Sunday, 8th September 2024

80ರ ದಶಕದಲ್ಲೇ ಸಂಘರ್ಷ

ಸಂತೋಷಕುಮಾರ ಮೆಹೆಂದಳೆ

ಮಾರಣಹೋಮ: ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ

ಹಿನ್ನೆಲೆ…

ಅಲ್ಲಿಯವರೆಗೂ ಇರದಿದ್ದ ಆದರೆ ಒಳಗೊಳಗೇ ಬೂದಿ ಮುಚ್ಚಿಕೊಂಡಿದ್ದ ಈ ಕಾಶ್ಮೀರ ಪ್ರದೇಶ ಇದ್ದಕ್ಕಿದ್ದಂತೆ ಯಾಕೆ ಎದ್ದು ಕೂತಿತು..? ಅದಾಗಲೇ ಕಾಶ್ಮೀರದಲ್ಲಿ ಈ ಮೊದಲೇ ದೇಶದಲ್ಲಿ ಅಪಾಯತೆಗೆ ಒಡ್ಡುವಂತಿದ್ದ, ಅವಘಡಕ್ಕೆ ಕಾರಣವಾಗಿದ್ದ
370ನೇ ಕಲಮ್ಮು ಪ್ರತ್ಯೇಕತಾವಾದಿಗಳಿಗೆ ಬೇಕಾದುದೆಲ್ಲವನ್ನೂ ನೀಡಿಯಾಗಿತ್ತು.

ಪಾಕಿ ಬೆಂಬಲತ ಉಗ್ರರಿಗೆ ಇದೆಲ್ಲ ಇಂಬು ನೀಡುತ್ತಿದ್ದಾಗಲೇ ಮಧ್ಯಪ್ರಾಚ್ಯದಲ್ಲಾದ ಬೆಳವಣಿಗೆ ಇದಕ್ಕೆ ಜತೆ ಕೊಟ್ಟಿದ್ದು ವೈರುಧ್ಯ. ಇದರ ಹಿಂದಿನ ಅಂತರಾಷ್ಟ್ರೀಯ ರಾಜಕೀಯ, ಸರಹದ್ದಿನ ರಾಷ್ಟ್ರವೊಂದು ಆತಂಕದ ದಳ್ಳುರಿ ಹಬ್ಬಿಸಿದ ಚಿತ್ರಣ ನಾವು
ಗಮನಿಸಲೇಬೇಕು.

ತೀರ ಜಗತ್ತಿನ ಗಮನ ಸೆಳೆದಿದ್ದ 1986-87ರ ಕಾಲಾವಧಿಯ ಅಪಘಾನಿಸ್ತಾನದ ಯುದ್ಧ. ಒಳನುಗ್ಗಿ ಬಂದು ಅಫಘನ್ ತಾಲಿಬಾನಿ ಉಗ್ರರ ಹುಟ್ಟಡಗಿಸಿ ಗೆದ್ದೂ ಸೋತಂತೆ ನಿರ್ಗಮಿಸಲು ರಷ್ಯಾ ಸಿದ್ಧತೆ ನಡೆಸುತ್ತಿತ್ತು. ಜಗತ್ತಿನಾದ್ಯಂತ ಪಾನ್ ಇಸ್ಲಾಮಿಸಮ್ಮು, ಮುಸ್ಲಿಂ ಬ್ರದರ್‌ಹುಡ್‌ನ ಹರಡುವಿಕೆಗೆ ಅನಾಹುತಕಾರಿ ಮತಾಂಧ ಉಗ್ರ ಭಯೋತ್ಪಾದಕ, ಆದರೆ ಅತ್ಯಂತ ಬುದ್ಧಿವಂತ ಪಾತಕಿ ಮಹಮ್ಮದ್ ಬಿನ್ ಲಾಡೆನ್ ಯಶಸ್ವಿಯಾದ ಹೆಜ್ಜೆ ಗಳನ್ನಿರಿಸಿ, ಸಾದಾ ಪೈಜಾಮ ಮತ್ತು ಒಂದು ಕೋಟು ಧರಿಸಿ ಜಾಗತಿಕ ಉಗ್ರರಿಗೆ ಮಾಡೆಲ್ ರೂಪದಲ್ಲಿ ಎದ್ದುನಿಂತಿದ್ದ.

ಅವನ ರಣನೀತಿ ಮತ್ತು ಅಮೆರಿಕೆ ಹಿಂಬಾಗಿನಿಂದ ಇಟಲಿ, ಈಜಿಪ್ಟ್, ಸೌದಿಯ ಮೂಲಕ ಲೆಕ್ಕ ತಪ್ಪಿ ಪಾಕಿಸ್ತಾನಕ್ಕೆ ಪೂರೈಸುತ್ತಿದ್ದ ಆಯುಧಗಳ ಕಾರಣ ರಷ್ಯಾ ಏನೇ ಮಾಡಿದರೂ ಅಪಘನ್ ಮುಜಾಹಿದ್ದಿನ್ ಮತ್ತು ತಾಲಿಬಾನಿಗಳನ್ನು ಬಗ್ಗು ಬಡಿಯಲು ಆಗಿರಲಿಲ್ಲ. ಮೊದಲು ಮುಜಾಹಿದ್ದಿನ್ ರೂಪದ ಅಪಘನ್ ಉಗ್ರರು ನಂತರದಲ್ಲಿ ತಾಲಿಬಾನ್‌ಗಳಾಗಿ ಒಳನುಗ್ಗಿದ್ದರು ಒಮ್ಮೆ ಅಪೂಟು ಸೋತುಹೋಗಿದ್ದ ಈ ರಣಪಡೆಗಳು ಸ್ಟ್ರಿಂಗರ್ ಮಿಸೈಲ್ ಸಮೇತ, ಟ್ಯಾಂಕು ಗಟ್ಟಲೇ ಎ.ಕೆ.47 ಸಮೇತ ಫೀಲ್ಡಿಗೆ ಇಳಿದಿದ್ದವು. ಹೆಗಲ ಮೇಲೆ ಹೊತ್ತ ಮಿಸೈಲ್ ರಿಯರ್‌ನಿಂದಲೇ ನೋಡ ನೋಡುತ್ತಿದ್ದಂತೆ ರಷ್ಯಾದ ಚಾಪರ್‌ಗಳನ್ನು ಉಡಾಯಿಸಿ ಕೆಡವಲಾಗುತ್ತಿತ್ತು.

ರಷಿಯನ್ ಸೇನೆ ದಿಕ್ಕು ತಪ್ಪಿದ್ದ ತನ್ನದಲ್ಲದ ಮನೆಗಾಗಿ ಬಡಿದಾಟ ನಿಲ್ಲಿಸಿ ಹಿಂದಿರುಗಲು ನಿರ್ಧರಿಸಿ ಕಾಲ್ಕಿತ್ತಿತ್ತು. ಅದಾದರೂ ಎಷ್ಟೆಂದು ತನ್ನ ಸೈನಿಕರು ಹಣ ಆಯುಧಳನ್ನು ಖರ್ಚು ಮಾಡೀತು? ಎರಡು ದಶಕಗಳ ಈ ಅನಾಹುತಕಾರಿ ಯುಗ ಮುಗಿದು, ಆಯಾ ಪಂಗಡಗಳ ನಾಯಕರುಗಳು ತಂತಮ್ಮ ಭಾಗದ ಪ್ರದೇಶಗಳನ್ನು ಹಂಚಿಕೊಂಡು ಪಾಕಿಸ್ತಾನದ ಸರಹದ್ದಿನಲ್ಲಿ  ಕಲಾಗಿದ್ದ
ಟೆಂಟುಗಳಿಂದ ಹೊರಬಿದ್ದು ಗುಡ್ಡವಿಳಿಯತೊಡಗಿದ್ದರು.

ಅಲ್ಲೆ ಆಗಿದ್ದು ಅನಾಹುತ ಮತ್ತು ಮೊಟ್ಟ ಮೊದಲ ಕಾಶ್ಮೀರ ಹತ್ಯಾಕಾಂಡದ ಬೀಜಕ್ಕೆ ನೀರೆರೆದಿದ್ದು. ಅಪಘನ್‌ರಿಗಾಗಿ ಜಾಗತಿಕ ಪ್ರತ್ಯೇಕತಾವಾದಿ ಸಮುದಾಯ ಲಾಡೆನ್ ಪ್ರೇರಿತ ಹೋರಾಟದಲ್ಲಿ ಪಾಲ್ಗೊಂಡಿದ್ದರೂ ಮುಗಿದ ಮೇಲೆ ಏನು ಮಾಡಬೇಕೆಂಬ ನೀಲನಕ್ಷೆ ಮಾತ್ರ ಯಾರ ಬಳಿಯಲ್ಲೂ ಇರಲೇ ಇಲ್ಲ. ನಾಳೆ ಏನು ಎಂದರೆ ಬಡಿದಾಟ ಮಾತ್ರ ಎಂಬಂತಿದ್ದ ಗಾಂಧಾರ ಸರಹದ್ದಿನ ಗುಡ್ಡಗಳ ನೆತ್ತಿಯ ಮೇಲೆ ಹತ್ತಾರು ಸಾವಿರ ದೇಶ ವಿದೇಶಿ ಉಗ್ರರು ಅಂಡೂರಿ ಕೂತು ಬಂದೂಕಿನ ತುದಿ ಸವರುತ್ತಿ ದ್ದರು.

ಹೇಗಿದ್ದರೂ ಅವರಿಗೆ ಅನ್ನ, ನೀರು ನೀಡಿ ಮತ್ತು ಜಾಗ ಪಾಕಿಸ್ತಾನ ಕೊಡುತ್ತಿತ್ತು. ಉಳಿದೆಲ್ಲ ಸಾಯುವ ಇಲ್ಲವೇ ಸಾಯಿಸುವ ನಿರ್ಧಾರಕ್ಕೆ ತೊರಾಬೊರಾ ಬೆಟ್ಟಗಳ ಮೇಲೆ ಕುಳಿತು ಲಾಡೆನ್ ದಿಶೆ ತೋರಿಸುತ್ತಿದ್ದ. ಅದಕ್ಕಾಗಿ ಅದ್ಯಾವುದೋ ಸ್ವರ್ಗದ ಕನಸನ್ನು ನಂಬಿಕೊಂಡು, ಜಗತ್ತಿನ ಕಂಡು ಕೇಳರಿಯ ನೆಲದಿಂದ ಅನಾಮತ್ತು ಹುಡುಗರು ಬಂದಿಳಿದಿದ್ದರಲ್ಲ. ಅವರನ್ನೆಲ್ಲ ಸೌದಿ ಅರ್ಧ ರೇಟಿಗೆ ವಿಮಾನ ಹತ್ತಿಸಿ ಇಲ್ಲಿ ತಂದು ತನ್ನ ಪಾಲಿನ ಕಾಂಟ್ರಿಬ್ಯೂಶನ್ ಕೊಟ್ಟು ಕೈ ತೊಳೆದುಕೊಂಡಿತ್ತು. ತೀರ ಡಮಾಸ್ಕಸ್, ಅದರ ಪಕ್ಕದ ಸಿರಿಯಾ, ಕೆಳಗಿನ ಈಜಿಪ್ಟ್, ಅದರಾಚೆಗಿನ ಪಾಲೆಸ್ತಿನ್, ಅದಕ್ಕೂ ಮೊದಲಿನ ಜೋರ್ಡಾನ್, ಲಿಬಿಯಾ, ಕೀನ್ಯ, ಉಗಾಂಡ, ನೈರೋಬಿ, ಸಿರಿಯಾ, ಜೆದ್ದಾ, ಸುಡಾನ್, ಅಜರ್ ಬೈಜಾನ್, ಜೇರೂಸಲೇಮ್, ಇಸ್ರೇಲ್ ಗಡಿ ಯಿಂದಲೂ ಬಂದಿಳಿದಿದ್ದ ಧರ್ಮಯೋಧರು ಕೂತು ಕಾಯುತ್ತಲೇ ಇದ್ದರು.

ನೀವು ನಂಬುತ್ತಿರೋ ಇಲ್ಲವೋ ಅಪಘಾನಿ ಸ್ತಾನ ಯುದ್ಧದಲ್ಲಿ ಅನಾಮತ್ತು ಹತ್ತು ಸಾವಿರ ಕೋಟಿ ರುಪಾಯಿ ಮದ್ದಿನ ರೂಪ ದಲ್ಲಿ ಸುಟ್ಟು ಹೊಗಿತ್ತೆ ವಿನಃ ಅದರಿಂದ ಒಂದೇ ಹುಲ್ಲು ಕಡ್ಡಿಯೂ ಬೆಳೆಸಲಾಗಿರಲಿಲ್ಲ. ಆದರೆ ಜಗತ್ತಿನ ಅಷ್ಟೂ ಪಂಗಡದ ಮುಸ್ಲಿಂ ಬ್ರದರ್‌ಹುಡ್ ಅಲ್ಲಿ ಜಮೆಯಾಗಿ ಷರಿಯತ್ ಕಾನೂನಿನ ಬಗ್ಗೆ ಜೈಕಾರ ಹಾಕುತ್ತಿದ್ದರೆ, ನೆರೆದಿದ್ದ ಶಿಯಾಗಳು, ಸುನ್ನಿಗಳು, ವಹಾಬಿಗಳು, ಇರಾನಿಗಳು, ಕುವೈತಿಗಳು, ಅರಬ್ಬರು, ಪಶ್ತೂನಿಗಳು, ತಝೀಕರು, ಉಜ್ಬೇಕರು, ಬಲೂಚರು, ಹಜಾರಗಳು, ತುರ್ಕರು, ಬಂಗೇರಿ, ಉಗಾಂಡಿ ಯರು, ಇಸ್ಮಾಯಿಲ್ಗಳು, ಕಗ್ಗರು, ಅಲ್ಜೀರಿಯ ನ್ನರು, ಬೈಜಾನಿಗಳು ಹೀಗೆ ಎಲ್ಲ ಮೂಲ ಒಂದೇ, ಆದರೆ ನಾನು ಈ ಬುಡಕಟ್ಟಿನವ, ನನ್ನ ಮಡಿ ಮೈಲಿಗೆ ಗಳು, ರಿವಾಜುಗಳೇ ಬೇರೆ ಎನ್ನುವ ಗುಂಪಿಗೆ ಜೋತು ಬಿದ್ದವರೇ ಇದ್ದರು.

ಇವರೆಲ್ಲರನ್ನು ಬಳಸಿ ಲಾಡೆನ್ ನಡೆಸಿದ ಯುದ್ಧ ಹೆಚ್ಚು ಕಮ್ಮಿ ಯಶಸ್ವಿಯಾಗಿತ್ತು. ಎದುರಿಗಿದ್ದ ರಷ್ಯಾ ನಿಚ್ಚಳವಾಗಿ ಮೈಗೆ ಗಾಯ ಮಾಡಿಕೊಂಡು ಹಿಂದಿರುಗಿತ್ತು. ಆದರೆ ಇತ್ತ ಅಪಘನ್ ಅರಬ್ಬರು ಎಂದಬ್ಬರಿಸಿದ್ದರಲ್ಲ. ಇಲ್ಲಿವರೆಗೆ ಅವರೆದುರಿಗೆ ಬಡಿದಾಡಲು ರಷ್ಯನ್ ಸೇನೆ ಇತ್ತು. ಅವರು ಕಾಲಿಟ್ಟ ನೆಲದಲ್ಲಿ ಶರಿಯಾ ಜಾರಿ ಮಾಡುವ ತವಕ ವಿತ್ತು. ಜೆಹಾದ್ ಅಥವಾ
ಜನ್ನತ್ ಎಂಬ ಎರಡೇ ಇಶಾರೆಗಳಿದ್ದವು. ಇದೆಲ್ಲದರ ಹೊರತಾಗಿ ಕಳೆದುಕೊಳ್ಳಲು ಏನೂ ಇರಲಿಲ್ಲ. ಆದರೆ ಅನಾಹುತವಾಗಿದ್ದು ಪಾಕಿಸ್ತಾನ್ ನಾಮಿನೆಟೇಡ್ ಕಮಾಂಡರ್ ಹೆಸರಿನ ನಾಯಕರು ಈ ಯುದ್ಧದ ಬೆಂಬಲ ಪಡೆದು, ಅಪಘನ್ ನೆಲ ಹರಿದು ಹಂಚಿ ಕೊಂಡು ಲಗೇಜು ಎತ್ತಿಕೊಂಡು ನಡೆದುಬಿಟ್ಟಿದ್ದು.

ಮಸೂದ್ ಶಾ, ಗುಲ್ಬುದ್ದಿನ್ ಹೆಕ್ಮತ್ಯಾರ್, ಬಹಾರುದ್ದಿನ್ ರಬ್ಬಾನಿ, ಇಸ್ಮಾಯಿಲ್ ಖಾನ್, ರಶೀದ್ ದೋಸ್ತುಮ್ ಹಾಜಿ ಖದೀರ್ ಮತ್ತು ಯೂನುಸ್ ಖಾಲಿಸ್ ಎಂಬ ಕಮಾಂಡರ್‌ಗಳು ಅಪಘಾನಿಸ್ತಾನವನ್ನು ಏಳು ಪಾಲು ಮಾಡಿಕೊಂಡು ಎದ್ದು ಹೋಗಿ ಬಿಟ್ಟಿರಲ್ಲ. ಈ ಬೆಳವಣಿಗೆಗಳಿಂದ ಮತ್ತೊಂದು ಉತ್ಪಾತವಾಗಿತ್ತು. ಮೂಲ ಮುಜಾಹಿದ್ದಿನ್ ಗಳೇ ಈಗ ಪರಕೀಯರಾದರು. ಹಲವು ಜನರನ್ನು ಹುಡುಕಿ ಕೊಲ್ಲಲಾಯಿತು. ಕಾರಣ ಇವರಾರೂ ಮೇಲಿನ ಏಳು ಜನ ಕಮಾಂಡರ್‌ಗಳ ಗುಂಪಿನವರಾಗಿರಲಿಲ್ಲ.
ಹಾಗಾಗಿ ಇವರೆಲ್ಲ ಯಾರ ಬೆನ್ನಿಗೂ ತೆರಳದೆ ಅ ಬ್ಬೇ ಪಾರಿಗಳಾಗಿಬಿಟ್ಟಿದ್ದರಲ್ಲ. ಈ ಅಧಿಕಾರ ವಿಕೇಂದ್ರೀಕರಣಗೊಂಡ ವಾರ ದಲ್ಲೆ ಮುಕ್ಕಾಲು ಲಕ್ಷ ಧರ್ಮಯೋಧರು ವಾಪಸ್ಸು ಪಾಕಿಸ್ತಾನ ಗಂಜಿ ಕೇಂದ್ರದಲ್ಲಿ ಬಂದು ಕೂತುಬಿಟ್ಟರು.

ಈಗ ಇವರಿಗೆಲ್ಲ ದಿಕ್ಕು ತೋರಿಸಬೇಕಿತ್ತು. ಕೈಯ್ಯಲ್ಲಿದ್ದ ಬಂದೂಕಿಗೆ ಅರ್ಜೆಂಟಾಗಿ ಇಶಾರೆ ಬೇಕಿತ್ತು. ಪಾಪಿ ಪಾಕಿಸ್ತಾನ ಸೀದಾ ತನ್ನ ಎಡಭಾಗಕ್ಕೆ ಬೆರಳು ತೋರಿಸಿ ಹಿಂದೆ ಸರಿದುಬಿಟ್ಟಿತ್ತು. ತಲೆ ಎತ್ತಿ ನಕಾಶೆ ನೋಡಿದರೆ ಅಲ್ಲಿದ್ದುದು ನತದೃಷ್ಟ ಪಂಡಿತರು ಬದುಕುತ್ತಿದ್ದ ಕಾಶ್ಮೀರ್. ಮೊದಲ ಹಂತವಾಗಿ ಆರು ಸಾವಿರ ಧರ್ಮಯೋಧರು ಪಾಕಿಸ್ತಾನ ಕಡೆಯಿಂದ ಬೆಟ್ಟವಿಳಿಯ ತೊಡಗಿ ದ್ದರು. ಒಳಬಂದರೆ ಅವರಿಗೆಲ್ಲ ಯಾರು ಏನು ಮಾಡಬೇಕು? ಧರ್ಮಯುದ್ಧದಲ್ಲಿ ಯಾರನ್ನು ಕೊಲ್ಲಬೇಕು..? ಹೇಗೆ ಮಿಶನ್ ಕಾಶ್ಮೀರ ಇಂಪ್ಲಿಮೆಂಟ್ ಮಾಡಬೇಕು? ಎಂದೆಲ್ಲ ನಿರ್ಧರಿಸಲು ಸ್ಥಳೀಯ ಸಮಿತಿಯೊಂದನ್ನು ರಚಿಸಲಾಗಿತ್ತು.

ಪಾಕಿಸ್ತಾನದ ಇಶಾರೆಯ ಮೇರೆಗೆ ಹಾಗೆ ಒಳಬಂದಿದ್ದೇ ಜಮ್ಮು ಕಾಶ್ಮೀರ್ ಲಿಬರೇಶನ್ ಫ್ರಂಟ್ ಎಂಬ ಮನೆಹಾಳ ಸಂಘಟನೆ. ಜೂನ್ 1976 ರಲ್ಲಿ ಹುಟ್ಟಿದ ಈ ಸಂಘಟನೆ ಮೂಲ ಇದ್ದಿದ್ದು ಅಜಾದ್ ಕಾಶ್ಮೀರ್, ಮುಜ್ಜಾಪ್ಪಾರಬಾದ್‌ನಲ್ಲಿ. ಅಮಾನುಲ್ಲಾ ಖಾನ್ ಮತ್ತು ಮಕ್ಬೂಲ್ ಭಟ್ ಇದರ ಸಂಸ್ಥಾಪಕರು. ಆದರೆ ಇದನ್ನು ವ್ಯಾಪಕತೆಗೆ ಒಳಪಡಿಸಿದವನು ಯಾಸಿನ್ ಮಲಿಕ್. ಇವರ ಉದ್ದೇಶ ಕಾಶ್ಮೀರಿ ರಾಷ್ಟ್ರೀಯತೆ ಮತ್ತು ಪ್ರತ್ಯೇಕತಾವಾದ. (ಈ ಹೆಸರು ನೆನಪಿರಲಿ. ಇವನೊಡನೆ ಈ ದೇಶದ ಅತಿದೊಡ್ಡ ಬುದ್ಧಿ ಜೀವಿಗಳೆಂದು ಹೆಸರು ಮಾಡಿದವರೆಲ್ಲ ಕೈ ಜೋಡಿಸಿದ್ದರು) ವಿಚಿತ್ರ ಎಂದರೆ ಇದರ ಕಾರ್ಯಾಚರಣೆ ಭಾರತದಲ್ಲಾದರೂ
ಯುನೈಟೆಡ್ ಕಿಂಗಡಮ್, ಬರ್ಮಿಂಗ್ ಹ್ಯಾಮ್ ಮತ್ತು ಮಧ್ಯ ಏಷಿಯಾದಲ್ಲೆಲ್ಲ ಇದರ ಮೊದಲ ಕಛೇರಿಗಳು ಆರಂಭವಾಗಿ ದ್ದವು.

ಸರ್ವ ತಯಾರಿಯ ನಂತರ ಇದು ಕಾಶ್ಮೀರಕ್ಕೆ ಕಾಲಿಟ್ಟಿತು. ಇದರ ಇನ್ನೊಂದು ಸಂಸ್ಥೆಯೇ ಜೈಸ್ ಮೊಹಮ್ಮದ್. ಪುಲ್ವಾಮ
ದಾಳಿಯ ನಂತರ ಭಾರತದಲ್ಲಿ ಇದನ್ನು ಅಧಿಕೃತವಾಗಿ ಬ್ಯಾನ್‌ಗೊಳಪಡಿಸಲಾಯಿತು. ದೇಶದಲ್ಲಿ ಇದಕ್ಕೆ ತತಕ್ಷಣಕ್ಕೆ ಯಶಸ್ಸು ಲಭ್ಯವಾಗದಿದ್ದಾಗ ಫೆಬ್ರವರಿ 1984 ಭಾರತೀಯ ರಾಯಭಾರಿ ರವೀಂದ್ರ ಮಾತ್ರೆಯನ್ನು ಬರ್ಮಿಂಗ್ ಹ್ಯಾಮ್‌ನಲ್ಲಿ ಕಿಡ್ ನ್ಯಾಪ್ ಮಾಡಿ ಅಮಾನುಲ್ಲಾಖಾನ್‌ನ ಇಶಾರೆಯ ಮೇರೆಗೆ ಕೊಂದು ಹಾಕಿತ್ತು. ಆ ಹೊತ್ತಿಗಾಗಲೇ ಖಲಿಸ್ತಾನಿಗಳಿಗೂ ಬಾಹ್ಯ ಬೆಂಬಲ ಸರಹದ್ದಿನಾಚೆಯಿಂದ ದಕ್ಕುತ್ತಿದ್ದುದು ಖಚಿತವಾಗಿತ್ತು. ಇದಕ್ಕೂ ಜಿಯಾ ಉಲ್ ಹಕ್ ಮತ್ತು ಐ.ಎಸ್.ಐ. ಬೆಂಬಲ ಲಭ್ಯವಾಗು ತ್ತಿದ್ದಂತೆ ಈ ಸಂಘಟನೆ ದೊಡ್ಡ ಮಟ್ಟದಲ್ಲಿ ೧೯೮೭ ರ ಚುನಾವಣೆಯಲ್ಲೂ ಅಕ್ರಮವೆಸಗಿತ್ತು.

ಕಾರಣ ಕಣಿವೆ ಖಾಲಿ ಮಾಡಿಸಬೇಕೆಂದರೆ ಅಧಿಕಾರದ ಭಾಗವಾಗುವುದೂ ಮತ್ತು ಅಧಿಕಾರದಲ್ಲಿದ್ದವರ ಹತ್ತಿರವಾಗುವುದೂ
ತುಂಬ ಅಗತ್ಯವಿತ್ತು. ಇದು ಕಾಶ್ಮೀರ್ ಪಂಡಿತರ ಮೇಲೆ ಆಗಲಿದ್ದ ದೊಡ್ಡಮಟ್ಟದ ದಾಳಿಗೆ ಅತ್ಯಂತ ವ್ಯವಸ್ಥಿತ ತಯಾರಿಯ ಭಾಗವೇ ಆಗಿತ್ತು. ಆಗಿನ ಚುನಾವಣೆಯನ್ನು ನೋಡಿದವರಿಗಾಗಲೇ ಕಣಿವೆಯ ಭವಿಷ್ಯದ ಅಂದಾಜಾಗಬೇಕಿತ್ತು. ಆದರೆ
ಅದ್ಯಾಕೋ ಆಗಲೇ ಇಲ್ಲ.

…ಮುಂದುವರೆಯುತ್ತದೆ

error: Content is protected !!