Wednesday, 23rd October 2024

MB Patil: ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಹೈಟೆಕ್ ಫಾರ್ಮಸುಟಿಕಲ್ಸ್ ಪಾರ್ಕ್

M B Patil

ಬೆಂಗಳೂರು: ಕೈಗಾರಿಕಾ ಬೆಳವಣಿಗೆಗೆ ಒತ್ತು ನೀಡಿರುವ ರಾಜ್ಯ ಸರ್ಕಾರವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ಹತ್ತಿರ ಕೋಲಾರ ಅಥವಾ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಫಾರ್ಮಸುಟಿಕಲ್ ಪಾರ್ಕ್ (Pharmaceutical Park) ಸ್ಥಾಪಿಸಲು ತೀರ್ಮಾನಿಸಿದೆ. ಇದಕ್ಕೆ ಔಷಧ ತಯಾರಿಕಾ ಕ್ಷೇತ್ರದಲ್ಲಿರುವ ಪರಿಣತ ಉದ್ಯಮಿಗಳು ಮತ್ತು ವಿಜ್ಞಾನಿಗಳ ಸಲಹೆಗಳನ್ನು ಪಡೆಯಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ (MB Patil) ಹೇಳಿದ್ದಾರೆ.

ಇಲ್ಲಿನ ಖನಿಜ ಭವನದಲ್ಲಿ ಬುಧವಾರ ನಡೆದ ಇಂಡಸ್ಟ್ರಿ 5.0 ಮತ್ತು ಫಾರ್ಮಾಸುಟಿಕಲ್ಸ್ ವಿಷನ್ ಗ್ರೂಪ್‌ಗಳ ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡು, ವಿವಿಧ ಔಷಧ ತಯಾರಿಕೆ ಕಂಪನಿಗಳ ಪ್ರಮುಖರೊಂದಿಗೆ ಅವರು ಮಾತನಾಡಿದರು. ಸಚಿವರ ಈ ಘೋಷಣೆಯನ್ನು ಉದ್ಯಮಿಗಳು ಸ್ವಾಗತಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | MB Patil: ಕರ್ನಾಟಕ ಪ್ರಗತಿ ಕೇಂದ್ರಿತ ಹೊಸ ಕೈಗಾರಿಕಾ ನೀತಿ ರಚನೆ: ಎಂ.ಬಿ. ಪಾಟೀಲ್‌

ವಿದೇಶಿ ಹೂಡಿಕೆದಾರರು ಭಾರತದಲ್ಲಿ ಬಂಡವಾಳ ಹೂಡಲು ಹತ್ತು ಕ್ಷೇತ್ರಗಳನ್ನು ಆಕರ್ಷಣೀಯವೆಂದು ಗುರುತಿಸಿದ್ದು, ಇವುಗಳಲ್ಲಿ ಫಾರ್ಮಸುಟಿಕಲ್ಸ್ ಕೂಡ ಒಂದಾಗಿದೆ. ಈ ಕ್ಷೇತ್ರವು ವರ್ಷಕ್ಕೆ ಶೇ.11ರ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದ್ದು, ಮುಂದಿನ ಆರು ವರ್ಷಗಳಲ್ಲಿ ಇದರ ವಾರ್ಷಿಕ ವಹಿವಾಟು 130 ಬಿಲಿಯನ್ ಡಾಲರ್ ಮುಟ್ಟಲಿದೆ. ಕೈಗೆಟುಕುವಂತಹ ಔಷಧಿಗಳು, ಲಸಿಕೆಗಳು ಮತ್ತು ಔಷಧೋತ್ಪನ್ನಗಳ ಗರಿಷ್ಠ ರಫ್ತು ವಹಿವಾಟು ಇದಕ್ಕೆ ಕಾರಣಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ಔಷಧ ಕ್ಷೇತ್ರದಿಂದ ಬರುತ್ತಿರುವ ವರಮಾನದಲ್ಲಿ ರಾಜ್ಯದ ಕೊಡುಗೆ ಶೇ.11 ರಷ್ಟಿದೆ. ಜತೆಗೆ ಬಯೋಟೆಕ್ ವಲಯದ ಆದಾಯ ಮತ್ತು ನಿರ್ಯಾತದಲ್ಲಿ ನಮ್ಮ ಕೊಡುಗೆ ಶೇ.60 ರಷ್ಟಿದೆ. ಬೇರೆ ಯಾವ ರಾಜ್ಯಗಳೂ ಈ ವಿಷಯದಲ್ಲಿ ನಮ್ಮ ಸನಿಹದಲ್ಲೂ ಇಲ್ಲ. ಈ ಸಾಧನೆಯನ್ನು ಇನ್ನಷ್ಟು ವ್ಯಾಪಕಗೊಳಿಸಿ, ಬಂಡವಾಳವನ್ನು ಆಕರ್ಷಿಸಲಾಗುವುದು ಎಂದು ಅವರು ಹೇಳಿದರು.

ಕ್ವಿನ್ ಸಿಟಿಯಲ್ಲಿ ನಾವೀನ್ಯತೆಗೆ ಆದ್ಯತೆ

ಇಂಡಸ್ಟ್ರಿ 5.0 ವಿಷನ್ ಗ್ರೂಪ್ ಸಭೆಯಲ್ಲಿ ಮಾತನಾಡಿದ ಎಂ.ಬಿ. ಪಾಟೀಲ್‌, ಡಾಬಸಪೇಟೆ ಬಳಿ ಅಸ್ತಿತ್ವಕ್ಕೆ ಬರುತ್ತಿರುವ ಕ್ವಿನ್ ಸಿಟಿಯನ್ನು ಜಾಗತಿಕ ಮಟ್ಟದ ನಾವೀನ್ಯತೆಯ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಉದ್ಯಮಗಳನ್ನು ಹೊಸಹೊಸ ತಂತ್ರಜ್ಞಾನವನ್ನು ಆವಿಷ್ಕರಿಸುವಂತಹ ನವೋದ್ಯಮಗಳೊಂದಿಗೆ ಬೆಸೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಮುಂಬರುವ ಫೆಬ್ರವರಿಯಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ನವೋದ್ಯಮಗಳು ತಮ್ಮ ಸಂಶೋಧನೆಗಳ ಮೂಲಮಾತೃಕೆಗಳನ್ನು ಪ್ರದರ್ಶಿಸಲು ಸೂಕ್ತ ವ್ಯವಸ್ಥೆ ಮಾಡಬೇಕೆಂಬ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Gruhalakshmi Scheme: ಮಂಟೂರು ಗ್ರಾಮದಲ್ಲಿ ನಿರ್ಮಾಣಗೊಂಡಿದೆ ಗೃಹಲಕ್ಷ್ಮೀ ಗ್ರಂಥಾಲಯ

ಸಭೆಯಲ್ಲಿ ಉದ್ಯಮಿಗಳಾದ ರೆಡ್ಡಿ ಲ್ಯಾಬೊರೇಟರೀಸ್ ಮುಖ್ಯಸ್ಥ ಜಿ.ವಿ. ಪ್ರಸಾದ್, ಬಯೋಕಾನ್ ಸಿಇಒ ಸಿದ್ಧಾರ್ಥ ಮಿತ್ತಲ್, ಶಿಲ್ಪಾ ಬಯೊಲಾಜಿಕಲ್ಸ್ ನಿರ್ದೇಶಕ ವಿಷ್ಣುಕಾಂತ್ ಭೂತದ, ಸಿಪ್ಲಾ ಉನ್ನತಾಧಿಕಾರಿ ರಾಜೀವ್ ಕುಮಾರ್ ಸಿನ್ಹಾ, ಲಾಗ್9 ಸಂಸ್ಥಾಪಕ ಅಕ್ಷಯ್ ಸಿಂಘಾಲ್, ಬೆಲಾಟ್ರೆಕ್ಸ್ ಸಿಇಒ ಅಭಿಲಾಷ್, ನೋಪೋ ನ್ಯಾನೋಟೆಕ್ನಾಲಜೀಸ್ ಸಿಇಒ ಗದಾಧರ ರೆಡ್ಡಿ, ಎಥರಿಯಲ್ ಮಶೀನ್ಸ್ ಸಿಇಒ ಕೌಶಿಕ್ ಮುದ್ದಾ ಉಪಸ್ಥಿತರಿದ್ದರು.