Friday, 25th October 2024

ಮಧುಮೇಹ ನಿಯಂತ್ರಣಕ್ಕೆ ಯೋಗ ಮೆಲ್ಲಿಟಸ್‌

ಬೇದ್ರೆ ಮಂಜುನಾಥ

ಇಂದು ವಿಶ್ವ ಮಧುಮೇಹ ದಿನ. ಮುಖ್ಯವಾಗಿ ಜೀವನಶೈಲಿ ಮತ್ತು ಆಹಾರದ ಏರುಪೇರಿನಿಂದ ಆರಂಭವಾಗುವ ಮಧುಮೇಹ ಸಮಸ್ಯೆಯನ್ನು ನಿಯಂತ್ರಣ ದಲ್ಲಿಡಲು ಯೋಗಾಭ್ಯಾಸದಿಂದ ಸಾಧ್ಯ ಎನ್ನುತ್ತಾರೆ ಮೈಸೂರಿನ ಯೋಗಾ ಚಾರ್ಯ ನಾರಾಯಣ ಸ್ವಾಮೀಜಿ.

ಚರಕ ಸಂಹಿತೆ, ಶುಶ್ರುತ ಸಂಹಿತೆ, ಅಷ್ಟಾಂಗ ಹೃದಯ ಸಂಹಿತೆ ಮೊದಲಾದ ಭಾರತೀಯ ವೈದ್ಯಗ್ರಂಥಗಳಲ್ಲಿ ವಿವರಿಸಲಾಗಿರುವ ಪ್ರಮೇಹ ಎಂಬ ಅಧಿಕ ಮೂತ್ರ ಸ್ರಾವದ ಸೋಂಕಿ ನ ಇಪ್ಪತ್ತೊಂದು ವಿಧಗಳಲ್ಲಿ ಜೇನಿನ ರೂಪದಲ್ಲಿ ಮಂದವಾಗಿ ಹರಿವ ಮೂತ್ರವ್ಯಾಧಿ ಮಧುಮೇಹ ಹಾಗೂ ಕಬ್ಬಿನ ರಸದಂತೆ ಹರಿವ ಮೂತ್ರವ್ಯಾಧಿ ಇಕ್ಷುಮೇಹ ಗಳು ಆಧುನಿಕ ‘ಡಯಾಬಿಟಿಸ್ ಮೆಲ್ಲಿಟಸ್’ ರೋಗವನ್ನು ಸೂಚಿಸುತ್ತವೆ.

ಪ್ರಸ್ತುತ ಮಧುಮೇಹ ಎಂದೇ ಜನಜನಿತವಾಗಿರುವ ಈ ವ್ಯಾಧಿಗೆ ನೂರಾರು ರೀತಿಯ ಚಿಕಿತ್ಸೆಗಳು ಲಭ್ಯವಿದ್ದು ಅವುಗಳಲ್ಲಿ ಅತ್ಯಂತ ಸರಳ, ಸುಲಭ ಹಾಗೂ ಖರ್ಚಿಲ್ಲದ ರೋಗನಿಧಾನ ‘ಯೋಗ ಮೆಲ್ಲಿಟಸ್’ ಎಂಬ ವಿಶೇಷ ಯೋಗ ಚಿಕಿತ್ಸೆ,’ ಎನ್ನುತ್ತಾರೆ ಈ ಹೊಸ ಯೋಗ ಚಿಕಿತ್ಸೆಯ ರೂವಾರಿಗಳಾದ ಮೈಸೂರಿನ ಗುರುಕುಲ ಯೋಗಾಶ್ರಮದ ಯೋಗಾಚಾರ್ಯ ನಾರಾಯಣ
ಸ್ವಾಮೀಜಿ ಯವರು.

ಮೈಸೂರಿನ ಬೋಗಾಧಿಯಲ್ಲಿರುವ ಗುರುಕುಲ ಯೋಗಾಶ್ರಮ, ಸಾಯಿ ಸರಸ್ವತಿ ವಿದ್ಯಾಕೇಂದ್ರ ಹಾಗೂ ಪಂಡಗವ್ಯ
ಆಯುರ್ವೇದ ರಿಸರ್ಚ್ ಸೆಂಟರ್ ಮುಖ್ಯಸ್ಥರಾಗಿದ್ದ ನಾರಾಯಣ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಈ ಪ್ರಯೋಗ ಯಶಸ್ವಿಯಾಗಿ ನಮ್ಮ ದೇಶದಲ್ಲಷ್ಟೇ ಅಲ್ಲದೇ ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾ ಮೊದಲಾದ ದೇಶಗಳಲ್ಲಿ ಸಹಸ್ರಾರು ಮಧುಮೇಹಿಗಳಿಗೆ ನೆಮ್ಮದಿಯ ಬದುಕು ಕೊಟ್ಟಿದೆ. ಯೋಗ ಬೇಸಿಕ್ ಮತ್ತು ಯೋಗ ಮೆಲ್ಲಿಟಸ್ ಎಂಬ ಎರಡು ವೀಡಿಯೋ ಸಿ.ಡಿ.ಗಳು ಹಾಗೂ ಯೋಗದೀಪ ಎಂಬ ತಮ್ಮ ಪುಸ್ತಕದಲ್ಲಿ ಸ್ವಾಮೀಜಿಯವರು ಹೆಚ್ಚಿನ ಶ್ರಮವಿಲ್ಲದೇ ಮಧುಮೇಹವನ್ನು ಗೆಲ್ಲುವ ವಿಧಾನವನ್ನು ವಿವರಿಸಿದ್ದಾರೆ. ಕನ್ನಡದ ತವರುಮನೆಯಲ್ಲಿ ನಡೆಯುತ್ತಿರುವ ಈ ಪ್ರಯೋ ಗ ನಮ್ಮ ಜನರಿಗೆ ಅಪರಿಚಿತವಾಗಿಯೇ ಉಳಿದಿದೆ!

ಏನಿದು ಯೋಗ ಮೆಲ್ಲಿಟಸ್?
‘ನೂರಾರು ಯೋಗಾಸನಗಳಲ್ಲಿ ಮಧುಮೇಹವನ್ನು ಬಗ್ಗುಬಡಿಯುವ ಕೆಲವೇ ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನ ಗಳನ್ನೊಳಗೊಂಡಿರುವ ವಿಶಿಷ್ಟ ಯೋಗ ಮೆಲ್ಲಿಟಸ್ ಶಿಬಿರದಲ್ಲಿ ಭಾಗವಹಿಸಿ, ತರಬೇತಿ ಪಡೆದು, ನಿತ್ಯವೂ ಆಚರಣೆಗೆ ತಂದರೆ ಮಧುಮೇಹ ಸಮಸ್ಯೆಯನ್ನು ಖಂಡಿತಾ ನಿಯಂತ್ರಿಸಬಹುದು’ ಎನ್ನುತ್ತಾರೆ ಫಲಾನುಭವಿಗಳು.

ಮಧುಮೇಹವನ್ನು ಹತೋಟಿಯಲ್ಲಿಡಲು ಮೊದಲು ದೇಹವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಅದಕ್ಕಾಗಿ ಉಸಿರಾಟದ ನಿಯಂತ್ರಣದ ಜೊತೆ ಭುಜಂಗಾಸನ, ಶಲಭಾಸನ, ಧನುರಾಸನ, ಮೇರುದಂಡಾಸನ, ವಕ್ರಾಸನ, ಜಾನುಶೀರ್ಷಾಸನ,
ಪಶ್ಚಿಮಾಥಾನಾಸನ, ಪರ್ಯಂಕಾಸನ, ಉಷ್ಟ್ರಾಸನ ಮತ್ತು ಶಶಾಂಕಾಸನಗಳನ್ನು ನಿಯಮಿತವಾಗಿ ಗುರುಮುಖೇನ ಕಲಿತು
ಅಭ್ಯಾಸಮಾಡಬೇಕು.

ಇದರ ಜೊತೆಗೆ ಶಶ ಪ್ರಾಣಾಯಾಮ, ಭಸಿಕಾ ಪ್ರಾಣಾಯಾಮ, ಭ್ರಾಮರಿ ಪ್ರಾಣಾಯಾಮ ಹಾಗೂ ನಾಡಿ ಶುದ್ಧಿ ಪ್ರಾಣಾಯಾಮ ಗಳನ್ನು ತಪ್ಪದೇ ಮಾಡುವುದರಿಂದ ದೇಹ ಮತ್ತು ಮನಸ್ಸು ಪ್ರಫುಲ್ಲಿತವಾಗಿದ್ದು ರೋಗವನ್ನು ಹೊಡೆದೋಡಿಸಲು ಶಕ್ತವಾಗು ತ್ತವೆ. ಜ್ಯೋತಿಧ್ಯಾ ನ ಮತ್ತು ಮಂತ್ರೋಚ್ಚಾರಣೆ ಮನಸ್ಸನ್ನು ಶಾಂತ ಸ್ಥಿತಿಗೆ ತಂದು ಹೊಸ ಹುರುಪು ನೀಡುತ್ತವೆ.

ಸಮತ್ವಂ ಯೋಗ ಉಚ್ಚತೇ ಎಂಬ ಗೀತಾವಾಕ್ಯದಂತೆ ಶರೀರ-ಮನೋ-ಬುದ್ಧಿ- ವಾಕ್ಕುಗಳನ್ನು ಸಮತ್ವದಲ್ಲಿ ಇಟ್ಟುಕೊಂಡು
ಆನಂದಮಯ ಜೀವನ ನಡೆಸುವುದೇ ಯೋಗ. ರೋಗಮುಕ್ತ ಜೀವನವನ್ನು ನಡೆಸಲು ಯೋಗ ಸಂಜೀವಿನಿ. ಯೋಗ ಮೆಲ್ಲಿಟಸ್ ಮಧುಮೇಹ ನಿವಾರಿಣಿ.

ವಿಶ್ವ ಮಧುಮೇಹ ದಿನ ನವೆಂಬರ್ ೧೪
ಮಧುಮೇಹ ಕುರಿತ ಜಾಗೃತಿಯನ್ನುಂಟುಮಾಡಲು ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದಂತೆ ಪ್ರತಿ ವರ್ಷ ನವೆಂಬರ್ ೧೪ ರಂದು ವಿಶ್ವ ಮಧುಮೇಹ ದಿನವನ್ನು ೨೦೦೬ ರಿಂದ ಆಚರಿಸ ಲಾಗುತ್ತಿದೆ. ಚಾರ್ಲ್ಸ್ ಬೆಸ್ಟ್ ಮತ್ತು ಜಾನ್ ಮೆಕ್ಲಿಯಾಡ್ ಜೊತೆ ಸೇರಿ ೧೯೨೨ರಲ್ಲಿ ಡಯಾಬಿಟಿಸ್ ನಿಯಂತ್ರಣಕ್ಕೆ ಇನ್‌ಸುಲಿನ್ ಅನ್ನು ಔಷಧವನ್ನಾಗಿ ಬಳಸಬಹುದೆಂಬ ಸಂಶೋಧನೆಯನ್ನು ಪ್ರಕಟಿಸಿದ ಫ್ರೆಡರಿಕ್ ಬ್ಯಾಂಟಿಂಗ್‌ನ ಜನ್ಮದಿನವಾದ ನವೆಂಬರ್ ೧೪ರಂದು ‘ವಿಶ್ವ ಮಧುಮೇಹ ದಿನ’ವನ್ನು ಆಚರಿಸಲಾಗುತ್ತಿದೆ. ಇನ್ ಸುಲಿನ್ ಔಷಧವಾಗಿ ಬಳಕೆಯಾಗಿ ಇಂದಿಗೆ ೧೦೦ ವರ್ಷಗಳಾಗುತ್ತಿವೆ.