Thursday, 19th September 2024

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಎಂಪಿ ಈ. ತುಕಾರಾಂ ರಾಜೀನಾಮೆಗೆ ಬಿಜೆಪಿ ಆಗ್ರಹ

Valmiki Corporation Scam

ಬೆಂಗಳೂರು: ಬಳ್ಳಾರಿ ಸಂಸದ ಈ. ತುಕಾರಾಂ (Ballari MP E Tukaram) ಅವರಿಗೆ ಸಮಾಜದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಸಮಾಜದ ಬಗ್ಗೆ ನಂಬಿಕೆ, ಗೌರವ ಇದ್ದರೆ ಕೂಡಲೇ ರಾಜೀನಾಮೆ ಕೊಡಬೇಕು (Valmiki Corporation Scam) ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಆಗ್ರಹಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ತುಕಾರಾಂ ರಾಜೀನಾಮೆಗೆ ಆಗ್ರಹಿಸಿ ಮತ್ತು ರಾಹುಲ್ ಗಾಂಧಿಯವರ ಮೀಸಲಾತಿ ರದ್ದತಿ ಕುರಿತ ಹೇಳಿಕೆಯನ್ನು ಖಂಡಿಸಿ, ಮುಂದಿನ ಮಂಗಳವಾರ ಬಿಜೆಪಿ ಎಸ್‌ಟಿ ಮೋರ್ಚಾ ವತಿಯಿಂದ ಸಂಡೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Mandya Violence: ಇದು ಕಾಂಗ್ರೆಸ್ ಪ್ರಾಯೋಜಿತ ಗಲಭೆ: ಎಚ್‌ಡಿಕೆ ಆರೋಪ, ಸಂತ್ರಸ್ತರಿಗೆ 2 ಲಕ್ಷ ರೂ. ನೆರವು

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅವ್ಯವಹಾರ ನಡೆದಿದ್ದು, ಆ ಹಣವನ್ನು ಪ್ರತಿ ಬೂತಿಗೆ 25 ಸಾವಿರ ಹಣದಂತೆ ಹಂಚಿದ್ದಾರೆ. ಪ್ರತಿ ಮತಕ್ಕೆ 200 ರೂಪಾಯಿಯಂತೆ ಹಂಚಲಾಗಿದೆ ಎಂದು ಅವರು ಆರೋಪಿಸಿದರು.

ನಿಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಬಳ್ಳಾರಿ ಮೇಲೆ ಎಲ್ಲಿಲ್ಲದ ಪ್ರೀತಿ. ಒಂದೆಡೆ ಅದು ಗಣಿಗಾರಿಕೆ ಪ್ರದೇಶ; ಇನ್ನೊಂದೆಡೆ ಅವರ ತಾಯಿ ಬಳ್ಳಾರಿಯಿಂದ ಸ್ಪರ್ಧಿಸಿದ್ದರು. ಅದೇ ನಂಟಿನ ಕಾರಣಕ್ಕೆ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರು ನಾಗೇಂದ್ರರ ಮೇಲೆ ಒತ್ತಡ ಹಾಕಿ, ವಾಲ್ಮೀಕಿ ನಿಗಮದ ಹಣವನ್ನು ಲೂಟಿ ಮಾಡಿಸಿದ್ದರು. ಆ ದುಡ್ಡನ್ನು ಚುನಾವಣೆಗೆ ಬಳಸಿಕೊಂಡಿದ್ದರು ಎಂದು ಬಂಗಾರು ಹನುಮಂತು ಟೀಕಿಸಿದರು.

ಇದರ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲೇಬೇಕು. ಜತೆಗೆ ಸಂಸದ ತುಕಾರಾಂ ಅವರೂ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು. ಮೀಸಲಾತಿ ರದ್ದು ಮಾಡುವ ರಾಹುಲ್ ಗಾಂಧಿಯವರ ಹೇಳಿಕೆ ವಿರುದ್ಧ ಮತ್ತು ಅಕ್ರಮವಾಗಿ ಗೆದ್ದ ಸಂಸದ ತುಕಾರಾಂ ವಿರುದ್ಧ ರಾಜ್ಯಾದ್ಯಂತ ನಾಳೆಯಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಎಸ್‍ಟಿ ಮೋರ್ಚಾದ ವತಿಯಿಂದ ಪ್ರತಿಭಟನೆ ನಡೆಸಲಿದ್ದೇವೆ ಎಂದು ಪ್ರಕಟಿಸಿದರು.

ತುಕಾರಾಂ ಅವರ ಅವರ ಸದಸ್ಯತ್ವ ರದ್ದು ಮಾಡಲು ಆಗ್ರಹಿಸಿ ಶೀಘ್ರವೇ ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದೇವೆ. ಅವರ ವಿರುದ್ಧ ಮಾಜಿ ಸಚಿವ ಬಿ.ಶ್ರೀರಾಮುಲು ಅವರೂ ಹೈಕೋರ್ಟಿನಲ್ಲಿ ದಾವೆ ಹೂಡಲಿದ್ದಾರೆ ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನೂ ಓದಿ | LIC: ರೈಲ್ವೆಯ ಐಆರ್‌ಸಿಟಿಸಿಯಲ್ಲಿ ಹೂಡಿಕೆ ಹೆಚ್ಚಿಸಿದ ಎಲ್‌ಐಸಿ

ವಾಲ್ಮೀಕಿ ಪರಿಶಿಷ್ಟ ನಿಗಮದಲ್ಲಿ ಸುಮಾರು 187 ಕೋಟಿ ಮೊತ್ತದ ಹಗರಣ ಆಗಿದೆ. 89 ಕೋಟಿ ಹಣದ ಅವ್ಯವಹಾರ ಆಗಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲೇ ಒಪ್ಪಿಕೊಂಡಿದ್ದಾರೆ. ಮೊನ್ನೆ ಇ.ಡಿ. ಚಾರ್ಜ್‍ಶೀಟಿನಲ್ಲಿ ಬಳ್ಳಾರಿ ಸಂಸದ ತುಕಾರಾಂ ಅವರು ಅಕ್ರಮವಾಗಿ ಗೆದ್ದಿದ್ದಾರೆ. ಈ ಚುನಾವಣೆಯಲ್ಲಿ ವಾಲ್ಮೀಕಿ ಪರಿಶಿಷ್ಟ ನಿಗಮದ 21 ಕೋಟಿ ಹಣ ಬಳಸಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ ಎಂದು ವಿವರಿಸಿದರು.

ಕಾಂಗ್ರೆಸ್ ಮುಖಂಡ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಅಮೆರಿಕ ಪ್ರವಾಸದಲ್ಲಿ ದೇಶದ ಮಾನ ಹರಾಜು ಹಾಕುವ ಕೆಲಸ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ವಿದೇಶಿ ಮಹಿಳೆಗೆ ಹುಟ್ಟಿದ ಮಗುವಿನಲ್ಲಿ ದೇಶಭಕ್ತಿ, ದೇಶಪ್ರೇಮ, ದೇಶನಿಷ್ಠೆ ಇರುವುದಿಲ್ಲ ಎಂದು ಹಿಂದೆ ಚಾಣಕ್ಯ ಅವರು ಹೇಳಿದ್ದರು. ರಾಹುಲ್ ಗಾಂಧಿಯವರ ವಿಚಾರದಲ್ಲಿ ಅವರ ಮಾತು ನಿಜ ಅನಿಸುತ್ತದೆ ಎಂದು ದೂರಿದರು.

ಕಾಂಗ್ರೆಸ್ ಪಕ್ಷವು ಹಿಂದಿನಿಂದ ದಲಿತ ವಿರೋಧಿ ಧೋರಣೆಯನ್ನೇ ಹೊಂದಿದೆ. ದಲಿತರ ಪರ ಎನ್ನುವ ಅವರು ಮಾಡುವುದು ಅನಾಚಾರ. ದಲಿತರನ್ನು ತುಳಿಯುವ ಕೆಲಸವನ್ನೇ ಮಾಡುತ್ತಾರೆ ಎಂದು ಟೀಕಿಸಿದರು.

ಈ ಸುದ್ದಿಯನ್ನೂ ಓದಿ | SC verdict on Kejriwal bail: ಸಿಎಂ ಕಚೇರಿ ಪ್ರವೇಶಿಸುವಂತಿಲ್ಲ- ಕೇಜ್ರಿವಾಲ್‌ಗೆ ಕೋರ್ಟ್‌ ವಿಧಿಸಿರುವ ಆ ಐದು ಷರತ್ತುಗಳೇನು?

ಹಿಂದೆ ನಮ್ಮ ಪಕ್ಷದ ಮುಖಂಡರೊಬ್ಬರ ಸಣ್ಣ ಹೇಳಿಕೆಯನ್ನು ತಿರುಚಿ ರಾಜ್ಯಾದ್ಯಂತ ದಲಿತ ವಿರೋಧಿ ಪಟ್ಟಿ ಕಟ್ಟಲು ಕಾಂಗ್ರೆಸ್ಸಿಗರು ಹೋಗಿದ್ದರು. ಇವತ್ತು ತಮ್ಮ ಪಕ್ಷದ ಅಧಿನಾಯಕ ರಾಹುಲ್ ಗಾಂಧಿಯವರೇ ಮೀಸಲಾತಿ ರದ್ದು ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಇದರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರದ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ತಿಳಿಸಿದರು. ಕಾಂಗ್ರೆಸ್ ಮುಖಂಡರು ಎಸ್‍ಸಿ, ಎಸ್‍ಟಿ, ಹಿಂದುಳಿದ ಸಮುದಾಯದ ಮುಖಂಡರಿಗೆ ಏನು ಉತ್ತರ ಕೊಡಲಿದ್ದಾರೆಂದು ಕಾಯುತ್ತಿದ್ದೇವೆ ಎಂದರು.