Thursday, 24th October 2024

Murder Attempt: ಪಾಸ್‌ ತೋರಿಸು ಎಂದಿದ್ದಕ್ಕೆ ಕಿರಿಕ್‌; ಬಿಎಂಟಿಸಿ ಬಸ್‌ ಕಂಡಕ್ಟರ್‌ ಹತ್ಯೆಗೆ ಯತ್ನಿಸಿದ ಪ್ರಯಾಣಿಕ!

Murder Attempt

ಬೆಂಗಳೂರು: ಬಿಎಂಟಿಸಿ ಬಸ್‌ ನಿರ್ವಾಹಕನಿಗೆ ಪ್ರಯಾಣಿಕನೊಬ್ಬ ಚಾಕುವಿನಿಂದ ಇರಿದ ಘಟನೆ ನಡೆದ ಬೆನ್ನಲ್ಲೇ ಅಂತಹುದೇ ಮತ್ತೊಂದು ಆಘಾತಕಾರಿ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ಪಾಸ್‌ ತೋರಿಸು ಎಂದಿದ್ದಕ್ಕೆ ಬಿಎಂಟಿಸಿ ಬಸ್ ಕಂಡಕ್ಟರ್‌ಗೆ ಕಲ್ಲಿನಿಂದ ಹೊಡೆದು ಹತ್ಯೆಗೆ ಯತ್ನಿಸಿರುವ ಘಟನೆ (Murder Attempt) ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ನಡೆದಿದೆ.

ಅ.18 ರಂದು ಟಿನ್ ಫ್ಯಾಕ್ಟರಿ ಬಳಿ ಘಟನೆ ನಡೆದಿದೆ. ಕಂಡಕ್ಟರ್ ಹಾಗೂ ಪ್ರಯಾಣಿಕ ನಡುವೆ ಸಣ್ಣ ಗಲಾಟೆ ಆಗಿತ್ತು. ಇದರಿಂದ ಕೋಪಗೊಂಡ ಪ್ರಯಾಣಿಕ ಕಲ್ಲಿನಿಂದ ಹೊಡೆದು ಕೊಲೆಗೆ ಎತ್ನಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಕಲ್ಲಿನಿಂದ ಹಲ್ಲೆಗೆ ಯತ್ನಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಂಗಪ್ಪ ಪ್ರಾಣಾಪಾಯದಿಂದ ಪಾರಾದ ಕಂಡಕ್ಟರ್‌. ಹೇಮಂತ್‌ ಆರೋಪಿ. ಅ.18ರಂದು ಟಿನ್ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ. ಈ ಘಟನೆ ನಡೆಯುವುದಕ್ಕಿಂತ ಮೂರು ದಿನಗಳ ಮೊದಲು ಪಾಸ್ ತೋರಿಸುವ ವಿಚಾರಕ್ಕೆ ಕಂಡಕ್ಟರ್ ಮತ್ತು ಪ್ರಯಾಣಿಕನ ನಡುವೆ ಕಿರಿಕ್ ಆಗಿತ್ತು. ಆ ವೇಳೆ ಕಂಡಕ್ಟರ್ ಸಂಗಪ್ಪನ ಹೊಟ್ಟೆಗೆ ಗುದ್ದಿ ಆರೋಪಿ ಹೇಮಂತ್ ಎಸ್ಕೇಪ್ ಆಗಿದ್ದ. ಅದಾದ ಬಳಿಕ ಮೂರು ದಿನಗಳಿಂದ ಕಂಡಕ್ಟರ್ ಮೇಲೆ ಹಲ್ಲೆ ಮಾಡಲು ಹೇಮಂತ್ ಹೊಂಚು ಹಾಕಿದ್ದ. ಅದರಂತೆ ಅ.18ರ ಮಧ್ಯಾಹ್ನ ಟಿನ್ ಫ್ಯಾಕ್ಟರಿ ಬಸ್ ಸ್ಟ್ಯಾಂಡ್‌ನಲ್ಲಿ ಬಸ್‌ನಲ್ಲಿ ಕುಳಿತು ಊಟ ಮಾಡುತ್ತಿರುವ ವೇಳೆ ಕಂಡಕ್ಟರ್‌ ಮೇಲೆ ದೊಡ್ಡ ಕಲ್ಲಿನಿಂದ ಆರೋಪಿ ಹಲ್ಲೆ ಮಾಡಿದ್ದಾರೆ.

ಆರೋಪಿ ಹೇಮಂತ್ ದೊಡ್ಡದಾದ ಕಲ್ಲಿನಿಂದ ಕಂಡಕ್ಟರ್ ಸಂಗಪ್ಪನ ತಲೆಗೆ ಹೊಡೆದು ಎಸ್ಕೇಪ್ ಆಗಿದ್ದಾನೆ. ನಂತರ ಪ್ರಯಾಣಿಕರು ಆತನನ್ನು ಹಿಡಿದು ಪೋಲಿಸರ ವಶಕ್ಕೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ | Terror attack : ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ : ಯುಪಿ ಮೂಲದ ಕಾರ್ಮಿಕನ ಮೇಲೆ ಗುಂಡಿನ ದಾಳಿ

ಕಳೆದ ಒಂದು ತಿಂಗಳಲ್ಲಿ ಬಿಎಂಟಿಸಿ ಕಂಡಕ್ಟರ್‌ಗಳ ಮೇಲೆ ಹಲ್ಲೆ ನಡೆಸಿರುವ ಪ್ರಕರಣಗಳಲ್ಲಿ ಇದು 3ನೇ ಘಟನೆಯಾಗಿದೆ. ಸೆಪ್ಟೆಂಬರ್ 8 ರಂದು ಅತ್ತಿಬೆಲೆಯಿಂದ ಮೆಜೆಸ್ಟಿಕ್ ಬರುತ್ತಿದ್ದ ವೋಲ್ವೋ ಬಸ್‌ನಲ್ಲಿ ಹೊಸ ರೋಡ್ ಬಸ್ ಸ್ಟಾಪ್‌ ಬಳಿ ಕಂಡಕ್ಟರ್‌ಗೆ ಸ್ಕ್ರೂ ಡ್ರೈವರ್‌ನಿಂದ ಚುಚ್ಚಲು ಕಿಡಿಗೇಡಿಯೊಬ್ಬ ಮುಂದಾಗಿದ್ದ. ಅದೇ ರೀತಿ ಅಕ್ಟೋಬರ್ 1ರಂದು ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ಸ್ಟಾಪ್‌ನಲ್ಲಿ ಬಿಎಂಟಿಸಿ ವೋಲ್ವೋ ಬಸ್ ಕಂಡಕ್ಟರ್ ಯೋಗೇಶ್‌ಗೆ ಹರ್ಷ ಸಿನ್ಹಾ ಎನ್ನುವ ಯುವಕ ಬಾರಿ ಚಾಕುವಿನಿಂದ ಚುಚ್ಚಿ ಕೊಲ್ಲಲು ಯತ್ನಿಸಿದ್ದ. ಇದದ ಬಳಿಕ ಇದೀಗ ಅಂತಹುದೇ ಘಟನೆ ನಡೆದಿರುವುದ ಬೆಳಕಿಗೆ ಬಂದಿದೆ.