Saturday, 28th September 2024

Mallikarjun Kharge: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಲೋಕಾಯುಕ್ತಕ್ಕೆ ದೂರು, ತನಿಖೆಗೆ ರಾಜ್ಯಪಾಲರ ಮೊರೆಗೆ ನಿರ್ಧಾರ

mallikarjun kharge

ಬೆಂಗಳೂರು: ಅಧಿಕಾರ ಬಳಸಿ ಸರಕಾರಿ ಸ್ವತ್ತನ್ನು ತಮ್ಮ ಕುಟುಂಬಕ್ಕೆ ಹಂಚಿಕೆ ಮಾಡಿಸಿಕೊಂಡ ಆರೋಪದಲ್ಲಿ ತನಿಖೆಗೆ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಮತ್ತವರ ಕುಟುಂಬದವರ ಮೇಲೆ ಲೋಕಾಯುಕ್ತಕ್ಕೆ (Lokayukta) ದೂರು ನೀಡಲಾಗಿದೆ. ಈ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಲು ಕೋರಿ ರಾಜ್ಯಪಾಲರ (Governor Thawar Chand Gehlot) ಮೊರೆ ಹೋಗಲು ನಿರ್ಧರಿಸಲಾಗಿದೆ.

ಬಿಜೆಪಿ ಮುಖಂಡ ಎನ್‌.ಆರ್‌ ರಮೇಶ್‌ ಅವರು ಈ ದೂರು ನೀಡಿದ್ದಾರೆ. ನಗರದ ಎರಡು ಬೇರೆ-ಬೇರೆ ಪ್ರದೇಶಗಳಲ್ಲಿ ತಮ್ಮ ಅಧಿಕಾರ ಮತ್ತು ರಾಜಕೀಯ ಪ್ರಭಾವ ಬಳಸಿ ಸರಕಾರಿ ಸ್ವತ್ತನ್ನು ಹಂಚಿಕೆ ಮಾಡಿಸಿಕೊಂಡಿದ್ದಾರೆ ಎಂದು ದೂರಲಾಗಿದೆ. ಶುಕ್ರವಾರ ಲೋಕಾಯುಕ್ತ ಕಚೇರಿಗೆ ತೆರಳಿ 394 ಪುಟಗಳ ದಾಖಲೆಯನ್ನು ಅಧಿಕಾರಿಗಳಿಗೆ ನೀಡಿ ಅವರು ಭೂ ಹಂಚಿಕೆ ಪ್ರಕರಣದ ಮಾಹಿತಿ ನೀಡಿದರು.

ಕಾನೂನು ಗಾಳಿಗೆ ತೂರಿ ಖರ್ಗೆ ಕುಟುಂಬಸ್ಥರು ʼಸಿದ್ಧಾರ್ಥ ವಿಹಾರ ಟ್ರಸ್ಟ್‌’ ಹೆಸರಿನಲ್ಲಿ ಸರಕಾರಿ ಸ್ವತ್ತನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ತಮ್ಮ ರಾಜಕೀಯ ಪ್ರಭಾವ ಬಳಸಿ ಕೋಟ್ಯಂತರ ರೂ. ಸರಕಾರಿ ಆಸ್ತಿ ಹಂಚಿಕೆ ಮಾಡಿಸಿಕೊಂಡಿದ್ದಾರೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಖರ್ಗೆ ಕುಟುಂಬ ತಮ್ಮ ರಾಜಕೀಯ ಪ್ರಭಾವ ಬಳಸಿ ಬಿಡಿಎ ಮತ್ತು ಕೆಐಎಡಿಬಿಯಲ್ಲಿ ನಿವೇಶನ ಪಡೆದಿದೆ. ʼಸಿದ್ದಾರ್ಥ ವಿಹಾರ ಟ್ರಸ್ಟ್‌’ ಸಂಸ್ಥೆ ಹೆಸರಿಗೆ 2 ಪ್ರತ್ಯೇಕ ಪ್ರದೇಶಗಳಲ್ಲಿ 2 ಪ್ರತ್ಯೇಕ ಸರಕಾರಿ ಸಂಸ್ಥೆಗಳ ಮೂಲಕ 2 ಸಿಎ ನಿವೇಶನಗಳನ್ನು ಹಂಚಿಕೆ ಮಾಡಿಸಿಕೊಳ್ಳುವ ಮೂಲಕ ಘೋರ ವಂಚನೆ ಎಸಗಿದ್ದಾರೆ. 2014ರಲ್ಲಿ ಈ ಟ್ರಸ್ಟ್‌ ಮೂಲಕ ಶಿಕ್ಷಣ ಉದ್ದೇಶಕ್ಕಾಗಿ ಬಿಟಿಎಂ ಲೇಔಟ್‌ನಲ್ಲಿ 4ನೇ ಹಂತದಲ್ಲಿ 30 ವರ್ಷಗಳ ಗುತ್ತಿಗೆ ಅವಧಿಗೆ ಬಿಡಿಎ ನಿವೇಶನ ಪಡೆದಿದ್ದು ಇದನ್ನು ಮರೆ ಮಾಚಿದೆ. ಈಗ ಯಲಹಂಕ ಬಳಿಯ ಬಾಗಲೂರಿನಲ್ಲಿ ಕೆಐಎಡಿಬಿ Hi -Tech Defence and Aerospace Park ಪ್ರದೇಶದಲ್ಲಿ ಖರ್ಗೆ ಕುಟುಂಬ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ 5 ಎಕರೆ ವಿಸ್ತೀರ್ಣದ ಸಿಎ ನಿವೇಶನ ಹಂಚಿಕೆ ಮಾಡಿಸಿಕೊಂಡಿದೆ ಎಂದು ರಮೇಶ್ ಆರೋಪಿಸಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಿಟಿಎಂ ಲೇಔಟ್‌ನಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಸಿಎ ನಿವೇಶನ ನೀಡಲಾಗಿತ್ತು. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಖರ್ಗೆ ಪುತ್ರ ರಾಹುಲ್‌ ಖರ್ಗೆ ಅವರಿಗೆ ಬಾಗಲೂರಿನಲ್ಲಿ ಸಿಎ ನಿವೇಶ ಮಂಜೂರು ಮಾಡಲಾಗಿದೆ. ಕಾನೂನು ಗಾಳಿಗೆ ತೂರಿ ಜಾಗ ಮಂಜೂರು ಮಾಡಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎಸ್‌. ಸೆಲ್ವಕುಮಾರ್‌ ಜತೆಗೆ ಸ್ವಜನ ಪಕ್ಷಪಾತ ತೋರಿರುವ ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್‌ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೊಂದು ಕೋಟ್ಯಂತರ ರೂ. ಭೂ ಹಗರಣವಾಗಿದ್ದು, ರಾಜ್ಯಪಾಲರನ್ನು ಭೇಟಿ ಮಾಡಿ ತನಿಖೆಗೆ ಅನುಮತಿ ನೀಡುವಂತೆ ಮನವಿ ಮಾಡುತ್ತೇನೆ. ಈಗಾಗಲೇ ರಾಜ್ಯಪಾಲರ ಭೇಟಿಗೆ ಸಮಯ ಕೇಳಲಾಗಿದೆ. ಸೋಮವಾರ ಅವಕಾಶ ನೀಡುವ ನಿರೀಕ್ಷೆಯಿದೆ ಎಂದು ಪಾಲಿಕೆ ಮಾಜಿ ಸದಸ್ಯ ರಮೇಶ್‌ ತಿಳಿಸಿದರು.

ಇದನ್ನೂ ಓದಿ: Priyank Kharge: ಅಮೆರಿಕ-ಕರ್ನಾಟಕ ನಡುವೆ ಸಿಸ್ಟರ್ ಸಿಟಿ ಪ್ರಸ್ತಾಪ; ಯು.ಎಸ್ ರಾಯಭಾರಿ ಜತೆ ಪ್ರಿಯಾಂಕ್ ಖರ್ಗೆ ಚರ್ಚೆ