Friday, 20th September 2024

Vishwavani Completes 1000 episodes: ವಿಶ್ವವಾಣಿ ಕ್ಲಬ್‌ ಹೌಸ್‌ʼಗೆ ಸಹಸ್ರ ಸಂಭ್ರಮ

ಸತತ ಸಾವಿರ ಸಂಚಿಕೆ ಪೂರ್ಣಗೊಳಿಸಿದ ಮಾತಿನ ಮಂಟಪ

ಕ್ಲಬ್‌ಹೌಸ್ ಇತಿಹಾಸದಲ್ಲಿ ಹಲವು ದಾಖಲೆ ನಿರ್ಮಿಸಿರುವ ವಿಶ್ವವಾಣಿ

ಅದು ಕರೋನಾದ ವಿಷಮ ಕಾಲ. ವಿಶ್ವದೆಡೆ ಮನೆಯಿಂದ ಆಚೆ ಬರಲು ಹೆದರುವ ಪರಿಸ್ಥಿತಿ. ಅಂತಹ ಪರಿಸ್ಥಿತಿ ಯಲ್ಲಿ ಇಡೀ ವಿಶ್ವದಲ್ಲಿ ಮನೆಮನೆಗಳ ನಡುವೆ, ಮನಮನಗಳ ನಡುವೆ ಮಾತಿಗೆ ಬೆಸುಗೆಯಾದದ್ದು ‘ಕ್ಲಬ್‌ಹೌಸ್’ ಮಾತಿನ ಮನೆ. ಕನ್ನಡದಲ್ಲಿ ಈ ಕ್ಲಬ್ ಹೌಸ್ ಅನ್ನು ಸಮರ್ಥವಾಗಿ ಬಳಸಿಕೊಂಡು ದಾಖಲೆ ಬರೆದದ್ದು
‘ವಿಶ್ವವಾಣಿ ಕ್ಲಬ್‌ಹೌಸ್’. ಕೋವಿಡ್ ಕಾಲದ ನಂತರವೂ ಬಹುಕಾಲದಿಂದ ನಿರಂತರತೆ, ಜನಪ್ರಿಯತೆ, ಶ್ರೇಷ್ಠತೆ ಉಳಿಸಿ, ಬೆಳೆಸಿಕೊಂಡು ಬಂದಿದೆ ಈ ಕಾರ್ಯಕ್ರಮ.

ಹೌದು, ಕರೋನಾ ಸಮಯದಲ್ಲಿ ವಿಶ್ವವಾಣಿ ಆರಂಭಿಸಿದ ಕ್ಲಬ್‌ಹೌಸ್ ಗುರುವಾರಕ್ಕೆ 1000 ಸಂವಾದ ಕಾರ್ಯ ಕ್ರಮಗಳನ್ನು ಪೂರೈಸಿದೆ. ವಿಶ್ವೆಶ್ವರ ಭಟ್ ಅವರ ಸಾರಥ್ಯದಲ್ಲಿ ಆರಂಭಗೊಂಡಿದ್ದ ಶ್ರವಣ ಮಾಧ್ಯಮದ ಈ ಕಾರ್ಯಕ್ರಮ ರಾಜ್ಯದಲ್ಲಿ ಈಗಲೂ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಆರಂಭದಲ್ಲಿ ವಿಶ್ವೇಶ್ವರ ಭಟ್ ಅವರ ಸಾರಥ್ಯದಲ್ಲಿ ಆರಂಭಗೊಂಡ ಈ ಕ್ಲಬ್‌ಹೌಸ್ ಕಾರ್ಯಕ್ರಮಕ್ಕೆ ನಂಜನಗೂಡು ಮೋಹನ್ ಹಾಗೂ ರೂಪಾ ಗುರುರಾಜ್ ಅವರು ಮಾಡರೇಟರ್‌ಗಳಾಗಿ ಯಶಸ್ವಿಯಾಗಿ ನಿರ್ವಹಿಸಿದ್ದರು.

ನಿತ್ಯ ಸಂಜೆ 7 ಗಂಟೆಗೆ ರಾಜ್ಯದ ಸಾವಿರಾರು ಮಂದಿ ಈಗಲೂ ತಮ್ಮ ಮೊಬೈಲ್‌ನಲ್ಲಿ ಕ್ಲಬ್‌ಹೌಸ್ ಆಪ್ ಹುಡುಕು ತ್ತಾರೆ. ನಿತ್ಯ ಒಂದೊಂದು ನೂತನ ವಿಷಯಗಳೊಂದಿಗೆ ಜನರ ಮುಂದೆ ವಿಶ್ವವಾಣಿ ಕ್ಲಬ್‌ಹೌಸ್ ತಂಡ ಹಾಜರಾಗು ತ್ತಿದೆ. ವಿಶ್ವವಾಣಿ ಕ್ಲಬ್‌ಹೌಸ್‌ನ ಮತ್ತೊಂದು ವಿಶೇಷವೆಂದರೆ, ಸತತ ಸಾವಿರ ಎಪಿಸೋಡುಗಳು ಯಾವುದೇ ಅಡೆತಡೆ ಯಿಲ್ಲದೇ ನಡೆದಿವೆ.

ಆರಂಭಿಕ ದಿನಗಳಲ್ಲಿ ವಾರದ ಏಳು ದಿನವೂ ನಡೆಯುತ್ತಿದ್ದ ಕ್ಲಬ್‌ಹೌಸ್, ಕೆಲ ತಿಂಗಳುಗಳಿಂದ ಭಾನುವಾರ ವಿರಾಮ ಪಡೆಯುತ್ತಿದೆ. ಕ್ಲಬ್‌ಹೌಸ್ ಇತಿಹಾಸದಲ್ಲಿಯೇ ಈ ಪ್ರಮಾಣದಲ್ಲಿ ಸರಣಿ ಕಾರ್ಯಕ್ರಮಗಳು ನಡೆದಿರು ವುದು ವಿಶ್ವವಾಣಿ ಕ್ಲಬ್ ಹೌಸ್ ಒಂದರಲ್ಲಿಯೇ ಎನ್ನುವುದು ಒಂದು ದಾಖಲೆಯೂ ಹೌದು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಾಡಿನ ಖ್ಯಾತನಾಮರು ಮಾತನಾಡಿದ್ದಾರೆ. ಪ್ರಮುಖವಾಗಿ ಡಾ.ಸುಧಾಮೂರ್ತಿ, ಎಸ್.ಎಲ್.ಬೈರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ, ರೂಪಾ ಮೌದ್ಗಿಲ್, ವಿನಯ್ ಗುರೂಜಿ, ತೇಜಸ್ವಿ ಸೂರ್ಯ, ಡಾ.ಸಿ.ಎನ್.ಮಂಜುನಾಥ್, ರಘು ದೀಕ್ಷಿತ್, ಸದ್ಗುರು ಜಗ್ಗಿ ವಾಸುದೇವ, ಭಾರತಿ ವಿಷ್ಣು
ವರ್ಧನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಚರ್ಚೆಯಾಗದ ವಿಷಯವಿಲ್ಲ: ‘ಆಡು ಮುಟ್ಟದ ಸೊಪ್ಪಿಲ್ಲ, ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಚರ್ಚೆಯಾಗದ ವಿಷಯ ವಿಲ್ಲ’ ಎನ್ನುವುದು ಸತ್ಯ. ವಿಶ್ವವಾಣಿಯ ಈ ಮಾತಿನ ಮಂಟಪಕ್ಕೆ ವಿಷಯದ ಎಲ್ಲೆಯಿಲ್ಲ. ಅಧ್ಯಾತ್ಮ, ಆರೋಗ್ಯ, ಕಲೆ, ಸಂಗೀತದಿಂದ ಶುರುವಾಗಿ ಲೈಂಗಿಕ ಆರೋಗ್ಯದ ಅರಿವಿನ ಕಾರ್ಯಕ್ರಮವೂ ನಡೆದಿದೆ. ಎಡ-ಬಲ ಪಂಥದ ಬೇಧವಿಲ್ಲದೇ, ‘ವಿಷಯ’ಕ್ಕೆ ಮಾತ್ರ ಮಹತ್ವ ನೀಡುವ ಅಪರೂಪದ ವೇದಿಕೆ ಎಂದರೆ ತಪ್ಪಾಗುವುದಿಲ್ಲ. ಇತ್ತೀಚಿನ ಕೆಲ ದಿನಗಳಿಂದ ಕ್ಲಬ್‌ಹೌಸ್‌ನಲ್ಲಿ ಸರಣಿ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ.

ಪ್ರಮುಖವಾಗಿ ಪ್ರತಿ ಶನಿವಾರ ಪ್ರೊ.ಪ್ರಶಾಂತ ಹೆಗಡೆ ಮೂಡಲಮನೆ ‘ಷಟ್ಪದಿಯಲ್ಲಿ ಭಗವದ್ಗಿತೆ’ ಹಾಗೂ ಪ್ರತಿ ಸೋಮವಾರ ನಂದೀಶ್ ಪಿ.ಕೆ ಅವರಿಂದ ‘ಕುವೆಂಪು ರಾಮಾಯಣ ದರ್ಶನಂ’ ಎನ್ನುವ ಸರಣಿ ಆರಂಭವಾಗಿದೆ. ಇದರೊಂದಿಗೆ ನಾಡಹಬ್ಬ ದಸರಾ ನಿಮಿತ್ತ ಡಾ.ಮೈಸೂರು ನಾಗರಾಜ ಶರ್ಮಾ ‘ಮೈಸೂರು ದಸರಾ ಎಷ್ಟೊಂದು ಸುಂದರ’ ಎನ್ನುವ ಸರಣಿಯನ್ನು ಆರಂಭಿಸಲಾಗಿದೆ.

ಇದನ್ನೂ ಓದಿ: Vishweshwar Bhat Column: ಇಂದಿರಾ ನಿವೃತ್ತಿ ಚಿಂತನೆ