Thursday, 19th September 2024

Murder case: ಗಣೇಶನ ಪೆಂಡಾಲ್‌ನಲ್ಲಿ ನಡೀತು ʼಗರುಡ ಗಮನ ವೃಷಭ ವಾಹನʼ ಸಿನಿಮಾ ಮಾದರಿ ಕೊಲೆ!

garuda gamana vrushabha vahana murder case

ತುಮಕೂರು: ʼಗರುಡ ಗಮನ ವೃಷಭ ವಾಹನʼ ಸಿನಿಮಾದಲ್ಲಿ (Garuda Gamana Vrishabha Vahana movie) ಬರುವ ಒಂದು ಸನ್ನಿವೇಶ ನಿಮಗೆ ನೆನಪಿರಬಹುದು. ಕಾರ್ಯಕ್ರಮವೊಂದರಲ್ಲಿ ಡಿಜೆ ಮ್ಯೂಸಿಕ್‌ನಲ್ಲಿ ಯಾವ ಹಾಡು ಹಾಕಬೇಕು ಎಂಬ ವಿಚಾರಕ್ಕೆ ಎರಡು ರೌಡಿ ಗುಂಪುಗಳ ನಡುವೆ ಜಗಳ ಸೃಷ್ಟಿಯಾಗಿ ಅದು ಒಬ್ಬನ ಕೊಲೆಯಲ್ಲಿ (Murder Case) ಕೊನೆಗೊಳ್ಳುತ್ತದೆ. ಅಂಥದೇ ಒಂದು ಘಟನೆ ತುಮಕೂರಿನಲ್ಲಿ (Tumkur news) ನಡೆದಿದೆ.

ಇಲ್ಲಿ ಕೊಲೆಯಾದವನು ಬಿಹಾರದ ಯುವಕ. ತುಮಕೂರು ನಗರ ಹೊರವಲಯದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ರಾತ್ರಿ ಗಣೇಶ ಮೂರ್ತಿ (Ganesh festival) ಪ್ರತಿಷ್ಠಾಪನೆಗೆ ಹಾಕಿದ್ದ ಪೆಂಡಾಲ್‌ನಲ್ಲಿ ಹಾಡು ಬದಲಾಯಿಸುವ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಬಿಹಾರದ ಚೋಟನ್‌ ಕುಮಾರ್‌ (19) ಕೊಲೆಯಾದ ಯುವಕ.

ಬಿಹಾರದ ರಾಂಬಾಬು (20), ಮೌಂಟುಕುಮಾರ್‌ (20), ಸಂಜೀವ್‌ಕುಮಾರ್‌ (20) ಕೊಲೆ ಆರೋಪಿಗಳು. ಎಲ್ಲರೂ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.

ಸೆ. 7ರಂದು ರಾತ್ರಿ ಗಣಪತಿ ಪ್ರತಿಷ್ಠಾಪನೆ ನಂತರ ಎಲ್ಲರೂ ನೃತ್ಯ ಮಾಡುತ್ತಿದ್ದರು. ಇದೇ ಸಮಯದಲ್ಲಿ ಹಾಡು ಬದಲಾಯಿಸುವ ವಿಚಾರಕ್ಕೆ ಕೊಲೆಯಾದ ಯುವಕ ಮತ್ತು ಆರೋಪಿಗಳ ಮಧ್ಯೆ ಗಲಾಟೆ ನಡೆದಿದೆ. ಸ್ಥಳದಲ್ಲಿದ್ದವರು ಅವರನ್ನು ಸಮಾಧಾನ ಪಡಿಸಿ, ಅಲ್ಲಿಂದ ಹೊರಗಡೆ ಕಳುಹಿಸಿದ್ದರು.

ಹೊರ ಬಂದ ಆರೋಪಿಗಳು ಚಾಕುವಿನಿಂದ ಚೋಟನ್‌ ಕುಮಾರ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಕುತ್ತಿಗೆ, ಬೆನ್ನಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಆತನನ್ನು ಶ್ರೀದೇವಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಓದಿ: Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್‌ಶೀಟ್‌ ವಿವರ ಪ್ರಸಾರಕ್ಕೆ ತಡೆ ಹಾಕಿದ ಹೈಕೋರ್ಟ್‌