Thursday, 19th September 2024

Sandalwood News: ಗುರುದತ್ ಗಾಣಿಗ ನಿರ್ದೇಶನದ ‘ಜುಗಾರಿ ಕ್ರಾಸ್’ ಸಿನಿಮಾ ಅನೌನ್ಸ್! ಫಸ್ಟ್ ಲುಕ್ ಹೇಗಿದೆ ನೋಡಿ

Sandalwood News

ಬೆಂಗಳೂರು: ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ ‘ಜುಗಾರಿ ಕ್ರಾಸ್’ಅನ್ನು ಅಭಿಮಾನಿಗಳು ಓದದೆ ಇರಲು ಸಾಧ್ಯವೇ ಇಲ್ಲ. ಓದಲೇಬೇಕಾದ ಬಹುಮುಖ್ಯ ಕಾದಂಬರಿಗಳಲ್ಲಿ ‘ಜುಗಾರಿ ಕ್ರಾಸ್’ ಕೂಡ ಒಂದು. (Sandalwood News) ಮಲೆನಾಡಿನ ಕೃಷಿಕ ದಂಪತಿಗಳ ಸ್ವಾರಸ್ಯಕರ ಕಥೆ ಈ ‘ಜುಗಾರಿ ಕ್ರಾಸ್’. ವನ್ಯ ಸಂಪತ್ತು ಕಳ್ಳತನ, ದರೋಡೆ, ಭೂಗತ ಕೆಲಸಗಳ ಬಗ್ಗೆ ವಿವರಿಸುತ್ತಾ ಜನರು ಪ್ರಕೃತಿ ಸಂಪತ್ತನ್ನು ಹೇಗೆ ಲೂಟಿ ಮಾಡುತ್ತಿದ್ದಾರೆ ಎನ್ನುವುದನ್ನು ಈ ಕಾದಂಬರಿಯಲ್ಲಿ ರೋಚಕವಾಗಿ ಹೇಳಿದ್ದಾರೆ ಪೂಚಂತೇ.

ಓದುಗರ ನೆಚ್ಚಿನ ಶ್ರೇಷ್ಠ ಕಾದಂಬರಿ ʼಜುಗಾರಿ ಕ್ರಾಸ್ʼ ಇದೀಗ ಸಿನಿಮಾವಾಗುತ್ತಿದೆ. ಬೆಳ್ಳಿ ಪರದೆ ಮೇಲೆ ತೇಜಸ್ವಿಯವರ ಜುಗಾರಿ ಕ್ರಾಸ್ ರಾರಾಜಿಸಲು ಸಿದ್ಧವಾಗುತ್ತಿದೆ. ಅಂದಹಾಗೆ ಈ ಕಾದಂಬರಿಯನ್ನು ತೆರೆಮೇಲೆ ತರುವ ಸಾಹಸಕ್ಕೆ ಮುಂದಾಗಿದ್ದಾರೆ ‘ಕರಾವಳಿ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ. ಇಂದು ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾ ಅನೌನ್ಸ್ ಮಾಡಿ ಬಿಗ್ ಸರ್ಪೈಸ್ ನೀಡಿದ್ದಾರೆ ನಿರ್ದೇಶಕರು. ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ಗಮನ ಸೆಳೆಯುತ್ತಿದೆ.

ಜುಗಾರಿ ಕ್ರಾಸ್ ಕಾದಂಬರಿಯನ್ನು ಸಿನಿಮಾ ಮಾಡಬೇಕೆಂದು ಕನಸು ಕಂಡವರು ಅನೇಕರು. ಸ್ಯಾಂಡಲ್‌ವುಡ್‌ನ ದೊಡ್ಡ ದೊಡ್ಡ ನಿರ್ದೇಶಕರು, ಕಲಾವಿದರು ಪ್ರಯತ್ನ ಪಟ್ಟಿದ್ದರು. ಆದರೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಕೊನೆಗೂ ಕಾಲ ಕೂಡಿ ಬಂದಿದೆ. ಜುಗಾರಿ ಕ್ರಾಸ್ ಕಾಂದಬರಿಯನ್ನು ತೆರೆಮೇಲೆ ಕಣ್ತುಂಬಿಕೊಳ್ಳುವ ಸಮಯ ಬಂದಿದೆ.

ಈ ಸುದ್ದಿಯನ್ನೂ ಓದಿ | New Economic Corridor: ಬೆಂಗಳೂರು-ಕಲ್ಯಾಣ ಕರ್ನಾಟಕದ ಸಂಪರ್ಕ ಸಾಧಿಸಲು ಹೊಸ ಕಾರಿಡಾರ್‌ ಯೋಜನೆ…ಏನಿದರ ವಿಶೇಷತೆ?

ಇನ್ನು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಿದ್ದಾರೆ, ಜುಗಾರಿ ಕ್ರಾಸ್‌ನಲ್ಲಿ ಬರುವ ಪಾತ್ರಗಳಿಗೆ ಯಾರೆಲ್ಲ ಜೀವ ತುಂಬಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಸುಪ್ರಸಿದ್ಧ ಕಾದಂಬರಿಯನ್ನು ತೆರೆ ಮೇಲೆ ತರುವುದೇ ಅತೀ ದೊಡ್ಡ ಜವಾಬ್ದಾರಿ. ಹಾಗಾಗಿ ಈ ಶ್ರೇಷ್ಠ ಕಾದಂಬರಿಯ ಸಿನಿಮಾದಲ್ಲಿ ಹೊಸ ಕಲಾವಿದರು ಕಾಣಿಸಿಕೊಳ್ಳುತ್ತಾರಾ ಅಥವಾ ಸ್ಟಾರ್ ನಟರು ಬಣ್ಣ ಹಚ್ಚುತ್ತಾರಾ ಕಾದುನೋಡಬೇಕು.

ಈ ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಕ್ಯಾಮರಾ ವರ್ಕ್ ಇರಲಿದೆ. ಇನ್ನು ತಾಂತ್ರಿಕ ವರ್ಗ, ಉಳಿದ ಎಲ್ಲಾ ಕಲಾವಿದರ ಬಗ್ಗೆ ಸಂಪೂರ್ಣ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ. ಜುಗಾರಿ ಕ್ರಾಸ್ ಸಿನಿಮಾಗುತ್ತಿದೆ ಎನ್ನುವ ಸುದ್ದಿ ಕೇಳಿಯೇ ತೇಜಸ್ವಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇನ್ನು ಸಿನಿಮಾ ಹೇಗೆ ಮೂಡಿ ಬರಲಿದೆ ಎಂದು ಕುತೂಹಲ, ನಿರೀಕ್ಷೆ, ಕಾತರ ಎಲ್ಲರಲ್ಲೂ ಕಾಯುತ್ತಿದ್ದಾರೆ.