Thursday, 19th September 2024

ಬೆಂಗಳೂರಿನ ಪಿಜಿಗಳ ಮೇಲೆ ಕೋವಿಡ್ ಪರಿಣಾಮ

ಸಂಡೆ ಸಮಯ

ಸೌರಭ ರಾವ್, ಕವಯಿತ್ರಿ, ಬರಹಗಾರ್ತಿ

2014ರಲ್ಲಿ ತಾಯಿಯ ಜೊತೆ ಆಂಧ್ರ ಪ್ರದೇಶದ ಕಡಪದಿಂದ ಬೆಂಗಳೂರಿಗೆ ವಲಸೆ ಬಂದಿದ್ದ ಲಕ್ಷ್ಮಿ ಮಹದೇವಪುರದಲ್ಲಿ ಪಿಜಿ ವಸತಿಯೊಂದನ್ನು ನಡೆಸುತ್ತಾರೆ. ತಮ್ಮ ತಂದೆಯ ಜಮೀನನ್ನು ಒತ್ತೆಯಿಟ್ಟು ಸಾಲ ಪಡೆದು ಪಿಜಿಯ ನಿರ್ವಹಣೆಗೆ ಬಂಡವಾಳ ಹೂಡಿದ್ದು, ಈ ವರ್ಷದ ಮಾರ್ಚ್ ತಿಂಗಳಿಂದ ಕೋವಿಡ್‌ನಿಂದಾಗಿ ಪಿಜಿಯಲ್ಲಿ ಕೇವಲ ಶೇ.10ರಷ್ಟು ನಿವಾಸಿಗಳಿರುವು ದರಿಂದಾಗಿ, ಲಕ್ಷ್ಮಿ ಸಾಲದ ಬಡ್ಡಿ ಕಟ್ಟಲು ಒದ್ದಾಡುತ್ತಿದ್ದಾರೆ.

ವಸತಿ ಸೌಲಭ್ಯದ ಈ ವಿಭಾಗದಲ್ಲಿ ಲಕ್ಷ್ಮಿಯಂಥ ಪಿಜಿ ನಿರ್ವಾಹಕರು ಹಾಗೂ ಕಂಡೂಕಾಣದ ಮಧ್ಯವರ್ತಿಗಳು ಮನೆ ಮಾಲೀಕರಿಂದ ಕಟ್ಟಡಗಳನ್ನು ಭೋಗ್ಯಕ್ಕೆ ತೆಗೆದುಕೊಂಡು 3ರಿಂದ 5 ವರ್ಷಗಳವರೆಗೆ ಪಿಜಿ ವಸತಿಯನ್ನು ತಮ್ಮ ಜೀವನೋಪಾ ಯಕ್ಕಾಗಿ ನಡೆಸುತ್ತಾರೆ. ಬೆಂಗಳೂರಿನ ಭಾರತೀಯ ಮಾನವ ವಸಾಹತುಗಳ ಸಂಸ್ಥೆಯು ಪಿಜಿ ಹಾಸ್ಟೆಲ್ ವಸತಿಗಳ ಬಗ್ಗೆ ನಡೆಸುತ್ತಿರುವ ಅಧ್ಯಯನದಲ್ಲಿ ಸಂದರ್ಶಿಸಲಾದ ಪಿಜಿ ನಿರ್ವಾಹಕರಲ್ಲಿ 15 ಮಂದಿ ತಮ್ಮ ಮನೆ ಮಾಲೀಕರಿಗಿಂತ ಮತ್ತು ತಮ್ಮ ಪಿಜಿಗಳಲ್ಲೇ ವಾಸಕ್ಕೆ ಬರುವ ಬಹುತೇಕ ಬಾಡಿಗೆದಾರರಿಗಿಂತ ಕಡಿಮೆ ಸವಲತ್ತುಗಳಿರುವ ಸಾಮಾಜಿಕ – ಆರ್ಥಿಕ ಹಿನ್ನೆಲೆಗಳಿಂದ ಬಂದಿರುವವರಾಗಿದ್ದಾರೆ.

ಕೇಂದ್ರ ಅಥವಾ ರಾಜ್ಯ ಸರಕಾರಗಳ ಪ್ರಕಾರ ಈ ನಿರ್ವಾಹಕರು, ಮಾಲೀಕರು ಅಥವಾ ಬಾಡಿಗೆದಾರರು ಅಲ್ಲವಾದ್ದರಿಂದ ಪಿಜಿ ನಿರ್ವಾಹಕರುಈ ಎರಡೂ ವಿಭಾಗಗಳ ಬಗ್ಗೆ ನಡೆಯುತ್ತಿರುವ ಸಂಭಾಷಣೆಗಳ ಮತ್ತು ಸಲಹಾ ಸಮಿತಿಗಳ ಚರ್ಚೆಗಳ ವ್ಯಾಪ್ತಿಯ ಹೊರಗೇ ಉಳಿದಿದ್ದಾರೆ.

ಕರೋನಾ ವೈರಸ್ ದೆಸೆಯಿಂದ ಶೇ. 90-100ರಷ್ಟು ತುಂಬಿರುತ್ತಿದ್ದ ಪಿಜಿಗಳಲ್ಲಿ ನಿವಾಸಿಗಳ ಸಂಖ್ಯೆ ಲಾಕ್‌ಡೌನ್ ಮುಗಿದ ನಂತರ ಕೇವಲ ಶೇ.10ಕ್ಕೆೆ ಇಳಿದಿದೆ, ಮತ್ತು ಸಂದರ್ಶನ ನೀಡಿದ ಪಿಜಿ ನಿರ್ವಾಹಕರಲ್ಲಿ ಎಂಟು ಜನ ತಮಗಾಗಿರುವ ಅಪಾರ ಆರ್ಥಿಕ ನಷ್ಟದಿಂದ ಉಂಟಾಗಿರುವ ಮಾನಸಿಕ ವ್ಯಥೆಯ ಬಗ್ಗೆಯೂ ತಮ್ಮ ಸಂಕಷ್ಟಗಳನ್ನು ತೋಡಿಕೊಂಡಿದ್ದಾರೆ. ಪಿಜಿ ಉದ್ಯಮ
ಡಿಸೆಂಬರ್ 2020ರವರೆಗೂ ಹೀಗೇ ನಷ್ಟದಲ್ಲೇ ಇರುತ್ತದೆ ಎಂಬ ವಾಸ್ತವತೆಯು ಇವರಲ್ಲಿ ಹತಾಶ ಭಾವನೆಯನ್ನುಂಟು ಮಾಡಿದೆ.

ಬಹುತೇಕ ಪಿಜಿಗಳಲ್ಲಿ ಸುಮಾರು 80ರಿಂದ 200 ಜನರಿರುತ್ತಾರೆ, ಬಾಡಿಗೆಯ ಆಧಾರದ ಮೇಲೆ ಪ್ರತಿಯೊಂದು ಕೋಣೆಯಲ್ಲಿ ಇಬ್ಬರಿಂದ ಆರು ಜನರಿರುತ್ತಾರೆ. ಎಲ್ಲರಿಗೂ ವೈಫೈ, ಟೀವಿ ಮತ್ತು ವಾಷಿಂಗ್ ಮಷೀನುಗಳ ಸೌಲಭ್ಯವಿರುತ್ತದೆ. ತಿಂಗಳಿಗೆ 4,000 ದಿಂದ 8,000 ರುಪಾಯಿಯವರೆಗೆ ಬಾಡಿಗೆ ಇರುತ್ತದೆ, ಮತ್ತು ಇದು ಮನೆಗೆಲಸ ಮತ್ತು ಊಟ – ತಿಂಡಿಯನ್ನೂ ಒಳಗೊಂಡಿ ರುತ್ತದೆ. ತಮ್ಮತಮ್ಮ ಆರ್ಥಿಕ ಶಕ್ತಿಗೆ ತಕ್ಕಂತೆ ವಿದ್ಯಾರ್ಥಿಗಳಲ್ಲಿ ಮತ್ತು ಹೊಸದಾಗಿ ಕೆಲಸಕ್ಕೆಂದು ಬೆಂಗಳೂರಿಗೆ ವಲಸೆ ಬರುವ
ವೃತ್ತಿನಿರತರಲ್ಲಿ ಪಿಜಿಗಳು ಅತ್ಯಂತ ಜನಪ್ರಿಯ ವಸತಿ ಆಯ್ಕೆಯಾಗಿದೆ.

ಬೆಂಗಳೂರಿನ ಜನಸಂಖ್ಯೆಯಲ್ಲಿ ಶೇ. 60ಕ್ಕೂ ಹೆಚ್ಚು ವಲಸೆ ಬಂದಿರುವ ಜನರೇ ಆಗಿದ್ದು, ಅದರಲ್ಲಿ ಶೇ. 20ರಷ್ಟು ಜನ 15ರಿಂದ 34 ವರ್ಷ ವಯಸ್ಸಿನವರಾಗಿದ್ದರೆ. 2011ರಲ್ಲಿ ನಡೆದ ಒಂದು ಸಮೀಕ್ಷೆಯ ಪ್ರಕಾರ, ವಿದ್ಯಾಭ್ಯಾಸ ಮತ್ತು ವೃತ್ತಿ ವಲಸೆಗೆ ಮುಖ್ಯ ಕಾರಣಗಳಾಗಿವೆ. ನಗರದಲ್ಲಿ ಗಣನೀಯ ಯುವಜನತೆಯ ವಸತಿ ಅಗತ್ಯಗಳನ್ನು ಪಿಜಿಗಳು ಪೂರೈಸುತ್ತಿದ್ದರೂ, ಅದು ಸೆನ್ಸಸ್ ಅಥವಾ ನ್ಯಾಷನಲ್ ಸ್ಯಾಂಪಲ್ ಸರ್ವೇ (NSSO)ಯಲ್ಲಿ ಕಂಡುಬರುವುದಿಲ್ಲ. ‘ಬಿಬಿಎಂಪಿ’ಯ ಪ್ರದೇಶದಲ್ಲಿ ಶೇ. 22ರಷ್ಟು ಇರುವ ಮಹದೇವಪುರ ವಲಯವೊಂದರಲ್ಲೇ 1,400 ಪಿಜಿ ಹಾಸ್ಟೆಲ್ಲುಗಳಿವೆ.

ತಮಿಳು ನಾಡು ಮತ್ತು ಆಂಧ್ರ ಪ್ರದೇಶಗಳಿಂದ ಬರುವವರಿಗೆ ಪ್ರವೇಶದ್ವಾರದಂತಿರುವ, ಮತ್ತು ವೈಟ್ ಫೀಲ್ಡ್ ಮತ್ತು
ಇಂಟರ್ನ್ಯಾ ಷನಲ್ ಟೆಕ್ ಪಾರ್ಕ್ (ಐಟಿಪಿಎಲ್)ನಂಥ ಐಟಿ ಪ್ರದೇಶಗಳಿಗೆ ಹತ್ತಿರವಿರುವುದರಿಂದ ಈ ವಲಯ ಬಾಡಿಗೆ ಮತ್ತು ಪಿಜಿಗಳಿಗೆ ಅತ್ಯಂತ ಬೇಡಿಕೆಯಿರುವ ಪ್ರದೇಶಗಳಲ್ಲೊಂದು.

ಉದ್ಯೋಗ ಅರಸಿ ಈ ಪ್ರದೇಶಕ್ಕೆ ಬರುವ ಅನೇಕ ಯುವ ವಲಸಿಗರು ಬೇರೆ ವಸತಿ ವ್ಯವಸ್ಥೆಗಳಿಗಿಂತ ಪಿಜಿಗಳಿಗೆ ಆದ್ಯತೆ ನೀಡಲು ಮುಖ್ಯ ಕಾರಣ – ಬಾಡಿಗೆಗೆ ಬೇಕಾಗುವ ದೊಡ್ಡ ಮೊತ್ತದ 10 ತಿಂಗಳ ಮುಂಗಡ ಹಣ ನೀಡುವ ಅವಶ್ಯಕತೆ ಇರುವುದಿಲ್ಲ,
ಮತ್ತು ಪೀಠೋಪಕರಣಗಳು ಮತ್ತು ಮನೆಯ ಬೇರೆ ಸೌಲಭ್ಯಗಳಿಗೆ ಬಂಡವಾಳ ಹೂಡಬೇಕಿಲ್ಲ. ಈ ಎರಡನ್ನೂ ಪಿಜಿ ನಿರ್ವಾಹಕರೇ ನಿಭಾಯಿಸುತ್ತಾರೆ.

ಬೆಳೆಯುತ್ತಿರುವ ಪಿಜಿಗಳ ಬೇಡಿಕೆಗೆ ತಕ್ಕಂತೆ ರಿಯಲ್ ಎಸ್ಟೇಟ್ ಮಾರುಕಟ್ಟೆ ಮಾರ್ಪಾಡಾಗುತ್ತಿದೆ ಮತ್ತು ಇದರಿಂದ ಲಾಭ ಮಾಡುವ ಸಾಮರ್ಥ್ಯವನ್ನು ಕಂಡುಕೊಂಡಿದೆ. ರಿಯಲ್ ಎಸ್ಟೇಟ್ ಮಧ್ಯವರ್ತಿಗಳು, ಕನಿಷ್ಠ ಅನುಭವ ಮತ್ತು ಅರಿವು ಇರುವ ಸ್ವಂತ ಉದ್ಯಮ ಮಾಡುವ ಹುರುಪಿರುವವರನ್ನು ಪಿಜಿ ಹಾಸ್ಟೆಲ್ಲುಗಳಲ್ಲಿ ಬಂಡವಾಳ ಹೂಡುವಂತೆ ಪ್ರೇರೇಪಿಸುತ್ತಾರೆ. ಪಿಜಿಗಳಿಗೆ ಬಾಡಿಗೆಗೆ ಬರುವ ಜನರು ಬಂದೇ ಬರುತ್ತಾರೆ ಮತ್ತು ಬಂಡವಾಳ ಹೂಡಿಕೆಗೆ ತಕ್ಕ ಲಾಭ ಸಿಗುತ್ತದೆ ಎಂದು ಅವರನ್ನು ಹುರಿದುಂಬಿಸುತ್ತಾರೆ.

ಯಾವುದೇ ಅನುಭವವಿಲ್ಲದಿದ್ದರೂ ಪಿಜಿ ಉದ್ಯಮಕ್ಕೆ ಆಕರ್ಷಿತರಾಗಿ ಬೆಂಗಳೂರಿಗೆ ಬಂದ ಹೈದರಾಬಾದಿನ ನಾಯ್ಡು ಅಲ್ಲಿ ಕೇಟರಿಂಗ್ ಉದ್ಯಮ ಹೊಂದಿದ್ದರು. 2014ರಲ್ಲಿ ನನ್ನ ರಾಜ್ಯದಲ್ಲಿ ರಾಜಕೀಯ ಬದಲಾವಣೆಗಳು ನನ್ನ ಕೇಟರಿಂಗ್ ವ್ಯವಹಾರಕ್ಕೆ ಅಡಚಣೆ ಉಂಟು ಮಾಡಿತು. ಆಗ ಬೆಂಗಳೂರಿಗೆ ಬಂದ ನಾನು ಆಂಧ್ರ ಮನೆ – ಊಟ ಶೈಲಿಯ ಕೇಟರಿಂಗ್ ಕೆಲಸ ಶುರು ಮಾಡಿದೆ. ಒಂದೆರಡು ವರ್ಷಗಳ ನಂತರ ನನಗೆ ಪಿಜಿಗಳಿಗೆ ಬಹಳ ಬೇಡಿಕೆ ಇರುವುದು ಗಮನಕ್ಕೆ ಬಂತು, ಹಾಗಾಗಿ ನಾನು ನನ್ನ ಕೆಲಸ ಬದಲಿಸಿದೆ. ಮೂರು ಪಿಜಿಗಳ ನಿರ್ವಹಣೆ ನೋಡಿಕೊಳ್ಳಲು ಶುರು ಮಾಡಿದೆ, ಅದರಲ್ಲಿ ಈಗ ಒಂದು ಪೂರ್ತಿಯಾಗಿ ಮುಚ್ಚಿ ಹೋಗಿದೆ.

ನಾನು ಸಾಲದಲ್ಲಿರುವುದರಿಂದ ಈಗ ಮಿಕ್ಕ ಎರಡನ್ನೂ ಮುಚ್ಚುವುದರ ಬಗ್ಗೆ ಯೋಚನೆ ಮಾಡುತ್ತಿದ್ದೇನೆ, ಎನ್ನುತ್ತಾರೆ ನಾಯ್ಡು.
ಈ ವರ್ಷ ಮಾರ್ಚ್ 23ರಂದು ದೇಶದಾದ್ಯಂತ ಲಾಕ್ಡೌನ್ ಘೋಷಣೆಯಾದಾಗ, ಕೇಂದ್ರ ಗೃಹ ಮಂತ್ರಾಲಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಮತ್ತು ಉದ್ಯೋಗ ಕಚೇರಿಗಳನ್ನು ಸುರಕ್ಷತೆಯ ಕಾರಣಕ್ಕಾಗಿ ಮುಚ್ಚಲು ಮತ್ತು ಮನೆಯಿಂದ ಹೊರಗೆ ಹೋಗ ದಂತೆ ಎಲ್ಲರಿಗೂ ಸಲಹೆ ನೀಡಿತು.

ಈ ಸಮಯದಲ್ಲಿ ಪಿಜಿಯಲ್ಲಿದ್ದ ವಲಸಿಗರಲ್ಲಿ ಬಹುತೇಕ ಜನ ಲಾಕ್ಡೌನ್ ಮುಗಿದ ನಂತರ ಬೆಂಗಳೂರಿಗೆ ಮತ್ತೆ ಹಿಂದಿರುಗ ಬಹುದೆಂದು ಊಹಿಸಿ ತಮ್ಮ ತಮ್ಮ ಊರುಗಳಿಗೆ ಮರಳಿದರು. ಆದರೆ ಮುಂದುವರಿದ ಲಾಕ್ಡೌನ್ ಮತ್ತು ಕೋವಿಡ್ ಪರಿಸ್ಥಿತಿಯ ಅಂತ್ಯ ಇನ್ನೂ ಸ್ಪಷ್ಟವಾಗಿಲ್ಲದ ಕಾರಣ ಬಹುತೇಕ ಜನ ಹಿಂದಿರುಗಲು ಸಾಧ್ಯವಾಗಿಲ್ಲ. ಮಾರ್ಚ್ 2020ರಲ್ಲಿ, ಬಿಬಿಎಂಪಿ ಬಾಡಿಗೆಯನ್ನು ಮನ್ನಾ ಮಾಡಲು ಅಥವಾ ಮುಂದೂಡಲು ಮಾಲೀಕರಿಗೆ ಸಲಹೆ ಹೊರಡಿಸಿತು, ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಹ ಬ್ಯಾಂಕುಗಳು ಮತ್ತು ಇತರ ಆರ್ಥಿಕ ಸಂಸ್ಥೆಗಳಿಗೆ ಅಧಿಕೃತ ಸಾಲದ ಮೇಲೆ ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಸೂಚನೆ ಹೊರಡಿಸಿತ್ತು. ಸಾಂಪ್ರದಾಯಿಕ ವ್ಯವಸ್ಥೆ ಹೊಂದಿರುವ ಉದ್ಯಮಗಳು ತಾತ್ಕಾಲಿಕ ತಡೆ ಹೊರಡಿಸಬಹುದಾದರೂ, ಪಿಜಿ ಉದ್ಯಮ ನಡೆಯುತ್ತಿರುವುದೇ ಅನಧಿಕೃತ ಸಾಲಗಳ ಮೇಲೆಯಾದ್ದರಿಂದ, ಪಿಜಿ ನಿರ್ವಾಹಕರಿಗೆ ಯಾವುದೇ ಉಪಯೋಗ ವಾಗಿಲ್ಲ.

ಪಿಜಿ ನಿರ್ವಾಹಕರು ವರದಿ ಮಾಡಿರುವ ಪ್ರಕಾರ ಪಿಜಿಯಲ್ಲಿರುವವರಿಗೆ ಬಾಡಿಗೆ ಮನ್ನಾ ಮಾಡಿದ್ದರೂ, ನಿವೇಶನಗಳನ್ನು ನಿಭಾಯಿಸುವುದಕ್ಕೆ ಮತ್ತು ಮಾಲೀಕರಿಗೆ ತಾವು ಸಂದಾಯ ಮಾಡಬೇಕಿರುವ ಹಣವನ್ನು ಮಾಡಲೇಬೇಕಿದೆ. ನಮಗೆ ಮಾತ್ರ ಯಾವ ಪರಿಹಾರವೂ ಇಲ್ಲ. ನನ್ನ ಮಾಲೀಕರು ನನಗೆ ಬಾಡಿಗೆ ಕಡಿಮೆ ಮಾಡಿಲ್ಲ ಅಥವಾ ಹಣ ಸಂದಾಯ ಮಾಡಲು ಹೆಚ್ಚುವರಿ ಸಮಯ ನೀಡಿಲ್ಲ. ನಾನು ಬಾಡಿಗೆ ಪೂರ್ತಿ ಪಾವತಿಸದಿದ್ದರೆ ನಮ್ಮ ಒಪ್ಪಂದವನ್ನು ನವೀಕರಿಸುವುದಿಲ್ಲ ಎಂದೂ, ಮತ್ತು ಈ ವರ್ಷ ಲಾಕ್ಡೌನ್ ಹೊರತಾಗಿಯೂ ಪ್ರತಿ ವರ್ಷದಂತೆ ಬಾಡಿಗೆ ಶೇ. 7.5ರಷ್ಟು ಹೆಚ್ಚು ಮಾಡುತ್ತಿದ್ದಾರೆ, ಎನ್ನುತ್ತಾರೆ ಮಾರತಹಳ್ಳಿಯ ಪಿಜಿಯೊಂದರ ನಿರ್ವಾಹಕರಾದ ರೆಡ್ಡಿ.

ಈ ಸಂಶೋಧನೆಗಾಗಿ ನಾವು ಸಂದರ್ಶಿಸಿದ ಪಿಜಿ ನಿರ್ವಾಹಕರು ವರದಿ ಮಾಡಿದ ಮತ್ತೊಂದು ವಿಷಯವೇನೆಂದರೆ: ತಮ್ಮ ಕುಟುಂಬದವರಿಂದ ಅಥವಾ ಅನಧಿಕೃತ ಸಾಲ ಪಡೆದಿರುವ ಕಾರಣ ಅವರಿಗೆ ಸಾಲ ಮನ್ನಾ ಅಥವಾ ತಡೆಗೆ ಅವರು ಅರ್ಹ ರಾಗಿಲ್ಲ. ನಾನು ನನ್ನ ಕುಟುಂಬದವರಿಂದ ಸಾಲ ಪಡೆದೆ, ಮತ್ತು ನನ್ನ ಗಂಡ ತನ್ನ ಸ್ನೇಹಿತರ ಬಳಿ ಸಾಲ ಮಾಡಿದ್ದಾರೆ. ಈಗ ಈ ಉದ್ಯಮದಲ್ಲಿ ಭವಿಷ್ಯ ಇನ್ನೂ ಅನಿಶ್ಚಿತವಾಗಿರುವುದರಿಂದ ನಾವು ನಮ್ಮ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಹೇಗೆ ಮುಖ ತೋರಿಸಬೇಕೋ ತಿಳಿಯುತ್ತಿಲ್ಲ, ಎನ್ನುತ್ತಾರೆ ಆಂಧ್ರ ಪ್ರದೇಶದ ಅನಂತಪುರದ ಬಳಿಯಿರುವ ಒಂದು ಹಳ್ಳಿಯಿಂದ ಬೆಂಗಳೂರಿಗೆ ಬಂದಿರುವ ವೆಂಕಟಲಕ್ಷ್ಮಿ

ಗ್ರಾಮೀಣ ಪ್ರದೇಶಗಳಿಂದ ವಲಸೆ ಬಂದು, ಅಷ್ಟಾಗಿ ಸಂಘಟನೆಗೊಂಡಿರದ ಈ ಉದ್ಯಮಗಳಿಂದ ಔಪಚಾರಿಕ ಉದ್ಯೋೋ ಗಗಳತ್ತ ಮುಂದುವರಿಯಲು ಪ್ರಯತ್ನಿಸುತ್ತಿರುವ ಜನರ ವರ್ಗವನ್ನು ಈ ನಿರ್ವಾಹಕರು ಪ್ರತಿನಿಧಿಸುತ್ತಾರೆ. ನಗರಕ್ಕೆ ವಲಸೆ ಬರುವ ಅನೇಕ ಯುವಜನರು ಬಾಡಿಗೆ ವಸತಿಗಾಗಿ ಈ ಪಿಜಿ ವಲಯವನ್ನು ಅವಲಂಬಿಸಿರುವುದು ಇದರ ಪ್ರಾಮುಖ್ಯತೆಗೆ ಸ್ಪಷ್ಟ
ಪುರಾವೆಯಾಗಿದೆ. ಇಂತಹ ವಲಯಗಳನ್ನು ಗುರುತಿಸುವ ಮತ್ತು ಸರಕಾರ, ಸಾರ್ವಜನಿಕ ಸಂಸ್ಥೆಗಳಿಂದ ಬೆಂಬಲ ನೀಡುವ ಅಗತ್ಯವನ್ನು ಕೋವಿಡ್-19 ಲಾಕ್ಡೌನ್ ಒತ್ತಿ ಹೇಳಿದೆ.

ಇದರಿಂದ ಬಾಡಿಗೆದಾರರಿಗೆ ಅನುಕೂಲಗಳಾಗುವುದರ ಜೊತೆಗೆ ನಿರ್ವಾಹಕರ ಸಾಮಾಜಿಕ – ಆರ್ಥಿಕ ಅಭಿವೃದ್ಧಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ನಮ್ಮ ಸಂಶೋಧನೆಯಿಂದ ತಿಳಿದುಬಂದಿದೆ.

(ಮೂಲ – ಭಾರತದ ಬಾಡಿಗೆ ವಸತಿ, ಕಾನೂನು, ಕಾರ್ಯನೀತಿ ಮತ್ತು ಕಾರ್ಯಸೂಚಿಗಳ ಸಂಶೋಧಕರಾದ ಭಾರತೀಯ ಮಾನವ ವಸಾಹತುಗಳ ಸಂಸ್ಥೆಯ ಸಾಯಿರಾಮ ರಾಜು ಮೊರೆಲ್ಲರವರ ಆಂಗ್ಲ ಲೇಖನ)