Friday, 18th October 2024

ಕೊಟ್ಟಿಗೆಗೆ ಬೆಂಕಿ ಬಿದ್ದು ಹಸು ಸಜೀವ ದಹನ

ಪಾವಗಡ: ಸಿಡಿಲಿನ ರಭಸಕ್ಕೆ ಕೊಟ್ಟಿಗೆಗೆ ಬೆಂಕಿ ಬಿದ್ದು ನಾಲ್ಕು ಹಸುಗಳ ಪೈಕಿ ಸ್ಥಳದಲ್ಲಿಯೇ ಒಂದು ಹಸು ಸಜೀವ ದಹನವಾಗಿದೆ. ಉಳಿದ ಮೂರು ಹಸುಗಳಿಗೆ ಗಂಭೀರ ಗಾಯವಾಗಿದೆ.

ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ರಂಗಸಮುದ್ರ ಗ್ರಾಮದಲ್ಲಿ ಕರಿಯಪ್ಪ ಎಂಬವರಿಗೆ ಸೇರಿದ ಜಮೀನಿನಲ್ಲಿದ್ದ ದನದ ಕೊಟ್ಟಿಗೆಗೆ ಬೆಂಕಿ ಬಿದ್ದಿದೆ.

ಹಸುಗಳನ್ನು ರಕ್ಷಿಸಲು ಮುಂದಾಗಿದ್ದ 10ನೇ ತರಗತಿಯ ಬಾಲಕ ಮಹಾಲಿಂಗ ಎಂಬವನ ಕೈ ಬೆಂಕಿಯ ಶಾಖಕ್ಕೆ ತುತ್ತಾಗಿ ಸುಟ್ಟಿದ್ದು, ಸದ್ಯ ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವಘಡದ ಸಮಯ ಮಹಾಲಿಂಗ ತಾತ ಕರಿಯಪ್ಪ ಅವರ ಜೊತೆ ಗುಡಿಸಲಿನಲ್ಲಿಯೇ ಮಲಗಿದ್ದರು. ಏಕಾಏಕಿ ಬೆಂಕಿ ಹೊತ್ತಿ ಉರಿದ ಸಂದರ್ಭ ಹಸುಗಳನ್ನು ರಕ್ಷಿಸಲು ಹೋದ ಮಹಾಲಿಂಗ ಮತ್ತು ತಾತ ಗಾಯಗೊಂಡಿದ್ದಾರೆ. ಈ ಘಟನೆ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.