Wednesday, 23rd October 2024

Ratan Tata: ಉದ್ಯಮಿಗಳ ರತ್ನ, ವ್ಯವಹಾರ ಚಿನ್ನ

ದೆಹಲಿ/ಬೆಂಗಳೂರು: ಭಾರತದಲ್ಲಿ ಸಾವಿರಾರು ಘಟಾನುಘಟಿ ಉದ್ಯಮಿಗಳಿದ್ದಾರೆ. ಅವರಲ್ಲೂ ಕೆಲವರು ಉದ್ಯಮ ದೈತ್ಯರು. ಸಾವಿರಾರು ಕೋಟಿ ರೂಪಾಯಿ ಆಸ್ತಿಹೊಂದಿದವರು. ಅವರೆಲ್ಲರ ನಡುವೆ ದೇಶದ ಜನರ ಪ್ರೀತಿಗೆ ಅತ್ಯಂತ ಹೆಚ್ಚು ಪಾತ್ರರಾಗಿದ್ದವರು ಟಾಟಾ ಸನ್ಸ್ ಗ್ರೂಪ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ. ಅದಕ್ಕೆ ಕಾರಣ ನೂರಾರಿವೆ. ಯಾಕೆಂದರೆ ಉಳಿದೆಲ್ಲ ಉದ್ಯಮಗಳಿಗಿಂತ ರತನ್ ಟಾಟಾ ಭಿನ್ನ. ಲಾಭದಾಯಕ ಉದ್ಯಮಗಳ ಜತೆ ದೇಶ, ಸಮಾಜ ಹಾಗೂ ಇಡೀ ಉದ್ಯಮ ಕ್ಷೇತ್ರವನ್ನು ಕಟ್ಟುವ ಕೆಲಸವನ್ನು ಮಾಡಿದವರು. ಉದ್ಯಮ ಹಾಗೂ ಸಮಾಜ ಸೇವೆಯಲ್ಲಿ ಸರಿಸಾಟಿಯಿಲ್ಲದ ಕೆಲಸ ಮಾಡಿದವರು.

86 ವರ್ಷದ ರತನ್ ಟಾಟಾ ಅವರು ಉದ್ಯಮಿಯಾಗಿ ಎಷ್ಟು ಜನಪ್ರಿಯರೋ ಜನೋಪಕಾರಿ ಕೆಲಸದ
ಮೂಲಕವೂ ಅಷ್ಟೇ ಪ್ರಖ್ಯಾತಿ ಪಡೆದವರು. ಅವರು ಕಂಡಿರುವ ಯಶಸ್ಸು ಭಾರತದ ಆರ್ಥಿಕತೆಯ ಪ್ರಗತಿ
ಎಂಬುದರಲ್ಲಿಎರಡು ಮಾತಿಲ್ಲ. ಅತ್ಯಂತ ನಾಚಿಕೆ ಸ್ವಭಾವದ ಹಾಗೂ ಏಕಾಂಗಿಯಾಗಿಯೇ ಉಳಿದ ರತನ್ ಟಾಟಾ ಎಲ್ಲಿಯೂ ವಿವಾದಕ್ಕೆ ಹಾಗೂ ಅನಗತ್ಯ ಕಾರಣಕ್ಕೆ ಸುದ್ದಿಗೆ ಗ್ರಾಸವಾದವರಲ್ಲ. 2012ರಲ್ಲಿ ತಮ್ಮ 75ನೇ ವಯಸ್ಸಿನಲ್ಲಿ ನಿವೃತ್ತರಾದಾಗ ಎರಡು ದಶಕಗಳಿಗೂ ಹೆಚ್ಚು ಕಾಲ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಹೊರ ಬಂದಾಗಲೂ ಅಪಾರ ಜನಪ್ರಿಯತೆ ಗಿಟ್ಟಿಸಿಕೊಂಡವರು.

ರತನ್ ಟಾಟಾ ಬೆಳವಣಿಗೆ: 1937ರಲ್ಲಿ ಪ್ರಸಿದ್ಧ ಟಾಟಾ ಕುಟುಂಬದಲ್ಲಿ ಜನಿಸಿದ ರತನ್ ಟಾಟಾ 10ನೇ
ವಯಸ್ಸಿನಲ್ಲಿ ಪೋಷಕರಿಂದ ಬೇರ್ಪಟ್ಟು ಅಜ್ಜಿಯ ಪಾಲನೆಯಲ್ಲಿ ಬೆಳೆದಿದ್ದರು. ಕಾರ್ನೆಲ್ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಚರಲ್ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್ ಪದವಿ ಮತ್ತು ಹಾರ್ವರ್ಡ್ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಪ್ರೋಗ್ರಾಂ ಪದವಿ ಪಡೆದಿದ್ದರು. ಈ ವೇಳೆ ಅವರಿಗೆ ಐಬಿಎಂನಿಂದ ಉದ್ಯೋಗದ ಅವಕಾಶ ಬಂದಿದ್ದರೂ ಅದನ್ನು
ತಿರಸ್ಕರಿಸಿದ್ದರು. ಅವರು 1962ರಲ್ಲಿ ಟೆಲ್ಕೊ (ಈಗ ಟಾಟಾ ಮೋಟಾರ್ಸ) ಶಾಪ್ ಮೂಲಕ ಕೆಲಸ ಆರಂಭಿಸಿ ದ್ದರು. ಬಳಿಕ ಟಾಟಾ ಗ್ರೂಪ್‌ನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಅಂತಿಮವಾಗಿ 1971ರಲ್ಲಿ ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ (ನೆಲ್ಕೊ) ನಿರ್ದೇಶಕರಾದರು. ಅಪ್ರೆಂಟಿಸ್‌ನಿಂದ ಆರಂಭಗೊಂಡು ನಿರ್ದೇಶಕರಾ ಗಲು ಅವರು 9 ವರ್ಷ ಕಷ್ಟಪಟ್ಟು ಕೆಲಸ ಮಾಡಿದ್ದರು.

ವಿಶ್ವದೆತ್ತರಕ್ಕೇರಿಸಿದ ಧೀಮಂತ: ಟಾಟಾ ಸಮೂಹವನ್ನು ವಿಶ್ವ ಮಟ್ಟಕ್ಕೆ ಏರಿಸಿದ ಖ್ಯಾತಿ ರತನ್ ಅವರದ್ದು. ಟಾಟಾ ಸಮೂಹವು ವಿದೇಶಿ ಕಂಪನಿಗಳನ್ನು ತೆಕ್ಕೆಗೆ ತೆಗೆದುಕೊಳ್ಳುವ ವೇಳೆ ಅಪಾರ ರ್ಧೈರ್ಯ ತೋರಿದ್ದರು. ಟೆಟ್ಲಿ 431.3 ಮಿಲಿಯನ್ ಡಾಲರ್, ಕೋರಸ್ 11.3 ಬಿಲಿಯನ್ ಡಾಲರ್, ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್ 2.3
ಬಿಲಿಯನ್ ಡಾಲರ್, ಬ್ರನ್ನರ್ ಮಾಂಡ್, ಜನರಲ್ ಕೆಮಿಕಲ್ ಇಂಡಸ್ಟ್ರಿಯಲ್ ಪ್ರಾಡಕ್ಟ್ಸ್ ಮತ್ತು ಡೇವೂ
ಸಂಸ್ಥೆಯನ್ನು 102 ಮಿಲಿಯನ್ ಡಾಲರ್‌ಗೆ ಸ್ವಾಧೀನಪಡಿಕೊಳ್ಳುವಲ್ಲಿ ಅವರು ಅಪಾರ ಧೈರ್ಯ ತೋರಿದ್ದರು. ಏರ್ ಇಂಡಿಯಾವನ್ನು ಮತ್ತೆ ಟಾಟಾ ಮಡಿಲಿಗೆ ತೆಗೆದುಕೊಂಡಿದ್ದು ದೊಡ್ಡ ಸಾಧನೆ. ಏರ್ ಇಂಡಿಯಾ ಅವರ ಚಿಕ್ಕಪ್ಪ ಮತ್ತು ಮಾರ್ಗ ದರ್ಶಕ ಜಹಾಂಗೀರ್ ರತನ್‌ಜಿ ದಾದಾಭಾಯ್ ಟಾಟಾ ಅವರು 1932ರಲ್ಲಿ ಸ್ಥಾಪಿಸಿದ ವಿಮಾನ ಯಾನ ಸಂಸ್ಥೆ. ಅಪಾಯ ತೆಗೆದುಕೊಳ್ಳದಿರುವುದು ದೊಡ್ಡ ಅಪಾಯ. ಜಗತ್ತಿನಲ್ಲಿ ವಿಫಲವಾಗುವ ಏಕೈಕ ತಂತ್ರ ವೆಂದರೆ ಅಪಾಯಗಳನ್ನು ಎದುರಿಸದೇ ಇರುವುದು ಎಂದು ರತನ್ ಟಾಟಾ ಯಾವಾಗಲೂ ಹೇಳುತ್ತಿದ್ದರು.

ನ್ಯಾನೋ ಕಾರು: ಮುಂಬಯಿಯಲ್ಲಿ ಸುರಿಯುತ್ತಿದ್ದ ಭಾರೀ ಮಳೆಯ ನಡುವೆ ಒಂದು ಮೋಟಾರುಬೈಕಿನಲ್ಲಿ
ನಾಲ್ವರು ಪ್ರಯಾಣಿಸುತ್ತಿರುವುದನ್ನು ನೋಡಿದ ಟಾಟಾ ಪುಟ್ಟ ಕುಟುಂಬಕ್ಕಾಗಿ ನ್ಯಾನೊ ಕಾರು ತಯಾರಿಸಿದವರು. ಆದರೆ, ಬಡವರ ಕಾರು’ ಎಂಬ ಟ್ಯಾಗ್‌ಲೈನ್ ನ್ಯಾನೊ ವೈಫಲ್ಯಕ್ಕೆ ಕಾರಣವಾಯಿತು.

ಮಹಾನ್ ದಾನಿ: ರತನ್ ಟಾಟಾ ಅವರ ಔದ್ಯಮಿಕ ದೃಷ್ಟಿಕೋನ ಲಾಭವನ್ನು ಮೀರಿ ವಿಸ್ತರಿಸಿದೆ. ಐಐಎಎಫ್‌ ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್‌ ಲಿಸ್ಟ್ 2021ರಲ್ಲಿ ರತನ್ ಟಾಟಾ 433ನೇ ಸ್ಥಾನದಲ್ಲಿದ್ದಾರೆ.

ಭಾರತದ ಅತಿದೊಡ್ಡ ದತ್ತಿ ಸಂಸ್ಥೆಗಳಲ್ಲಿ ಒಂದಾದ ಅವರ ಪ್ರತಿಷ್ಠಾನ ಟಾಟಾ ಟ್ರಸ್ಟ್‌ಗಳು ವಿದ್ಯಾರ್ಥಿಗಳಿಗೆ
ವಿದ್ಯಾರ್ಥಿವೇತನವನ್ನು ಒದಗಿಸಲು ಮತ್ತು ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಸುಸ್ಥಿರ ಜೀವನಕ್ಕೆ ಸಂಬಂಧಿಸಿದ ಯೋಜನೆಗಳನ್ನು ಕೈಗೊಳ್ಳುತ್ತಿವೆ. ಕೊರೊನಾ ಕಾಲದಲ್ಲಿ ಅವರು 500 ಕೋಟಿ ರೂ. ದೇಣಿಗೆ ನೀಡಿದ್ದರು. ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ಗೆ ಎಕ್ಸಿಕ್ಯುಟಿವ್ ಸೆಂಟರ್ ನಿರ್ಮಿಸಲು 5 ಕೋಟಿ ಡಾಲರ್ ದೇಣಿಗೆ ನೀಡಿದ್ದರು. ಟಾಟಾ ಟ್ರಸ್ಟ್‌ಗಳು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ವಿವಿಧ ಐಐಎಂ ಕ್ಯಾಂಪಸ್‌ಗಳಿಗೆ
ಹಣಕಾಸು ನೆರವು ಒದಗಿಸಿವೆ.‌

ಮುಂಬೈನಲ್ಲಿ ನಡೆದ 26/11ರ ಭಯೋತ್ಪಾದಕರ ದಾಳಿಯಲ್ಲಿ ಸಿಲುಕಿ ನಲುಗಿದವರಿಗೆ ಸಹಾಯ ಮಾಡಲು ತಾಜ್ ಪಬ್ಲಿಕ್ ಸರ್ವಿಸ್ ವೆಲೇರ್ ಟ್ರಸ್ಟ್‌’ ಅನ್ನು ಸ್ಥಾಪಿಸಿದ್ದರು. ಯುವ ಉದ್ಯಮಿಗಳು ಆರಂಭಿಸುವ ಸ್ಟಾಟ್ ಅಪ್‌ಗಳಿಗೆ ಟಾಟಾ ಸಾಕಷ್ಟು ಬೆಂಬಲ ಕೊಟ್ಟಿದ್ದಾರೆ. 550ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಬೆಳೆಸಿದ್ದಾರೆ.

ಟಾಟಾ ಉದ್ಯಮವಷ್ಟೇ ಅಲ್ಲ, ನಂಬಿಕೆ
ದೇಶದ ಉದ್ಯಮರಂಗದಲ್ಲಿ ಟಾಟಾ ಕುಟುಂಬಕ್ಕೆ ತನ್ನದೇ ಆದ ಹೆಸರಿದೆ.ಉಪ್ಪಿನಿಂದ ಹಿಡಿದು ಅಟೋಮೊಬೈಲ್, ಸ್ಟೀಲ್, ಸಾಫ್ಟ್‌ ವೇರ್, ದೂರ ಸಂಪರ್ಕ, ವಿಮಾನಯಾನದ ತನಕ ಟಾಟಾ ಉದ್ಯಮವಿಲ್ಲದ ಕ್ಷೇತ್ರವಿಲ್ಲ. 1839ರಲ್ಲಿ ಜಮಶೆಡ್‌ಜಿ ಟಾಟಾ ಆರಂಭಿಸಿದ ಉದ್ಯನವನ್ನು ವಿಶ್ವಮಟ್ಟಕ್ಕೆ ವಿಸ್ತರಿಸಿ 100ಕ್ಕೂ ಹೆಚ್ಚು ಉದ್ಯಮ ಸಮೂಹವಾಗಿ ವಿಸ್ತರಿಸುವುದರಲ್ಲಿ ರತನ್ ಟಾಟಾ ಪ್ರಮುಖ ಪಾತ್ರ ವಹಿಸಿದ್ದರು. ಜಮಶೆಡ್‌ಜಿ ಟಾಟಾ ಅವರು 1868ರಲ್ಲಿ ಹತ್ತಿ ವ್ಯಾಪಾರದೊಂದಿಗೆ ಉದ್ಯಮ ಆರಂಭಿಸಿದ್ದರು. ನಂತರ ತಾಜ್ ಹೋಟೆಲ್‌ಗಳನ್ನು ನಿರ್ಮಿಸಲಾಯಿತು. ಇವರ ಬಳಿಕ ದೊರಾಬಜಿ ಟಾಟಾ ಅವರು ಟಾಟಾ ಉದ್ಯಮ ಸಮೂಹವನ್ನು ಗಮನಾರ್ಹವಾಗಿ ವಿಸ್ತರಿಸಿದ್ದರು. ಟಾಟಾ ಪರ್ವ, ನ್ಯೂ ಇಂಡಿಯಾ ಅಶ್ಯೂರೆನ್ಸ್ ಅವರ ಕೊಡುಗೆಯಾಗಿತ್ತು. ಇವರ ಬಳಿಕ ಜಮಶೆಡ್‌ಜಿ ಟಾಟಾ ಅವರ ಕಿರಿಯ ಮಗ ರತನ್‌ಜಿ ಟಾಟಾ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಕ್ಷೇತ್ರದತ್ತ ಹೆಚ್ಚು ಒತ್ತು ನೀಡಿದರು.

ಅವರ ನಿಧನದ ನಂತರ ಅವರ ಪತ್ನಿ ನವಾಜ್ ಭಾಯ್ ಸೆಟ್ ಕೆಲ ಕಾಲ ಎಲ್ಲ ವ್ಯವಹಾರಗಳನ್ನು ನೋಡಿ ಕೊಳ್ಳುತ್ತಿದ್ದರು. ಇವರ ಪುತ್ರ ನೇವಲ್ ಟಾಟಾ ಉಕ್ಕು ಮತ್ತು ಟಾಟಾ ಪವರ್ ವ್ಯವಹಾರಗಳನ್ನು ಯಶಸ್ಸಿನತ್ತ ಮುನ್ನಡೆಸಿದ್ದರು. ಇವರ ಮಗನಾಗಿ ಜನಿಸಿದ ರತನ್ ಟಾಟಾ ಅವರ ಅಧಿಕಾರಾವಧಿಯಲ್ಲಿಯೇ ಟಾಟಾ ಗ್ರೂಪ್ ವಿಶ್ವದೆತ್ತರಕ್ಕೆ ಏರಿತು.

ಪ್ರಶಸ್ತಿಗಳ ಆಭರಣ
2000 ರಲ್ಲಿ ಪದ್ಮಭೂಷಣ ಮತ್ತು 2008ರಲ್ಲಿ ಪದ್ಮ ವಿಭೂಷಣ ಪಡೆದ ಟಾಟಾ ಭಾರತ ಮತ್ತು ವಿದೇಶಗಳ
ಹತ್ತರು ವಿವಿಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ.

*

ರತನ್ ಟಾಟಾ ಅನುಭವಿ ಉದ್ಯಮಿ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ವ್ಯವಹಾರ ಚತುರತೆ, ದೂರದೃಷ್ಟಿ ಗಿಂತಲೂ ಉದ್ಯಮ ಕ್ಷೇತ್ರದಲ್ಲಿ ಅವರು ಕೊನೇ ತನಕ ಕಾಪಾಡಿಕೊಂಡು ಬಂದಿರುವ ನೈತಿಕತೆ ಎಲ್ಲದಕ್ಕಿಂತ ದೊಡ್ಡದು. ಈ ಮೂಲಕ ಕುಟುಂಬ ವ್ಯವಹಾರವನ್ನು ಅಂತಾರಾಷ್ಟ್ರೀಯ ಉದ್ಯಮ ಸಾಮ್ರಾಜ್ಯವಾಗಿ ಪರಿವರ್ತಿಸಿ ದ್ದರು. ಅವರ ಅಧಿಕಾರಾವಧಿಯಲ್ಲಿ, ಟಾಟಾ ಗ್ರೂಪ್‌ನ ಆದಾಯ 10 ಸಾವಿರ ಕೋಟಿಗಳಿಂದ 30 ಲಕ್ಷ ಕೋಟಿ ರು.ಗಳಿಗೆ ವಿಸ್ತರಿಸಿತ್ತು.

*

ಶ್ರೀ ರತನ್ ಟಾಟಾ ಅವರ ನಿಧನದ ಸುದ್ದಿ ಕೇಳಿ ನನಗೆ ಅತೀವ ದುಃಖವಾಗಿದೆ. ಲೋಕೋಪಕಾರಿ ಮತ್ತು
ಕೈಗಾರಿಕೋದ್ಯಮಿಯಾಗಿ ಅವರ ಪರಂಪರೆಯು ಅಸಂಖ್ಯಾತ ಜೀವನ ಮತ್ತು ಸಮುದಾಯಗಳನ್ನು ಆಳವಾಗಿ ಪ್ರಭಾವಿಸಿದೆ. ಅವರ ದೂರದೃಷ್ಟಿ, ಸಹಾನುಭೂತಿ ಮತ್ತು ಸಾಮಾಜಿಕ ಕಾರಣಗಳಿಗಾಗಿ ಅಚಲವಾದ ಸಮರ್ಪಣೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ಈ ಸವಾಲಿನ ಸಮಯದಲ್ಲಿ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಕುಟುಂಬದೊಂದಿಗೆ ಇವೆ. -ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನದ ಸುದ್ದಿ ದುಃ
ಖವುಂಟುಮಾಡಿದೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ
ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ವ್ಯಕ್ತಿ. ರತನ್ ಟಾಟಾ ಅವರು ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಅಜರಾಮರ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ

ರತನ್ ಟಾಟಾ ದೂರದೃಷ್ಟಿ ಹೊಂದಿದ ವ್ಯಕ್ತಿ. ಅವರು ವ್ಯಾಪಾರ ಮತ್ತು ಲೋಕೋಪಕಾರ ಎರಡರಲ್ಲೂ ಶಾಶ್ವತವಾದ ಗುರುತು ಬಿಟ್ಟಿದ್ದಾರೆ. ಅವರ ಕುಟುಂಬ ಮತ್ತು ಟಾಟಾ ಸಮುದಾಯಕ್ಕೆ ನನ್ನ ಸಂತಾಪಗಳು.
ರಾಹುಲ್ ಗಾಂಧಿ

ರತನ್ ಟಾಟಾ ಅನುಪಸ್ಥಿತಿಯನ್ನು ಒಪ್ಪಿಕೊಳ್ಳಲು ನನಗೆ ಅಗುತ್ತಿಲ್ಲ. ಅವರ ಜೀವನ ಮತ್ತು ಕೆಲಸ ದೇಶದ ಆರ್ಥಿಕ
ಬೆಳವಣಿಗೆಗೆ ನೀಡಿದ ಕೊಡುಗೆ ಅನನ್ಯ. ಇಂದಿನ ಪರಿಸ್ಥಿತಿಯಲ್ಲಿ ರತನ್ ಟಾಟಾ ಅವರ ಮಾರ್ಗದರ್ಶನ ಮತ್ತು ಸೇವೆ
ಅಮೂಲ್ಯವಾದುದು.ಹೋಗಿಬನ್ನಿ ಟಾಟಾ …ನಿಮ್ಮನ್ನು ನಾವು ಎಂದಿಗೂ ಮರೆಯುವುದಿಲ್ಲ.

  • ಆನಂದ ಮಹೀಂದ್ರಾ, ಮಹೀಂದ್ರಾ ಮತ್ತು
    ಮಹೀಂದ್ರಾ ಮುಖ್ಯಸ್ಥ

ಇದನ್ನೂ ಓದಿ: Ratan Tata Death: ರತನ್ ಟಾಟಾ ಎಲ್ಲ ಉದ್ಯಮಿಗಳಿಗಿಂತ ಭಿನ್ನವಾಗಿದ್ದರು! ಇಲ್ಲಿದೆ ನೋಡಿ ಅದಕ್ಕೆ ಕಾರಣಗಳು