Monday, 16th September 2024

ಮತ್ತೆ ನಿಚ್ಚಳವಾದ ಯುಎನ್‌ ಭದ್ರತಾ ಮಂಡಳಿ ವೈಫಲ್ಯ

ಪರಿಸ್ಥಿತಿ ಎಲ್ಲ ಸಂದರ್ಭಗಳಲ್ಲೂ ಒಂದೇ ಆಗಿರುವುದಿಲ್ಲ ಮತ್ತು ಜನರ ಭಾವನೆಗಳನ್ನು ಅರ್ಥೈಸಬೇಕಾದ ರೀತಿಯೂ ಭಿನ್ನಭಿನ್ನ ವಾಗಿರುತ್ತದೆ. ಉಕ್ರೇನ್ ಬಾಧಿತ ಪ್ರದೇಶದಲ್ಲಿ ಭಾರತೀಯರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ನಮ್ಮ ಸ್ಪಷ್ಟ ನಿಲುವು ವಿಶ್ವಸಮುದಾಯದ ಗಮನಕ್ಕೆ ಬರುವುದು ಅತ್ಯವಶ್ಯ.

ಸಯ್ಯದ್ ಅಕ್ಬರುದ್ದೀನ್ ಕಳೆದ ನಾಲ್ಕು ವಾರಗಳ ಅವಧಿಯಲ್ಲಿ, ಉಕ್ರೇನ್ ಸಮಸ್ಯೆಯ ಕುರಿತಾಗಿ ವಿಶ್ವಸಂಸ್ಥೆ (ಯುಎನ್) ಭದ್ರತಾ ಮಂಡಳಿ ನಾಲ್ಕು
ಬಾರಿ ಸಭೆ ನಡೆಸಿದೆ. ಅಭಿಪ್ರಾಯ ಮಂಡನೆ ಮತ್ತು ವಿಚಾರ ವಿನಿಮಯದ ದೃಷ್ಟಿಯಿಂದ ನೋಡುವುದಾದರೆ ಈ ಸಭೆಗಳೆಲ್ಲವೂ ವಿಶಿಷ್ಟವೇ ಆಗಿದ್ದವು. ಆ ಮಟ್ಟಿಗೆ ಯುಎನ್ ರಾಜತಾಂತ್ರಿಕರ ವಿಚಾರ ನೈಪುಣ್ಯಮೆಚ್ಚಲೇಬೇಕು. ಆದರೆ ಫಲಿತಾಂಶ ಮಾತ್ರ ಹಾಗಿರಲಿಲ್ಲ. ಸಂಘಟನೆಯಲ್ಲಿರುವ ಸಾಂಸ್ಥಿಕ
ನ್ಯೂನತೆಯನ್ನು ಅದು ಪ್ರತಿಬಿಂಬಿಸುವಂತಿತ್ತು.

ಹಾಗೆ ಹೇಳುವುದಾದರೆ ವಿಶ್ವದ ಅನ್ಯರಾಷ್ಟಗಳ ಅಧಿಕಾರಾತ್ಮಕ ಬಿಕ್ಕಟ್ಟುಗಳಿಗೆ ಪರಿಹಾರ ಕೊಡುವ ವೇದಿಕೆ ಸೆಕ್ಯುರಿಟಿ ಕೌನ್ಸಿಲ್ ಅಲ್ಲ. ಶೀತಲ ಸಮರ ಯುಗದ ನಂತರದ ಕಾಲಘಟ್ಟದಲ್ಲಿ ಕೌನ್ಸಿಲ್‌ನ ಕ್ರಿಯಾತ್ಮಕತೆಯ ಪರಿಧಿ ಕಿರಿದಾಗುತ್ತ ಬಂತು. ಮಹತ್ತರ ರಾಜತಾಂತ್ರಿಕ ಸಹಕಾರದ ಕಾರಣದಿಂದ ಪಿ-೫ (ಐದು ಶಾಶ್ವತ ಸದಸ್ಯರು) ನ ಆಸಕ್ತಿಯ ಕ್ಷೇತ್ರ ದುರ್ಬಲಗೊಳ್ಳಲಿಲ್ಲ. ಇದು ಅತ್ಯಂತ ಕ್ಷಿಪ್ರವೆನ್ನಬ ಹುದಾದ ಕಾಲಾವಽಯಲ್ಲಿ ಸಾಬೀತಾ ಯಿತು. ಅಽಕಾರಕ್ಕಾಗಿ ನಡೆಯುತ್ತಿರುವ ತುರುಸಿನ ಸ್ಪರ್ಧೆಯ ನಡುವಿನಲ್ಲಿ ಕೌನ್ಸಿಲ್‌ನ ಅಸಮರ್ಪಕತೆ ಈಗ ಬೆಳಕಿಗೆ ಬಂದಿದೆ.

ರಷ್ಯನ್ ಒಕ್ಕೂಟ ಉಕ್ರೇನ್ ಮೇಲೆ ನಡೆಸಿರುವ ದಾಳಿಯನ್ನು ಬಹುಮುಖ್ಯವಾಗಿ ಭದ್ರತಾ ಮಂಡಳಿಯ ಸಭೆಯಲ್ಲಿ ಖಂಡಿಸುವ ಗೊತ್ತುವಳಿ ಅಂಗೀಕಾರ ವಾಗಬೇಕಿತ್ತು. ಅದನ್ನು ಎಲ್ಲರೂ ಎದುರು ನೋಡುತ್ತಿದ್ದರು. ಸಾರ್ವಜನಿಕರ ಭಾವನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿಯಾದರೂ ಇದು ತುಂಬಾ ಅಗತ್ಯ. ಈ ತರಹದ ನಾಟಕೀಯ ಸನ್ನಿವೇಶಗಳನ್ನು ಕೌನ್ಸಿಲ್ ಹಲವಾರು ಬಾರಿ ಪ್ರದರ್ಶಿಸಿದೆ ಮತ್ತು ಅದರ ವರ್ತನೆಯ ಕುರಿತಾಗಿ ದೀರ್ಘ ಇತಿಹಾಸವೇ ಇದೆ. ಅಕ್ಟೋಬರ್ ೧೯೬೨ರಲ್ಲಿ ಯುಎಸ್‌ನ ಆಗಿನ ಶಾಶ್ವತ ಪ್ರತಿನಿಧಿ ಅಡ್ಲಾಯ್ ಸ್ಟೇವಿನ್ಸನ್, ಸೋವಿಯಟ್ ಮಿಸೈಲ್ ಸೈಲೋಸ್ ಕ್ಯೂಬಾದಲ್ಲಿ ಇರುವುದನ್ನು ಬಹಿರಂಗಪಡಿಸಿದ್ದರ ಜತೆಗೇನೇ ಅದನ್ನು ಅಲ್ಲಗಳೆಯುವಂತೆ ಯುಎಸ್‌ಎಸ್‌ಆರ್ ಪ್ರತಿನಿಽಗೆ ಸೂಚನೆ ಕೊಟ್ಟಿದ್ದರು.

ಫೆಬ್ರವರಿ ೨೦೦೩ ರಲ್ಲಿ ಯುಎಸ್ ಕಾರ್ಯದರ್ಶಿ ಕೊಲಿನ್ ಪೊವೆಲ್ ಪತ್ರಿಕಾ ಹೇಳಿಕೆಯೊಂದರಲ್ಲಿ ಇರಾಕಿನ ಬೃಹತ್ ವಿನಾಶಕಾರಿ ಶಸ್ತ್ರಾಸ್ತ್ರ ಸಂಗ್ರಹದ ಬಗ್ಗೆ ಆಕ್ಷೇಪಿಸಿದ್ದರು. ತದನಂತರದಲ್ಲಿ ಅವರೇ ಅದೊಂದು ದೋಷಪೂರಿತ ಹೇಳಿಕೆ ಎಂದು ತಮ್ಮ ಹೇಳಿಕೆಯನ್ನು ವಾಪಸು ಪಡೆದುಕೊಂಡಿದ್ದರು. ಉಕ್ರೇನ್ ಕುರಿತಾದ ಕೊನೆಯ ಸಭೆಯಲ್ಲಿ ಯಾವುದೇ ರಾಜ ತಾಂತ್ರಿಕ ನಡೆಗಳ ಪ್ರದರ್ಶನವಾಗಲಿಲ್ಲ, ಬದಲಾಗಿ ಉಕ್ರೇನಿನ ರಾಯಭಾರಿಗಳ ಕಡೆಯಿಂದ ಬಂದ ಬೆದರಿಕೆಗಳೇ ವಾರ್ತಾವಾಹಿನಿಗಳ ಸುದ್ದಿಗೆ ಗ್ರಾಸವಾದವು.

ಹಾಗಿದ್ದರೆ ಈ ಬಾರಿ ಕೌನ್ಸಿಲ್ ಸಭೆ ನಡೆಸಿ ಉಕ್ರೇನಿನ ಕುರಿತಾಗಿ ಕೊಟ್ಟ ಮುನ್ಸೂಚನೆಗಳೇನು? ಮೊದಲನೆಯದಾಗಿ ರಷ್ಯಾದ ನಡೆಯನ್ನು ಖಂಡಿಸುವ ಯಾವುದೇ ಗೊತ್ತುವಳಿಯೂ ಅಂಗೀಕಾರವಾಗಲಿಲ್ಲ. ಆ ವಿಚಾರದ ಕುರಿತಾದ ಯಾವುದೇ ಗೊತ್ತುವಳಿ ಇದ್ದರೂ ಅನಿವಾರ್ಯವಾಗಿ ರಷ್ಯಾ ಅದನ್ನು ವೀಟೋ ಮೂಲಕ ವಿರೋಧಿಸಿತು. ಯಾವುದೇ ಒಂದು ದೇಶ ವಿವಾದದ ಭಾಗವಾಗಿದ್ದಾಗ ಅವರು ಕೌನ್ಸಿಲ್‌ನಲ್ಲಿ ನಡೆಯುವ ನಿರ್ಣಯದ ಮೇಲೆ ವೋಟ್ ಮಾಡುವುದರಿಂದ ಹಿಂದಕ್ಕೆ ಸರಿಯಬೇಕು ಎಂಬ ಅಂಶವನ್ನೂ ಕೆಲವರು ಒತ್ತಿ ಹೇಳುತ್ತಾರೆ. ಈ ಹಿಂದೆ ಅಂತಹ ಸನ್ನಿವೇಶಗಳು ಎದುರಾ ದದ್ದಿದೆ.

೧೯೫೦-೫೧ರಲ್ಲಿ ಇಂಡಿಯಾ- ಪಾಕಿಸ್ತಾನದ ವಿಚಾರ ಚರ್ಚೆಗೆ ಬಂದಾಗ ಶಾಶ್ವತ ಸದಸ್ಯತ್ವ ಹೊಂದಿರದ ಭಾರತ ಐದು ಬಾರಿ ಅ ಸಭೆಗಳಿಂದ ಹೊರಗುಳಿದಿತ್ತು. ವೈಪರೀತ್ಯವೆಂದರೆ ೧೯೬೦ರ ಘಟನೆ ನಡೆದಾಗಲೂ ಈ ನಡೆಯಲ್ಲಿ ಬದಲಾವಣೆಗಳಾಗಲಿಲ್ಲ. ಈಗ ಅದನ್ನು ಮತ್ತೆ ಪುನರು ಜ್ಜೀವನಗೊಳಿಸುವುದು ಕೂಡ ಸಾಧ್ಯವಿಲ್ಲದ ಮಾತು. ೨೦೧೪ರ ಕ್ರಿಮಿಯಾ ಪ್ರಕರಣದ ಕುರಿತಾಗಿ ಸೆಕ್ಯುರಿಟಿ ಕೌನ್ಸಿಲ್ ಸಭೆ ನಡೆದಾಗ ರಷ್ಯಾ ಭಾಗವಹಿಸಿ
ದ್ದು ಮಾತ್ರವಲ್ಲದೇ ಆರೋಪವನ್ನು ನಿರಾಕರಿಸಿ ವೀಟೋ ಹಕ್ಕನ್ನು ಚಲಾಯಿಸಿತ್ತು.

ಪ್ರತಿಬಾರಿಯೂ ಕೌನ್ಸಿಲ್‌ನ ನಿರ್ಣಯಗಳು ವಿಫಲವಾಗುವುದಾದರೆ, ಪಶ್ಚಿಮದ ದೇಶಗಳು ಯಾಕೆ ಅದಕ್ಕೆ ಅಷ್ಟೊಂದು ಮಹತ್ವ ಕೊಡುತ್ತವೆ?
ಉಕ್ರೇನ್ ವಿಚಾರಕ್ಕೆ ಕುರಿತಂತೆ ರಷ್ಯಾಗೆ ಕೌನ್ಸಿಲ್‌ನಲ್ಲಿ ಬೆಂಬಲ ಇಲ್ಲ ಎಂಬುದನ್ನು ಪ್ರದರ್ಶಿಸುವ ಉದ್ದೇಶ ಅವರಿಗಿರಬೇಕು. ಪ್ರಾಯಶಃ ಇದೆಲ್ಲವೂ ಜನರಲ್ ಅಸೆಂಬ್ಲಿಯಲ್ಲಿ ಬರುವ ಫಲಿತಾಂಶದಿಂದ ನಿರ್ಣಯಿತವಾಗಬೇಕು, ಏಕೆಂದರೆ ಅಲ್ಲಿ ವೀಟೋ ಅವಕಾಶವಿಲ್ಲವಲ್ಲ. ಇಂತಹ ವಿಚಾರಗಳು ಜನರಲ್ ಅಸೆಂಬ್ಲಿಯಲ್ಲಿ ಬಹುಮತದಿಂದ ಅಂಗೀಕಾರವಾಗುತ್ತವೆ. ಆಗ ಸೆಕ್ಯುರಿಟಿ ಕೌನ್ಸಿಲ್ ನಿರ್ಣಯಕ್ಕೆ ಕವಡೆಕಾಸಿನ ಕಿಮ್ಮತ್ತೂ ಇರುವುದಿಲ್ಲ.
ಇದೆಲ್ಲವೂ ಪ್ರಾಥಮಿಕವಾಗಿ ಸಾರ್ವಜನಿಕರ ಅಭಿಪ್ರಾಯ ಕ್ರೋಡೀಕರಣದ ಪ್ರಕ್ರಿಯೆಯಂತೆ ಇರುವ ಕಾರಣ, ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನ
ಶಾಶ್ವತ ಸದಸ್ಯ ದೇಶವಲ್ಲದ ಭಾರತ, ತನ್ನ ಖಚಿತ ನಿಲುವನ್ನು ತಳೆಯಲೇಬೇಕು.

ಎಲ್ಲವನ್ನೂ ಸಿನಿಕತನದಿಂದ ನೋಡುವುದರ ಬದಲಾಗಿ ಪ್ರಸಕ್ತ ಸನ್ನಿವೇಶದಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ನಿಲುವನ್ನು ಪ್ರದರ್ಶಿಸಬೇಕು. ಈ ಹಿಂದಿನ ಸಂದರ್ಭಗಳಲ್ಲೂ ಭಾರತ ಅಲಿಪ್ತ ನೀತಿಯನ್ನೇ ಅನುಸರಿಸಿತ್ತು. ಪರಿಸ್ಥಿತಿ ಎಲ್ಲ ಸಂದರ್ಭಗಳಲ್ಲೂ ಒಂದೇ ಆಗಿರುವುದಿಲ್ಲ ಮತ್ತು ಜನರ ಭಾವನೆಗಳನ್ನು ರ್ಥೈಸಬೇಕಾದ ರೀತಿಯೂ ಭಿನ್ನಭಿನ್ನವಾಗಿರುತ್ತದೆ.

ವಿಶೇಷತಃ ರಷ್ಯಾ ಇಲ್ಲಿ ವಿವಾದದ ಭಾಗವಾಗಿರುವ ಕಾರಣ ನಮ್ಮ ನಿಲುವಿನಲ್ಲಿ ಸ್ಪಷ್ಟತೆ ಇರಬೇಕು. ಅಲ್ಲದೇ ಬಾಧಿತ ಪ್ರದೇಶದಲ್ಲಿ ಭಾರತೀಯರು
ಮತ್ತು ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ನಮ್ಮ ಸ್ಪಷ್ಟ ನಿಲುವು ವಿಶ್ವಸಮುದಾಯದ ಗಮನಕ್ಕೆ ಬರುವುದು ಅತ್ಯವಶ್ಯಕ.
ನಮ್ಮ ಮತ್ತು ರಷ್ಯಾ ಜತೆಗಿನ ಸುದೀರ್ಘ ಬಂಧ-ಸಂಬಂಧಗಳ ನೆಲೆಯಲ್ಲಿ ನಾವು ಒಂದು ಹೆಜ್ಜೆ ಮುಂದಿಟ್ಟು ಕ್ಲೇಷವನ್ನು ಪರಿಹರಿಸುವ ನಿಟ್ಟಿನಲ್ಲಿ ಸಕ್ರಿಯರಾಗಬೇಕಿದೆ.

ಮುಂಚೂಣಿಯಲ್ಲಿರುವ ಯಾವುದೇ ದೇಶಕ್ಕೂ ಹಿಂಜರಿಕೆ ಇರಕೂಡದು. ಕಳೆದ ಬಾರಿಯ ಕೌನ್ಸಿಲ್ ಸಭೆಯಲ್ಲಿ ಹೊರಬಂದ ಫಲಿತಾಂಶ ಏನೇ ಇರಲಿ, ಶಾಂತಿಯುತ ಸಂಧಾನಕ್ಕೆ ನಾವು ಮಹತ್ವವನ್ನು ಕೊಡಬೇಕು ಮತ್ತು ಅದನ್ನು ಮತ್ತೆ ಒತ್ತಿ ಹೇಳಬೇಕು. ಸೆಕ್ಯುರಿಟಿ ಕೌನ್ಸಿಲ್ ಏನೇ ಹೇಳಲಿ, ಭಾರತ ತನ್ನ ಸ್ಪಷ್ಟ ನಿಲುವನ್ನು ವಿಶ್ವ ಸಮುದಾಯದ ಮುಂದೆ ನಿರ್ಭಯವಾಗಿ ಇಡುವ ಮೂಲಕ ಗಟ್ಟಿತನವನ್ನು ತೋರಬೇಕು. ಖಂಡನೆಗಳನ್ನು ಮಾಡುವುದಕ್ಕೆ ಹೊರತಾಗಿ,ರಷ್ಯಾ ಸೇರಿದಂತೆ ನಾವೆಲ್ಲರೂ ಸುದೀರ್ಘಾವಧಿಯಿಂದ ಪಾಲಿಸಿಕೊಂಡು ಬಂದ ತತ್ವ-ಸಿದ್ಧಾಂತಗಳ ಹಿನ್ನೆಲೆಯಲ್ಲಿ ಸಂದೇಶವೊಅದು ಖಂಡಿತವಾಗಿ ರವಾನೆಯಾಗಬೇಕು. ಆಗಿರುವ ಪ್ರಕ್ರಿಯೆಗಳನ್ನು ಒಪ್ಪಿಕೊಳ್ಳದೇ, ರಷಿಯಾದ ನಡವಳಿಕೆಗಳ ಬಗ್ಗೆ ನಿರಾಸೆ ಮತ್ತು ಬೇಸರ ವ್ಯಕ್ತ ಪಡಿಸುವ ಮೂಲಕ ನಾವು ನಮ್ಮ ರಾಜತಾಂತ್ರಿಕ ನಡೆಯನ್ನು ವಿಶ್ವಸಮುದಾಯಕ್ಕೆ ಗೊತ್ತುಪಡಿಸಬೇಕು.

ಉಕ್ರೇನಿನ ಘಟನೆಗಳು ಅನೇಕ ವಿಧದಲ್ಲಿ ವೈಫಲ್ಯಗಳ ಫಲಸ್ವರೂಪವಾಗಿ ನಮ್ಮ ಮುಂದೆ ನಿಂತಿವೆ. ಕೇವಲ ಇದೊಂದು ಘಟನೆಯಲ್ಲ, ಇದು ಹೊತ್ತಿ
ಉರಿಯುತ್ತಿರುವ ಅನೇಕ ಸಮಸ್ಯೆಗಳ ಪೆಡಂಭೂತವೇ ಇದೆ. ಇಲ್ಲಿ ಯಾರೂ ತಪ್ಪುಗಳಿಂದ ಹೊರತಾದವರಲ್ಲ.

(ಲೇಖಕರು ವಿಶ್ವಸಂಸ್ಥೆ ಭದ್ರತಾಮಂಡಳಿಯಲ್ಲಿ ಭಾರತದ ಭೂತಪೂರ್ವ ಕಾಯಂ ಪ್ರತಿನಿಧಿ)