Tuesday, 22nd October 2024

ನಿರಾಶ್ರಿತರಿಗೆ ಆಸರೆಯಾಗಬಲ್ಲ ವಸುದೈವ ಕುಟುಂಬಕಂ ಚಿಂತನೆ

ವಿಶ್ಲೇಷಣೆ

ಸುರೇಂದ್ರ ಪೈ

ಭೂಮಿ ಉಗಮವಾಗಿ ಕೋಟ್ಯಾಂತರ ವರ್ಷಗಳ ಬಳಿಕ ಸಸ್ಯ ಪ್ರಪಂಚ, ಪ್ರಾಣಿ ಪ್ರಪಂಚ ಸೃಷ್ಟಿಯಾಯಿತು. ಇವುಗಳಲ್ಲಿ ಮಾನವನ ಹೊರತಾಗಿ ಉಳಿದೆ ಲ್ಲವೂ ಪ್ರಕೃತಿಯ ನಿಯಮಗಳಿಗೆ ತಕ್ಕಂತೆ ಸಾಮರಸ್ಯ ಜೀವನವನ್ನು ನಡೆಸಿಕೊಂಡು ಹೋಗುತ್ತಿದೆ. ಜೀವನಕ್ಕೆ ಮೂಲಭೂತ ಅವಶ್ಯಕತೆಯಾದ ಗಾಳಿ, ನೀರು, ವಸತಿ, ಬಟ್ಟೆ, ಆಹಾರ ಮುಂತಾದವು ಪ್ರಮುಖವಾದವು. ಆದರೆ ಮಾನವ ತನ್ನ ಸ್ವಾರ್ಥ ಸಾಧನೆ, ವಿಸ್ತರಣಾ ನೀತಿ, ಸಾರ್ವಭೌಮತ್ವದ
ಕಲ್ಪನೆಯೊಂದಿಗೆ ನಿರಂತರ ಯುದ್ಧ, ಕಲಹದಿಂದಾಗಿ ತನ್ನ ನೆಲದ ಜನರ ಮೇಲೆ ದೌರ್ಜನ್ಯ ನಡೆಸಿ ಅವರನ್ನು ಒತ್ತಾಯಪೂರ್ವಕವಾಗಿ ತನ್ನ ಮೂಲ ನೆಲೆಯನ್ನು ಬಿಟ್ಟು ಹೋಗುವಂತೆ ಮಾಡಿ ನಿರಾಶ್ರಿತ, ನಿರ್ಗತಿಕರನ್ನಾಗಿ ಮಾಡಿದ್ದಾನೆ.

ಕೆಲದಿನಗಳ ಹಿಂದೆ ವಿಶ್ವ ನಿರಾಶ್ರಿತರ ದಿನವನ್ನು ಆಚರಿಸಲಾಯಿತು. ಇದನ್ನು ನೋಡಿದಾಗ ಇಂತಹ ದಿನಗಳ ಆಚರಣೆ ಮಾಡಬೇಕಾದ ಪರಿಸ್ಥಿತಿ ಬಂತಲ್ಲ ಎಂದೆನಿಸಿತು. ಕಾರಣ ನಮ್ಮ ನೆಲೆ, ಜಲ, ಸಂಸ್ಕೃತಿಯ ಅಂಗವಾದ ಜನರನ್ನು ತಾವೇ ಹೊಡೆದೊಡಿಸಿ ಅವರ ಬದುಕಿನ ನೆಲೆಯನ್ನು ಕಿತ್ತು ಕೊಂಡು ನಿರಾಶ್ರಿತರನ್ನಾಗಿ ಮಾಡಿ, ಈಗ ಮತ್ತೆ ಅವರಿಗಾಗಿ ಕೊರಗಿದರೆ ಏನು ಪ್ರಯೋಜನ ಹೇಳಿ. ಪ್ರಪಂಚದಾದ್ಯಂತ ಇರುವ ೮೦೦ ಕೋಟಿ ಜನರಲ್ಲಿ ೧೩೫ ಮಿಲಿಯನ್ ಜನರನ್ನು ನಿರಾಶ್ರಿತರನ್ನಾಗಿ ಮಾಡಿದ್ದು ಅನ್ಯ ಗ್ರಹ ಜೀವಿಯಾಗಲಿ, ಬೇರೆ ಪ್ರಾಣಿ ಸಂಕುಲವಾಗಲಿ ಅಲ್ಲ ತಾನೇ.

ಬಹುತೇಕ ಜನರಿಗೆ ನಿರಾಶ್ರಿತರೆಂಬ ಕಲ್ಪನೆ ಎಲ್ಲಿಂದ ಮೊಳಕೆಯೊಡೆದು ಚಿಗುರಿ, ಮಹಾ ವೃಕ್ಷಗಳಂತೆ ಬೆಳೆದವು ಎಂದು ತಿಳಿದುಕೊಳ್ಳುವ ಕುತೂಹಲ ವಿದೆ. ಇದಕ್ಕೆ ಉತ್ತರ ಕಂಡುಕೊಳ್ಳಲು ಇತಿಹಾಸದ ಪುಟಗಳನ್ನೊಮ್ಮೆ ಮೆಲ್ಲನೆ ತಿರುವಿ ಹಾಕಬೇಕಾಗುತ್ತದೆ. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಘೋಷ ವಾಕ್ಯ ಹೊಂದಿದ ೧೮ನೇ ಶತಮಾನದ – ಕ್ರಾಂತಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಏಕೆಂದರೆ ಅದು ರಾಜಪ್ರಭುತ್ವ ಹೊಡೆದೊಡಿಸಿ ಗಣ
ರಾಜ್ಯ ಸ್ಥಾಪಿಸಿದ ಕ್ರಾಂತಿ ಅದು. ಅಷ್ಟೇ ಅಲ್ಲದೇ ಈ ಕ್ರಾಂತಿಯಿಂದ ಪ್ರಭಾವಿತಗೊಂಡು ಇನ್ನುಳಿದ ದೇಶಗಳು ಸಹ ನಿರಂಕುಶಾಧಿಕಾರವನ್ನು ಉರುಳಿಸಿ ಸ್ವಾತಂತ್ರ್ಯವನ್ನು ಪಡೆದುಕೊಂಡವು.

ಮಾನವ ಹಕ್ಕುಗಳ ರಕ್ಷಣೆಗಳ ಬಗ್ಗೆ ವಿಶೇಷ ಕಾಳಜಿ ತೋರುವ ಈ – ಕ್ರಾಂತಿಯ ಸಮಯದ ಪ್ರಪಂಚದ ಮೊಟ್ಟಮೊದಲ ನಿರಾಶ್ರಿತ ಸಮುದಾಯದ ಕಲ್ಪನೆ ಹುಟ್ಟಿಕೊಂಡಿದ್ದು ಎಂಬುದೇ ವಾಸ್ತವ.

– ನಲ್ಲಿ ‘ಹ್ಯೂಗೆನೋಟ’ (ಪ್ರೊಟೆಸ್ಟಂಟ್‌ಗಳ ಧಾರ್ಮಿಕ ಗುಂಪು) ಫ್ರೆಂಚ್ ಜನಸಂಖ್ಯೆಯ ಶೇ.೧೦ ರಷ್ಟಿತ್ತು, ೧೪ನೇ ಲೂಯಿಸ್ ರಾಜನ ಆಳ್ವಿಕೆಯ ಸಮಯ
ದಲ್ಲಿ ಧಾರ್ಮಿಕ ದೃಷ್ಟಿಕೋನಗಳಿಂದಾಗಿ ಉಂಟಾದ ದಬ್ಬಾಳಿಕೆಯಿಂದ -ಂಟೈನ್ ಬ್ಲೂ ಶಾಸನದ ಮೂಲಕ ೧೬೮೫ ರಲ್ಲಿ, – ಪ್ರೊಟೆಸ್ಟಂಟ್ ಧರ್ಮ ವನ್ನು ಕಾನೂನು ಬಾಹಿರಗೊಳಿಸಿತು. ಐವತ್ತು ಸಾವಿರಕ್ಕೂ ಹೆಚ್ಚು ಪ್ರೊಟೆಸ್ಟಂಟ್ ರನ್ನು ದೇಶದಿಂದ ಪಲಾಯನ ಮಾಡಿದರು. ಅದಿನಿಂದ ಪ್ರಾರಂಭ ವಾದ ‘ನಿರಾಶ್ರಿತರ ಸಮಸ್ಯೆ’ ಇಂದಿಗೂ ಪ್ರಸ್ತುತ ಎನಿಸಿಕೊಂಡಿದೆ.

೧೮ ರಿಂದ ೧೯ ನೇ ಶತಮಾನದಲ್ಲಿ ವಿವಿಧ ದೇಶಗಳಲ್ಲಿ ಕಂಡು ಬರುವ ನಿರಾಶ್ರಿತರ ಬಗ್ಗೆ ಅವಲೋಕನ ಮಾಡುವುದಾದರೆ ೧೭೭೦ ರ ದಶಕದಲ್ಲಿ ನಡೆದ ಅಮೆರಿಕ ಕ್ರಾಂತಿಯ ಸಮಯದಲ್ಲಿ ‘ಕ್ವೇಕರ್’ಗಳು, ಬ್ಲ್ಯಾಕ್ ಲಾಯಲಿಸ್ಟ್‌ಗಳು, ೧೯೭೩ ಮತ್ತು ೧೯೭೮ ರ ನಡುವೆ, ಜನರಲ್ ಪಿನೋಚೆಟ್ ಅವರ ಸರ್ವಾಧಿಕಾರಿ ಆಡಳಿತದಿಂದ ತಪ್ಪಿಸಿಕೊಳ್ಳಲು ಸುಮಾರು ೧೩,೦೦೦ ಚಿಲಿಯ ಜನರು, ರಷ್ಯಾ, ಪರ್ಷಿಯಾ ಮತ್ತು ಆಸ್ಟ್ರಿಯಾ ೧೭೯೩ ರಲ್ಲಿ ಪೋಲೆಂಡ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಸಾವಿರಾರು ಪೋಲಿಷ್‌ಗಳು, ೧೮೮೧ ರಿಂದ ೧೯೧೪ ರವರೆಗೆ ಪೂರ್ವ ಯುರೋಪ್‌ನಿಂದ ೨.೫ ಮಿಲಿಯನ್‌ ಗಿಂತಲೂ ಹೆಚ್ಚು ಯಹೂದಿಗಳು ನಿರಾಶ್ರಿತರಾಗಿದ್ದಾರೆ.

ದ್ವಿತೀಯ ವಿಶ್ವ ಸಮರದ ನಂತರ ಪೂರ್ವ ಯುರೋಪಿನಲ್ಲಿ ವಾಸಿಸುತ್ತಿದ್ದ ಸುಮಾರು ೧೧.೫ ಮಿಲಿಯನ್ ಜರ್ಮನ್ನರು ಹೊರಹಾಕಲ್ಪಟ್ಟರು. ೧೯೭೦ ರ ದಶಕದಲ್ಲಿ ಆಗ್ನೇಯ ಏಷ್ಯಾದಲ್ಲಿ ಪ್ರಾಕ್ಸಿ ಯುದ್ಧಗಳು ವಿಯೆಟ್ನಾಂ, ಕಾಂಬೋಡಿಯಾ ಮತ್ತು ಲಾವೋಸ್ನಿಂದ ಎರಡು ಮಿಲಿಯನ್ ಜನರು ನಿರಾಶ್ರಿತ ರಾದರು. ೨೦ ನೇ ಶತಮಾನದ ಆರಂಭದಲ್ಲಿ ಸೋವಿಯತ್ ಆಕ್ರಮಣದಿಂದ ೦೦,೦೦೦ ಜನರು ಉಕ್ರೇನಿಯರು, ೧೯೭೫ ರಲ್ಲಿ ನಡೆದ ಇಂಡೋಚೈನಾ ನಿರಾಶ್ರಿತರ ಬಿಕ್ಕಟ್ಟಿನಿಂದ ೬೭೫,೦೦೦ ನಿರಾಶ್ರಿತರು ವಿಯೆಟ್ನಾಂ ತೊರೆದರೆ, ೧೯೯೦ ರಲ್ಲಿ ಭೂತಾನ್ನಿಂದ ೧೦೦,೦೦೦ ಜನರು ನೇಪಾಳಕ್ಕೆ ಪಲಾಯನ
ಮಾಡಿದರು.

೧೯೯೮ ರಲ್ಲಿ ನಡೆದ ಕೊಸೊವೊ ಯುದ್ಧವು ೬೦೦,೦೦೦ ಜನರನ್ನು ನಿರಾಶ್ರಿತರನ್ನಾಗಿಸಿತು. ಇಷ್ಟೇ ಅಲ್ಲ ೨೦೦೦ ಅವಧಿಯಲ್ಲಿ ಮ್ಯಾನ್ಮಾರ್ ಘರ್ಷಣೆಗಳ ನಂತರ ಸುಮಾರು ೧.೫ ಮಿಲಿಯನ್ ಕರೆನ್ ನಿರಾಶ್ರಿತರು, ೨೦೦೯ ರಿಂದ ೨೦೧೫ ರ ನಡುವೆ ಯುಎಸ್ ನೇತೃತ್ವದ ಒಕ್ಕೂಟವು ಇರಾಕ್ ಅನ್ನು ಆಕ್ರಮಿಸಿ ದಾಗ ಎರಡು ಮಿಲಿಯನ್‌ಗಂತಲೂ ಹೆಚ್ಚು ಇರಾಕಿ ನಿರಾಶ್ರಿತರು, ೨೦೧೧ ರ ಸಿರಿಯಾದ ಅಂತರ್ಯುದ್ಧದ ಪರಿಣಾಮವಾಗಿ ೬.೪ ಮಿಲಿಯನ್ ಸಿರಿಯನ್ ನಿರಾಶ್ರಿತರು ತಮ್ಮ ನೆಲೆಯನ್ನು ಕಳೆದುಕೊಂಡರು.

ಇನ್ನೂ ಭಾರತದತ್ತ ಮುಖಮಾಡಿದ ನಿರಾಶ್ರಿತರ ಕಥೆ ನೋಡುವುದಾದರೆ, ೧೯೪೭ ರ ವಿಭಜನೆಯ ನಂತರ ೧೯೫೯ ರಲ್ಲಿ ಒಂದು ಲಕ್ಷ ಟಿಬೆಟಿಯನ್ ನಿರಾಶ್ರಿತರೊಂದಿಗೆ ದಲೈಲಾಮಾ ಬಂದರೆ, ೧೯೭೧ ರಲ್ಲಿ ಬಾಂಗ್ಲಾದೇಶ ವಿಮೋಚನಾ ಯುದ್ಧದ ಪರಿಣಾಮವಾಗಿ ೧೦ ಮಿಲಿಯನ್ ಬಾಂಗ್ಲಾ ನಿರಾಶ್ರಿತ ರು ಭಾರತಕ್ಕೆ ಬಂದಿzರೆ. ಇನ್ನೂ ೧೯೮೩ರಲ್ಲಿ ೧.೩೪ ಲಕ್ಷಕ್ಕೂ ಹೆಚ್ಚು ಶ್ರೀಲಂಕಾದ ತಮಿಳು ನಿರಾಶ್ರಿತರು, ೧೯೭೯ ರಲ್ಲಿ ಅಫ್ಘಾನ್ ನಿರಾಶ್ರಿತರು, ಮ್ಯಾನ್ಮಾರ್‌ನಿಂದ ೪೦,೦೦೦ ಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರು, ಚಿತ್ತಗಾಂಗ್ ನಿಂದ ೪೦ ಸಾವಿರಕ್ಕೂ ಹೆಚ್ಚು ಚಕ್ಮಾ ಮತ್ತು ಹೆಜಾಂಗ್ ನಿರಾಶ್ರಿತರು ಭಾರತದ ಈಶಾನ್ಯ ರಾಜ್ಯ, ದೆಹಲಿ, ತಮಿಳುನಾಡು, ಅರುಣಾಚಲ ಪ್ರದೇಶ ಮುಂತಾದ ರಾಜ್ಯಗಳಲ್ಲಿ ವಾಸವಾಗಿದ್ದಾರೆ.

ಕೇವಲ ಯುದ್ಧ ಹಾಗೂ ರಾಜಕೀಯ, ಆಂತರಿಕ ಕಲಹಗಳಿಂದ ಮಾತ್ರ ಜನರು ನಿರಾಶ್ರಿತರಾಗುತ್ತಾರೆಂದು ಭಾವಿಸುವಂತಿಲ್ಲ. ಭೂಕಂಪಗಳು, ಚಂಡ ಮಾರುತಗಳು ಮತ್ತು ಪ್ರವಾಹಗಳಂತಹ ನೈಸರ್ಗಿಕ ವಿಕೋಪಗಳಿಂದಲೂ ಜನರು ನೆಲೆ ಕಳೆದುಕೊಳ್ಳುತ್ತಾರೆ. ಅಂತವರನ್ನು ಪ್ರಾಕೃತಿಕ ನಿರಾಶ್ರಿತರು ಎಂದು ಕರೆಯಲಾಗುತ್ತದೆ. ಜನವರಿ ೨೦೧೦ ರಲ್ಲಿ, ೭.೦ ತೀವ್ರತೆಯ ಭೂಕಂಪವು ಹೈಟಿಯ ರಾಜಧಾನಿ ಪೋರ್ಟ್-ಔ-ಪ್ರಿ ಅನ್ನು ಧ್ವಂಸಗೊಳಿಸಿದಾಗ ಸಾವಿರಾರು ಜನರು ನಿರಾಶ್ರಿತರಾದರು. ೧೯೯೦ ರ ದಶಕದಲ್ಲಿ ಅಣೆಕಟ್ಟು ನಿರ್ಮಾಣ ಯೋಜನೆಗಳಿಂದ ೧೦೦ ಮಿಲಿಯನ್ ಜನರು ಸ್ಥಳಾಂತರಗೊಂಡಿ ದ್ದಾರೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ.

ಉದಾಹರಣೆಗೆ ಚೀನಾದಲ್ಲಿ ಬೃಹತ್ ತ್ರೀ ಗಾರ್ಜಸ್ ಅಣೆಕಟ್ಟಿನ ನಿರ್ಮಾಣದ ಸಮಯದಲ್ಲಿ ಪ್ರವಾಹದ ಭೀತಿಯಿಂದ ೩೧ ಮಿಲಿಯನ್ ಜನರು ಸ್ಥಳಾಂತಗೊಂಡರು. ೧೯೮೬ ರಲ್ಲಿ, ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ ದುರಂತದಿಂದ ೩೫೦,೦೦೦ ಕ್ಕೂ ಹೆಚ್ಚು ಜನರನ್ನು ಶಾಶ್ವತವಾಗಿ ಸ್ಥಳಾಂತರಿಸ ಬೇಕಾಯಿತು. ಐಡಿಎಮ್ಸಿ ವರದಿಯ ಪ್ರಕಾರ ೨೦೦೩ ಡಿಸೆಂಬರ್ ೩೧ ರಂತೆ, ೨೬.೪ ಪ್ರತಿಶತ ಜನರು ಆಂತರಿಕ ವಿಪತ್ತಿನಿಂದ ಸ್ಥಳಾಂತರಗೊಂಡಿದ್ದಾರೆ. ಇದರಲ್ಲಿ ೭೭ ಪ್ರತಿಶತ ಹವಮಾನ ಸಂಬಂಧಿತ ಅಪಾಯಗಳಾದ ಬಿರುಗಾಳಿಗಳು,
ಪ್ರವಾಹಗಳು, ಮತ್ತು ಅನಾವೃಷ್ಟಿಗಳ ಪರಿಣಾಮವಾಗಿದೆ.

ಇವುಗಳಲ್ಲಿ ಸುಮಾರು ಕಾಲು ಭಾಗದಷ್ಟು ಭೂಕಂಪಗಳು, ವಿಶೇಷವಾಗಿ ಟರ್ಕಿ, ಸಿರಿಯಾ, ಫಿಲಿಪೈ, ಅಫ್ಘಾನಿಸ್ತಾನ ಮತ್ತು ಮೊರೆಕೊದಲ್ಲಿ ಸಂಭವಿಸಿದೆ.
ಒಂದಿಂದು ಕಾರಣದಿಂದ ನಿರಾಶ್ರಿತರಾಗುತ್ತಿರುವ ಸಮುದಾಯದ ಜನರಿಗೆ ಆಶ್ರಯ ನೀಡುವ ಉದ್ದೇಶದಿಂದ, ೧೯೪೯ ರಲ್ಲಿ ಯುನೈಟೆಡ್ ನೇಷ ಜನರಲ್ ಅಸೆಂಬ್ಲಿಯಲ್ಲಿ ರೆಸಲ್ಯೂಶನ್ ಹೊರಡಿಸುವ ಮೂಲಕ ಯುನೈಟೆಡ್ ನೇಷ ಹೈ ಕಮಿಷನರ್ ಫಾರ್ ರೆಫ್ಯೂಜಿಸ್ (ಯುಎನ್‌ಹೆಚ್‌ಸಿಆರ್) ಸ್ಥಾಪಿತ ವಾದರೂ, ಸಹ ರಾಷ್ಟ್ರಗಳ ವಿಸ್ತರಣಾ ನೀತಿ, ದಬ್ಬಾಳಿಕೆ, ಯುದ್ಧಕ್ಕೆ ಕಡಿವಾಣ ಹಾಕಲಾಗಲಿಲ್ಲ, ದಿನೇ ದಿನೇ ನಿರಾಶ್ರಿತರ ಸಂಖ್ಯೆ ಮಾತ್ರ ಹೆಚ್ಚುತ್ತಿದೆ.

ಯುಎನ್‌ಎಚ್‌ಸಿಆರ್‌ನ ೨೦೨೩ ರ ವರೆಗಿನ ವರದಿಯಂತೆ ನಿರಾಶ್ರಿತರ ಪ್ರಮುಖ ಐದು ದೇಶಗಳಲ್ಲಿ, ಸಿರಿಯಾ (೬.೫ ಮಿಲಿಯನ್), ಅಫ್ಘಾನಿಸ್ತಾನ್ (೬.೧
ಮಿಲಿಯನ್), ಉಕ್ರೇನ್ (೬ ಮಿಲಿಯನ್), ವೆನೆಜುವೆಲಾ (೫.೬ ಮಿಲಿಯನ್) ಮತ್ತು ದಕ್ಷಿಣ ಸುಡಾನ್ (೨.೨ ಮಿಲಿಯನ್) ಇದೆ. ಇಷ್ಟೇ ನಿರಾಶ್ರಿತರು ಪ್ರತಿನಿತ್ಯ ಮಾನವ ಕಳ್ಳಸಾಗಣೆ, ಶಿಕ್ಷಣ, ಆರೋಗ್ಯ, ಉದ್ಯೋಗ, ಆಹಾರ, ಶಾಶ್ವತ ನೆಲೆಯಿಲ್ಲದೆ, ಮೂಲಭೂತ ಹಕ್ಕುಗಳಿಂದ ವಂಚಿತರಾಗಿ ಯಾವುದೋ ದೇಶದ ನೆಲದ ನಿರಾಶ್ರಿತರ ಶಿಬಿರದಲ್ಲಿ ಹೀನಾಯ ಬದುಕನ್ನು ಸಾಗಿಸುತ್ತಿದ್ದಾರೆ.

ಇನ್ನೂ ರಾಷ್ಟ್ರೀಯ ಭದ್ರತೆ ಹಾಗೂ ಪ್ರಸ್ತುತ ಜನಸಂಖ್ಯೆ, ಆರ್ಥಿಕತೆ, ಆಂತರಿಕ ಕಲಹ, ಆಹಾರದ ಅಭಾವ, ಅಂತಾರಾಷ್ಟ್ರೀಯ ಒಪ್ಪಂದಗಳ ಕಾರಣ ದಿಂದಾಗಿ ಯಾವ ದೇಶವು ಸಹ ಇಂತಹ ನಿರಾಶ್ರಿತರನ್ನು ತನ್ನ ಪ್ರಜೆಗಳೆಂದು ಒಪ್ಪಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಆದಾಗ್ಯೂ ಭಾರತವು ಯುಎನ್‌ಎಚ್‌ಸಿಆರ್‌ನ ೧೯೫೧ ರ ಒಪ್ಪಂದಕ್ಕೆ ಸಹಿ ಹಾಕದಿದ್ದರೂ ತನ್ನ ವಸುದೈವ ಕುಟುಂಬಕಂ ಎಂಬ ಚಿಂತನೆಯಿಂದ, ನೆಲೆಯನ್ನು ಹುಡುಕಿ ಕೊಂಡು ಬಂದ ಎಲ್ಲಾ ನಿರಾಶ್ರಿತರಿಗೂ ನೆಲೆಯನ್ನು ನೀಡಿದೆ. ಇದರ ಪರಿಣಾಮವಾಗಿ ಚೀನಾ ೧೯೬೧ ರಲ್ಲಿ ಟಿಬೆಟಿಯನ್ ನಿರಾಶ್ರಿತರ ವಿಷಯದಲ್ಲಿ ೧೯೬೧ ರಲ್ಲಿ ಚೀನಾದೊಂದಿಗೆ ಯುದ್ಧ ಎದುರಿಸಬೇಕಾಯಿತು.

ಶ್ರೀಲಂಕಾದ ತಮಿಳು ನಿರಾಶ್ರಿತರ ವಿಷಯದಲ್ಲಿ ಭಾರತದ ಒಳಗೊಳ್ಳುವಿಕೆಯು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಗೆ ಕಾರಣವಾಯಿತು. ಇದಲ್ಲದೆ ಅಸ್ಸಾಂ, ತ್ರಿಪುರಾ ಮತ್ತು ಮಣಿಪುರದಂತಹ ಹಲವಾರು ಈಶಾನ್ಯ ರಾಜ್ಯಗಳಲ್ಲಿ ಬಾಂಗ್ಲಾ ನಿರಾಶ್ರಿತರ ನಿರಂತರ ಹರಿವು ಆ ಪ್ರದೇಶದ ಸಾಮಾಜಿಕ ಜನಸಂಖ್ಯಾಶಾಸ್ತ್ರದಲ್ಲಿ ಬದಲಾವಣೆಗೆ ಕಾರಣವಾಗಿ ತಮ್ಮ ತಾಯ್ನಾಡಿನ ಸ್ಥಳೀಯರನ್ನು ಅಲ್ಪಸಂಖ್ಯಾತರನ್ನಾಗಿ ಮಾಡಿದೆ ಎಂದು
ಆರೋಪಿಸಿ ೨೦೧೨ ರಂದು ಅಸ್ಸಾಂನಲ್ಲಿ ಕೊಕ್ರಜಾರ್ ಗಲಭೆಯಿಂದ ೮೦ ಕ್ಕೂ ಹೆಚ್ಚು ಜನರ ಸಾವನ್ನಪ್ಪಿದರು.

ಕೊನೆಯದಾಗಿ ಒಮ್ಮೆ ಯೋಚಿಸಿ ಮಾನವ ಜನಾಂಗದ ವಿರುದ್ಧ ಈ ಮೊದಲೇ ಅಸ್ತಿತ್ವದಲ್ಲಿದ್ದ ಪ್ರಾಣಿ ಪ್ರಭೇದಗಳು ಏನಾದರೂ ಯುದ್ಧ ಸಾರಿದ್ದರೆ, ಮಾನವ ಜನಾಂಗವೇ ಇಂದು ಇರುತ್ತಿರಲಿಲ್ಲ ಅಲ್ಲವೇ? ನಮಗೆ ವಿವೇಚನೆ ಇದೆ ಎಂದ ಮಾತ್ರಕ್ಕೆ ಆಕ್ರಮಣಶೀಲ ಪ್ರವೃತ್ತಿಯನ್ನು ಅನುಸರಿಸಿ ದ್ವೇಷ ಭಾವ ಭೀತ್ತಿ, ನಾವು ನಾವೇ ಹೊಡೆದಾಡಿ ಸಾಯಬೇಕೇ? ತಮ್ಮವರ ತಲೆಯ ಮೇಲಿರುವ ಸೂರನ್ನು ನಾಶ ಮಾಡಿ ಅವರನ್ನು ಗಡಿಪಾರು ಮಾಡಿ, ತಮ್ಮ ಮೇಲಿನ ಬಾರವನ್ನು ಬೇರೊಬ್ಬರ ಮೇಲೆ ಹಾಕಿ ನಾವು ಜಗತ್ತಿನ ಅಭಿವೃದ್ಧಿ ಹೊಂದಿದ ದೇಶ ಎಂಬ ಹೆಗ್ಗಳಿಕೆ ಪಡೆಯುವುದು ಸರಿಯೇ ಎಂದು ಯೋಚಿಸ ಬೇಕಿದೆ. ನಿರಾಶ್ರಿತರನ್ನು ಅನುಕಂಪದ ಮೇಲೋ ಇನ್ಯಾವುದೋ ನೆಲೆಯ ಮೇಲೆ ಆಶ್ರಯ ನೀಡುತ್ತಿರುವ ದೇಶಗಳು ಅವರನ್ನು ‘ಕೀ ಕೊಟ್ಟ ಗೊಂಬೆ’ ಯಂತೆ ತಮ್ಮ ಸ್ವಾರ್ಥ ಸಾಧನೆಗಾಗಿ ಗುಲಾಮರಂತೆ ತಮ್ನ ದೇಶದ ಗಡಿ ರಕ್ಷಣೆ, ಗಣಿಗಾರಿಕೆ ಇನ್ನಿತರ ಕೆಲಸಗಳಿಗಾಗಿ ದುಡಿಸಿಕೊಳ್ಳುವುದು ಯಾವ ನ್ಯಾಯ? ವಸುದೈವ ಕುಟುಂಬಕಂ, ಸರ್ವೇ ಜನ ಸುಖಿನೋ ಭವಂತು ಎಂಬ ವಿಶ್ವವಾಣಿಯನ್ನು ಅನುಸರಿಸಿ ನಿರಾಶ್ರಿತ ಸಮಸ್ಯೆಯೊಂದಿಗೆ ಇತರ ಎಲ್ಲಾ ಸಮಸ್ಯೆಗೂ ಮುಕ್ತಿ ನೀಡಿ ಈ ವಸುಂಧರೆಯೂ ಸಂತಸಪಡುವ ಹಾಗೇ ನಾವು ಮಾಡಬೇಕಲ್ಲವೇ?

(ಲೇಖಕರು: ಹವ್ಯಾಸಿ ಬರಹಗಾರರು)