Thursday, 19th September 2024

Road Accident: 4 ಯುವಕರನ್ನು ಬಲಿ ಪಡೆದ ವ್ಹೀಲಿಂಗ್‌ ಹುಚ್ಚು! ನಾಟಕ ನೋಡಲು ಬಂದವರು ಬೈಕ್‌ ಹರಿದು ದುರ್ಮರಣ

road accident vijayapura bike wheeling

ವಿಜಯಪುರ: ಇಬ್ಬರು ಯುವಕರ ಬೈಕ್ ವ್ಹೀಲಿಂಗ್ (Bike Wheeling) ಹುಚ್ಚು ಅವರನ್ನೂ ಸೇರಿಸಿಕೊಂಡು ನಾಲ್ವರನ್ನು ಬಲಿ ಪಡೆದ (Road Accident) ಭಯಾನಕ ಘಟನೆ ವಿಜಯಪುರ (Vijayapura news) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ‌ ನಡೆದಿದೆ. ಅಪಘಾತದಲ್ಲಿ ಇನ್ನಿಬ್ಬರ ಪರಿಸ್ಥಿತಿ ಗಂಭೀರವಾಗಿದೆ.

ಗುರುವಾರ ಮಧ್ಯರಾತ್ರಿ ಕುಂಟೋಜಿ ಗ್ರಾಮದ ಹತ್ತಿರ ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಓರ್ವ ಬಾಗಲಕೋಟ ಜಿಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬೆಳಗಿನ ಜಾವ ಮೃತನಾಗಿದ್ದಾನೆ. ಮೃತರೆಲ್ಲರೂ ಮಲಗಲದಿನ್ನಿ ಗ್ರಾಮದವರು ಎಂದು ಹೇಳಲಾಗಿದೆ.

ಕುಂಟೋಜಿ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ನಡೆಯುತ್ತಿದ್ದು, ಜಾತ್ರೆಯ ಅಂಗವಾಗಿ ವಿವಿಧ ಶಕ್ತಿ ಪ್ರದರ್ಶನದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಜೊತೆಗೆ ರಾತ್ರಿ ನಾಟಕ ಪ್ರದರ್ಶನವೂ ಇತ್ತು. ನಾಟಕ ನೋಡಲು ಸುತ್ತಲಿನ ಹಳ್ಳಿಗಳ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇವರಲ್ಲಿ ಕೆಲವು ಯುವಕರು ರಸ್ತೆ ಪಕ್ಕದಲ್ಲಿ ಮೂತ್ರ ವಿಸರ್ಜಿಸುತ್ತಿರುವಾಗ ವ್ಹೀಲಿಂಗ್ ಮಾಡುತ್ತ ಬರುತ್ತಿದ್ದ ಬೈಕು ಆಯತಪ್ಪಿ ಇವರೆಲ್ಲರಿಗೂ ವೇಗವಾಗಿ ಬಂದು ಗುದ್ದಿದೆ. ಪರಿಣಾಮ ಬೈಕ್ ಸವಾರರೂ ಸೇರಿ ಮೂವರು ತಲೆಗೆ ಭಾರೀ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದರು. ನಾಲ್ವರಿಗೆ ಗಾಯಗಳಾಗಿವೆ.

ಮೃತರಲ್ಲಿ ಇಬ್ಬರನ್ನು ಮಲಗಲದಿನ್ನಿಯ ರಾಯಪ್ಪ ಬಾಗೇವಾಡಿ, ಹಣಮಂತ್ರಾಯ ಕುರುಬಗೌಡ್ರ ಎಂದು ಗುರ್ತಿಸಲಾಗಿದೆ. ಇನ್ನಿಬ್ಬರ ಹೆಸರು ತಕ್ಷಣಕ್ಕೆ ತಿಳಿದುಬಂದಿಲ್ಲ. ಬಸವೇಶ್ವರ ಜಾತ್ರೆ ಅಂಗವಾಗಿ ರಾತ್ರಿ ನಡೆಯುತ್ತಿದ್ದ ನಾಟಕ ನೋಡಲು ಕಿಕ್ಕಿರಿದು ಜನ ಸೇರಿದ್ದಾಗ ಈ ದುರ್ಘಟನೆ ನಡೆದಿದೆ. ವ್ಹೀಲಿಂಗ್ ವೇಳೆ ನಾಲ್ವರ ಬಲಿ ಪಡೆದ ಬೈಕ್ ಪಲ್ಸರ್ 200cc ಆಗಿದ್ದು, ಇದರ ಮೇಲೆ ಅತಿ ವೇಗವಾಗಿ ಸಾಗುತ್ತಿದ್ದ ಯುವಕರು ತಮ್ಮೊಂದಿಗೆ ಇನ್ನಿಬ್ಬರ ಸಾವಿನ ಕದ ತೆರೆದಿದ್ದಾರೆ.

ವಿಷಯ ತಿಳಿದ ಕೂಡಲೇ ಆರೋಗ್ಯ ಕವಚ ಅಂಬ್ಯೂಲೆನ್ಸ್ ಇಎಂಟಿ, ಚಲನಚಿತ್ರ ನಟರೂ ಆಗಿರುವ ಶ್ರೀಶೈಲ ಹೂಗಾರ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ‌ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದರು. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದರಿಂದ ಬಾಗಲಕೋಟೆಗೆ ಕರೆದೊಯ್ಯಲಾಗಿದೆ. ಅವರಲ್ಲಿ ಒಬ್ಬ ಸಾವನ್ನಪ್ಪಿದ. ಇನ್ನೊಬ್ಬನ ಸ್ಥಿತಿಯೂ ಗಂಭೀರವಾಗಿದೆ. ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿ ಓದಿ: ಪೊಲೀಸರನ್ನೇ ಕಳ್ಳರಂತೆ ಕಾಯುವಂತಾಯಿತೇ ?!

Leave a Reply

Your email address will not be published. Required fields are marked *