Monday, 16th September 2024

ಇಂದು ಬೊಮ್ಮಾಯಿಯವರ ಚೊಚ್ಚಲ ಬಜೆಟ್ ಮಂಡನೆ

ಬೆಂಗಳೂರು:  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ಚೊಚ್ಚಲ ಬಜೆಟ್ ಮಂಡಿಸ ಲಿದ್ದಾರೆ.

ಮಧ್ಯಾಹ್ನ 12.30ಕ್ಕೆ ಕರ್ನಾಟಕ ಬಜೆಟ್ 2022-23 ವಿಧಾನಮಂಡಲದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಲಿದ್ದಾರೆ. ಈ ಬಜೆಟ್‌ ನಲ್ಲಿ ಹಾಲಿನ ಪ್ರೋತ್ಸಾಹಧನ ಹೆಚ್ಚಳ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸೇರಿದಂತೆ ಮಹತ್ವದ ಯೋಜನೆಗಳನ್ನು ಘೋಷಿಸುವ ನಿರೀಕ್ಷೆ ಇದೆ.

ಇಂದಿನ ಬಜೆಟ್ ನಲ್ಲಿ ಬಡತನ ರೇಖೆಗಿಂತ ಕೆಳಗಿರುವ ಪಡಿತರ ಕಾರ್ಡುದಾರರಿಗೆ ಹೆಚ್ಚುವರಿ 1 ಕೆ.ಜಿ. ಅಕ್ಕಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯ ಕಿಯರಿಗೆ ನೀಡುವ ಗೌರವಧನ ಹೆಚ್ಚಳ, ಕಾರ್ಮಿಕರಿಗೆ ವಸತಿ ಸೌಲಭ್ಯ, ರಾಜ್ಯಾದ್ಯಂತ ನೋಂದಾಯಿತ ಕಟ್ಟಡ ಮತ್ತು ಗಾರ್ಮೆಂಟ್ ನಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಬಸ್ ನಲ್ಲಿ ಉಚಿತ ಸಂಚರಿಸುವ ಸೌಲಭ್ಯ, ಏಳನೇ ವೇತನ ಆಯೋಗ ರಚನೆ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.

ರಾಜ್ಯದ ಬಜೆಟ್ ಗಾತ್ರ ಈ ಬಾರಿ 2.60 ಲಕ್ಷ ಕೋಟಿ ರೂ. ದಾಟಬಹುದು ಎಂದು ಅಂದಾಜಿಸಲಾಗಿದೆ. ಕಳೆದ ಬಾರಿ ಬಜೆಟ್ 2.46 ಲಕ್ಷ ಕೋಟಿ ರೂ. ಇತ್ತು. ಈಗ ಕೋವಿಡ್ ಸೋಂಕಿನ ಹಾವಳಿ ಕಡಿಮೆಯಾಗಿದ್ದರಿಂದ ಎಲ್ಲ ಕ್ಷೇತ್ರಗಳ ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಬಂದಿದೆ. ಇದರಿಂದ ರಾಜ್ಯದ ಆದಾಯವೂ ಹೆಚ್ಚಳವಾಗುತ್ತಿದೆ. ಆದ್ದರಿಂದ ಬಜೆಟ್ ಗಾತ್ರ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.