Thursday, 24th October 2024

ಚಾರಿಯಟ್ ಮೀಡಿಯಾ ಮುಖ್ಯಸ್ಥ ರಾಜೇಶ್ ಜೋಶಿ ಬಂಧನ

ನವದೆಹಲಿ: ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಇಡಿ ಅಧಿಕಾರಿಗಳು 24 ಗಂಟೆಗಳಲ್ಲಿ ಮೂವರನ್ನು ಬಂಧಿಸಿದ್ದಾರೆ.

ಬುಧವಾರ ದೆಹಲಿ ಮೂಲದ ಬ್ರಿಂಡ್ಕೊ ಸೇಲ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಗೌತಮ್ ಮಲ್ಹೋತ್ರಾ ಅವರನ್ನು ಬಂಧಿಸಿದ ಬಳಿಕ ಗುರುವಾರ ಚಾರಿಯಟ್ ಮೀಡಿಯಾ ಮುಖ್ಯಸ್ಥ ರಾಜೇಶ್ ಜೋಶಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಸೌತ್ ಗ್ರೂಪ್ ಪರವಾಗಿ ರೂ.31 ಕೋಟಿಗಳನ್ನು ವರ್ಗಾಯಿಸಲಾಗಿರುವ ಆರೋಪದ ಮೇಲೆ ರಾಜೇಶ್ ಜೋಶಿ ಅವರನ್ನು ಇಡಿ ಬಂಧಿಸಿದೆ. ರಾಜೇಶ್ ಜೋಶಿ ಈ ಮೊತ್ತವನ್ನು ದಿನೇಶ್ ಅರೋರಾ ಅವರಿಗೆ ನೀಡಿದ್ದಾರೆ ಎಂದು ಇಡಿ ಬಹಿರಂಗಪಡಿಸಿದೆ. ಈ ಮೊತ್ತದ ಒಂದು ಭಾಗವನ್ನು ಎಎಪಿ ಗೋವಾ ಚುನಾವಣೆಯಲ್ಲಿ ಖರ್ಚು ಮಾಡಿದೆ ಚಾರ್ಜ್ ಶೀಟ್‌ನಲ್ಲಿ ತಿಳಿಸಿದೆ. ರಾಜೇಶ್ ಜೋಶಿಯನ್ನು ಬಂಧಿಸಿರುವ ಇಡಿ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಿದೆ.

ಈ ಮದ್ಯ ಹಗರಣದಲ್ಲಿ ಸಿಬಿಐ ಇದುವರೆಗೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸಿದೆ. ಈ ಹಗರಣ ಪ್ರಕರಣದಲ್ಲಿ ಬಿಆರ್‌ಎಸ್ ಎಂಎಲ್‌ಸಿ ಕವಿತಾ ಸಿಎ ಗೋರಂಟ್ಲಾ ಬುಚ್ಚಿಬಾಬು ಅವರನ್ನು ಈಗಾಗಲೇ ಬಂಧಿಸಲಾ ಗಿದ್ದು, ಕೆಲವೇ ಗಂಟೆಗಳಲ್ಲಿ ಶಿರೋಮಣಿ ಅಕಾಲಿದಳದ ಮಾಜಿ ಶಾಸಕ ದೀಪ್ ಮಲ್ಹೋತ್ರಾ ಅವರ ಪುತ್ರ, ದೆಹಲಿಯ ಬ್ರಿಂಡ್ಕೊ ಸೇಲ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಗೌತಮ್ ಮಲ್ಹೋತ್ರಾ ಅವರನ್ನು ಕೂಡ ಬಂಧಿಸಲಾಗಿದೆ.