Sunday, 6th October 2024

Lakshmi Hebbalkar: ಶ್ರೀ ದುರ್ಗಾದೇವಿ ದರ್ಶನ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Lakshmi Hebbalkar

ಬೆಳಗಾವಿ: ನವರಾತ್ರಿ (Navaratri) ಪ್ರಯುಕ್ತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಅವರು ಕುಟುಂಬ ಸಮೇತರಾಗಿ ಬೆಳಗಾವಿಯ ಗ್ರಾಮ ದೇವತೆ ಶ್ರೀ ಮಿಲಿಟರಿ ದುರ್ಗಾದೇವಿಯ ಮಂದಿರಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನದ ಬಳಿಕ ಮಾತನಾಡಿದ ಸಚಿವರು, ನವರಾತ್ರಿ ಸಂದರ್ಭದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ದುರ್ಗಾದೇವಿ ದರ್ಶನ ಪಡೆದು, ನಾಡಿನ ಜನರಿಗೆ ಒಳ್ಳೆಯದಾಗಲಿ, ರೈತರಿಗೆ ಹೆಚ್ಚು ಅನುಕೂಲವಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದೆ ಎಂದು ತಿಳಿಸಿದರು.

ಭಾರತೀಯರ ಹಬ್ಬ-ಹರಿದಿನಗಳು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ನಮ್ಮದು ಸಾಂಸ್ಕೃತಿಕವಾಗಿ ಶ್ರೀಮಂತ ದೇಶವಾಗಿರುವುದರಿಂದ ಇಡೀ ವಿಶ್ವವೇ ಭಾರತವನ್ನು ಅನುಕರಣೆ ಮಾಡುತ್ತಿದೆ. ಭಾರತದಲ್ಲಿ ಆಚರಣೆ ಮಾಡುವಷ್ಟು ಹಬ್ಬಗಳನ್ನು ಬೇರಲ್ಲೂ ಮಾಡುವುದಿಲ್ಲ. ನವರಾತ್ರಿ ಸೇರಿದಂತೆ ಎಲ್ಲ ಹಬ್ಬಗಳನ್ನು ನಮ್ಮ ಜನರು ಅತ್ಯಂತ ವಿಜೃಂಭರಣೆಯಿಂದ ಆಚರಿಸುತ್ತಾರೆಂದು ಸಚಿವರು ಹೇಳಿದರು.

ಈ ಬಾರಿ ಮೈಸೂರಿಗೆ ಮಹಿಳಾ ದಸರಾ ಉದ್ಘಾಟನೆಗೆ ಹೋಗಲು ಸಾಧ್ಯವಾಗಲಿಲ್ಲ. ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯಕ್ರಮಗಳು ಇರುವುದರಿಂದ ಇಂದು ತೆರಳಲು ಆಗಲಿಲ್ಲ. ರವಿವಾರ ಮೈಸೂರಿಗೆ ಹೋಗುತ್ತೇನೆ. ದಸರಾ ಫ್ಯಾಷನ್ ಶೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

ಈ ಸುದ್ದಿಯನ್ನೂ ಓದಿ | MB Patil: ಕರ್ನಾಟಕದಲ್ಲಿ ವಹಿವಾಟು ವಿಸ್ತರಣೆಗೆ ಸನ್ಮಿನಾ, ಲೀಪ್‌ಫೈವ್‌ ಟೆಕ್ನಾಲಜಿ ಆಸಕ್ತಿ: ಎಂ.ಬಿ. ಪಾಟೀಲ

ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ

ಗೃಹಲಕ್ಷ್ಮೀ ಯೋಜನೆಯ ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಈಗಾಗಲೇ ಬಿಡುಗಡೆಯಾಗಿದ್ದು, ಯಜಮಾನಿಯರ ಖಾತೆಗೆ ಈ ತಿಂಗಳ 7 ಮತ್ತು 9ರಂದು ಪ್ರತ್ಯೇಕವಾಗಿ ಎರಡು ತಿಂಗಳ ಹಣ ಜಮಾ ಆಗಲಿದೆ ಎಂದು ತಿಳಿಸಿದರು.

ಕೆಲವೊಂದು ತಾಂತ್ರಿಕ ಕಾರಣಗಳಿಂದ ಹಾಕುವುದು ತಡವಾಗಿತ್ತು. ಹಾಗಾಗಿ, ಈಗ ಒಂದೇ ಬಾರಿ ಎರಡು ತಿಂಗಳ ಹಣವನ್ನು ಜಮಾ ಮಾಡಲು ಈಗಾಗಲೇ ಕ್ರಮ ವಹಿಸಲಾಗಿದೆ. ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲೆಂದು ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ನಮ್ಮ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಈಡೇರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪಟ್ಟು ಹಿಡಿದು ಯೋಜನೆಯನ್ನು ಜಾರಿಗೆ ತರಲಾಗಿದೆ. ಇಂದು ಯೋಜನೆಯು ಅಸಂಖ್ಯಾತ ತಾಯಿಂದಿರರ ಬದುಕಿಗೆ ಆಸರೆ ಆಗಿರುವುದು ಸಂತಸ ತಂದಿದೆ ಎಂದರು.

ಈ ಸುದ್ದಿಯನ್ನೂ ಓದಿ | Navaratri Colour Ideas: ನವರಾತ್ರಿ 3ನೇ ದಿನ ಬೂದು ಬಣ್ಣದ ಉಡುಗೆಗೆ ಆದ್ಯತೆ ನೀಡಿ

ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ

ಬೆಳೆಗಾವಿಯ ಇಬ್ಬರ ಸಚಿವರ ಪೈಕಿ ಒಬ್ಬರು ಭೂ ಕಬಳಿಕೆ ಮಾಡಿದ್ದಾರೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಕುಡುಚಿ ಮಾಜಿ ಶಾಸಕ ಪಿ. ರಾಜೀವ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯರು ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ತಿರುಗೇಟು ನೀಡಿದರು.