Friday, 25th October 2024

‌Actor Darshan: ಹಬ್ಬದ ದಿನವೇ ದರ್ಶನ್‌ ಫ್ಯಾನ್ಸ್‌ಗೆ ವಿಜಯಲಕ್ಷ್ಮಿ ಖುಷಿಯ ಸುದ್ದಿ

vijayalakshmi darshan

ಬೆಂಗಳೂರು: ಅತ್ತ ನಟ ದರ್ಶನ್‌ ತೂಗುದೀಪ (Actor Darshan), ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಪ್ರಕರಣದಲ್ಲಿ ಜೈಲಿನಲ್ಲಿದ್ದರೆ, ಇತ್ತ ಬೆಂಗಳೂರಿನಲ್ಲಿ ಅವರ ಪತ್ನಿ ವಿಜಯಲಕ್ಷ್ಮಿ (Vijayalkshmi Darshan) ನಟನ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ದರ್ಶನ್‌ ಅವರ ನಟನೆಯ ʼನವಗ್ರಹʼ ಫಿಲಂ ರೀ ರಿಲೀಸ್‌ ಆಗುತ್ತಿದೆ ಎಂದಿದ್ದಾರೆ.

ಈ ಬಗ್ಗೆ ಖುದ್ದು ಪೋಸ್ಟರ್‌ ಹಂಚಿಕೊಂಡಿರುವ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ, ಅಭಿಮಾನಿಗಳಿಗೆ ಬಿಗ್‌ ಅಪ್ಡೇಟ್‌ ಕೊಟ್ಟಿದ್ದಾರೆ. ‘ಪ್ರಿಯ ಡಿಬಾಸ್‌ ಸೆಲೆಬ್ರಿಟಿಗಳೇ… ನಿಮ್ಮೆಲ್ಲರ ಹೃದಯದಲ್ಲಿ ಜಾಗ ಪಡೆದುಕೊಂಡಿರುವ ನವಗ್ರಹ ಸಿನಿಮಾ ಶೀಘ್ರದಲ್ಲೇ ರೀ ರಿಲೀಸ್‌ ಆಗಲಿದೆ. ಈ ಬಾರಿಯ ಸಿನಿಮಾ ವೀಕ್ಷಿಸುವ ಅನುಭವವು ಮತ್ತಷ್ಟು ಸ್ಪೆಷಲ್‌ ಆಗಿರಲಿದೆ. ನಿಮ್ಮ ಹತ್ತಿರದ ಥಿಯೇಟರ್‌ಗಳಲ್ಲಿ ನವಗ್ರಹ ನೋಡಲು ಅಭಿಮಾನಿಗಳು ಸಜ್ಜಾಗಿ..ಶೀಘ್ರದಲ್ಲೇ ಬಿಡುಗಡೆ ಆಗಲಿದೆ’ ಎಂದು ಸಂದೇಶ ರವಾನಿಸಿದ್ದಾರೆ.

‘ಕೆಟ್ಟದ್ದು ಕೊನೆಯಲ್ಲಿ ಅಳಿದು ಹೋಗುತ್ತೆ, ಒಳ್ಳೆತನಕ್ಕೆ ಗೆಲುವು ಸಿಕ್ಕೇ ಸಿಗುತ್ತೆ ಎಂದು ನಿಜವಾದ ದಿನವಿದು. ಇದನ್ನು ಎಲ್ಲರೂ ಸದಾ ನೆನಪಿನಲ್ಲಿ ಇಟ್ಟುಕೊಳ್ಳೋಣ. ಆ ತಾಯಿ ಚಾಮುಂಡೇಶ್ವರಿ ನಿಮಗೂ, ನಿಮ್ಮ ಕುಟುಂಬಸ್ಥರಿಗೂ ಆಶೀರ್ವದಿಸಲಿ..’ ಎಂದು ವಿಜಯಲಕ್ಷ್ಮಿ ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ಅನ್ನು ದರ್ಶನ್‌ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸೋಮವಾರದಂದು ದರ್ಶನ್‌ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಈ ಬಾರಿ ಅವರಿಗೆ ಜಾಮೀನು ಸಿಗುವ ಲಕ್ಷಣಗಳು ದಟ್ಟವಾಗಿವೆ ಎಂದೇ ಹೇಳಲಾಗುತ್ತಿದೆ. ಮೊನ್ನೆ ದರ್ಶನ್‌ ಅವರನ್ನು ಭೇಟಿಯಾಗಲು ವಿಜಯಲಕ್ಷ್ಮಿ ಅವರು ಬಳ್ಳಾರಿ ಜೈಲಿಗೆ ಹೋಗಿದ್ದರು. ಈ ವೇಳೆ ದರ್ಶನ್‌ ಅವರೂ ಕೂಡ ನಗುತ್ತಾ ಅಭಿಮಾನಿಗಳಿಗೆ ಕಾಣಿಸಿಕೊಂಡಿದ್ದರು. ದರ್ಶನ್‌ ಪರ ವಕೀಲರು ಕೂಡ ಈ ಬಾರಿ ಜಾಮೀನು ಸಿಕ್ಕೇ ಸಿಗುತ್ತೆ ಎನ್ನುವ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ದರ್ಶನ್‌ ನಟಿಸಿದ್ದ ನವಗ್ರಹ ಸಿನಿಮಾದ ಎಲ್ಲ ಹಾಡುಗಳು ಪ್ರತಿ ವರ್ಷ ದಸರಾ ವೇಳೆ ಪ್ರತಿಧ್ವನಿಸುತ್ತಲೇ ಇರುತ್ತವೆ. ಈ ಬಾರಿಯೂ ನವಗ್ರಹ ಸಿನಿಮಾದ ಹಾಡು, ಡೈಲಾಗ್‌ಗಳಿಗೆ ಸೋಶಿಯಲ್‌ ಮೀಡಿಯಾಗಳಲ್ಲಿ ರೀಲ್ಸ್‌ ಮಾಡಿದ್ದಾರೆ.

ಇದನ್ನೂ ಓದಿ: Renuka swamy Murder Case: ರೇಣುಕಾಸ್ವಾಮಿ ಕೊಲೆ ಆರೋಪಿ ಮತ್ತೆ ಬೆಂಗಳೂರು ಜೈಲಿಗೆ ಶಿಫ್ಟ್‌; ದರ್ಶನ್‌ಗೆ ಬಳ್ಳಾರಿಯೇ ಗತಿ