Saturday, 21st September 2024

Murder Case: ಬೆಂಗಳೂರಲ್ಲಿ ಯುವತಿಯ ಬರ್ಬರ ಕೊಲೆ; ದೇಹ ತುಂಡು ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟ ಹಂತಕರು!

Murder Case

ಬೆಂಗಳೂರು: ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಮಾದರಿಯ ಪ್ರಕರಣವೊಂದು ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಯುವತಿಯನ್ನು ಬರ್ಬರವಾಗಿ ಕೊಲೆಗೈದು, ದೇಹವನ್ನು ತುಂಡು ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟಿರುವಂತಹ ಘಟನೆ (Murder Case) ನಗರದ ವೈಯಾಲಿಕಾವಲ್‌ನ ವೀರಣ್ಣ ಆಶ್ರಮದ ಬಳಿ ನಡೆದಿದೆ.

ಹೊರರಾಜ್ಯದ ಮಹಾಲಕ್ಷ್ಮಿ (26) ಕೊಲೆಯಾದ ಯುವತಿ. ಈಕೆ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಯುವತಿಯ ಗಂಡ ನೆಲಮಂಗಲದಲ್ಲಿ ವಾಸವಾಗಿದ್ದು, ಈಕೆ ವೈಯಾಲಿಕಾವಲ್‌ನಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದಳು ಎನ್ನಲಾಗಿದೆ.

ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. 10 ರಿಂದ 15 ದಿನಗಳ ಹಿಂದೆಯೇ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಯುವತಿಯ ಗುರುತು ಪತ್ತೆ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ಘಟನಾ ಸ್ಥಳಕ್ಕೆ ಎಫ್‌ಎಸ್‌ಎಲ್‌ ತಜ್ಞರು ಭೇಟಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ | Viral News: ಬಿಎಂಟಿಸಿ ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ, 45 ಜನ ಪಾರು!

ಗ್ರಾಮ ಪಂಚಾಯತ್‌ ಮಾಜಿ ಸದಸ್ಯನ ಕೊಲೆ ಆರೋಪಿ ಕಾಲಿಗೆ ಗುಂಡು

ಕಲಬುರಗಿ: ಇತ್ತೀಚೆಗೆ ಕಲಬುರಗಿ (Kalaburagi news, Kalaburagi crime news) ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್‌ ಮಾಜಿ ಸದಸ್ಯನನ್ನು ಗುಂಡಿಕ್ಕಿ ಕೊಲೆ (Murder case) ಮಾಡಿದ್ದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಪೊಲೀಸರು (Police firing) ಬಂಧಿಸಿದ್ದಾರೆ. ಈತ ಬೆಂಗಳೂರಿಗೆ ಅಕ್ರಮ ಗನ್‌ ಪೂರೈಕೆ ಸಹ ಮಾಡುತ್ತಿದ್ದ ಎಂದು ಗೊತ್ತಾಗಿದೆ.

ಕಳೆದ ಶುಕ್ರವಾರ ಆಳಂದ (Alanda) ತಾಲೂಕಿನ ಜಿಡಗಾ ಕ್ರಾಸ್​ ಬಳಿ ಗ್ರಾಮ ಪಂಚಾಯತ್‌ ಮಾಜಿ ಸದಸ್ಯ ವಿಶ್ವನಾಥ ಜಮಾದಾರ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದ ಆರೋಪಿ ಲಕ್ಷ್ಮಣ ಕಾಲಿಗೆ ಪೊಲೀಸರು ಗುಂಡಿಕ್ಕಿದ್ದಾರೆ.

ಗನ್ ​ರಿಕವರಿ ಮಾಡಿಕೊಳ್ಳುವುದಕ್ಕಾಗಿ ಅಫಜಲಪುರ ಠಾಣೆ ಪಿಎಸ್ಐ ಸೋಮಲಿಂಗ ಒಡೆಯರ್ ನೇತೃತ್ವದಲ್ಲಿ ಪೊಲೀಸರು ಆರೋಪಿ ಲಕ್ಷ್ಮಣನನ್ನು ಕರೆದುಕೊಂಡು ಆಳಂದ ತಾಲೂಕಿನ ಮಾಡ್ಯಾಳ ಗ್ರಾಮಕ್ಕೆ ಹೋಗಿದ್ದರು. ಈ ವೇಳೆ ಲಕ್ಷ್ಮಣ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಆತ್ಮರಕ್ಷಣೆಗಾಗಿ ಅಫಜಲಪುರ ಠಾಣೆ ಪಿಎಸ್ಐ ಸೋಮಲಿಂಗ ಆರೋಪಿ ಲಕ್ಷ್ಮಣನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.

ಆರೋಪಿ ಲಕ್ಷ್ಮಣ ಬೆಂಗಳೂರು ಮತ್ತು ಕಲಬುರಗಿ ಜಿಲ್ಲೆಯ ವಿವಿಧಡೆ ಬಂದೂಕು ಸರಬರಾಜು ಮಾಡುತ್ತಿದ್ದ ಎಂದು ಗೊತ್ತಾಗಿದೆ. ಅಕ್ರಮ ಶಸ್ತ್ರಾಸ್ತ ಪೂರೈಕೆ ಸೇರಿದಂತೆ ಕೊಲೆ ಆರೋಪಿ ಲಕ್ಷ್ಮಣ ಪೂಜಾರಿ ವಿರುದ್ಧ 11 ಕೇಸ್​ಗಳಿವೆ. ವಿಶ್ವನಾಥ್​ ಜಮಾದಾರ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಲಕ್ಷ್ಮಣ ವಿರುದ್ಧ ಆಳಂದ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶ್ವನಾಥ್​​​ ಜಮಾದಾರ್ ಕಳೆದ ಶುಕ್ರವಾರ ಬೆಳಿಗ್ಗೆ ಮಗನನ್ನು ಶಾಲೆಗೆ ಬಿಟ್ಟು ಬರುತ್ತಿದ್ದಾಗ ಜಿಡಗಾ ಕ್ರಾಸ್ ಬಳಿ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ವಿಶ್ವನಾಥ್​ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ಮಾಡಿದ್ದರು. ವಿಶ್ವನಾಥ್​ ಅವರ ತಲೆಗೆ ಮೂರು ಗುಂಡು ಹೊಡೆದಿದ್ದರು. ಪರಿಣಾಮ ತೀವ್ರ ರಕ್ತಸ್ರಾವವಾಗಿ ವಿಶ್ವನಾಥ್​ ಸ್ಥಳದಲ್ಲೇ ಮೃತಪಟ್ಟಿದ್ದರು. ವಿಶ್ವನಾಥ್​ ಅವರನ್ನು ಕೊಂದು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು. ಆಳಂದ‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಕೊಲೆ ಪ್ರಕರಣದ ಪ್ರಮುಖ ಆರೋಪಿ ಲಕ್ಷ್ಮಣನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ: Gauri Lankesh: ಗೌರಿ ಲಂಕೇಶ್‌ ಕೊಲೆ ಪ್ರಕರಣ; ಮತ್ತೆ 4 ಆರೋಪಿಗಳಿಗೆ ಜಾಮೀನು