Sunday, 6th October 2024

Kannada New Movie: ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯ ಸುತ್ತ ‘ವೃತ್ತ’ ಸಿನಿಮಾ ಟೀಸರ್‌ ರಿಲೀಸ್‌

Kannada New Movie

ಬೆಂಗಳೂರು: ಪ್ರತಿ ದಿನ ಹೊಸ ಸಿನಿಮಾ ಸೆಟ್ಟೇರೋದು ಟ್ರೇಲರ್‌, ಟೀಸರ್‌ ಬಿಡುಗಡೆ ಆಗೋದು ಹೊಸತೇನಲ್ಲ. ಆದರೆ ಬಿಡುಗಡೆ ಆದ ಕೆಲವೇ ಕೆಲವು ಸಿನಿಮಾ (Kannada New Movie) ಟೀಸರ್‌ಗಳು ಪ್ರೇಕ್ಷಕರ ಗಮನ ಸೆಳೆಯುತ್ತವೆ. ಸದ್ಯ ಈಗ ಸಿನಿ ಪ್ರೇಮಿಗಳ ಗಮನ ಸೆಳೆದಿರುವ ಟೀಸರ್‌ ವೃತ್ತ. ವೃತ್ತ ಅಂದ ತಕ್ಷಣ ಒಂದು ಸರ್ಕಲ್‌ನಲ್ಲಿ ನಡೆಯೋ ಸ್ಟೋರಿ ಇರಬೇಕು ಅನ್ನೋದು ಮೊದಲಿಗೆ ಅನ್ನಿಸುತ್ತೆ ಆದರೆ ಈ ʼವೃತ್ತʼ ಸಿನಿಮಾದ ಕಾನ್ಸೆಪ್ಟ್‌ ಬೇರೆ.

ಸಿನಿಮಾ ಕಂಪ್ಲೀಟ್‌ ಮಾಡಿ ಟೀಸರ್‌ ಬಿಡುಗಡೆ ಮಾಡಿರೋ ವೃತ್ತ ತಂಡಕ್ಕೆ ನಟ ನಿನಾಸಂ ಸತೀಶ್‌ ಸಾಥ್‌ ಸಿಕ್ಕಿದೆ. ಸಿನಿಮಾ ಟೀಸರ್‌, ಟ್ರೇಲರ್‌ ನೋಡಿ ಚಿತ್ರವನ್ನ ತಮ್ಮದೇ ಬ್ಯಾನರ್‌ ಅಡಿಯಲ್ಲಿ ಪ್ರಸೆಂಟ್‌ ಮಾಡೋದಕ್ಕೆ ಸತೀಶ್‌ ನಿರ್ಧಾರ ಮಾಡಿದ್ದಾರೆ. ಟೀಸರ್‌ ಲಾಂಚ್‌ಗೆ ಬಂದು ಹೊಸಬರ ಪ್ರಯತ್ನಕ್ಕೆ ಸಾಥ್‌ ಕೊಟ್ರು. ಹೊಸ ತಂಡವಾದ್ರು ಎಲ್ಲಾ ರೀತಿಯಲ್ಲೂ ತಯಾರಿ ಮಾಡಿಕೊಂಡೆ ಬಂದಿದ್ದಾರೆ ಅನ್ನೋದು ಟೀಸರ್‌ ನೋಡಿದ್ರೆ ತಿಳಿಯುತ್ತೆ.

ವೃತ್ತ ಸಿನಿಮಾವನ್ನ ನಿರ್ದೇಶನ ಮಾಡುವುದರ ಜತೆಗೆ ಲಿಖಿಕ್‌ ಕುಮಾರ್‌ ಎಸ್ ಕನ್ನಡ ಸಿನಿಮಾರಂಗಕ್ಕೆ ನಿರ್ದೇಶಕನಾಗಿ ಕಾಲಿಡುತ್ತಿದ್ದಾರೆ. ಇನ್ನು ಚಿತ್ರವನ್ನು ಲಕ್ಷ್ಯ ಆರ್ಟ್ಸ್‌ ಬ್ಯಾನರ್‌ ಅಡಿಯಲ್ಲಿ ಟಿ. ಶಿವಕುಮಾರ್‌ ನಿರ್ಮಾಣ ಮಾಡಿದ್ದಾರೆ. ಚಿತ್ರದ ವಿಶೇಷ ಅಂದ್ರೆ ನಾಯಕ ಒಬ್ಬನ ಸುತ್ತಲೇ ಕಥೆ ಕೇಂದ್ರೀಕೃತವಾಗಿರುತ್ತಂತೆ. ಚಿತ್ರಕ್ಕೆ ಸಿಂಕ್ರೋನೈಸ್‌ ಮಾಡಿದ ಧ್ವನಿಯನ್ನ ಬಳಸಲಾಗಿದೆ. ಸಿನಿಮಾಗೆ ಯೋಗೀಶ್‌ ಗೌಡ ಚಿತ್ರಕಥೆ ಬರೆದಿದ್ದಾರೆ. ಸುರೇಶ್‌ ಆರ್ಮುಗಂ ಸಂಕಲನ, ಶಂಕರ್‌ ರಾಮನ್‌ ಅವರ ಸಂಭಾಷಣೆ, ಗೌತಮ್‌ ಕೃಷ್ಣ ಅವರ ಛಾಯಾಗ್ರಹಣ ಮತ್ತು ಆಂಟನಿ ಹಾಗೂ ಹರಿ ಕ್ರಿಶಾಂತ್‌ ಎಸ್‌. ಅವರ ಸಂಗೀತ ಚಿತ್ರಕ್ಕಿದೆ. ಬಹುತೇಕ ಹೊಸಬರೇ ಕೂಡಿ ಮಾಡಿರೋ ಚಿತ್ರ ಇದಾಗಿದ್ದು, ಟೆಕ್ನಿಕಲಿ ಸ್ಟ್ರಾಂಗ್‌ ಆಗಿ ಇದ್ದರೆ ಸಿನಿಮಾ ಕೂಡ ಚೆನ್ನಾಗಿ ಇರುತ್ತೆ ಅನ್ನೋದು ಸಿನಿಮಾ ತಂಡದ ಮಾತು.

ಚಿತ್ರದ ತಾರಾಗಣದಲ್ಲಿ ನಾಯಕನಾಗಿ ಮಾಹಿರ್‌ ಮೊಹಿದ್ದೀನ್‌, ಚೈತ್ರಾ ಜೆ ಆಚಾರ್‌, ಹತಿಣಿ ಸುಂದರ ರಾಜನ್‌ ಅಭಿನಯ ಮಾಡಿದ್ದಾರೆ. ನಾಯಕನಾಗಿ ಕಾಣಿಸಿಕೊಳ್ತಿರೋ ಮಾಹಿರ್‌ ಸಾಕಷ್ಟು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ಮಾಹಿರ್‌ ಅಭಿನಯ ಗಮನ ಸೆಳೆದಿದ್ದು, ಮುಂದಿನ ದಿನಗಳಲ್ಲಿ ಮಾಹಿರ್‌ ಅದ್ಬುತ ಕಲಾವಿದನಾಗಿ ಚಿತ್ರರಂಗದಲ್ಲಿ ಉಳಿದುಕೊಳ್ಳುವ ಎಲ್ಲಾ ಭರವಸೆಗಳು ಕಾಣುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ಮಾಹೀರ್‌, ನಟನೆ ನನ್ನ ಬಹು ದಿನದ ಕನಸು ಅದನ್ನ ನಾಟಕಗಳ ಮೂಲಕ ನನಸು ಮಾಡಿಕೊಳ್ಳುತ್ತಿದ್ದೆ. ಈಗ ವೃತ್ತ ಸಿನಿಮಾ ಮೂಲಕ ದೊಡ್ಡ ಪರದೆಗೆ ಬರುತ್ತಿರೋದು ಮತ್ತಷ್ಟು ಖುಷಿಕೊಟ್ಟಿದೆ ಎಂದರು.

ನಿರ್ದೇಶಕ ಲಿಖಿತ್‌ ಮಾತನಾಡಿ, ಹೊಸ ಸಿನಿಮಾಗೆ ಸತೀಶ್‌ ಅವರ ಸಪೋರ್ಟ್‌ ಸಿಕ್ಕಿರೋದು ಖುಷಿ ತಂದಿದೆ. ಕಿರು ಚಿತ್ರಗಳನ್ನ ಮಾಡುತ್ತಾ ಇದ್ದ ತಂಡ ಇವತ್ತು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ದರಾಗಿಗಿದ್ದೇವೆ ಎಂದರು.

ಈ ಸುದ್ದಿಯನ್ನೂ ಓದಿ | Vadderse Raghurama Shetty: ‘ವಡ್ಡರ್ಸೆ ರಘುರಾಮ ಶೆಟ್ಟಿ’ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಗೆ ನಾಮನಿರ್ದೇಶನಗಳಿಗೆ ಆಹ್ವಾನ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿನಿಮಾ ತಂಡ ನಿನಾಸಂ ಸತೀಶ್‌ ಅವರ ಸಹಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸದ್ಯ ಟೀಸರ್‌ ಬಿಡುಗಡೆ ಮಾಡಿರುವ ತಂಡ ಆದಷ್ಟು ಬೇಗ ಟ್ರೇಲರ್‌ ಲಾಂಚ್‌ ಮಾಡಿ ಇದೇ ವರ್ಷಾಂತ್ಯದಲ್ಲಿ ತೆರೆಗೆ ಬರೋ ತಯಾರಿ ಮಾಡಿಕೊಳ್ಳುತ್ತಿದ್ದಾರೆ.