Thursday, 19th September 2024

Mandya Violence: ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗಬಾರದೇ, ಕರ್ನಾಟಕವೇನು ಇಸ್ಲಾಮಿಕ್ ರಿಪಬ್ಲಿಕ್ಕಾ? ಆರ್.ಅಶೋಕ್‌ ಪ್ರಶ್ನೆ

R Ashok

ಬೆಂಗಳೂರು: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆ (Mandya Violence) ಮತ್ತು ಘಟನೆಯ ನಂತರ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದ ಹೇಳಿಕೆ ಗಮನಿಸಿದರೆ, ರಾಜ್ಯದಲ್ಲಿರುವುದು ಮೂಲಭೂತವಾದಿಗಳಿಗೆ ಬೆಂಬಲ ಕೊಡುವ ತಾಲಿಬಾನ್ ಸರ್ಕಾರ (Taliban government) ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗಮಂಗಲದ ಕೋಮುಗಲಭೆ ಪ್ರಕರಣ ಕುರಿತು ಅವರು ತಮ್ಮ ʼಎಕ್ಸ್ʼ ಖಾತೆಯಲ್ಲಿ ಸರಣಿ ಟ್ವೀಟ್‌ ಮಾಡಿ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಈ ಸುದ್ದಿಯನ್ನೂ ಓದಿ | Mandya Violence: ಇದು ಕಾಂಗ್ರೆಸ್ ಪ್ರಾಯೋಜಿತ ಗಲಭೆ: ಎಚ್‌ಡಿಕೆ ಆರೋಪ, ಸಂತ್ರಸ್ತರಿಗೆ 2 ಲಕ್ಷ ರೂ. ನೆರವು

ಗಣೇಶ ವಿಸರ್ಜನೆಯ ಮೆರವಣಿಗೆಗೆ ಕಾದು, ಕಲ್ಲುಗಳ ರಾಶಿ, ಪೆಟ್ರೋಲ್ ಬಾಂಬು, ತಲ್ವಾರ್‌ಗಳನ್ನು ಸಂಗ್ರಹಿಸಿಟ್ಟುಕೊಂಡು ಸಂಪೂರ್ಣ ಪೂರ್ವನಿಯೋಜಿತವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದುಷ್ಕೃತ್ಯ ನಡೆಸಲಾಗಿದೆ. ಇದು ಸ್ಪಷ್ಟವಾಗಿ ಕಾಣುತ್ತಿದ್ದರೂ, ಇದು ಆಕಸ್ಮಿಕ ಘಟನೆ, ಸಣ್ಣ ಘಟನೆ ಎಂದು ಸರ್ಕಾರ ತಿಪ್ಪೆ ಸಾರಿಸುವ ಮಾತಾಡುತ್ತಿದೆ. ಮುಸ್ಲಿಂ ಮತಾಂಧರನ್ನು ಓಲೈಕೆ ಮಾಡಲು, ಹಿಂದೂಗಳನ್ನು ಬಲಿಕೊಡಲೂ ಸಿದ್ಧ ಎಂದು ಸರ್ಕಾರ ನಿರ್ಧಾರ ಮಾಡಿದಂತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ನಾಗಮಂಗಲದ ಘಟನೆಯಿಂದ ಹೀಗಾದರೆ ನಮ್ಮ ಗತಿ ಏನು ಎಂದು ಇಡೀ ಹಿಂದೂ ಸಮಾಜ ಆತಂಕಗೊಂಡಿದೆ. ರಾಜ್ಯದ ಹಿಂದೂಗಳ ಮನಸ್ಸಿನಲ್ಲಿ ಕಾಡುತ್ತಿರುವ ಈ ಪ್ರಶ್ನೆಗಳಿಗೆ ಕಾಂಗ್ರೆಸ್ ಸರ್ಕಾರ ಉತ್ತರ ಕೊಡಬೇಕು ಎಂದು ಆರ್‌.ಅಶೋಕ್‌ ಆಗ್ರಹಿಸಿದ್ದಾರೆ.

  1. ಕಳೆದ ವರ್ಷ ಅದೇ ಸ್ಥಳದಲ್ಲೇ ಗಲಭೆ ಆಗಿದ್ದರೂ ಈ ವರ್ಷ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಿಲ್ಲವೇಕೆ?
  2. ಇಂತಹ ಕೃತ್ಯದ ಇತಿಹಾಸವಿದ್ದರೂ ಗುಪ್ತಚರ ವಿಭಾಗದವರು ಇದರ ಬಗ್ಗೆ ಮಾಹಿತಿ ಕೊಡಲಿಲ್ಲವೇಕೆ? ಇದು ಪೊಲೀಸ್ ಇಲಾಖೆಯ ವೈಫಲ್ಯ ಅಲ್ಲವೇ? ಅಥವಾ ಗುಪ್ತಚರ ಮಾಹಿತಿ ಇದ್ದೂ ನಿರ್ಲಕ್ಷ್ಯ ಮಾಡಲಾಯಿತೇ?
  3. ಗಣಪತಿ ಮೆರವಣಿಗೆಗೆ ರೂಟ್ ಮ್ಯಾಪ್ ಹಾಕಿಕೊಟ್ಟು ಅನುಮತಿ ನೀಡಿದ್ದರೂ, ಪೊಲೀಸರು ಮಾರ್ಗದುದ್ದಕ್ಕೂ ಭದ್ರತೆ ಯಾಕೆ ನೀಡಲಿಲ್ಲ?
  4. ಪಟ್ಟಣದಲ್ಲಿದ್ದ ಡಿಎಆರ್ ವ್ಯಾನ್ ಅನ್ನು ಮೆರವಣಿಗೆ ಆರಂಭವಾದ ಬಳಿಕ ಬೇರೆಡೆ ಕಳುಹಿಸಿದ್ದು ಏಕೆ?
  5. ಬುಧವಾರ ರಾತ್ರಿ ಗಲಭೆ ಆರಂಭವಾಗಿ ಎರಡು ಗಂಟೆ ಕಳೆದರೂ ಕೇವಲ 40 ಕಿ.ಮೀ. ದೂರದಲ್ಲಿದ್ದ ಹೆಚ್ಚಿನ ಸಿಬ್ಬಂದಿಯನ್ನು ಏಕೆ ತುರ್ತಾಗಿ ಕರೆಸಿಕೊಳ್ಳಲಿಲ್ಲ?
  6. ಪೊಲೀಸರ ಅನುಮತಿ ಪಡೆದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದವರನ್ನೇ ಎಫ್‌ಐಆರ್ ನಲ್ಲಿ ಎ1 ಮಾಡಿರುವುದೇಕೆ?
  7. ಎ1 ನಿಂದ ಎ23 ವರೆಗೆ ಕೇವಲ ಹಿಂದೂಗಳ ಮೇಲೆ ಎಫ್‌ಐಆರ್ ಮಾಡಿ ನಂತರ ಮುಸ್ಲಿಮರ ಹೆಸರು ಸೇರಿಸಿರುವುದು ಯಾವ ಸೀಮೆ ನ್ಯಾಯ? ಗಲಭೆಕೋರರನ್ನು ರಕ್ಷಿಸಲು ಸರ್ಕಾರ ಮುಂದಾಗಿರುವುದು ತುಷ್ಟೀಕರಣದ ಪರಮಾವಧಿ ಅಲ್ಲವೇ?
  8. ಇಷ್ಟಕ್ಕೂ ಮಸೀದಿ ಅಥವಾ ದರ್ಗಾ ಮುಂದೆ ಗಣೇಶೋತ್ಸವ ಮೆರವಣಿಗೆ ಹಾದು ಹೋಗಬಾರದು ಎನ್ನುವುದಕ್ಕೆ ಕರ್ನಾಟಕವೇನು ಇಸ್ಲಾಮಿಕ್ ರಿಪಬ್ಲಿಕ್ಕಾ?
  9. ಪೆಟ್ರೋಲ್ ಬಾಂಬ್, ಕಲ್ಲುಗಳ ರಾಶಿ, ತಲ್ವಾರ್ ಹಾಗೂ ಮಾರಕಾಸ್ತ್ರಗಳನ್ನು ಮಸೀದಿಯಲ್ಲಿ ಸಂಗ್ರಹಿಸಿ ದಾಂಧಲೆ ಆರಂಭಿಸಿದ್ದನ್ನು ಗಮನಿಸಿದರೆ ಇದು ಪೂರ್ವನಿಯೋಜಿತ ಕೃತ್ಯ ಎನ್ನುವುದು ಸ್ಪಷ್ಟ ಅಲ್ಲವೇ?
  10. ಗಲಭೆಯಲ್ಲಿ ಅಪಾಯಕಾರಿ ವಸ್ತುಗಳ ಬಳಕೆಯಾದರೂ, 25 ಕೋಟಿ ರೂ. ಮೊತ್ತದ ಆಸ್ತಿ ನಷ್ಟವಾದರೂ, ಗೃಹ ಸಚಿವರಿಗೆ ಸಣ್ಣ ಘಟನೆ, ಆಕಸ್ಮಿಕ ಘಟನೆ ಅನ್ನಿಸಲು ಕಾರಣವೇನು? ಅವರಿಗೆ ಆ ರೀತಿ ಮಾಹಿತಿ ನೀಡಿದವರು ಯಾರು? ಅಥವಾ ಈ ರೀತಿ ಹೇಳಲು ಅವರ ಮೇಲೆ ಯಾರದ್ದಾದರೂ ಒತ್ತಡವಿತ್ತೆ? ಅಥವಾ ಕಾಂಗ್ರೆಸ್ ಸರ್ಕಾರ ಯಾರನ್ನಾದರೂ ರಕ್ಷಿಸಲು ಹೊರಟಿದೆಯೇ?
  11. ಇಷ್ಟೆಲ್ಲಾ ಅನಾಹುತ ಆಗಿದ್ದರೂ ಬೆಂಗಳೂರಿನಿಂದ ಕೇವಲ 130 ಕಿ.ಮೀ. ದೂರವಿರುವ ನಾಗಮಂಗಲಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಇನ್ನೂ ಭೇಟಿ ನೀಡಿಲ್ಲವೇಕೆ?

ಈ ಸುದ್ದಿಯನ್ನೂ ಓದಿ | Mandya Violence: ನಾಗಮಂಗಲ ಗಲಭೆ: ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ಅಮಾನತು

ತಪ್ಪು ಎಫ್‌ಐಆರ್‌, ಉಗ್ರ ಹೋರಾಟದ ಎಚ್ಚರಿಕೆ

ಈ ರೀತಿ ಹಿಂದೂಗಳ ವಿರುದ್ಧವೇ ತಪ್ಪು ಎಫ್ಐಆರ್ ದಾಖಲಿಸಲು ಕಾರಣರಾದ ಪೊಲೀಸರನ್ನು ಈ ಕೂಡಲೇ ಅಮಾನತು ಮಾಡಬೇಕು. ಎಫ್‌ಐಆರ್‌ನಲ್ಲಿ ಕೇವಲ ಹಿಂದೂಗಳನ್ನು ಟಾರ್ಗೆಟ್ ಮಾಡುವ ಈ ಹುನ್ನಾರ ಕೈ ಬಿಡದಿದ್ದರೆ ನಾಗಮಂಗಲದಲ್ಲಿ ಬಿಜೆಪಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಆರ್‌.ಅಶೋಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.