Thursday, 19th September 2024

Hindu Janajagruti Samiti: ಸಂಘಟಿತ ಶಕ್ತಿ ಒಂದಾದಲ್ಲಿ ಅರ್ಬನ್ ನಕ್ಸಲ್‌ವಾದದ ವಿರುದ್ಧ ಜಯ ನಿಶ್ಚಿತ: ಚಕ್ರವರ್ತಿ ಸೂಲಿಬೆಲೆ

Hindu Janajagruti Samiti

ಬೆಂಗಳೂರು: ಅರ್ಬನ್ ನಕ್ಸಲ್ ವಾದಿಗಳಿಗೆ ಸರ್ಕಾರೇತರ ಸಂಸ್ಥೆಗಳಿಂದ ನಿರಂತರ ಹಣ ಪೂರೈಸಲಾಗುತ್ತದೆ ಹಾಗೂ ವಿವಿಧ ರೀತಿಯಲ್ಲಿ ಸಹಾಯ ನೀಡಿ ಭಾರತ ವಿರೋಧಿ ಚಟುವಟಿಕೆಗಳಿಗೆ ಪ್ರೇರಣೆ ನೀಡಲಾಗುತ್ತಿದೆ. ಹಲವಾರು ಯೂನಿವರ್ಸಿಟಿಗಳು ಸಹ ಈ ಅರ್ಬನ್ ನಕ್ಸಲ್‌ ವಾದಕ್ಕೆ ಸಹಕರಿಸುತ್ತಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾನಿಲಯಗಳು (Universities), ಕಲಾಕ್ಷೇತ್ರ, ಸಾಮಾಜಿಕ ಮಾಧ್ಯಮಗಳು (Social Media) ಎಲ್ಲೆಡೆಯೂ ತಮ್ಮ ಜಾಲವನ್ನು ಹರಡಿದ್ದಾರೆ. ಅಮೇರಿಕ (America) ತನ್ನ ರಾಯಭಾರಿಗಳನ್ನು ಸಹ ಇಂತಹ ಕೆಲಸಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಯುವ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು.

ಹಿಂದೂ ಜನಜಾಗೃತಿ ಸಮಿತಿ (Hindu Janajagruti Samiti) ವತಿಯಿಂದ ಬುಧವಾರ ಬೆಂಗಳೂರಿನ ಮಾನಂದಿ ನಂಜುಂಡಿ ಸೆಟ್ಟಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ದೇಶ ವಿರೋಧಿ ಷಡ್ಯಂತ್ರ ಹಾಗೂ ಅರ್ಬನ್ ನಕ್ಸಲ್ ವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಸುದ್ದಿಯನ್ನೂ ಓದಿ | Vande Bharat Express: ಶೀಘ್ರದಲ್ಲೇ ಶಿವಮೊಗ್ಗಕ್ಕೂ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸೇವೆ

ಗೌರಿ ಲಂಕೇಶ್ ಭಾರತದ ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದರು ಎಂದು ಅವರು ಯಾರೆಂದೇ ತಿಳಿಯದ ವಿದೇಶಿ ಜನ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿದ್ದಾರೆ, ಇದು ಸಹ ಈ ಅರ್ಬನ್ ನಕ್ಸಲ್ ವಾದದ ಹಿಡೆನ್ ಅಜೆಂಡವಾಗಿದೆ. ಇದರ ವಿರುದ್ಧ ನಾವೆಲ್ಲರೂ ಸಂಘಟಿತರಾಗಿ ಹೋರಾಡಿದರೆ ಅವರನ್ನು ಹಿಮ್ಮೆಟ್ಟಿಸಲು ಸಾಧ್ಯವಿದೆ.

ಭಾರತಕ್ಕೆ ಇದು ಮೊದಲ ಬಾರಿಯ ಆಕ್ರಮಣವಲ್ಲ, ಹಿಂದೆಯೂ ಅನೇಕ ಆಕ್ರಮಣಗಳು ನಡೆದಿವೆ. ಅದರಲ್ಲಿ ಜಯ ಸಾಧಿಸಿದ್ದೇವೆ. ಇಲ್ಲಿಯೂ ಸಂಘಟಿತ ಶಕ್ತಿ ಒಂದಾದರೆ ಜಯ ನಿಶ್ಚಿತ ಎಂದು ಅವರು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಚಂದ್ರ ಮೊಗವೀರ ಮಾತನಾಡಿ, ಇಂದು ಸೋಶಿಯಲ್ ಮೀಡಿಯಾ, ಒಟಿಟಿ, ಚಲನಚಿತ್ರಗಳಲ್ಲಿ ವ್ಯಾಪಕವಾಗಿ ಅರ್ಬನ್ ನಕ್ಸಲ್‌ವಾದ ಹರಡಲಾಗುತ್ತಿದೆ. ಇತಿಹಾಸವನ್ನೇ ತಿರುಚಿ ತೋರಿಸಲಾಗುತ್ತಿದೆ. ಜತೆಗೆ ಹಿಂದೂ ಸಂಘಟನೆಗಳ ವಿರುದ್ಧ ಸುಳ್ಳು ನರೆಟಿವ್‌ಗಳನ್ನು ಸೆಟ್ ಮಾಡಲಾಗುತ್ತಿದೆ.

ಕಳೆದ ಕೆಲವು ವರ್ಷಗಳಲ್ಲಿ ದಾಖಲೆ ಪ್ರಕಾರ ನಕ್ಸಲರಿಂದ ಪೊಲೀಸರನ್ನೂ ಸೇರಿದಂತೆ 14,000ಕ್ಕೂ ಅಧಿಕ ಹತ್ಯೆಗಳು ನಡೆದಿವೆ. ಅನೇಕ ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆ ನಡೆದಿವೆ. ಆದರೆ ಇದರ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆ ಆಗುವುದಿಲ್ಲ, ಆದರೆ ತಥಾಕಥಿಕ ಬುದ್ಧಿಜೀವಿಗಳಾದ ದಾಭೋಲ್ಕರ್, ಪಾನಸರೆ, ಕಲಬುರ್ಗಿ, ಗೌರಿ ಲಂಕೇಶ ಇವರ ಹತ್ಯೆಗಳಾದಾಗ ದೇಶದಾದ್ಯಂತ ಇದರ ಬಗ್ಗೆ ಚರ್ಚೆ ನಡೆಯುತ್ತದೆ. ಇದು ಅರ್ಬನ್ ನಕ್ಸಲ್ ವಾದದ ಷಡ್ಯಂತ್ರವಾಗಿದೆ ಎಂದು ಆರೋಪಿಸಿದರು.

ಇತ್ತೀಚೆಗೆ ‘IC814 ಕಂದಾಹಾರ ಹೈಜ್ಯಾಕ್ʼ ವೆಬ್ ಸಿರೀಸ್‌ನಲ್ಲಿ ಆ ವಿಮಾನವನ್ನು ಹಿಂದೂಗಳು ಹೈಜ್ಯಾಕ್ ಮಾಡಿದ್ದರು ಎಂದು ತಿರುಚಿ ತೋರಿಸಲಾಗಿದ್ದು ಅಷ್ಟೇ ಅಲ್ಲದೆ ಇಡೀ ಸಿರೀಸ್‌ನಲ್ಲಿ ಇನ್ನೂ ಅನೇಕ ಕಡೆ ತಪ್ಪು ಮಾಹಿತಿಯನ್ನು ನೀಡಲಾಗಿದೆ. ಈ ರೀತಿ ವಿವಿಧ ಮಾಧ್ಯಮಗಳಿಂದ ಲೆಫ್ಟ್ ಎಕೋಸಿಸ್ಟಮ್ ಬಲಗೊಳ್ಳುತ್ತಿದ್ದು ಅದನ್ನು ಕೊನೆಗಾಣಿಸಲು ನಾವು ಹಿಂದೂ ಎಕೋಸಿಸ್ಟಂನ ಶಕ್ತಿ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಹಿರಿಯ ವಿಚಾರಕರು ಮತ್ತು ಮಾಜಿ ವಿಧಾನಸಭಾ ಸದಸ್ಯೆ ಡಾ. ಎಸ್. ಆರ್. ಲೀಲಾ ಮಾತನಾಡಿ, ಮಹಾಭಾರತ ಕಾಲದಿಂದಲೂ ಈ ದೇಶದಲ್ಲಿ ಧರ್ಮ-ಅಧರ್ಮದ ನಡುವೆ ಸಂಘರ್ಷ ನಡೆಯುತ್ತಿದೆ. ಅಲ್ಲಿಯೂ ಕಪಟ ನೀತಿಯಿಂದ ಪಾಂಡವರ ಪರಾಜಯಕ್ಕೆ ಪ್ರಯತ್ನಿಸಲಾಗುತ್ತಿತ್ತು, ಆದರೆ ಭಗವಾನ್ ಶ್ರೀಕೃಷ್ಣನ ಕೃಪೆ ಮತ್ತು ಧರ್ಮವೀರರ ಸಂಘಟಿತ ಹೋರಾಟದಿಂದ ಧರ್ಮದ ವಿಜಯವಾಯಿತು.

ಈಗಲೂ ಅರ್ಬನ್ ನಕ್ಸಲ್ ವಾದದಂತಹ ವೈಚಾರಿಕ ಯುದ್ಧ ನಡೆಯುತ್ತಿದೆ. ಜನತೆ ಧರ್ಮದ ಜಯವಾಗುವುದು ಎಂದು ತಮ್ಮಷ್ಟಕ್ಕೆ ಕೈಕಟ್ಟಿ ಕುಳಿತರೆ ಆಗುವುದಿಲ್ಲ. ಎಲ್ಲರೂ ಸಂಘಟಿತರಾಗಿ ಈ ವೈಚಾರಿಕ ಯುದ್ಧವನ್ನು ಗೆಲ್ಲಬೇಕಿದೆ, ಆಗಲೇ ರಾಷ್ಟ್ರವು ಉಳಿಯುವುದು ಎಂದರು.

ಈ ಸುದ್ದಿಯನ್ನೂ ಓದಿ | JK election: ನಾಳೆ ಬಿಜೆಪಿ ಪ್ರಣಾಳಿಕೆ ರಿಲೀಸ್‌; ನಿರೀಕ್ಷೆಗಳೇನು?

ಕಾರ್ಯಕ್ರಮದಲ್ಲಿ 250 ಕ್ಕೂ ಅಧಿಕ ಧರ್ಮಪ್ರೇಮಿ ಮತ್ತು ರಾಷ್ಟ್ರಪ್ರೇಮಿಗಳು ಪಾಲ್ಗೊಂಡಿದ್ದರು. ಸುಮಾರು 2000 ಕ್ಕೂ ಅಧಿಕ ಜನರು ಈ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಿದ್ದಾರೆ.