Saturday, 26th October 2024

700 ವೆಂಟಿಲೇಟರ್ ಒದಗಿಸಲು ಕ್ರಮ: ಶ್ರೀರಾಮುಲು

 

ವಿಶ್ಚವಾಣಿ ಸುದ್ದಿಮನೆ, ಬಳ್ಳಾರಿ
ವೈದ್ಯರಿಗೆ ಸುರಕ್ಷತಾ ಪರಿಕರಗಳ ಕೊರತೆ ಇರುವುದು ಗಮನದಲ್ಲಿದ್ದು, ಶೀಘ್ರದಲ್ಲಿ ಅವುಗಳನ್ನು ವೈದ್ಯರಿಗೆ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರ, ಇಡೀ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಿ ವ್ಯವಸ್ಥೆ ಮಾಡಲಾಗಿದ್ದು,ಏಳರಿಂದ ಎಂಟು ಸಾವಿರದ ಬೆಡ್‍ವ್ಯವಸ್ಥೆ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಸುರಕ್ಷತಾ ಪರಿಕರಗಳ ಕಿಟ್(ಪಿಪಿಇ)ಗಳ ಕೊರತೆಯಾಗುವುದು ಸಹಜ, ಇದು ನಮ್ಮ ಗಮನದಲ್ಲಿದ್ದು ಆದಷ್ಟು ವೈದ್ಯರಿಗೆ ಈ ಸುರಕ್ಷತಾ ಪರಿಕರ ಕಿಟ್ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ 700 ವೆಂಟಿಲೆಟರ್ ವ್ಯವಸ್ಥೆ, 350 ಆರ್ಡರ್:
ರಾಜ್ಯದಲ್ಲಿ ಸರಕಾರ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿ 700 ವೆಂಟಿಲೇಟರ್‍ಗಳು ನಮ್ಮಲ್ಲಿವೆ; 350 ವೆಂಟಿಲೆಟರ್‍ಗಳ ಖರೀದಿಗೆ ಆರ್ಡ್‍ರ್ ನೀಡಲಾಗಿದ್ದು,ಅವುಗಳು ಬಂದಿರಬಹದು; ಪರಿಶೀಲಿಸಲಾಗುವುದು ಎಂದು ಹೇಳಿದ ಅವರು, ಇದುವರೆಗೆ ವೆಂಟಿಲೆಟರ್ ಮೂಲಕ ಕರೊನಾ ಸೊಂಕಿತರಿಗೆ ಚಿಕಿತ್ಸೆ ನೀಡಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಮರ್ಪಕವಾಗಿ ಥರ್ಮಲ್ ಸ್ಕ್ಯಾನರ್‍ಗಳನ್ನು ಇಡೀ ರಾಜ್ಯದ ಎಲ್ಲೆಡೆ ಒದಗಿಸುವುದಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.
ಕಳಪೆ ಮಾಸ್ಕ್ ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುವುದು ಸೇರಿದಂತೆ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುತ್ತಿದ್ದು,ಜನರು ಯಾವುದೇ ಕಾರಣಕ್ಕೂ ಕಳಪೆ ಮಾಸ್ಕ್ ಖರೀದಿಸಬಾರದು ಎಂದು ಮನವಿ ಮಾಡಿದರು. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರೊಂದಿಗೆ ನಿನ್ನೆ ಚರ್ಚಿಸಲಾಗಿದ್ದು,ಅವರು ಇನ್ನೂ ಎರಡು ವಾರಗಳ ಕಾಲ ಹೋಮ್‍ ಕ್ವಾರಂಟೈನ್ ಸಮರ್ಪಕವಾಗಿ ಮಾಡುವಂತೆ ತಿಳಿಸಿದ್ದಾರೆ. ಅವರೊಂದಿಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಎನ್-95 ಮಾಸ್ಕ್, ತ್ರೀಬಲ್ ಲೇಯರ್ ಮಾಸ್ಕ್, ಸುರಕ್ಷತಾ ಪರಿಕರಗಳ ಕಿಟ್, ವೆಂಟಿಲೇಟರ್, ಸ್ಯಾನಿಟೈಸರ್ ಅಗತ್ಯತೆ ಕುರಿತು ಅವರಿಗೆ ತಿಳಿಸಲಾಗಿತ್ತು; ಅವರು ವಿಶೇಷ ವಿಮಾನದ ವ್ಯವಸ್ಥೆ ಮಾಡಿ ಕಳುಹಿಸಿಕೊಟ್ಟಿದ್ದು, ಅವುಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ 91 ಜನರಿಗೆ ಪಾಸಿಟಿವ್:
ರಾಜ್ಯದಲ್ಲಿ ಇದುವರೆಗೆ 91 ಜನರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ,ಅದರಲ್ಲಿ 6 ಜನರು ಗುಣಮುಖರಾಗಿದ್ದು, ಮೂರು ಜನರು ಮೃತಪಟ್ಟಿದ್ದಾರೆ. 26 ಸಾವಿರ ಜನರನ್ನು ಗುರುತಿಸಿ ಅದರಲ್ಲಿ 3243 ಜನರ ಸ್ಯಾಂಪಲ್ ಲ್ಯಾಬ್‍ನಲ್ಲಿ ಪರೀಕ್ಷಿಸಲಾಗಿ ಅದರಲ್ಲಿ 91 ಜನರಿಗೆ ಸೊಂಕು ಇರುವುದು ದೃಢಪಟ್ಟಿದೆ. 226 ಜನರು ಐಸೋಲೇಶಷನ್ ವಾರ್ಡ್‍ನಲ್ಲಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಧಿಕಾರಿಗಳು, ಟಾಸ್ಕ್
ಫೋರ್ಸ್, ಮುಖ್ಯಮಂತ್ರಿಗಳು ಹಾಗೂ ನಾನೂ ಸಭೆ ನಡೆಸಿ ಸೊಂಕು ವ್ಯಾಪಕವಾಗಿ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದೇವೆ. ಈ ಕೆಲಸದಲ್ಲಿ ನಿರತರಾಗಿರುವವರಲ್ಲಿ ಆತ್ಮಸ್ಥೈರ್ಯ,ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಹೊಸಪೇಟೆಯಲ್ಲಿ 3 ಪಾಸಿಟಿವ್: ಹೊಸಪೇಟೆಯಲ್ಲಿಯೂ ಮೂರು ಜನರಿಗೆ ಕರೊನಾ ಸೊಂಕು ಪಾಸಿಟಿವ್ ಇರುವುದು ನಿನ್ನೆ ಸಂಜೆ ದೃಢಪಟ್ಟಿದೆ. ಇಡೀ ನಗರವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ. ಸೊಂಕಿತರ ಮನೆಯ 5 ಕಿ.ಮೀ ಸುತ್ತ ಬಫರ್‍ಝೋನ್ ಆಗಿ ಮಾಡಲಾಗಿದೆ. ಅಲ್ಲಿ ಸೊಂಕು ವ್ಯಾಪಿಸದಂತೆ ಎಲ್ಲ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳುತ್ತಿದೆ. ಅವರ ಟ್ರಾವೆಲ್ ಹಿಸ್ಟರಿ ಕಲೆಹಾಕಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ 59399 ಜನರಿಗೆ ತಪಾಸಣೆ ಮಾಡಲಾಗಿದ್ದು,ಅದರಲ್ಲಿ 57 ಜನರ ಸ್ಯಾಂಪಲ್ ಪ್ರಯೋಗಾಲಯದಿಂದ ಬಂದಿದ್ದು,ಅದರಲ್ಲಿ 3 ಜನರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ. 45 ಜನರಿಗೆ ನೆಗೆಟಿವ್ ಅಂತ ಬಂದಿದೆ. 9 ಜನರ ವರದಿ ಬರಬೇಕಿದ್ದು, 13 ಜನರನ್ನು ಐಸೋಲೇಶನ್ ವಾರ್ಡ್‍ನಲ್ಲಿಡಲಾಗಿದೆ. 216 ಜನರು 14 ದಿನಗಳ ಹೋಮ್‍ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 9 ಜನರು 28 ದಿನಗಳ ಹೋಮ್ ಕ್ವಾರಂಟೈನ್ ಪೂರ್ಣಗೊಳಿಸಿದ್ದು, ಇನ್ನೂ 356 ಜನರು ಗೃಹಬಂಧನದಲ್ಲಿದ್ದಾರೆ ಎಂದು ಅವರು ವಿವರಿಸಿದರು.