Thursday, 19th September 2024

Teachers Day 2024: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಬಗ್ಗೆ ಆಸಕ್ತಿದಾಯಕ ಕೆಲವು ಸಂಗತಿಗಳು

Teachers Day 2024

ದೇಶಾದ್ಯಂತ ಸೆಪ್ಟೆಂಬರ್ 5 ರಂದು ಭಾರತದ ಮೊದಲ ಉಪರಾಷ್ಟ್ರಪತಿ (India’s first Vice-President) ಮತ್ತು ಎರಡನೇ ರಾಷ್ಟ್ರಪತಿ (India’s second President ) ಡಾ. ಸರ್ವಪಲ್ಲಿ ರಾಧಾಕೃಷ್ಣನ್ (Dr. Sarvepalli Radhakrishnan) ಅವರ ಜನ್ಮದಿನವನ್ನು (Teachers Day 2024) ಆಚರಿಸಲಾಗುತ್ತದೆ. ಪ್ರಖ್ಯಾತ ವಿದ್ವಾಂಸರು, ಶಿಕ್ಷಕರು ಮತ್ತು ಹೆಸರಾಂತ ತತ್ತ್ವಜ್ಞಾನಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಸರ್ ಸರ್ವಪಲ್ಲಿ ರಾಧಾಕೃಷ್ಣನ್ ಎಂದೇ ಸಂಭೋದಿಸಲಾಗುತ್ತಿತ್ತು.

ಡಾ. ರಾಧಾಕೃಷ್ಣನ್ ಅವರು 1962ರಿಂದ 1967 ರವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದಾಗ ಅವರ ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಸೆಪ್ಟೆಂಬರ್ 5ರಂದು ಅವರ ಜನ್ಮದಿನವನ್ನು ದೇಶಾದ್ಯಂತ ಆಚರಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಅದಕ್ಕೆ ಅವರು ಒಪ್ಪಲಿಲ್ಲ ಆದರೆ ಆ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಬಹುದು ಎಂದು ಸಲಹೆ ನೀಡಿದರು. ಹೀಗಾಗಿ 1962 ರಿಂದ ಪ್ರತಿ ವರ್ಷ ಸೆಪ್ಟೆಂಬರ್ 5ರಂದು , ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

Teachers Day 2024

ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಬಗ್ಗೆ ಕೆಲವು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.

  • ಡಾ. ರಾಧಾಕೃಷ್ಣನ್ ಅವರು 1888ರ ಸೆಪ್ಟೆಂಬರ್ 5ರಂದು ತಮಿಳುನಾಡಿನ ತಿರುಟ್ಟಣಿಯಲ್ಲಿ ಸರ್ವಪಲ್ಲಿ ವೀರಸ್ವಾಮಿ ಮತ್ತು ಸೀತಮ್ಮ ದಂಪತಿಯ ಮಗನಾಗಿ ಜನಿಸಿದರು.
  • ಡಾ. ರಾಧಾಕೃಷ್ಣನ್ ಅವರು ಶಿವಕಾಮು ಅವರನ್ನು ವಿವಾಹವಾಗಿದ್ದು, ಅವರಿಗೆ ಆರು ಮಂದಿ ಮಕ್ಕಳು. ಇದರಲ್ಲಿ 5 ಹೆಣ್ಣು ಮತ್ತು 1 ಗಂಡು.
  • ಶೈಕ್ಷಣಿಕ ಜೀವನದುದ್ದಕ್ಕೂ ಡಾ. ರಾಧಾಕೃಷ್ಣನ್ ಅಧ್ಯಯನಕ್ಕಾಗಿ ವಿದ್ಯಾರ್ಥಿ ವೇತನವನ್ನು ಪಡೆದರು.
  • ಡಾ. ರಾಧಾಕೃಷ್ಣನ್ ಅವರು ವೆಲ್ಲೂರಿನ ವೂರ್ಹೀಸ್ ಕಾಲೇಜು ಮತ್ತು ಮದ್ರಾಸಿನ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದರು.

  • 1906ರಲ್ಲಿ ತತ್ತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ರಾಧಾಕೃಷ್ಣನ್ ಬಳಿಕ ಪ್ರಾಧ್ಯಾಪಕರಾದರು.
  • ಭಾರತದ ಸ್ವಾತಂತ್ರ್ಯದ ಮೊದಲು ಅವರನ್ನು ಸರ್ ಸರ್ವಪಲ್ಲಿ ರಾಧಾಕೃಷ್ಣನ್ ಎಂದು ಸಂಬೋಧಿಸಲಾಗುತ್ತಿತ್ತು. ಯಾಕೆಂದರೆ ಅವರು 1931 ರಲ್ಲಿ ನೈಟ್ ಆಗಿದ್ದರು. ನೈಟ್ ಎಂಬುದು ಒಬ್ಬ ವ್ಯಕ್ತಿಗೆ ಅವನ ಸಾಧನೆಗಳಿಗಾಗಿ ಅಥವಾ ದೇಶಕ್ಕಾಗಿ ಮಾಡಿದ ಸೇವೆಗಾಗಿ ಬ್ರಿಟಿಷ್ ರಾಜ ಅಥವಾ ರಾಣಿ ನೀಡುವ ಬಿರುದಾಗಿದೆ. ಸ್ವಾತಂತ್ರ್ಯದ ಬಳಿಕ ಅವರನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಎಂದು ಕರೆಯಲಾಯಿತು.
  • ಡಾ. ರಾಧಾಕೃಷ್ಣನ್ ಅವರನ್ನು 1936 ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಪೂರ್ವ ಧರ್ಮಗಳು ಮತ್ತು ನೀತಿಶಾಸ್ತ್ರದ ಸ್ಪಾಲ್ಡಿಂಗ್ ಪ್ರೊಫೆಸರ್ ಎಂದು ಹೆಸರಿಸಲಾಯಿತು.
  • 1946ರಲ್ಲಿ ಡಾ. ರಾಧಾಕೃಷ್ಣನ್ ಅವರು ಸಂವಿಧಾನ ಸಭೆಗೆ ಆಯ್ಕೆಯಾದರು. ಅವರು ಯುನೆಸ್ಕೋ ಮತ್ತು ಅನಂತರ ಮಾಸ್ಕೋಗೆ ರಾಯಭಾರಿಯಾಗಿ ಸೇವೆ ಸಲ್ಲಿಸಿದರು.
  • ಡಾ. ರಾಧಾಕೃಷ್ಣನ್ 1952ರಲ್ಲಿ ಭಾರತದ ಮೊದಲ ಉಪರಾಷ್ಟ್ರಪತಿಯಾದರು ಮತ್ತು 1962 ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾದರು.
  • 1954ರಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ನೀಡಿ ಗೌರವಿಸಲಾಯಿತು. 1963 ರಲ್ಲಿ, ಅವರಿಗೆ ಆರ್ಡರ್ ಆಫ್ ಮೆರಿಟ್ ಮತ್ತು 1975 ರಲ್ಲಿ ಟೆಂಪಲ್ಟನ್ ಪ್ರಶಸ್ತಿಯನ್ನು ನೀಡಲಾಯಿತು.

  • 1931 ರಿಂದ 1936 ರವರೆಗೆ ಡಾ ರಾಧಾಕೃಷ್ಣನ್ ಆಂಧ್ರ ವಿಶ್ವವಿದ್ಯಾಲಯದಲ್ಲಿ ಮತ್ತು 1939 ರಿಂದ 1948 ರವರೆಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಯಾಗಿದ್ದರು. 1953 ರಿಂದ 1962 ರವರೆಗೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿದ್ದರು.
  • ಭಾರತದ ರಾಷ್ಟ್ರಪತಿಯಾದಾಗ ಡಾ. ರಾಧಾಕೃಷ್ಣನ್ ಅವರು 10,000 ರೂ. ಸಂಬಳದಲ್ಲಿ 2,500 ರೂ. ಮಾತ್ರ ಸ್ವೀಕರಿಸಿದರು ಮತ್ತು ಉಳಿದ ಮೊತ್ತವನ್ನು ಪ್ರತಿ ತಿಂಗಳು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಿದರು.