Friday, 20th September 2024

CM Siddaramaiah: ಪತ್ರಕರ್ತರ ಸಹಕಾರ ಸಂಘಕ್ಕೆ ಆರ್ಥಿಕ ನೆರವಿನ ಭರವಸೆ ನೀಡಿದ ಸಿದ್ದರಾಮಯ್ಯ

CM Siddaramaiah

ಬೆಂಗಳೂರು: ಪತ್ರಕರ್ತರ ಸಹಕಾರ ಸಂಘಕ್ಕೆ ಆರ್ಥಿಕ ನೆರವು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭರವಸೆ ನೀಡಿದರು. ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಪಾಳ್ಯ ನೇತೃತ್ವದ ನಿಯೋಗವು ಸಿಎಂ ಅವರನ್ನು ಭೇಟಿ ಮಾಡಿದ ವೇಳೆ ಈ ಭರವಸೆ ನೀಡಿದ್ದಾರೆ.

1949ರಲ್ಲಿ ಆರಂಭವಾದ ಪತ್ರಕರ್ತರ ಸಹಕಾರ ಸಂಘ ರಾಜ್ಯದ ಪತ್ರಕರ್ತರ ಏಕೈಕ ಹಣಕಾಸಿನ ಪ್ರಾತಿನಿಧಿಕ ಸಂಸ್ಥೆ. ಈ ಸಂಸ್ಥೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಪತ್ರಕರ್ತರನ್ನು ಸದಸ್ಯರನ್ನಾಗಿ ಹೊಂದಿದೆ. ಆಡಿಟ್ ವರ್ಗೀಕರಣದಲ್ಲಿ ಇದು ‘ಎ’ ಶ್ರೇಣಿ ಪಡೆದಿರುವ ಸಂಸ್ಥೆ. ಅತ್ಯುತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿಗೂ ಪಾತ್ರವಾಗಿದೆ. ನಿರಂತರ ಏಳು ದಶಕಗಳಿಂದ ನಮ್ಮ ಪತ್ರಕರ್ತರ ಸಹಕಾರ ಸಂಘ ಸೇವೆ ಸಲ್ಲಿಸುತ್ತಿದೆ.

ಈ ಸುದ್ದಿಯನ್ನೂ ಓದಿ | CM Siddaramaiah: ಕಲಾವಿದರ ಮಾಸಾಶನ 3000 ರೂ.ಗೆ ಏರಿಕೆ: ಸಿದ್ದರಾಮಯ್ಯ ಘೋಷಣೆ

ಪತ್ರಕರ್ತರ ಸಂಘದ ಸದಸ್ಯರಿಂದ ಆರೋಗ್ಯದ ನೆರವಿನ ಬೇಡಿಕೆ ದಿನೇದಿನೆ ಹೆಚ್ಚಾಗುತ್ತಿದೆ. ಹೀಗಾಗಿ ಪತ್ರಕರ್ತರ ಆರೋಗ್ಯದ ಅನುಕೂಲಕ್ಕಾಗಿ ಆರ್ಥಿಕ ನೆರವು ಬೇಕಿದೆ. ವೈದ್ಯಕೀಯ ನೆರವಿಗೆ ರಾಜ್ಯ ಸರ್ಕಾರದಿಂದ ಸುಮಾರು 5 ಕೋಟಿ ರೂ. ಅನುದಾನ ನೀಡಬೇಕು ಎಂದು ಸಂಘದ ಅಧ್ಯಕ್ಷ ರಮೇಶ್ ಪಾಳ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ ಅವರು, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಂಘದ ಶ್ರೇಯೋಭಿವೃದ್ಧಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಇದರ ಜತೆಗೆ ಕೆಲವು ಹಿರಿಯ ಪತ್ರಕರ್ತರು ಸಂಘದಲ್ಲಿ ಸಾಲ ಪಡೆದಿದ್ದು, ಕೊರೋನಾ ಸಮಯದಲ್ಲಿ ಹಾಗೂ ಆನಂತರ ಅನಾರೋಗ್ಯ ಕಾರಣದಿಂದ ನಿಧನರಾಗಿದ್ದಾರೆ. ಕೊರೋನಾ ಆರ್ಥಿಕ ಸಂಕಷ್ಟದಿಂದ ನಿಗದಿತ ಸಮಯಕ್ಕೆ ಸಾಲ ಮರು ಪಾವತಿ ಮಾಡದೆ ಸುಸ್ತಿದಾರರಾಗಿದ್ದಾರೆ. ಹೀಗಾಗಿ ಸಂಸ್ಥೆಗೆ ಆರ್ಥಿಕ ನೆರವು ತೀರಾ ಅಗತ್ಯವಾಗಿದೆ. ರಾಜ್ಯ ಸರ್ಕಾರ ಪತ್ರಕರ್ತರ ಸಹಕಾರ ಸಂಘಕ್ಕೆ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ನಿಯೋಗವು ಮುಖ್ಯಮಂತ್ರಿಗಳನ್ನು ಮನವಿ ಮಾಡಿಕೊಂಡಿತು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರ ಸಹಕಾರ ಸಂಘಕ್ಕೆ ನೆರವು ನೀಡುವ ಭರವಸೆ ನೀಡಿದರು.

ನಿಗಮಗಳ ನೇಮಕದಲ್ಲಿ ಸಂಸ್ಥೆಯನ್ನೂ ಪರಿಗಣಿಸಿ

ಮಾಧ್ಯಮಕ್ಕೆ ಸಂಬಂಧಿಸಿದ ನಿಗಮ ಮಂಡಳಿ ಅಥವಾ ಅಕಾಡೆಮಿಗಳಿಗೆ ನೇಮಕ ಮಾಡುವ ಸಂದರ್ಭದಲ್ಲಿ ಪತ್ರಕರ್ತರ ಸಹಕಾರ ಸಂಘವನ್ನೂ ಪರಿಗಣಿಸಬೇಕು. ಸಹಕಾರ ಸಂಘದ ಪ್ರತಿನಿಧಿಗಳನ್ನು ನಿರ್ದೇಶಕರು ಹಾಗೂ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿಯೋಗದ ಸದಸ್ಯರು ಸಿಎಂ ಗೆ ಮನವಿ ಮಾಡಿದರು.

ಈ ಸುದ್ದಿಯನ್ನೂ ಓದಿ | Job News: 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ

ನಿಯೋಗದಲ್ಲಿ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ದೊಡ್ಡ ಬೊಮ್ಮಯ್ಯ, ಖಜಾಂಚಿ ಮೋಹನ್ ಕುಮಾರ್ ಬಿ.ಎಸ್‌, ನಿರ್ದೇಶಕರಾದ ರಮೇಶ್ ಹಿರೇಜಂಬೂರು, ಸೋಮಶೇಖರ್ ಕೆ.ಎಸ್. (ಸೋಮಣ್ಣ) ಉಪಸ್ಥಿತರಿದ್ದರು.