Monday, 7th October 2024

Pesticide seize: ಪರವಾನಗಿ ಇಲ್ಲದ ಕೀಟನಾಶಕ ವಶ

ತುರುವೇಕೆರೆ: ಕೀಟನಾಶಕ ಅಂಗಡಿಯೊಂದರ ಮೇಲೆ ಕೃಷಿ ಇಲಾಖೆ ಜಾರಿ ದಳದ ಅಧಿಕಾರಿಗಳ ದಾಳಿ ನಡೆಸಿ ಪರವಾನಗಿ ಇಲ್ಲದ, ನೋಂದಾಯಿತವಲ್ಲದ ಕೀಟನಾಶಕವನ್ನು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮದ ಟಿ.ಬಿ.ಕ್ರಾಸ್ – ತುರುವೇಕೆರೆ ರಸ್ತೆಯಲ್ಲಿರುವ ಪಿ.ಎಂ. ಎಂಟರ್ ಪ್ರೈಸಸ್‌ ಅಂಗಡಿಯಲ್ಲಿ ಕೀಟನಾಶಕ ಪರವಾನಗಿ ಇಲ್ಲದೆ, ನೋಂದಾಯಿತವಲ್ಲದ ಮತ್ತು ದಾಖಲಾತಿ ನಿರ್ವಹಣೆ ಇಲ್ಲದೆ ಅನಧಿಕೃತವಾಗಿ ಮಾರಾಟ ಮಾಡಲು ದಾಸ್ತಾನು ಮಾಡಲಾಗಿದೆ ಎಂಬ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕರಾದ ಪುಟ್ಟರಂಗಪ್ಪ ಹಾಗೂ ಅಶ್ವತ್ಥ್‌ನಾರಾಯಣ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿ ಅನಧಿಕೃತವಾಗಿ ಮಾರಾಟ ಮಾಡಲು ದಾಸ್ತಾನು ಮಾಡಿದ್ದ ಕೀಟನಾಶಕವನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಸೊರವನಹಳ್ಳಿ ಗ್ರಾಮದಲ್ಲಿ 3100 ರು. ಮೌಲ್ಯದ ಸಾವಿರ ಪ್ಯಾಕೆಟ್‌ನ ಒಂದು ಬಾಕ್ಸ್ ಕೀಟನಾಶಕವನ್ನು ಅನಧಿಕೃತ ವಾಗಿ ಖರೀದಿಸಿ ವಿವಿಧ ಮಾರಾಟಗಾರರಿಗೆ ಮಾರಾಟ ಮಾಡಿರುವುದು ಸಹ ಈ ಹಿಂದಿನ ದಾಳಿ ವೇಳೆ ಪತ್ತೆಯಾಗಿತ್ತು ಎಂದು ಜಾರಿ ದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.

ದಾಳಿಯಲ್ಲಿ ಕೃಷಿ ಅಧಿಕಾರಿಗಳಾದ ಸೌಭಾಗ್ಯ ಎಚ್.ವಿ. ಪಾಲ್ಗೊಂಡಿದ್ದರು.