Thursday, 19th September 2024

IPS Officer: ಲಿವ್‌-ಇನ್ ಸಂಗಾತಿಯನ್ನು ಥಳಿಸಿ, ಮನೆಗೆ ಬೆಂಕಿ ಹಚ್ಚಿ ಸಾಯಲು ಯತ್ನಿಸಿದ ಕರ್ನಾಟಕದ ಐಪಿಎಸ್‌ ಅಧಿಕಾರಿ ಅರೆಸ್ಟ್‌

ips officer arrest

ಈರೋಡ್: ಲಿವ್-ಇನ್ ಸಂಗಾತಿಯ (Live-in partner) ಮೇಲೆ ಹಲ್ಲೆ (Assault case) ಮಾಡಿ, ಆತ್ಮಹತ್ಯೆ (Self harming) ಮಾಡಿಕೊಳ್ಳುವ ಉದ್ದೇಶದಿಂದ ಮನೆಗೇ ಬೆಂಕಿ ಹಚ್ಚಿಕೊಂಡಿದ್ದ ಕರ್ನಾಟಕದ ಐಪಿಎಸ್‌ ಅಧಿಕಾರಿಯನ್ನು (IPS Officer) ತಮಿಳುನಾಡಿನಲ್ಲಿ ಆರೆಸ್ಟ್‌ ಮಾಡಲಾಗಿದೆ. ಇವರು ಕರ್ನಾಟಕದ ಕಲಬುರಗಿಯಲ್ಲಿ ಸೇವೆಯಲ್ಲಿದ್ದಾಗ ಹೆಂಡತಿ ಮಕ್ಕಳನ್ನು ತೊರೆದು ಅಲ್ಲಿನ ವಿವಾಹಿತೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜೊತೆಗೆ ಪ್ರಣಯ ಆರಂಭಿಸಿ, ಟ್ರಾನ್ಸ್‌ಫರ್‌ ಹಾಗೂ ಅಮಾನತಿಗೆ ಒಳಗಾಗಿದ್ದರು.

ಕರ್ನಾಟಕ ಕೇಡರ್ (Karnataka cadre) ಐಪಿಎಸ್ ಅಧಿಕಾರಿ ಎಂ. ಅರುಣ್ ರಂಗರಾಜನ್ (38) ಬಂಧಿತರು. ತಮಿಳುನಾಡಿನ ಈರೋಡ್‌ ಬಳಿಯ ಗೋಬಿಚೆಟ್ಟಿಪಾಳ್ಯಂನಲ್ಲಿ ತಮ್ಮ ಮನೆಗೆ ಅವರು ಬೆಂಕಿ ಹಚ್ಚಿದ್ದರು. ಅಧಿಕಾರಿಯ ಮನೆಗೆ ನುಗ್ಗಿದ ಪೊಲೀಸರು ಬುಧವಾರ ಸಂಜೆ ಅವರನ್ನು ಬಂಧಿಸಿದ್ದಾರೆ. ಮಾಜಿ ಸಬ್ ಇನ್ಸ್‌ಪೆಕ್ಟರ್ ಕೂಡ ಆಗಿರುವ ಅಧಿಕಾರಿಯ ಲಿವ್-ಇನ್ ಸಂಗಾತಿಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿಸಲಾಗಿದೆ.

ಸೇವೆಯಿಂದ ಅಮಾನತುಗೊಂಡಿರುವ ರಂಗರಾಜನ್, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಮನೆಗೆ ಬೆಂಕಿ ಹಚ್ಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಮತ್ತು ಅವರ ಸಂಗಾತಿ ಸುಜಾತಾ (38) ಕಳೆದ ಫೆಬ್ರವರಿಯಿಂದ ದೂರವಾಗಿದ್ದರು. ಇದಕ್ಕೂ ಮುನ್ನ ತಮಿಳುನಾಡಿನ ದೇವಸ್ಥಾನಗಳನ್ನು ಸುತ್ತುತ್ತಿದ್ದಾಗ ಸುಜಾತಾ ಮೇಲೆ ರಂಗರಾಜನ್‌ ಹಲ್ಲೆ ನಡೆಸಿದ್ದರು. ಈ ಬಗ್ಗೆ ದೂರು ದಾಖಲಾಗದಿದ್ದರೂ ಪೊಲೀಸರು ಮಧ್ಯಪ್ರವೇಶಿಸಿ ವಿಷಯ ಬಗೆಹರಿಸಿದ್ದರು. ದಂಪತಿಗಳು ಗೋಬಿಚೆಟ್ಟಿಪಾಳ್ಯಂನಲ್ಲಿರುವ ರಂಗರಾಜನ್ ಅವರ ಪೋಷಕರ ಮನೆಗೆ ಹಿಂದಿರುಗಿದಾಗ, ಆತ ಮತ್ತೆ ಸುಜಾತಾ ಮೇಲೆ ಹಲ್ಲೆ ನಡೆಸಿದ್ದರು. ಆಕೆ ಆಸ್ಪತ್ರೆಗೆ ದಾಖಲಾಗಿದ್ದರು.

ಪೊಲೀಸರು ರಂಗರಾಜನ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳೀಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಕರ್ನಾಟಕ ಸರ್ಕಾರ ಆತನನ್ನು ಸೇವೆಯಿಂದ ಅಮಾನತುಗೊಳಿಸಿದೆ. ಅಂದಿನಿಂದ ರಂಗರಾಜನ್ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದರು. ಭಾನುವಾರ ಸುಜಾತಾ ಆತನ ಮನೆಗೆ ಮರಳಿದ್ದು, ಅಲ್ಲಿ ಅವರು ಮತ್ತೆ ಜಗಳ ಆರಂಭಿಸಿದ್ದರು. ಬುಧವಾರ ಅವರ ಕಲಹ ತೀವ್ರಗೊಂಡಿತ್ತು.

ಸುಜಾತಾ ಮೇಲೆ ರಂಗರಾಜನ್‌ ಕಬ್ಬಿಣದ ರಾಡ್‌ನಿಂದ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಗೋಬಿಚೆಟ್ಟಿಪಾಳ್ಯಂ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಕಾಮರಾಜ್ ತಿಳಿಸಿದ್ದಾರೆ. ಸುಜಾತಾ ಅವರ ದಾಳಿಯನ್ನು ತಪ್ಪಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದಾಗ ರಂಗರಾಜನ್ ಮನೆಗೆ ಬೀಗ ಹಾಕಿಕೊಂಡು ಬೆಂಕಿ ಹಚ್ಚಿ ಕೊಂಡಿರುವುದು ಕಂಡು ಬಂದಿದೆ. ಪೊಲೀಸರು ಬೆಂಕಿ ನಂದಿಸಿ ಮನೆಗೆ ನುಗ್ಗಿದ್ದಾರೆ.

ಕೋಪದ ಭರದಲ್ಲಿ ಅರುಣ್, ಇನ್ಸ್‌ಪೆಕ್ಟರ್ ಕಾಮರಾಜ್ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ. ಆದರೆ ಆತನನ್ನು ಬಂಧಿಸಲಾಯಿತು. ನ್ಯಾಯಾಂಗ ಬಂಧನದ ಅಡಿಯಲ್ಲಿ ಆತನನ್ನು ಕೊಯಮತ್ತೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಮಾಥೇಶ್ವರನ್ ಎಂಬ ನಿವೃತ್ತ ಸ್ಯಾನಿಟರಿ ಇನ್ಸ್ ಪೆಕ್ಟರ್ ಪುತ್ರ ರಂಗರಾಜನ್ 2012ರಲ್ಲಿ ಛತ್ತೀಸ್‌ಗಢ ಕೇಡರ್‌ನ ಐಪಿಎಸ್ ಅಧಿಕಾರಿ. ಅವರು ಛತ್ತೀಸ್‌ಗಢದ ಇನ್ನೊಬ್ಬ ಐಪಿಎಸ್ ಅಧಿಕಾರಿ ಎಲಕ್ಕಿಯಾ ಅವರನ್ನು ವಿವಾಹ ವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ ನಂತರ ಕರ್ನಾಟಕಕ್ಕೆ ವರ್ಗಾವಣೆಗೊಂಡರು. ಇಲ್ಲಿ ಅವರನ್ನು ಕಲಬುರಗಿ ಜಿಲ್ಲೆಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಆಂತರಿಕ ಭದ್ರತೆ) ನೇಮಿಸಲಾಯಿತು.

ಕಲಬುರಗಿಯಲ್ಲಿ ಅರುಣ್ ಅದೇ ಜಿಲ್ಲೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುಜಾತಾ ಅವರೊಂದಿಗೆ ವಿವಾಹೇತರ ಸಂಬಂಧ‌ ಪ್ರಾರಂಭಿಸಿದರು. ಸುಜಾತಾ ಅವರ ಪತಿ ಕಂದಪ್ಪ ಕೂಡ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದು, ಈ ಸಂಬಂಧ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ನಂತರ ಅರುಣ್ ಅವರನ್ನು ಕಾರವಾರ ಜಿಲ್ಲೆಗೆ ವರ್ಗಾಯಿಸಲಾಗಿತ್ತು. ತದನಂತರ ಏಲಕ್ಕಿಯಾ ಅವರು ರಂಗರಾಜನ್‌ಗೆ ವಿಚ್ಛೇದನ ನೀಡಿದ್ದರು. ಸುಜಾತಾ, ಕಂದಪ್ಪನೊಂದಿಗಿನ ತನ್ನ ಮದುವೆಯನ್ನು ಕೊನೆಗೊಳಿಸಿ ರಂಗರಾಜನ್‌ ಜೊತೆ ಲಿವ್‌ ಇನ್‌ ಸಂಬಂಧದಲ್ಲಿ ವಾಸಿಸಲು ಪ್ರಾರಂಭಿಸಿದ್ದರು.

ಈ ಸುದ್ದಿ ಓದಿ: Actor Darshan: ದರ್ಶನ್‌ ಗ್ಯಾಂಗ್‌ ಮುಂದೆ ಅಂಗಲಾಚುತ್ತಿರುವ ರೇಣುಕಾಸ್ವಾಮಿ ಕೊನೆ ಕ್ಷಣದ ಫೋಟೋ ವೈರಲ್‌

Leave a Reply

Your email address will not be published. Required fields are marked *