್ನು ಮಾರುಕಟ್ಟೆಯಲ್ಲಿ ಖರೀದಿಸದ ಪರಿಣಾಮ ಬೆಳೆಗಳೆಲ್ಲಾ ಹಾಳಾಗುತ್ತಿವೆ. ಈ ಸಂದರ್ಭದಲ್ಲಿ ರಾಜ್ಯದ ಎಲ್ಲ ಸಂಸದರು, ಶಾಸಕರುಗಳು, ಎಲ್ಲ ರಾಜಕೀಯ ಪಕ್ಷಗಳ ನಾಯಕರು, ಜನಪ್ರತಿನಿಧಿಗಳು, ಪದಾಧಿಕಾರಿಗಳು, ಕಾರ್ಯಕರ್ತರು ಅವರವರ ಕ್ಷೇತ್ರಗಳಲ್ಲಿ ಹಾಗೂ ಜಿಲ್ಲೆಗಳಲ್ಲಿ ರೈತರು ಬೆಳೆದಿರುವ ಹಣ್ಣು, ತರಕಾರಿ ಹಾಗೂ ಸೊಪ್ಪುಗಳನ್ನು ಮಾರುಕಟ್ಟೆ ದರದಲ್ಲಿ ಖರೀದಿಸಿ ಬಡವರಿಗೆ ಉಚಿತವಾಗಿ ಹಂಚಬೇಕು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

ಇದು ಪಕ್ಷಾತೀತವಾಗಿ ನಡೆಯಬೇಕು. ಎಲ್ಲ ಪಕ್ಷದವರೂ ಕೈ ಜೋಡಿಸಬೇಕು. ಇದರಲ್ಲಿ ಯಾವುದೇ ರಾಜಕೀಯ ಹುಡುಕಬಾರದು. ರೈತರ ಸೇವೆಗೆ ನಾವೆಲ್ಲರೂ ಬದ್ಧರಾಗಿರಬೇಕು.ಈಗಾಗಲೇ ನಮ್ಮ ಪಕ್ಷದ ನಾಯಕರಿಂದ ಹಿಡಿದು ಕಾರ್ಯಕರ್ತರವರೆಗೂ ಬಹುತೇಕರು ಬಡವರಿಗೆ, ಹಸಿದವರಿಗೆ ಆಹಾರ ವಿತರಿಸುತ್ತಿದ್ದಾರೆ. ಪರಿಹಾರ ನಿಧಿಗೂ ಹಣ ನೀಡುತ್ತಿದ್ದಾರೆ. ಅದು ಸರಿ. ಆದರೆ ನಮ್ಮ ರೈತರ ಬೆಳೆ ಅವರ ಹೊಲಗಳಲ್ಲೇ ಕೊಳೆತು ಹೋಗುತ್ತಿದೆ. ಅವರ ಶ್ರಮ ವ್ಯರ್ಥವಾಗುತ್ತಿದೆ. ಇದಕ್ಕೆ ನಾವು-ನೀವೆಲ್ಲ ಅವಕಾಶ ನೀಡಬಾರದು.

ಈ ರಾಜ್ಯ ಹಾಗೂ ದೇಶ ನಿಂತಿರುವುದೇ ರೈತನ ಮೇಲೆ. ರೈತ ಈ ದೇಶದ ಬೆನ್ನೆಲುಬು. ಈ ಸಂಕಷ್ಚದ ಸಂದರ್ಭದಲ್ಲಿ ನಾವು ರೈತರಿಗೆ ಆಸರೆಯಾಗದಿದ್ದರೆ ಮುಂದಿನ ದಿನಗಳಲ್ಲಿ ನಾವೆಲ್ಲರೂ
ಹಸಿವಿನಿಂದ ಪರದಾಡುವ ಪರಿಸ್ಥಿತಿ ಎದುರಾಗಲಿದೆ. ಹಾಗಾಗಿ ಈಗ ರೈತರ ನೆರವಿಗೆ ಧಾವಿಸಿ, ಆತನ ಹಸಿವನ್ನೂ ನೀಗಿಸುವ ಮಹತ್ತರ ಜವಾಬ್ದಾರಿ ನಮ್ಮ-ನಿಮ್ಮೆಲ್ಲರ ಮೇಲಿದೆ.

ಇದರಿಂದ ಸಂಕಷ್ಟದಲ್ಲಿರುವ ರೈತರನ್ನು ಉಳಿಸಿದಂತಾಗುತ್ತದೆ. ಅದೇ ಕಾಲಕ್ಕೆ ಬಡವರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಿ, ಅವರ ಹಸಿವನ್ನೂ ನೀಗಿಸಿದಂತಾಗುತ್ತದೆ. ಬೆಳೆಗಳು ಹೊಲದಲ್ಲೇ ಕೊಳೆಯುವುದನ್ನು ತಪ್ಪಿಸಿ, ಅವುಗಳ ಸದ್ಬಳಕೆ ಮಾಡಿಕೊಂಡಂತೆಯೂ ಆಗುತ್ತದೆ. ಇದು ಕೊರೋನಾ ವಿರುದ್ಧದ ಹೋರಾಟದ ಪ್ರಮುಖ ಭಾಗವಾಗಬೇಕಿದೆ.

ರೈತರು ಸರ್ಕಾರದಿಂದ ನೆರವು ನಿರೀಕ್ಷಿಸಿ, ಅದು ಸಕಾಲಕ್ಕೆ ಸಿಗದೆ ಕಂಗಲಾಗಿದ್ದಾರೆ. ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ. ಈ ಸಂದರ್ಭದಲ್ಲಿ ತಡ ಮಾಡದೇ ನಾವು-ನೀವೆಲ್ಲರೂ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಹೀಗಾಗಿ ಎಲ್ಲ ಪಕ್ಷಗಳ ಚುನಾಯಿತ ಪ್ರತಿನಿಧಿಗಳು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ತಮ್ಮ ಶಕ್ತಿ ಮೀರಿ ರೈತರ ನೆರವಿಗೆ ಸ್ಪಂದಿಸಬೇಕು ಎಂದು ಎಲ್ಲರಲ್ಲೂ ವಿನಮ್ರವಾಗಿ ಮನವಿ ಮಾಡುತ್ತಿದ್ದೇನೆ.

Leave a Reply

Your email address will not be published. Required fields are marked *

error: Content is protected !!