Thursday, 19th September 2024

ಇಂದಿನಿಂದ ಕೇದಾರನಾಥ ಯಾತ್ರೆ ಪುನರಾರಂಭ

ಡೆಹ್ರಾಡೂನ್: ಹವಾಮಾನ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಇಂದಿನಿಂದ ಕೇದಾರನಾಥ ಯಾತ್ರೆ ಪುನರಾರಂಭ ಗೊಂಡಿದೆ.

ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಹವಾಮಾನ ಪರಿಸ್ಥಿತಿ ಸುಧಾರಿಸಿರುವುದರಿಂದ ಯಾತ್ರಾರ್ಥಿಗಳಿಗೆ ಕೇದಾರನಾಥ ಧಾಮಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಉತ್ತರಾಖಂಡ್ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಹವಾಮಾನ ಇಲಾಖೆಯ ಸೂಚನೆ ಮೇರೆಗೆ ಚಾರ್ ಧಾಮ್ ಯಾತ್ರಿಗಳನ್ನು ವಿವಿಧ ಸ್ಥಳಗಳಲ್ಲಿ ತಡೆಹಿಡಿಯಲಾಗಿತ್ತು.

ಕೇದಾರನಾಥ ಧಾಮದ ಕಡೆಗೆ ಹೋಗುವ ಬದರಿನಾಥ್ ಯಾತ್ರಿಗಳನ್ನು ಶ್ರೀನಗರ ಗರ್ವಾಲ್‍ ನಲ್ಲಿ ತಡೆದು ನಿಲ್ಲಿಸಲಾಗಿತ್ತು. ಅಲ್ಲದೆ, ಪೊಲೀಸರ ಪ್ರಕಾರ, ಪ್ರಯಾಣದ ಪೂರ್ವ ನೋಂದಣಿ ಮತ್ತು ಹೋಟೆಲ್ ಬುಕಿಂಗ್ ಹೊಂದಿರುವ ಯಾತ್ರಾರ್ಥಿಗಳಿಗೆ ರುದ್ರಪ್ರ ಯಾಗಕ್ಕೆ ತೆರಳಲು ಅವಕಾಶ ನೀಡಲಾಗಿದ್ದು, ಇತರರನ್ನು ಶ್ರೀನಗರದಲ್ಲಿ ನಿಲ್ಲಿಸಲಾಗಿದೆ.

ಏತನ್ಮಧ್ಯೆ, ಮುಂದಿನ ಏಳು ದಿನಗಳವರೆಗೆ ಕೇದಾರನಾಥ ಮತ್ತು ಬದರಿನಾಥ್ ಪ್ರದೇಶಗಳಲ್ಲಿ ಭಾರೀ ಹಿಮಪಾತ ಮತ್ತು ಮಳೆಯ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಇದೇ ಹಿನ್ನೆಲೆಯಲ್ಲಿ ವಿವಿಧೆಡೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.