ಬೆಂಗಳೂರು: ಮನೆ ಬಾಡಿಗೆ ವಿಚಾರವಾಗಿ ಮನೆ ಮಾಲೀಕ ಮತ್ತು ಬಾಡಿಗೆದಾರ ಬಡಿದಾಡಿಕೊಂಡ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಪ್ರಕರಣ ಈಗ ಆರ್. ಟಿ. ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಹೆಚ್.ಎಂ.ಟಿ. ಲೇಔಟ್ನಲ್ಲಿ ಮನೆ ಮಾಲೀಕ ಮೊಹಮದ್ ಇಲಿಯಾಸ್ ಮತ್ತು ಬಾಡಿಗೆದಾರ ಮೊಹಮ್ಮದ್ ನಾದ್ವಿ ನಡುವೆ ಜಗಳ ನಡೆದಿದೆ. ಮನೆ ಬಾಡಿಗೆ ಕೊಡುವ ವಿಚಾರ, ಖಾಲಿ ಮಾಡುವ ವಿಚಾರದಲ್ಲಿ ಬಡಿದಾಡಿಕೊಂಡಿದ್ದಾರೆ.
ಮೊಹಮ್ಮದ್ ನಾದ್ವಿ ನಾಲ್ಕು ವರ್ಷಗಳಿಂದ ಬಾಡಿಗೆಗೆ ಇದ್ದಾರೆ. ಕೋವಿಡ್ ಲಾಕ್ ಡೌನ್ ಪರಿಣಾಮ ನಾದ್ವಿ ಕೆಲಸಕ್ಕೆ ಹೋಗ ಲಾಗದೆ ಬಾಡಿಗೆ ಕಟ್ಟಿರಲಿಲ್ಲ. ಆದರೆ ಇಲಿಯಾಸ್ ಬಾಡಿಗೆ ಕೊಡುವಂತೆ ಪೀಡಿಸುತ್ತಿದ್ದ.
ಬಾಡಿಗೆ ಕೊಡು ಇಲ್ಲವೇ ಮನೆ ಖಾಲಿ ಮಾಡು ಎಂದು ಇಲಿಯಾಸ್ ಗಲಾಟೆ ಮಾಡಿದ್ದಾನೆ. ಮೊಹಮ್ಮದ್ ನಾದ್ವಿ ಕೋರ್ಟ್ಗೆ ಹೋಗುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಆಗ ಇಲಿಯಾಸ್ ಹಲ್ಲೆ ಮಾಡಿದ್ದಾನೆ. ಸ್ಥಳೀಯರು ಈ ಕುರಿತು ಆರ್. ಟಿ. ನಗರ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಇಬ್ಬರನ್ನು ಪೊಲೀಸರು ಕರೆದುಕೊಂಡು ಹೋದರು.