Friday, 20th September 2024

Sexual Abuse: ತಂದೆಯನ್ನು ಕೊಲ್ಲುವುದಾಗಿ ಬೆದರಿಸಿ ವಿದ್ಯಾರ್ಥಿನಿ ಮೇಲೆ 11 ಬಾಲಕರಿಂದ ಅತ್ಯಾಚಾರ

Sexual Abuse


ರಾಜಸ್ಥಾನದ ಜೋಧ್ಪುರ ಜಿಲ್ಲೆಯ ಬಳಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಅತ್ಯಂತ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಕಳೆದ ಮೂರು ವಾರಗಳಲ್ಲಿ ಜೋಧ್ಪುರ ಜಿಲ್ಲೆಯಲ್ಲಿ ವರದಿಯಾದ ಆರನೇ ಸಾಮೂಹಿಕ ಅತ್ಯಾಚಾರ ಘಟನೆ ಇದಾಗಿದೆ. ಸಂತ್ರಸ್ತೆ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, 11 ಮಂದಿ ಅಪ್ರಾಪ್ತ ವಯಸ್ಸಿನ ಬಾಲಕರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ (sexual abuse) ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ಕಳೆದ 10 ದಿನಗಳಿಂದ ವಿದ್ಯಾರ್ಥಿನಿ ಒತ್ತಡದಲ್ಲಿದ್ದಳು. ಈ ಬಗ್ಗೆ ಮನೆಯವರು ಕೇಳಿದಾಗ ಬಾಲಕಿ ಜೋರಾಗಿ ಅಳುತ್ತಿದ್ದಳು. ಕೊನೆಗೂ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಮನೆಯವರಿಗೆ ತಿಳಿಸಿದ್ದಾಳೆ. ಇದನ್ನು ತಿಳಿದ ಕುಟುಂಬವು ತೀವ್ರ ಆಘಾತಕ್ಕೊಳಗಾಗಿದ್ದು, ನಂತರ ಬಾಲಕಿಯ ತಂದೆ ತನ್ನ ಮಗಳನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಫಲೋಡಿ ಜಿಲ್ಲೆಯ ಪೊಲೀಸರು ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಈ ವರ್ಷದ ಜನವರಿಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಹೋಂವರ್ಕ್‌ ಬಗ್ಗೆ ಕೇಳಲು ತನ್ನ ಸಹಪಾಠಿಗೆ ಕರೆ ಮಾಡಿದಾಗ ಈ ಘಟನೆ ಶುರುವಾಗಿದೆ. ಈ ಸಮಯದಲ್ಲಿ, ಸಹಪಾಠಿ ಸಂತ್ರಸ್ತೆಯ ಮೊಬೈಲ್ ನಂಬರ್ ಅನ್ನು ಇತರ ಇಬ್ಬರು ಹುಡುಗರಿಗೆ ನೀಡಿದ್ದಾನೆ. ಇದರ ನಂತರ, ಆ ಮೂವರು ಹುಡುಗರು ಅವಳಿಗೆ ನಿರಂತರವಾಗಿ ಕಿರುಕುಳ ನೀಡಲು ಶುರುಮಾಡಿದರು. ಏಪ್ರಿಲ್ ತಿಂಗಳಲ್ಲಿ, ಆರೋಪಿಗಳಲ್ಲಿ ಒಬ್ಬನು ಶಾಲೆಯಿಂದ ಮನೆಗೆ ಬಂದ ನಂತರ ಜುಲೈ 15 ರಂದು ಸಂತ್ರಸ್ತೆಗೆ ಕರೆ ಮಾಡಿ ರಾತ್ರಿ ತನ್ನನ್ನು ಭೇಟಿಯಾಗುವಂತೆ ಮತ್ತು ಅವಳು ಬರದಿದ್ದರೆ ಅವಳ ತಂದೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ. ಭಯ ಮತ್ತು ಒತ್ತಡದಿಂದ, ಹುಡುಗಿ ಆ ರಾತ್ರಿ ಅವನನ್ನು ಭೇಟಿಯಾಗಲು ಹೋದಳು. ಅಲ್ಲಿ ಐವರು ಹುಡುಗರು ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಈ ಘಟನೆಯಲ್ಲಿ ಆರೋಪಿಗಳು ಅತ್ಯಾಚಾರದ ವಿಡಿಯೊವನ್ನು ಸಹ ಮಾಡಿದ್ದಾರೆ ಮತ್ತು ಸಂತ್ರಸ್ತೆಗೆ ಅವರು ತಮ್ಮ ಮಾತನ್ನು ಕೇಳದಿದ್ದರೆ, ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿ ಅವಳ ತಂದೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಇದರ ನಂತರ, ಆರೋಪಿಗಳು ನಿರಂತರವಾಗಿ ಕರೆ ಮಾಡುವ ಮೂಲಕ ಆಕೆಗೆ ಕಿರುಕುಳ ನೀಡುತ್ತಲೇ ಇದ್ದರು. ಆಗಸ್ಟ್ 19 ರಂದು, ಆರೋಪಿಗಳು ಮತ್ತೆ ರಾತ್ರಿ ಭೇಟಿಯಾಗಲು ಕರೆದರು. ಅವಳು ಅಲ್ಲಿಗೆ ತಲುಪಿದಾಗ, ಆರು ಆರೋಪಿಗಳು ಅವಳ ಮೇಲೆ ಒಬ್ಬರ ನಂತರ ಮತ್ತೊಬ್ಬರಂತೆ ಅತ್ಯಾಚಾರ ಎಸಗಿದ್ದಾರೆ. ಘಟನೆಯ ನಂತರ, ಆರೋಪಿಗಳು ಅವಳನ್ನು ಅವಳ ಮನೆಯ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಸಂತ್ರಸ್ತೆ ಈ ನೋವಿನ ಪರಿಸ್ಥಿತಿಯನ್ನು ಸಹಿಸುತ್ತಲೇ ಇದ್ದಳು. ಆದರೆ ಅದರ ಬಗ್ಗೆ ಯಾರಿಗೂ ಹೇಳಿರಲಿಲ್ಲ.

ಇದನ್ನೂ ಓದಿ: ಮಹಿಳೆ ಮೇಲೆ ಅತ್ಯಾಚಾರ, ಬೆತ್ತಲೆಯಾಗಿ ನೃತ್ಯ ಮಾಡುವಂತೆ ಒತ್ತಾಯಿಸಿ ಬೆಲ್ಟ್‌ನಿಂದ ಹಲ್ಲೆ

ಆದರೆ ಸಂತ್ರಸ್ತೆಯ ತಾಯಿ ಆಕೆ ನೋವಲ್ಲಿರುವುದನ್ನು ಕಂಡು ವಿಚಾರಿಸಿದಾಗ ಆಕೆ ಕಣ್ಣೀರಿಡುತ್ತಾ ತನಗಾದ ದುರಂತದ ಕಥೆಯನ್ನು ತಿಳಿಸಿದ್ದಾಳೆ. ಇದರ ನಂತರ, ಕುಟುಂಬವು ತಕ್ಷಣ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದೆ. ರಾಜಸ್ಥಾನ ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದು, ಆರೋಪಿಗಳನ್ನು ಹುಡುಕುತ್ತಿದ್ದಾರೆ. ಹಾಗೇ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದೆ. ಈ ಭಯಾನಕ ಘಟನೆಯ ನಂತರ, ಈ ಪ್ರದೇಶದ ಜನರು ಕೋಪಗೊಂಡಿದ್ದಾರೆ ಮತ್ತು ಅವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.