Friday, 25th October 2024

ಜೂನ್ 11 ರಂದು ಬಿಜೆಪಿ ಸಿಎಂ, ಡಿಸಿಎಂಗಳ ಸಭೆ

J P Nadda

ನವದೆಹಲಿ: 2024ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿವೆ.

ಕರ್ನಾಟಕ ಚುನಾವಣೆ ಬಳಿಕ ಬಿಜೆಪಿ ಎಚ್ಚೆತ್ತುಕೊಂಡಿದೆ. ಈ ಸಂಬಂಧ ಅದು ಭಾರಿ ತಲೆ ಕೆಡಿಸಿಕೊಂಡಿದೆ.

ಭಾರತೀಯ ಜನತಾ ಪಕ್ಷವು ಜೂ.11 ರಂದು ನವದೆಹಲಿಯಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯ ಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಸಭೆಯನ್ನು ಕರೆದಿದೆ. “ಕೆಲ ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಮತ್ತು 2024 ರ ಲೋಕಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟು ಕೊಂಡು ಈ ಸಭೆ ಕರೆಯಲಾಗಿದೆ. ಕೇಂದ್ರ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ಬಿಎಲ್ ಸಂತೋಷ್ ಸೇರಿದಂತೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಈ ವೇಳೆ ಭಾಗವಹಿಸಲಿದ್ದಾರೆ” ಎಂದು ತಿಳಿಸಿದೆ.

ಬುಧವಾರ ಜೆಪಿ ನಡ್ಡಾ ಅವರು ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ವಿಶೇಷ ‘ಟಿಫಿನ್ ಸಭೆ’ ನಡೆಸಿದರು.

ಈ ವೇಳೆ ಪಕ್ಷದ ಕಾರ್ಯಕರ್ತರಿಗೆ ಜನರ ಹೃದಯ ಗೆಲ್ಲಲು ವಿಭಿನ್ನ ಮಾರ್ಗಗಳನ್ನು ಕಂಡುಕೊಳ್ಳುವಂತೆ ಸೂಚಿಸಿದರು. ಜೊತೆಗೆ, ಪಕ್ಷದ ಕಾರ್ಯ ಕರ್ತರು ಸ್ವಯಂ ಶಿಸ್ತು ಮತ್ತು ಪರಸ್ಪರ ಒಗ್ಗಟ್ಟಿನಿಂದ ಇರಬೇಕು. ಮೊದಲು ನಿಮ್ಮ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಿ, ಧೈರ್ಯ ಕಳೆದುಕೊಳ್ಳ ಬೇಡಿ, ನಂತರ ಮತದಾರರ ಹೃದಯ ಗೆಲ್ಲಲು ಸಾಧ್ಯ ಎಂದು ಪಕ್ಷದ ಹೊಸ ಮತ್ತು ಹಳೆಯ ಕಾರ್ಯಕರ್ತರಿಗೆ ತಿಳಿಸಿದರು.

“ಬಿಜೆಪಿಯು ಭಾರತದಲ್ಲಿ ಮಾತ್ರ ದೊಡ್ಡ ಪಕ್ಷವಾಗಿ ಹೊರಹೊಮ್ಮಿಲ್ಲ, ವಿಶ್ವದ ದೊಡ್ಡ ಪಕ್ಷವೂ ಹೌದು. ನಾವು ಚೀನಾದ ಕಮ್ಯುನಿಸ್ಟ್ ಪಕ್ಷಕ್ಕಿಂತ ದೊಡ್ಡವರು, ಆದ್ದರಿಂದ ಒಗ್ಗಟ್ಟಾಗಿ ಇರಬೇಕು ಮತ್ತು ನಮ್ಮ ಸ್ಥಾನದ ಘನತೆಯಿಂದ ಕಾಪಾಡಿಕೊಳ್ಳಬೇಕು. ಸದಾ ಜನಕಲ್ಯಾಣಕ್ಕಾಗಿ ಶ್ರಮಿಸಬೇಕು. ಪ್ರತಿದಿನ ಹೊಸ ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಬೇಕು” ಎಂದು ಹೇಳಿದರು.