Thursday, 19th September 2024

Gram Panchayat: ಗ್ರಾಪಂ ಅನಕ್ಷರಸ್ಥ ಸದಸ್ಯರಿಗಾಗಿ ʼಸಾಕ್ಷರ ಸನ್ಮಾನʼ ಕಾರ್ಯಕ್ರಮ ಆರಂಭ

Gram Panchayat

ಬೆಂಗಳೂರು: ಗ್ರಾಮ ಪಂಚಾಯಿತಿಗಳ ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳನ್ನು ಸಾಕ್ಷರರನ್ನಾಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ʼಸಾಕ್ಷರ ಸನ್ಮಾನʼ ಎಂಬ ಕಾರ್ಯಕ್ರಮವನ್ನು ಆರಂಭಿಸಿದೆ. ಗ್ರಾಮ ಪಂಚಾಯಿತಿಗಳಲ್ಲಿರುವ (Gram Panchayat)  5234 ಚುನಾಯಿತ ಅನಕ್ಷರಸ್ಥ ಮಹಿಳಾ ಹಾಗೂ 1112 ಚುನಾಯಿತ ಅನಕ್ಷರಸ್ಥ ಪುರುಷ ಪ್ರತಿನಿಧಿಗಳಿರುವ ಈ ಕಾರ್ಯಕ್ರಮದಿಂದ ಅನುಕೂಲವಾಗಲಿದೆ.

ಈ ಬಗ್ಗೆ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ಗ್ರಾಮ ಪಂಚಾಯಿತಿಗಳ 6,346 ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳನ್ನು ಸಾಕ್ಷರರನ್ನಾಗಿಸುವ ʼಸಾಕ್ಷರ ಸನ್ಮಾನʼ ಕಾರ್ಯಕ್ರಮವು ಸೆಪ್ಟೆಂಬರ್‌ 1ರಿಂದ ಆರಂಭಗೊಂಡಿದೆ. 21 ಜಿಲ್ಲೆಗಳಲ್ಲಿ ಅಕ್ಟೋಬರ್‌ 20ರ ವರೆಗೆ ಪ್ರತಿದಿನ 2 ಗಂಟೆಗಳಂತೆ 50 ದಿನ ಒಟ್ಟು 100 ಗಂಟೆ ತರಬೇತಿ ನೀಡಲಾಗುತ್ತದೆ ಎಂದು  ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

‘ರಾಜ್ಯದ ಎಲ್ಲ ಗ್ರಾಪಂಗಳಲ್ಲಿ 94,775 ಚುನಾಯಿತ ಪ್ರತಿನಿಧಿಗಳಿದ್ದು, ಅವರಲ್ಲಿ 9,357 ಮಂದಿ ಅನಕ್ಷರಸ್ಥರಿದ್ದರು. ಇವರನ್ನು ಸಾಕ್ಷರರನ್ನಾಗಿಸುವ ಮೊದಲ ಹಂತದ ಕಾರ್ಯಕ್ರಮ ಹಿಂದಿನ ವರ್ಷದಲ್ಲಿ ನಡೆದಿತ್ತು. ಆಗ 2,403 ಮಹಿಳೆಯರು ಮತ್ತು 608 ಪುರುಷರು ಸೇರಿ ಒಟ್ಟು 3,011 ಪ್ರತಿನಿಧಿಗಳಿಗೆ ತರಬೇತಿ ನೀಡಲಾಗಿತ್ತು. 2ನೇ ಹಂತದ ಕಾರ್ಯಕ್ರಮ ಈಗ ಆರಂಭವಾಗಲಿದೆ’ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯರಿಗೆ ಓದು-ಬರಹ ಕಲಿಸಿ, ಲೆಕ್ಕಾಚಾರದಲ್ಲಿ ಸ್ವಾವಲಂಬಿಗಳಾಗಿ ಮಾಡುವುದು, ಸಭಾ ನೋಟಿಸ್‌, ನಡಾವಳಿ ಮತ್ತು ಮಾರ್ಗಸೂಚಿಗಳನ್ನು ಸ್ವತಃ ಓದಿ ಅರ್ಥಮಾಡಿಕೊಳ್ಳುವಂತೆ ಸಜ್ಜುಗೊಳಿಸುವುದು ಮತ್ತು ಸ್ಥಳೀಯ ಆಡಳಿತದ ನೀತಿ ನಿರೂಪಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗುವಂತೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ತಿಳಿಸಿದ್ದಾರೆ.

https://x.com/KarnatakaVarthe/status/1830515725628227807

ಗೃಹಲಕ್ಷ್ಮೀಯರಿಗೆ ಸಂತಸದ ಸುದ್ದಿ; ರೀಲ್ಸ್ ಮಾಡಿ, ಬಹುಮಾನ ಗೆಲ್ಲಿ!

gruhalakshmi scheme

ಬೆಂಗಳೂರು: ರಾಜ್ಯದ ಕುಟುಂಬದ ಯಜಮಾನಿಯರಿಗೆ ರಾಜ್ಯ ಸರ್ಕಾರ ಸಂತಸದ ಸುದ್ದಿ ನೀಡಿದೆ. ‘ಗೃಹಲಕ್ಷ್ಮೀ’ ಯೋಜನೆಯ ಫಲಾನುಭವಿಗಳಾದ ಯಜಮಾನಿಯರು ರೀಲ್ಸ್ ಮಾಡಿ ಬಹುಮಾನ ಗೆಲ್ಲಲು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅತ್ಯುತ್ತಮ ಅವಕಾಶ ಕಲ್ಪಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯು ಜಾರಿಗೆ ಬಂದು ಇಲ್ಲಿಗೆ ಒಂದು ವರ್ಷವಾಗಿದೆ. ಈ ಸಂದರ್ಭದಲ್ಲಿ ಕುಟುಂಬದ ಎಲ್ಲ ಯಜಮಾನಿಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶುಭಾಶಯ ಮತ್ತು ಅಭಿನಂದನೆ ಸಲ್ಲಿಸಿದ್ದು, ಜತೆಗೆ ಯಜಮಾನಿಯರಿಗೆ ಒಂದು ಬಹುಮಾನವನ್ನೂ ಘೋಷಿಸಿದ್ದಾರೆ.

ಇಲ್ಲಿಯವರೆಗೆ ಗೃಹಲಕ್ಷ್ಮೀ ಫಲಾನುಭವಿಗಳಾದ ತಮ್ಮ ಜೀವನದಲ್ಲಿ ಏನೆಲ್ಲ ಬದಲಾವಣೆಯನ್ನು ಈ ಒಂದು ವರ್ಷದಲ್ಲಿ ತಂದಿದೆ ಎನ್ನುವುದನ್ನು ಯಜಮಾನಿಯರು ಹಂಚಿಕೊಳ್ಳಲು ಸಚಿವರು ಕೋರಿದ್ದಾರೆ.

https://fb.watch/ukcBV0uuOr/

ರೀಲ್ಸ್ ಮಾಡಿ
ಸಾಮಾಜಿಕ ಜಾಲ ಜಾಲತಾಣಗಳಾದ ಯುಟ್ಯೂಬ್, ಫೇಸ್ ಬುಕ್, ಇನ್ ಸ್ಟಾಗ್ರಾಮ್‌ಗಳಲ್ಲಿ ರೀಲ್ಸ್‌ ಅನ್ನು ಹಂಚಿಕೊಳ್ಳುವಂತೆ ಕೋರಿದ್ದಾರೆ.

ಯಾವ ಯಜಮಾನಿಯರು ಮಾಡಿದ ರೀಲ್ಸ್‌ಗೆ ಹೆಚ್ಚು ವೀವ್ಸ್‌ ಬಂದಿದೆಯೋ ಅಂತಹ ಯಜಮಾನಿಯರಿಗೆ ಒಂದು ಬಹುಮಾನ ಘೋಷಿಸಿದ್ದಾರೆ. ಇಲ್ಲಿಂದ ಒಂದು ತಿಂಗಳು ಅಂದರೆ ಸೆಪ್ಟೆಂಬರ್ 30ನೇ ತಾರೀಖಿನವರೆಗೆ ಯಜಮಾನಿಯರು ತಮ್ಮ ರೀಲ್ಸ್ ಗಳನ್ನು ಯುಟ್ಯೂಬ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಗಳಲ್ಲಿ ಹಂಚಿಕೊಳ್ಳಬೇಕಿದೆ. ಜಾಸ್ತಿ ವೀವ್ಸ್ ಸಿಕ್ಕಿದ ಯಜಮಾನಿಯರಿಗೆ ಸಚಿವರು ವೈಯಕ್ತಿಕವಾಗಿ ಒಂದು ಬಹುಮಾನವನ್ನು ನೀಡಲಿದ್ದಾರೆ.

ಮೊದಲ 50 ಯಜಮಾನಿಯರ ರೀಲ್ಸ್ ಹಾದಿಯನ್ನು ಎದುರು ನೋಡುತ್ತಿದ್ದೇನೆ; ಈ ಒಂದು ಗೃಹಲಕ್ಷ್ಮೀ ಯೋಜನೆಯಿಂದ ಜೀವನದಲ್ಲಿ ಆದ ಬದಲಾವಣೆಯನ್ನು ನಮ್ಮೆಲ್ಲ ಕರ್ನಾಟಕದ ಜನರ ಮುಂದೆ ಹಂಚಿಕೊಳ್ಳಬೇಕೆಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಗೃಹಲಕ್ಷ್ಮೀ ಯೋಜನೆಯ ಎಲ್ಲ ಯಜಮಾನಿಯರಲ್ಲಿ ಮನವಿ ಮಾಡಿದ್ದಾರೆ.