Friday, 20th September 2024

ಭಗೀರಥನೊಬ್ಬನದೇ ಅಲ್ಲ, ಐದು ತಲೆಮಾರಿನ ಯತ್ನದ ಫಲ !

ಸುಪ್ತ ಸಾಗರ

rkbhadti@gmail.com

ಗಂಗೆಯ ಪೂರ್ವಸ್ವರೂಪ, ಸಮತಟ್ಟಾದ ಭೂಮಿಗೆ ಗಂಗೆಯನ್ನು ತರುವ ಅವಶ್ಯಕತೆಗಳನ್ನು ಮೊದಲೇ ಪರೀಕ್ಷಿಸಿ, ಭಗೀರ ಥಾದಿಗಳು ಮಾಡಿದ ಮಹಾಕಾರ್ಯವು ಭೂಗರ್ಭಶಾಸ್ತ್ರದ ಪ್ರಮಾಣೀಕರವು ಪೌರಾಣಿಕ ಕಥೆಗಳ ವೈಜ್ಞಾನಿಕ ಸತ್ಯವನ್ನು ಸಾಕ್ಷೀಕರಿಸುತ್ತವೆ. 2 ಸಾವಿರ ವರ್ಷಗಳಿಂದ ಈ ಪ್ರಕಲ್ಪ ಆರಂಭವಾಗುವವರೆಗೂ ಪೌರಾಣಿಕ ಕಥೆಗಳನ್ನೇ ಇತಿಹಾಸದ ಕಥೆಗಳೆಂದು ಭಾರತೀಯರು ನಂಬುತ್ತಿದ್ದರು.

ನಮ್ಮ ಗ್ರಾಮೀಣರು ಏನೇನೋ ವಿಚಿತ್ರ ಹಬ್ಬಗಳನ್ನು ಆಚರಿಸುತ್ತಾರೆ. ನಮ್ಮಲ್ಲಿ ದೇವರುಗಳ ಹುಟ್ಟಿದ ದಿನ (ರಾಮನವಮಿ, ಕೃಷ್ಣಾಷ್ಟಮಿ), ಯುದ್ಧ ಗೆದ್ದ ದಿನ(ವಿಜಯದಶಮಿ), ರಾಕ್ಷಸರನ್ನು ಕೊಂದ ದಿನ (ನರಕಚತುರ್ದಶಿ), ಮದುವೆಯಾದ ದಿನ (ತುಳಸಿ ವಿವಾಹ ನೆನಪಿಸಿಕೊಳ್ಳಿ), ಮನೆ ಬದಲಿಸಿದ ದಿನ(ಸಂಕ್ರಾಂತಿಗಳು)… ಹೀಗೆ ನಮ್ಮ ಜೀವನದಲ್ಲಿ ಯಾವೆಲ್ಲವು ವಿಶೇಷ ಇರುತ್ತದೋ, ಅವೆಲ್ಲವನ್ನೂ ದೇವರಿಗೆ ಆರೋಪಿಸಿ, ಅದಕ್ಕೊಂದು ದಿನ ಇಟ್ಟು ಹಬ್ಬ ಆಚರಿಸುತ್ತೇವೆ.

ಅಂಥ ಸಾಲಿಗೆ ನಿಶ್ಚಿತಾರ್ಥ, ಪ್ರಥಮ ರಾತ್ರಿ, ಋತುಶ್ರಾವಗಳಂಥವುಗಳೂ ಸೇರುತ್ತವೆ ಎಂದರೆ ಅಚ್ಚರಿಬೇಡ. ಹೌದು, ನಮ್ಮಂತೆ ದೇವರುಗಳಿಗೂ ಇವೆಲ್ಲ ಆಗುತ್ತವೆ ಎಂದು ನಂಬಿ, ಅದನ್ನೂ ಹಬ್ಬವೆಂದು ಆಚರಿಸುತ್ತೇವೆ. ಮೊನ್ನೆ ಮೊನ್ನೆ ಶಿವ-ಗಂಗೆಯರ (ಆಶ್ವಯುಜ ಕೃಷ್ಣ ಚತುರ್ದಶಿ-ಗಂಗಾ ಷ್ಟಮಿ) ನಿಶ್ಚಿತಾರ್ಥದ ದಿನವಿತ್ತು. ಇನ್ನೂ ವಿಶೇಷವೆಂದರೆ ಈಗ ಅಂದರೆ ಧನುರ್ಮಾಸದ ಹುಣ್ಣಿಮೆಗೆ ಮುನ್ನ ಮೂರು ದಿನ ಗಂಗೆಯ ಋತುರ್ಶರಾವದ ದಿನವಂತೆ!

ಉತ್ತರಾಖಂಡದ ಶ್ರೀನರ ಜಿಲ್ಲೆಯ ಸುತ್ತಮುತ್ತಲಿನ ಹಲವು ಹಳ್ಳಿಗಳ ಮಂದಿ ಈ ಮೂರು ದಿನ ಗಂಗೆಯನ್ನು ಮುಟ್ಟುವುದಿಲ್ಲ.
ಅದರಲ್ಲೂ ಅಗಸ್ತ್ಯಮುನಿ ಎಂಬ ಹಳ್ಳಿ(2013ರಲ್ಲಿ ಕೇದಾರದಲ್ಲಿ ಸಂಭವಿಸಿದ ಭಾರೀ ಮೇಘಸ್ಫೋದ ಬಳಿಕ ಉಂಟಾದ ಪ್ರವಾಹದಲ್ಲಿ ಈ ಹಳ್ಳಿ ಸಂಪೂರ್ಣ ಕೊಚ್ಚಿ ಹೋಗಿ ನಾಮಾವಶೇಷವಾಗಿತ್ತು)ಯ ಸಮೀಪದ ಬುಡಕಟ್ಟು ಸಮುದಾಯವೊಂದು ಇದನ್ನು ಅತ್ಯಂತ ಕಟ್ಟುನಿಟ್ಟಾಗಿ ಆಚರಿಸುತ್ತಿತ್ತು.

ಗಂಗೆ ಭೂಮಿಗೆ ಅವತರಿಸುವ ಸನ್ನಿವೇಶದಲ್ಲಿ ಋತುಶ್ರಾವ ಕಾಣಿಸಿಕೊಂಡು ಈ ಮೂರು ದಿನ ಅಲ್ಲಿಯೇ ಕುಳಿತುಬಿಟ್ಟಳಂತೆ. ಕೊನೆಗೆ ಅಗಸ್ತ್ಯ-ಲೋಪಮುದ್ರೆ ಋಷಿ ದಂಪತಿಯ ಆಶ್ರಮದಲ್ಲಿ ಐದನೇ ದಿನ ಪುಣ್ಯಸ್ನಾತಳಾಗಿ ಮುಂದಕ್ಕೆ ಹೊರಟಳು
ಎಂಬುದು ದಂತಕತೆ. ಪ್ರತಿ ವರ್ಷ ಈ ಮೂರು ದಿನಗಳು ಅಲ್ಲಿ ಗಂಗೆಯ ನೀರಿನ ಬಣ್ಣ ಋತುಸ್ರಾವದಿಂದಾಗಿ ಬದಲಾಗಿರುತ್ತ ದಂತೆ. ಇಂಥದ್ದೇ ನಂಬಿಕೆ ಅಸ್ಸಾಮ್‌ನ ಕಾಮಾಕ್ಯ ದೇವಿಯ ಬಗೆಗೂ ಇದೆ.

ಏನೇ ಇರಲಿ, ಗಂಗೆಯನ್ನು ಭೂಮಿಗೆ ತಂದದ್ದು ಭಗೀರಥ ಎಂಬ ಕಥೆಯನ್ನು ಕೇಳಿದ್ದೇವೆ. ಆದರೆ ನಿಜವಾಗಿ ಇಂಥ ಗಂಗೆ ತಪಸ್ಸಿಗೊಲಿದು ದೇವಲೋಕದಿಂದಿಳಿದವಳಲ್ಲ. ಐದು ತಲೆಮಾರುಗಳ ಸತತ ಪ್ರಯತ್ನದ ಫಲವಾಗಿ (ಇದು ಸಹ ಒಂದು ರೀತಿ ತಪಸ್ಸೇ ಸರಿ) ಗಂಗೆ ನದಿಯಾಗಿ ಹರಿದವಳು ಎನ್ನುತ್ತದೆ ಕುತೂಹಲಕರ ಸಂಶೋಧನೆ. ಗಂಗೆ ಋತು
ಮತಿಯಾತ್ತಾಳೋ, ನೀರಿನ ಬಣ್ಣ ಬದಲಾಗುತ್ತದೋ ಇಲ್ಲವೋ, ಅಂತೂ ನಾಗರಿಕತೆ ನದಿಯನ್ನು ಕುಲಗೆಡಿಸುತ್ತಿರುವ
ನಮ್ಮ ನಿರ್ಲಜ್ಜೆಯ ನಡುವೆ ಗಂಗಾವತರಣದ ಬಗೆಗಿನ ವಿಶೇಷ ಅಧ್ಯಯನವೊಂದರ ಗಮನ ಸೆಳೆಯುತ್ತದೆ.

ಗಂಗೆ ಎಂದೊಡನೆ ಹಿಂದೆಯೇ ತೆರಕೊಳ್ಳುವುದು ಗಂಗಾವತರಣದ ಕಥೆ. ಭಗೀರಥನ ಪ್ರಯತ್ನ. ಇದರಿಂದಲೇ ಭಾಗೀರಥೀ ಎಂದು ಪ್ರಸಿದ್ಧಳಾದ ಗಂಗೆಯು ಎಲ್ಲ ಲೋಕಗಳನ್ನು ದಾಟಿ ಬಂದು ಕೊನೆಗೆ ಶಿವನ ಜಟಾಜೂಟದಲ್ಲಿ ಸಿಲುಕಿದಳು. ಆಮೇಲೆ ಬಹಳ ಪ್ರಯತ್ನದಿಂದ ಅವಳು ಭೂಮಿಗೆ ತರಲ್ಪಟ್ಟಳೆಂಬುದು ಯಾರಿಗೆ ಗೊತ್ತಿಲ್ಲ? ಗಂಗೆಯನ್ನು ಭೂಲೋಕಕ್ಕೆ ತರಲು ಮಾಡಿದ ತಪಸ್ಸು ಮತ್ತು ನಂತರದ ಪ್ರಯತ್ನವೇ ಭಗೀರಥ ಪ್ರಯತ್ನ’ ಎಂದೇ ಪ್ರಸಿದ್ಧವಾಗಿದೆ. ಅಸಾಮಾನ್ಯ ಸಾಧನೆಯನ್ನು ಸೂಚಿಸಲೆಂದೇ ಸರ್ವ ಭಾರತೀಯರು ‘ಭಗೀರಥ ಪ್ರಯತ್ನ’ ಎಂಬ ಶಬ್ದವನ್ನೇ ಬಳಸುತ್ತಾರೆ.

ಈ ಪ್ರಯತ್ನ ಅತಿ ವಿಶಿಷ್ಟವಾದದ್ದು ಹೇಗೆ ಎಂದು ತಿಳಿಯುವಲ್ಲಿ ಅನೇಕ ವೈಜ್ಞಾನಿಕ ತಥ್ಯಗಳು ಮತ್ತು ಬಹಳ ಶೋಧ
ಲೇಖನಗಳಿವೆ. ನಮ್ಮ ಭಾರತೀಯರ ಹಿಂದಿನ ಸಭ್ಯತೆ ಮತ್ತು ಜ್ಞಾನವನ್ನು ಕುರಿತು ತಿಳಿಯಲು ತರ್ಕಪೂರ್ಣ, ವೈಜ್ಞಾನಿಕ, ಚೆನ್ನಾಗಿ ಹೊಂದಿಸಿದ ಸತತ ಪ್ರಯತ್ನಗಳು ಯಾವುವು ಆಗಿವೆಯೋ ಅವುಗಳಲ್ಲಿ ಸಮಕಾಲೀನ ಜೀವನ ವಿಷಯಕ್ಕೆ ಸಂಬಂಽಸಿದ ಅಧ್ಯಯನಗಳೂ ಸೇರುತ್ತವೆ.

ಇಲ್ಲಿ ಧಾರ್ಮಿಕ, ಪರಿಸರ ಅಥವಾ ಮಾಲಿನ್ಯ ದೃಷ್ಟಿಯಿಂದ ಗಂಗೆಯನ್ನು ನೋಡುತ್ತಿಲ್ಲ ಎಂಬುದನ್ನೂ ಗಮನಿಸೇಕು. ಭಗೀರಥನ ಪ್ರಯತ್ನದಿಂದ ಗಂಗೆಯು ಭೂಲೋಕಕ್ಕೆ ಬಂದಳು ಎಂದು ಪರಂಪರೆಯಿಂದ ಏನು ತಿಳಿದು ಬರುವುದೋ ಅದರ ಯಥಾರ್ಥ ಸ್ಪಷ್ಟೀಕರಣವೂ ಅಧ್ಯಯನದಲ್ಲಿದೆ. ಗಂಗಾವತರಣವೆಂದರೆ, ಸ್ಥಾಪತ್ಯ ತಂತ್ರಜ್ಞಾನದ ಮತ್ತು ನದೀ ತಂತ್ರಜ್ಞಾನದ ಪ್ರತ್ಯಕ್ಷ ಉದಾಹರಣೆ, ಬಹಳ ದೀರ್ಘಕಾಲೀನ ಪ್ರಯತ್ನಗಳು ಗಂಗಾ ಪ್ರವಾಹವನ್ನು ಸುಯೋಗ್ಯ ದಿಕ್ಕುಗಳಿಗೆ ತಲುಪಿಸಲು ನಡೆದವು. ಈ ವಿಚಾರದ ಪ್ರಮಾಣದ ಅನ್ವೇಷಣೆಯನ್ನೂ ಇಲ್ಲಿ ಮಾಡೋಣ.

ಪೂರ್ಣ ಕಥೆಗಳಲ್ಲಿ ದೊರೆಯುವ ಉಲ್ಲೇಗಳ ಮತ್ತು ಬಹಳ ಸರ್ವೇಕ್ಷಣೆಗಳ ಹಿನ್ನೆಲೆಯಂದು ಪ್ರಶ್ನೆ ಹುಟ್ಟುತ್ತದೆ. ಗಂಗೆ ಮಾನವ ನಿರ್ಮಿತವೇ? ಅಥವಾ ಅದೊಂದು ಅಚ್ಚರಿಯೇ? ಈ ವಿಷಯದ ಸ್ಚಷ್ಟತೆಗಾಗಿ ಮೂರು ಸ್ತರಗಳಲ್ಲಿ ಗಂಗೆಯನ್ನು ಪರೀಕ್ಷಿಸ ಲಾಯಿತು. ಆ ಸ್ತರಗಳು ೧) ಟಿಬೆಟ್‌ನಿಂದ ಬಿಂದು ಸರೋವರದವರೆಗೆ ೨) ಬಿಂದು ಸರೋವರದಿಂದ ಹರಿದ್ವಾರದವರೆಗೆ ೩) ಹರಿದ್ವಾರದಿಂದ ಸಮುದ್ರದವರೆಗೆ ಈ ಮೂರೂ ಸ್ತರಗಳಲ್ಲೂ ನಡೆದ ಎಂಜಿನಿಯರಿಂಗ್ ಅಧ್ಯಯನವೂ ಮೂರು ಸ್ತರದಗಿದ್ದದು ಗಮನಾರ್ಹ. ೧) ಗಂಗೆಯ ಅಚ್ಚರಿಗಳ ಆಗರ ೨) ನೂರಾರು ವರ್ಷಗಳ ಹಿಂದೆ, ಬೇರೆ ಬೇರೆ ನದಿಗಳ, ಹಿಮಾಲಯದಲ್ಲಿ ಇರುವ ನದಿಮೂಲಗಳ ಕುರಿತು ಅಧ್ಯಯನಾಸಕ್ತ ಬ್ರಿಟಿಷ್ ಜನರು ಸೂಕ್ಷ್ಮದೃಷ್ಟಿಯಿಂದ ಮಾಡಿದ ಸರ್ವೇಕ್ಷಣೆಗಳು. ೩) ಈಗ ಸಿಕ್ಕಿರುವ ಭೂಗರ್ಭಶಾಸ್ತ್ರದ ತತ್ವಗಳು ಮತ್ತು ಪಾರಂಪರಿಕ ಕೌಶಲಗಳು ಕ್ರಿ.ಶ. ವರ್ಷ ೧೭೦೦ರ ಉತ್ತರಾರ್ಧದಲ್ಲಿ, ಗಂಗೆಯ ಮೂಲದ ಕುರಿತು ಕುತೂಹಲಭರಿತರಾಗಿ ಬ್ರಿಟಿಷರು ಅನುಸಂಧಾನಕ್ಕೆ ಇಳಿಯುತ್ತಾರೆ.

ಹಾಗೆ ಹಿಮಾಲಯ ಪ್ರದೇಶದ ವಿಶಾಲ ಸರ್ವೇಕ್ಷಣೆ ಮಾಡಿದವರಲ್ಲಿ ಕಂಟನ್, ಹರ್ಬರ್ಟ್, ರೆನೆಲ, ವಿಲಿಯಂ ಮಿಕ್ರಕ್ಸ್ ಪ್ರಮುಖರು. ಇವರು ಮತ್ತು ಇನ್ನುಳಿದ ಸರ್ವೇಕ್ಷಕರು ತಮ್ಮ ಸಂಶೋಧನೆಗಳ ಕುರಿತು ಆ ಕಾಲದ ಶೋಧ ಪತ್ರಿಕೆಗಳಲ್ಲಿ
ಅಥವಾ ಪುಸ್ತಕಗಳಲ್ಲಿ ಪ್ರಕಟಿಸಿದರು. ಆ ಶೋಧ ಲೇಖನಗಳ ಪ್ರಕಾರ ಗಂಗೆ ನೈಸರ್ಗಿಕ ನದಿಯಲ್ಲ.

ಅವುಗಳಲ್ಲಿ ಸ್ಪಷ್ಟವಾಗಿ ಮತ್ತು ಪ್ರಭಾವಕಾರಿಯಾಗಿ ಇದನ್ನು ನಮೂದಿಸಲಾಗಿದೆ. ಬದಲಾಗಿ ಅದು ಮಾನವ ನಿರ್ಮಿತ, ಅದಕ್ಕಾಗಿ ಪೂರ್ವಜರು ಬಹಳ ವರ್ಷಗಳ ಕಾಲ ಭೂಮಿಯನ್ನು ಅಗೆದರು ಎಂದಿದೆ. ಸಂಶೋಧಕರ ಉಲ್ಲೇಖದನ್ವಯ – ಗಂಗೆ ಆರಂಭದಲ್ಲಿ ಸಣ್ಣ ಕಾಲುವೆ ಯಂತಿತ್ತು. ಆನಂತರದಲ್ಲಿ ಹಲವರು ಅಗೆಯುತ್ತಾ ಅಗೆಯತ್ತ ಹೋಗಿ ಹಲವು ಕಾಲುವೆಗಳು ನಿರ್ಮಾಣ ವಾದವು. ಅಂಥ ಕಾಲುವೆಗಳು ಕೂಡಿಕೊಂಡು ವಿಶಾಲ ಪ್ರವಾಹರೂಪವನ್ನು ಪಡೆಯಿತು.

ನದಿ ಯಾಂತ್ರಿಕ ವಿಭಾಗ (ರಿವರ್ ಎಂಜಿನಿಯರಿಂಗ್) ವ್ಯಾಪಕ ಪ್ರಕಲ್ಪವಾಗಿದೆ, ಇದು ಯಾವುದೋ ಒಬ್ಬನಿಂದ ಪೂರೈಸಲಸಾಧ್ಯ ಎಂಬುದು ಸತ್ಯಸ್ಥಿತಿ. ನಮ್ಮ ಪುರಾಣ ಗಳಲ್ಲಿ, ಇನ್ನಿತರ ಗ್ರಂಥಗಳಲ್ಲಿ ಯಾವ ಗಂಗಾವತರಣದ
ಕಥೆಗಳು ವಿವರಿಸಲ್ಪಟ್ಟಿವೆಯೋ ಅವುಗಳನ್ನು ಸಮಗ್ರವಾಗಿ ಪರೀಕ್ಷೆ ಮಾಡಿದರೆ ಇದು ಐದು ತಲೆಮಾರುಗಳ ಸಾಮೂಹಿಕ ಪ್ರಯತ್ನವಾಗಿತ್ತು ಎಂಬುದು ಅರಿವಿಗೆ ಬರುತ್ತದೆ. ಸಗರ ಚಕ್ರವರ್ತಿಯಿಂದ ಆರಂಭವಾದ ಈ ಪ್ರಯತ್ನ, ಅರವತ್ತು ಸಾವಿರ ಸಂಖ್ಯೆಯ ಸಗರ ಪುತ್ರರಿಂದಲೂ ಮುಂದುವರಿಯಿತು.

ಅವರನ್ನು ಅನುಸರಿಸಿ ಅಂಶುಮಾನ್, ದಿಲೀಪ ಮತ್ತು ಭಗೀರಥರು ಈ ಪ್ರಯತ್ನ ವನ್ನು ಮುಂದುವರಿಸಿದರು. ಇವರಲ್ಲಿ ಭಗೀರಥನು ಪೂರ್ತಿ ಯಶಸ್ವಿಯಾಗಿ ಗಂಗಾವತರಣದಿಂದ ಪ್ರಸಿದ್ಧನಾದ ಎನ್ನುತ್ತದೆ ಸಂಶೊಧನೆ. ಭೃಗುಮಹರ್ಷಿಗಳ ಆಶ್ರಮದಲ್ಲಿ ಗೋಮುಖದ ಹತ್ತಿರ ಸಗರನು ತಪಸ್ಸನ್ನಾಚರಿಸಿದನು. ತಪಸ್ಸಿನ ಸಂದರ್ಭದ ಆತನಿಗೆ ಗಂಗೋತ್ರಿಯಲ್ಲಿ ಹಿಮನದಿಯೊಂದರ ಅಸ್ತಿತ್ವ ಅರಿವಿಗೆ ಬಂದದ್ದು. ಅವನ ರಾಜ್ಯಕ್ಕೆ ನೀರನ್ನು ತರಲು ಗಂಗೋತ್ರಿಯ ಕರೆಯುವಿಕೆ ಅಥವಾ ಸ್ರೋತ ಸಾಕಾಗುತ್ತಿತ್ತು. ಆದರೆ, ನೀರಿನ ಮೂಲದ ಉತ್ಖನನದಿಂದ ಆ ನೀರು ಯಾವುದೇ ದಿಕ್ಕಲ್ಲಿ ಕೆಳಗೆ ಹರಿಯುಬಹುದಾಗಿತ್ತು.

ತನ್ನ ರಾಜ್ಯಕ್ಕೇ ಹರಿದು ಬರಲಿಕ್ಕಿಲ್ಲ ಎಂದು ಆಲೋಚಿಸಿದ ಸಗರ, ಕಾಲುವೆಯ ಅಗೆತವೇ ಸೂಕ್ತವೆಂದು ನಿಶ್ಚಯಿಸಿದನು. ಆದರೆ ಅಷ್ಟೊತ್ತಿಗೆ ಅವನ ಜೀವಿತ ಸಮಾಪ್ತವಾಯಿತು. ಅವನ ಅರವತ್ತು ಸಾವಿರ ಮಕ್ಕಳು ಆ ಕಾರ್ಯವನ್ನು ಮುಂದುವರಿಸಿ
‘ರಾಜಮಹಲ’ (ಈಗ ಜಾರ್ಖಂಡ್ ರಾಜ್ಯದಲ್ಲಿದೆ) ಪರ್ವತ ಶ್ರೇಣಿಯವರೆಗೆ ಕಾಲುವೆಯನ್ನು ತೋಡಿದರು. ಇದೇ
ಸ್ಥಳದಲ್ಲಿಯೇ ಕಪಿಲಋಷಿಗಳ ಶಾಪದಿಂದ ಅವರೆಲ್ಲರೂ ಸುಟ್ಟು ಭಸ್ಮರಾದರು ಎನ್ನುತ್ತದೆ ಪುರಾಣ. ‘ರಾಜಮಹಲ’ ಪರ್ವತದ
ಸ್ಥಲರಚನೆಯ ಪರಿಶೀಲನೆಯಿಂದ ತಿಳಿಯುವುದೇನೆಂದರೆ, ಇದು ಜ್ವಾಲಾಮುಖಿಯಿಂದ ನಿರ್ಮಿತವಾಗಿತ್ತು. ಅಲ್ಲದೆ ಕಪಿಲ ಶಬ್ದಕ್ಕೆ – ಬಿಸಿ, ಬೂದಿಬಣ್ಣ, ಅಗ್ನಿಯ ರೂಪಾಂತರಗಳೆಂದೂ ಬೇರೆ ಅರ್ಥಗಳಿವೆ.

ಹಾಗಾದರೆ, ಕಾಲುವೆ ತೋಡುವ ಸಮಯದಲ್ಲಿ ಆ ಅರವತ್ತು ಸಾವಿರ ಮಕ್ಕಳು ಜ್ವಾಲಾಮುಖಿಯಿಂದ ಸುಟ್ಟು ಭಸ್ಮರಾದರು ಎಂದು ಹೇಳಿದರೆ ಸುಳ್ಳಾದೀತೇ? ಅವರ ಮುಂದಿನ ತಲೆಮಾರಿನವನಾದ ಅಂಶುಮಾನನು, ಈ ಪ್ರಾಕೃತಿಕ ತೊಂದರೆಯ ಅನಂತರ ಹಿಮಾಲಯದಿಂದ ರಾಜಮಹಲ್ವರೆಗೂ ಸುಯೋಗ್ಯವಾದ ಕಾಲುವೆಯನ್ನು ನಿರ್ಮಿಸಿದನು. ಅವನ ಮಗ ದಿಲೀಪನು
ತನ್ನ ಜೀವನವನ್ನು ಶಿವಾಲಿಕಾ ಪ್ರದೇಶದಲ್ಲಿ ಕಳೆದನು.

ಏಕೆಂದರೆ ಗಂಗೆ, ಬರಲು ಸಮತಟ್ಟಾದ ಭೂಮಿಗೆ ಇಲ್ಲಿ ಬಹಳ ಪ್ರಯತ್ನ ಬೇಕಾಗುತ್ತಿತ್ತು. ಯಾವಾಗ ಈ ನೀರ್‌ದಾರಿಯು ಕೊನೆಯವರೆಗೂ ಸಿದ್ಧವಾಯ್ತೋ ಆಗ ಹಿಮನದಿಯಿಂದ ನೀರು ಹರಿಸಲು ಭಗೀರಥನು ಪ್ರಯತ್ನಿಸಿದನು. ಅದು ತನ್ನ ಉಗಮಸ್ಥಾನ ಗಂಗೋತ್ರಿಯಿಂದ ಸಮುದ್ರವರೆಗೂ ಪ್ರವಾಹರೂಪದಿಂದ ಹರಿಯಿತು. ಗಂಗೆಯು ಎಲ್ಲಾ ಹರಿಯುವುದು ಬೇಡ
ಎಂಬ ಕಾರಣದಿಂದ ಕಾಲುವೆಯ ನಿರ್ಮಾಣವಾಗಿರಬಹುದು.

ರಾಜ್ಯದಲ್ಲಿ ಎಲ್ಲಿಯೂ ನೀರಿಗಾಗಿ ಹೋರಾಟ ಆಗದಿರಲಿ ಎಂಬ ಉದ್ದೇಶದಿಂದ ಗಂಗೆಯನ್ನು ಕೊನೆಗೆ ಸಮುದ್ರಕ್ಕೆ ತಲುಪಿಸಲಾಗಿದ್ದು ನೈಸರ್ಗಿಕವಾಗಿಯೂ ಸಮ್ಮತವಾಗಿತ್ತು. ಈ ಎರಡೂ ಕಾರ್ಯಗಳು ನಮ್ಮ ಪೂರ್ವಿಕರ ಬುದ್ಧಿಶಕ್ತಿ ಮತ್ತು ದೂರದೃಷ್ಟಿಯನ್ನು ಬಿಂಬಿಸುತ್ತವೆ. ಗಂಗೆಯ ಪೂರ್ವಸ್ವರೂಪ, ಸಮತಟ್ಟಾದ ಭೂಮಿಗೆ ಗಂಗೆಯನ್ನು ತರುವ ಅವಶ್ಯಕತೆ ಗಳನ್ನು ಮೊದಲೇ ಪರೀಕ್ಷಿಸಿ, ಭಗೀರಥಾದಿಗಳು ಮಾಡಿದ ಮಹಾಕಾರ್ಯವು ಭೂಗರ್ಭಶಾಸ್ತ್ರದ ಪ್ರಮಾಣೀಕರವು ಪೌರಾಣಿಕ ಕಥೆಗಳ ವೈಜ್ಞಾನಿಕ ಸತ್ಯವನ್ನು ಸಾಕ್ಷೀಕರಿಸುತ್ತವೆ.

ಎರಡು ಸಾವಿರ ವರ್ಷಗಳಿಂದ ಈ ಪ್ರಕಲ್ಪ ಆರಂಭವಾಗುವವರೆಗೂ ಪೌರಾಣಿಕ ಕಥೆಗಳನ್ನೇ ಇತಿಹಾಸದ ಕಥೆಗಳೆಂದು
ಭಾರತೀಯರು ನಂಬುತ್ತಿದ್ದರು. ಬಹಳ ಪಂಡಿತರು, ಪುರಾಣಗಳು ಸದುಪಯೋಗಿ ಎಂದೇ ಪ್ರತಿಪಾದಿಸುತ್ತಿದ್ದರು. ಬ್ರಿಟಿಷ್ ಸರ್ವೇಕ್ಷಕರ ಸಾಕ್ಷ್ಯಾಧಾರ ಸಹಿತವಾದ, ಅಭ್ಯಾಸಪೂರ್ಣವಾದ ಸತ್ಯಾಂಕ್ಷಾಧಾರಿತ ಸಂಶೋಧನೆಯು ನಮ್ಮನ್ನು ಹೊಸ ದಿಕ್ಕಿನೆಡೆಗೆ ತಲುಪಿಸಿತು.

ಇವರೆಲ್ಲರ ಸಕಾರಣ ಪ್ರಯತ್ನಗಳ ಆಧಾರದಿಂದ ಮತ್ತು ವರ್ತಮಾನದಲ್ಲಿ ದೊರೆತ ಜ್ಞಾನದ ಆಧಾರದ ಮೇಲೆ, ಈ
ಗಂಗಾನದಿಯು ನಮ್ಮ ಪೂರ್ವಜರಾದ ಭಗೀರಥನೇ ಮೊದಲಾದವರ ಪ್ರತ್ಯಕ್ಷ ಪ್ರಯತ್ನಗಳಿಂದ ನಿರ್ಮಿತವಾದ ನದಿಯೇ ಎಂದು ಹೇಳಲು ಸಾಧ್ಯ. ಅದಕ್ಕಾಗಿ ಐದು ತಲೆಮಾರಿನವರ ನಿರಂತರ ಪ್ರಯತ್ನಗಳು, ಮಾನವರ ಒಳಿತಿಗಾಗಿ ಉಪಯೋ ಗಿಸಿದ ನದಿ ತಾಂತ್ರಿಕ ಜ್ಞಾನ, ಮುಂದಿನ ಕಾಲದ ಕುರಿತು ದೂರದೃಷ್ಟಿ, ಇವೆಲ್ಲ ನಿಶ್ಚಯವಾಗಿಯೂ ಭಾರತೀಯ ಸ್ವಾಭಿಮಾನ ವಿಕಾಸಕ್ಕೆ ಮಾರ್ಗದರ್ಶಿಗಳು.

ಸಾವಿರಾರು ವರ್ಷಗಳ ಹಿಂದೆ ಪೂರ್ವಜರು ಇಂಥ ಮಹತ್ಕಾರ್ಯವನ್ನು ಜಗತ್ತಿನ ಜನತೆಯ ಹಿತಕ್ಕೆ ಮಾಡಲು
ಶಕ್ಯರಾಗಿದ್ದಾಗ, ಯಂತ್ರ – ತಂತ್ರಾದಿಗಳಿಂದ ಸಮೃದ್ಧಿ ಹೊಂದಿದ ಆಧುನಿಕರಾದ ನಾವು ಇದರಿಂದ ಏನಾದರು ತಿಳಿಯಲು ಸಾಧ್ಯವೇ? ಸಮಗ್ರದೇಶದಲ್ಲಿ ಜಲ ದುರ್ಭಿಕ್ಷೆ ದೂರ ಮಾಡಲು ಯತ್ನಿಸಬಹುದೇ? ಕೇವಲ ವರ್ತಮಾನಕ್ಕಷ್ಟೇ ಅಲ್ಲ, ಮುಂಬರುವ ಪೀಳಿಗೆಗಳಿಗೂ ಜಲಪೂರೈಕೆ ಸುಲಭನಾಗುವಂತೆ ಈಗಲೇ ನಾವು ಭವಿಷ್ಯ ಚಿಂತಕರಾಗಿ ಕಾರ್ಯ ಕೈಗೊಳ್ಳ ಬಹುದೇ? ಹಿಮನದಿಯ ವಿನಾಶದಿಂದ 4500 ವರ್ಷಗಳ ಹಿಂದೆಯೇ ಸರಸ್ವತಿ ನದಿಯು ಒಣಗಿತು! ಅದರ ದಂಡೆಯಲ್ಲಿ ವಾಸಿಸಿದವರು ಆಶ್ರಯಕ್ಕಾಗಿ ಬೇರೆಡೆಗೆ ವಲಸೆ ಹೋಗಬೇಕಾಗಿ ಬಂತು.

ಮುಂಬರುವ ವರ್ಷಗಳಲ್ಲಿ ಗಂಗೋತ್ರಿಯ ಸ್ಥಿತಿಯೂ ಹೀಗೆ ಆಗಬಹುದೆಂದು ಅಧ್ಯಯನದ ವರದಿ ತಿಳಿಸುತ್ತಿದೆ. ಬಹುಶಃ ನೂರಾರು ವರ್ಷ ಕಳೆದ ನಂತರ ಗಂಗೆಯ ಇರುವಿಕೆ ಇರಲಿಕ್ಕಿಲ್ಲ, ಏಕೆಂದರೆ ಹಿಮ ಪರಿಣಾಮದ ರಭಸದಲ್ಲಿ ಕುಂಠತೆ ಊಹಿಸಲು ಸಾಧ್ಯ. ಹೀಗಿzಗ ಕೋಟ್ಯಂತರ ಜನರನ್ನು ಗಂಗಾ ಬಯಲು ಪ್ರದೇಶಗಳಿಂದ ಸ್ಥಾನಾಂತರಿಸಲು ಸಾಧ್ಯವೇ?
ಆದ್ದರಿಂದ ಸಾಮೂಹಿಕವಾಗಿ ನಾವು ಯಾವ ಕಾರಣದಿಂದ ಸರಸ್ವತಿ ನದಿ ಒಣಗಿತು? ಗಂಗಾನದಿಯ ನಿರ್ಮಾಣವಿಧಿ, ಚಿಂತನೆ, ಪ್ರಸಂಗ ಯಾವುದು? ಈ ಎರಡು ವಿಷಯಗಳಲ್ಲಿ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ.

ಚಿಂತನೆಯ ನಂತರ ಇನ್ನೊಂದು ರೀತಿಯಲ್ಲಿ ಭಗೀರಥ ಪ್ರಯತ್ನ ಮಾಡಿ ಗಂಗೆಯ ಪುನರುಜ್ಜೀವನ, ಇನ್ನಿತರ ನದಿಗಳ ಪುನರುಜ್ಜೀವನವೂ ನಮ್ಮ ಪ್ರಯತ್ನವಾಗಬೇಕು. ಆಗಲೇ ನಮ್ಮ ಪೂರ್ವಜರು ಆಚರಿಸಿದ, ನಮಗೆ ಕೊಟ್ಟ ದೂರದೃಷ್ಟಿಯ ಜ್ಞಾನಪರಂಪರೆ ಸಾರ್ಥಕವಾದೀತಲ್ಲವೇ?