Thursday, 19th September 2024

Actor Darshan: ಗಂಡ ಮಕ್ಕಳನ್ನು ಬಿಟ್ಟು, ದರ್ಶನ್‌ ಮದುವೆಯಾಗ್ತೀನಿ ಎಂದು ಬಳ್ಳಾರಿ ಜೈಲ್‌ ಮುಂದೆ ಆಂಟಿ ಡ್ರಾಮಾ!

actor darshan bellary jail

ಬಳ್ಳಾರಿ: ರೇಣುಕಾಸ್ವಾಮಿ (Renukaswamy murder case) ಕೊಲೆ ಕೇಸ್‌ನಲ್ಲಿ ಬಂಧಿತನಾಗಿ ಇದೀಗ ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ (Actor Darshan) ಅನ್ನು ಭೇಟಿಯಾಗಬೇಕು, ಆತನನ್ನೇ ಮದುವೆಯಾಗುತ್ತೇನೆ ಎಂದು ಮಹಿಳೆಯೊಬ್ಬರು ಬಳ್ಳಾರಿ ಜೈಲಿನ ಮುಂದೆ ಹಠ ಹಿಡಿದು ಕುಳಿತಿದ್ದಾರೆ. ಈಕೆಗೆ ಮದುವೆಯಾಗಿದ್ದು, ಮಕ್ಕಳೂ ಇವೆ!

ನಟ ದರ್ಶನ್‌ನನ್ನು ನಾನು ನೋಡಲೇಬೇಕು. ಎಷ್ಟೇ ದಿನವಾದ್ರೂ ನಾನು ಇಲ್ಲೇ ಕಾಯುತ್ತಿರುತ್ತೇನೆ ಅಂತ ಮಹಿಳೆ ಹಠ ಹಿಡಿದಿದ್ದಾರೆ. ದರ್ಶನ್‌ನನ್ನು ನಾನು ಮದುವೆಯಾಗ್ತೀನಿ ಅಂತ ಹೇಳಿಕೊಂಡು, ಕೈಯಲ್ಲಿ ಸ್ವೀಟ್‌ ಬಾಕ್ಸ್‌ ಹಾಗೂ ಚೌಚೌ ಹಿಡಿದುಕೊಂಡು ಕಾಯುತ್ತಿದ್ದಾರೆ. ದರ್ಶನ್‌ನನ್ನು ನೋಡಲು ಅವಕಾಶವಿಲ್ಲ ಎಂದು ಜೈಲು ಸಿಬ್ಬಂದಿ ಪರಿಪರಿಯಾಗಿ ಹೇಳಿದರೂ ಆಕೆ ಕಿವಿಗೆ ಹಾಕಿಕೊಳ್ಳುತ್ತಿಲ್ಲ.

ಇವರು ಲಕ್ಷ್ಮಿ ಎಂಬ ಹೆಸರಿನ ಮಹಿಳೆಯಾಗಿದ್ದು, ಬಳ್ಳಾರಿ ಜೈಲಿನ ಮುಂದೆ ಠಿಕಾಣಿ ಹೂಡಿದ್ದಾರೆ. ದರ್ಶನ್‌ನನ್ನು ನಾನು ನೋಡಲೇ ಬೇಕು. ನಾನು 10 ವರ್ಷದಿಂದ ದರ್ಶನ್‌ ಅವರ ಅಭಿಮಾನಿ. ಅವರನ್ನು ಮದುವೆಯಾಗುತ್ತೇನೆ. ವಿಜಯಲಕ್ಷ್ಮಿ ಅವರಂತೆ ಅವರ ಹೆಂಡತಿಯಾಗುತ್ತೇನೆ ಎಂದು ಈ ಮಹಿಳೆ ಹಠ ಹಿಡಿದಿದ್ದಾರೆ. ಬಳ್ಳಾರಿ ಜೈಲಿಗೆ ಬರುವ ಮುನ್ನ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೂ ಹೋಗಿ ಹೀಗೆ ಹಠ ಮಾಡಿದ್ದರು ಈಕೆ. ಅಲ್ಲೂ ಸಿಬ್ಬಂದಿ ಗದರಿ ಕಳಿಸಿದ್ದರು.

ಈ ಮಹಿಳೆ ಲಕ್ಷ್ಮಿ ಬೆಂಗಳೂರಿನಲ್ಲಿ ಹೋಟೆಲ್‌ ಕೆಲಸ ಮಾಡಿಕೊಂಡು ಇದ್ದು, ಈಕೆಗೆ ಮದುವೆಯಾಗಿದೆ. ಮಕ್ಕಳೂ ಇದ್ದಾರೆ. ಗಂಡ ಆತನ ಅಮ್ಮನ ಜೊತೆಯಿದ್ದಾರೆ. ಅತ್ತೆ ಇವರಿಬ್ಬರನ್ನೂ ಜೊತೆಯಾಗಿರಲು ಬಿಡುತ್ತಿಲ್ಲ. ಹೀಗಾಗಿ ನಾನು ದರ್ಶನ್‌ ಅವರನ್ನೇ ಮದುವೆಯಾಗ್ತೀನಿ. ಒಂದು ಹೆಣ್ಣಿನ ಮಾನ ಕಾಪಾಡಿದ್ದಾರೆ. ದರ್ಶನ್‌ ಅದಕ್ಕೆ ನನಗೆ ಇಷ್ಟ. ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದರ್ಶನ್‌ನ ಮದುವೆಯಾಗ್ತೀನಿ. ದರ್ಶನ್‌ ಇಲ್ಲ ಅಂದ್ರೆ ಈ ದೇಶದಲ್ಲಿ ಇರೋದಿಲ್ಲ ಎಂದಿದ್ದಾರೆ ಲಕ್ಷ್ಮಿ. ಈಕೆಯ ಅಪ್ಪ-ಅಣ್ಣ ಹಾರ್ಟ್‌ಅಟ್ಯಾಕ್‌ನಿಂದ ತೀರಿಹೋಗಿದ್ದಾರಂತೆ.

ದರ್ಶನ್‌ ಭೇಟಿಯಾಗಲೇಬೇಕು. ಇಲ್ಲದಿದ್ದರೆ ಈ ಪ್ರಾಣ ಇಲ್ಲೇ ಹೋಗಲಿ ಅಂತ ಮಹಿಳೆ ಹೇಳಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಟ ದರ್ಶನ್‌ ರಿಲೀಸ್‌ ಆದ ಮೇಲೆ ಹೋಗಿ ನೋಡಬಹುದಲ್ಲಾ ಎಂದಿದ್ದಕ್ಕೆ, ಇಲ್ಲ ನಾನು ಅವರ ಕಷ್ಟವನ್ನು ಕೇಳ್ತೀನಿ. ಅವರು ಆಚೆ ಬಂದಮೇಲೆ ಸುಖಕ್ಕೆ ಹೋದಂಗೆ ಆಗುತ್ತೆ. ನನಗೆ ಅವರಿಂದ ಒಂದು ರೂಪಾಯಿಯೂ ಬೇಡ. ನಾನು ದುಡಿಬೇಕು, ನಾನು ತಿನ್ನಬೇಕು. ನನಗೆ ಅವರ ಮೇಲೆ ನಿಜವಾದ ಪ್ರೀತಿ ಇದೆ ಎಂದಿದ್ದಾರೆ.

ಈ ಸುದ್ದಿ ಓದಿ: Actor Darshan: ದರ್ಶನ್‌ ಗ್ಯಾಂಗ್‌ ಮುಂದೆ ಅಂಗಲಾಚುತ್ತಿರುವ ರೇಣುಕಾಸ್ವಾಮಿ ಕೊನೆ ಕ್ಷಣದ ಫೋಟೋ ವೈರಲ್‌